Quantcast
Channel: VijayKarnataka
Viewing all articles
Browse latest Browse all 6795

ರಿಜಿಜು ಪಾತ್ರ ಶಂಕಾಸ್ಪದ

$
0
0

ಅರುಣಾಚಲ ಪ್ರದೇಶದಲ್ಲಿ ಕಮೆಂಗ್‌ ಜಲ ವಿದ್ಯುತ್‌ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಅಕ್ರಮಗಳು ನಡೆದಿದ್ದು, ಈ ಯೋಜನೆಯಲ್ಲಿ ಗುತ್ತಿಗೆದಾರರಾಗಿದ್ದ ತಮ್ಮ ಸಂಬಂಧಿ ಗೋಬೈ ರಿಜಿಜು ಅವರಿಗೆ ನೆರವಾಗಲು ಗೃಹ ಖಾತೆ ಸಹಾಯಕ ಸಚಿವ ಕಿರಣ್‌ ರಿಜಿಜು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದು ದೊಡ್ಡ ವಿವಾದವನ್ನು ಸೃಷ್ಟಿಸಿದ್ದು, ಪ್ರಕರಣದಲ್ಲಿ ಕಿರಣ್‌ ರಿಜಿಜು ಪಾತ್ರ ಶಂಕಾಸ್ಪದವಾಗಿದೆ. ಈಶಾನ್ಯ ವಿದ್ಯುತ್‌ ನಿಗಮದ ಮುಖ್ಯ ವಿಚಕ್ಷಣಾ ಅಧಿಕಾರಿ ಸತೀಶ್‌ ವರ್ಮಾ , ಈ ವಿದ್ಯುತ್‌ ಘಟಕಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ 129 ಪುಟಗಳ ಸತ್ಯ ಶೋಧನಾ ವರದಿ ತಯಾರಿಸಿದ್ದರು.

ಇಷ್ಟೇ ಅಲ್ಲ ಹಲವು ಅಕ್ರಮಗಳು ನಡೆದಿರುವುದರಿಂದ ಗುತ್ತಿಗೆದಾರರಿಗೆ ಪಾವತಿಯನ್ನು ತಡೆ ಹಿಡಿಯಬೇಕು ಎಂದು ಶಿಫಾರಸು ಮಾಡಿದ್ದರು. ಆದರೆ, ತಡೆ ಹಿಡಿದಿರುವ ಗುತ್ತಿಗೆದಾರರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ರಿಜಿಜು ಇಂಧನ ಸಚಿವಾಲಯಕ್ಕೆ ಪತ್ರಬರೆದಿದ್ದಾರೆ. ಪತ್ರ ಬರೆದಿರುವುದನ್ನು ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ. ಗೋಬೈ ಅವರು ಬಿಲ್ಲುಗಳನ್ನು ಪಾಸು ಮಾಡಿಕೊಳ್ಳಲು ಸತೀಶ್‌ ವರ್ಮಾ ಮೇಲೆ ಪ್ರಭಾವ ಬೀರಿದ್ದರು. ವರ್ಮಾ ಜತೆ ನಡೆಸಿದ ಸಂಭಾಷಣೆಯ ತುಣುಕುಗಳನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಸಚಿವ ರಿಜಿಜು ಅವರು ಪತ್ರ ಬರೆಯುವಾಗ ವಿಚಕ್ಷಣಾ ಅಧಿಕಾರಿಯ ತನಿಖೆಯ ಸಂಗತಿ ಅವರಿಗೆ ಗೊತ್ತಿರಲಿಲ್ಲವೇ? ಇದಕ್ಕೆ ಇಲ್ಲ ಎಂದು ಉತ್ತರಿಸಲು ಆಗುವುದಿಲ್ಲ. ಏಕೆಂದರೆ ವರ್ಮಾ ತಮ್ಮ ಸತ್ಯ ಶೋಧನಾ ವರದಿಯನ್ನು ಸಿಬಿಐ ಗಮನಕ್ಕೂ ತಂದಿದ್ದರು. ಆದರೆ ಈ ಉನ್ನತ ತನಿಖಾ ಸಂಸ್ಥೆ ಒಂದು ಎಫ್‌ಐಆರ್‌ ಕೂಡ ದಾಖಲಿಸುವ ಗೋಜಿಗೆ ಹೋಗಲಿಲ್ಲ. ಅಚ್ಚರಿಯೆಂದರೆ ವರದಿ ನೀಡಿದ ಶರ್ಮಾ ಅವರನ್ನು ತ್ರಿಪುರಕ್ಕೆ ವರ್ಗಾಯಿಸಲಾಗಿದೆ!

ಸತ್ಯಶೋಧನಾ ವರದಿಯನ್ನು ಆಧರಿಸಿ ಸುದ್ದಿಪತ್ರಿಕೆಯೊಂದು ವರದಿ ಮಾಡಿದ ನಂತರ ಪ್ರಕರಣ ಎಲ್ಲರ ಗಮನಕ್ಕೆ ಬಂದಿದೆ. ಆದರೆ ಇಡೀ ರಾಷ್ಟ್ರವನ್ನು ಪ್ರತಿನಿಧಿಸುವ, ದೊಡ್ಡ ಮಟ್ಟದ ನೈತಿಕ ಮೌಲ್ಯಗಳು, ಸಂಯಮವನ್ನು ಕಾಪಾಡಿಕೊಳ್ಳಬೇಕಾದ ಗೃಹ ಖಾತೆ ಸಹಾಯಕ ಸಚಿವರು, ''ಸುಳ್ಳು ವರದಿಗಳನ್ನು ಹರಡುವವರು ಅರುಣಾಚಲ ಪ್ರದೇಶಕ್ಕೆ ಬಂದರೆ ಬೂಟಿನೇಟು ಕೊಡುತ್ತೇವೆ,'' ಎಂದು ಗುಡುಗಿದ್ದಾರೆ. ಇದೊಂದು ಅಧಿಕಾರದ ಮದ ನೆತ್ತಿಗೇರಿ ಆಡಿದ ಮಾತಿನಂತೆ ಕಾಣುತ್ತದೆ. ಪ್ರಜಾಪ್ರಭುತ್ವದ ಜೀವಾಳವಿರುವುದೇ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ. ಸಚಿವರು ಶಂಕಾಸ್ಪದವಾಗಿ ನಡೆದುಕೊಂಡಿದ್ದಾರೆ ಎಂಬುದಾಗಿ ಬರೆಯುವುದು, ಮಾತನಾಡುವುದು ಮೂಲಭೂತ ಹಕ್ಕು. ಇಂಥದ್ದನ್ನು ದೈಹಿಕ ಬಲದ ಮೂಲಕ ನಿರ್ಬಂಧಿಸುವ ಮಾತಾಡುವುದು ಶೋಭೆ ತರುವುದಿಲ್ಲ.

ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಕ್ಕೆ ಮುಂಚೆ, ನಾನು ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ, ಬೇರೆಯವರು ಅಕ್ರಮಗಳನ್ನೆಸಗಲು ಬಿಡುವುದೂ ಇಲ್ಲ- ಎಂದು ಉದ್ಘೋಷಿಸಿದ್ದರು. ಇದೀಗ ಅವರು ತಮ್ಮ ಮಾತು ಉಳಿಸಿಕೊಳ್ಳಬೇಕು. ವಿದ್ಯುತ್‌ ಘಟಕ ನಿರ್ಮಾಣ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಬೇಕು. ಕಳಂಕದ ಆರೋಪ ಹೊತ್ತಿರುವ ರಿಜಿಜು ಅವರಿಂದ ತಾತ್ಕಾಲಿಕವಾಗಿ ರಾಜೀನಾಮೆ ಪಡೆಯಬೇಕು. ವಿಚಕ್ಷಣ ಅಧಿಕಾರಿಯ ವರದಿಯನ್ನು ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬುದರ ಬಗ್ಗೆಯೂ ಉತ್ತರ ಕೊಡುವ ಹೊಣೆ ಅವರದ್ದೇ ಆಗಿದೆ. ಲಲಿತ್‌ ಮೋದಿ ಹಗರಣ, ಮಧ್ಯಪ್ರದೇಶದ ವ್ಯಾಪಂ ಕರ್ಮಕಾಂಡ, ವಿಜಯ ಮಲ್ಯ ಪ್ರಕರಣಗಳ ನಿರ್ವಹಣೆಯಲ್ಲಿ ಸರಕಾರದ ಮಾತು ವಿಜೃಂಭಿಸಿ, ಕ್ರಿಯೆ ನಿಸ್ತೇಜವಾಯಿತು.ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುತ್ತೇವೆ ಎಂದು ಹೇಳಿಕೊಳ್ಳುವವರು ಅದನ್ನು ಸಾಧಿಸಿತೋರಿಸುವ ಹೊಣೆಯನ್ನೂ ಹೊತ್ತುಕೊಳ್ಳಬೇಕು. ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಈ ಹೊತ್ತಿನಲ್ಲಿ ಇಂಥ ಸಂಗತಿಗಳನ್ನು ಹೇಗೆ ನೋಡಲಾಗುತ್ತದೆ, ನಿಭಾಯಿಸಲಾಗುತ್ತದೆ ಎಂಬುದನ್ನು ಸಾಮಾನ್ಯ ಜನ ಎಚ್ಚರದ ಕಣ್ಣುಗಳಿಂದ ಗಮನಿಸುತ್ತಿರುತ್ತಾರೆ ಎಂಬುದನ್ನು ಮರೆಯಬಾರದು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>