ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪೆರುನಾಡ್ನಲ್ಲಿರುವ ಅಯ್ಯಪ್ಪನ ದೇವಸ್ಥಾನ ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳ. ವರ್ಷಕ್ಕೆ ಏನಿಲ್ಲವೆಂದರೂ ಹತ್ತು ಕೋಟಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗಳು ಮತ್ತು ಯಾತ್ರಾರ್ಥಿಗಳನ್ನು ಒಟ್ಟಿಗೆ ಸೆಳೆಯುವ ಅಪರೂಪದ ತಾಣವಿದು. ಆದರೆ ಕೇರಳ ಸರಕಾರ, ಇಲ್ಲಿಗೆ ಬರುವವರಿಗೆ ಅನುಕೂಲ ಕಲ್ಪಿಸಿಕೊಡುವ ಬದಲು, ಪ್ರವಾಸಿಗರಿಂದ ಆದಷ್ಟು ಹೆಚ್ಚು ಶುಲ್ಕ ವಸೂಲಿ ಮಾಡಿ ತನ್ನ ಖಜಾನೆ ತುಂಬಿಕೊಳ್ಳುವ ದುರಾಸೆಯನ್ನು ಪ್ರದರ್ಶಿಸುತ್ತಿದೆ. ಈ ದೇವಾಲಯಕ್ಕೆ ತೆರಳಲು ಪ್ರವೇಶಿಸುವ ಮ್ಯಾಕ್ಸಿಕಾಬ್ಗಳು ಕೊಡುವ ಪ್ರವೇಶ ತೆರಿಗೆಯನ್ನು ಏಕಾಏಕಿ ರೂ.3,500ರಿಂದ 7,000 ರೂಗೆ ಏರಿಸಲಾಗಿದೆ. ಇಡೀ ವರ್ಷದಲ್ಲಿ ಕೊಡುವ ತೆರಿಗೆಯನ್ನು ಒಂದೇ ಸಲಕ್ಕೆ ಪಾವತಿಸಬೇಕು ಎನ್ನುವ ಕಟ್ಟುಪಾಡು ಹೇರಲಾಗಿದೆ. ಒಂದು ವಾರ ಕಾಲ ಈ ಪ್ರದೇಶದಲ್ಲಿ ವಾಹನಗಳು ಸಂಚರಿಸಿದರೂ ವರ್ಷದ ಲೆಕ್ಕದಲ್ಲಿ ತೆರಿಗೆ ಪಾವತಿಸಬೇಕು. ಇದರಿಂದ ವಾಹನ ಮಾಲೀಕರು ಈ ಸ್ಥಳಕ್ಕೆ ಬರುವ ಆಕಾಂಕ್ಷೆಯನ್ನೇ ಕೈ ಬಿಟ್ಟಿದ್ದಾರೆ. ಇದರಿಂದ ಪ್ರತಿಯೊಂದು ಊರಿನಲ್ಲೂ ಭಕ್ತರು ಪರದಾಡುತ್ತಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಅಯ್ಯಪ್ಪನ ಸನ್ನಿಧಿಗೆ ಬರುವ ಆಂಧ್ರ ಮತ್ತು ತಮಿಳುನಾಡು ವಾಹನಗಳಿಗೆ ತೆರಿಗೆ ಮುಕ್ತ ! ನವೆಂಬರ್ ಚಳಿ ಶುರುವಾಗುತ್ತಿದ್ದಂತೆ ಅಯ್ಯಪ್ಪನಿಗೆ ಮಾಲೆ ಹಾಕುವ ಹಂಗಾಮು ಶುರುವಾಗುತ್ತದೆ. ಜಾತಿ, ಧರ್ಮ, ಅಂತಸ್ತುಗಳ ಭೇದವಿಲ್ಲದೆ ಎಲ್ಲರೂ ಈ ಕಠಿಣ ಆಚರಣೆಯಲ್ಲಿ ತೊಡಗುತ್ತಾರೆ. ಸಾತ್ವಿಕ ಆಹಾರ ಸೇವಿಸುತ್ತ, ಭಜನೆ, ಆರಾಧನೆಗಳಲ್ಲಿ ನಿರತರಾಗುತ್ತಾರೆ. ವ್ರತ ಮುಗಿದ ಮೇಲೆಯೂ ಎಷ್ಟೋ ಮಂದಿ ಅದೇ ಶಿಸ್ತಿನಿಂದ ಜೀವನ ನಡೆಸುತ್ತಾರೆ. ಒಂದು ಲಕ್ಷ ಜನಸಂಖ್ಯೆ ಇರುವ ಊರಿನಲ್ಲಿ ಶಬರಿಮಲೆಗೆ ಯಾತ್ರೆ ಹೋಗುವವರ ಸಂಖ್ಯೆ 5 ಸಾವಿರಕ್ಕಿಂತಲೂ ಹೆಚ್ಚು. ಈ ಅಂಕಿ ಸಂಖ್ಯೆಯನ್ನು ಗಮನಿಸಿದರೆ ಈ ದೈವದ ಜನಪ್ರಿಯತೆ ಅರಿವಾಗುತ್ತದೆ. ಈ ಸಂಗತಿಗಳ ಪ್ರಾಥಮಿಕ ಅರಿವೂ ಇಲ್ಲದ ಕೇರಳ ಸರಕಾರ, ಅವೈಜ್ಞಾನಿಕ ಮತ್ತು ಕರ್ನಾಟಕದ ಭಕ್ತರನ್ನು ಪೀಡಿಸುವ ರೀತಿಯಲ್ಲಿ ತೆರಿಗೆ ವಿಧಿಸಿರುವುದು ಅಕ್ಷಮ್ಯ. ಇದು ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಸೀಳಿದಷ್ಟೇ ಅವಿವೇಕ. ತಮಿಳುನಾಡು ಮತ್ತು ಆಂಧ್ರರಾಜ್ಯಗಳ ಭಕ್ತರಿಗಿಲ್ಲದ ತೆರಿಗೆ ಕರ್ನಾಟಕಕ್ಕೇಕೆ ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ರಾಜ್ಯ ಸರಕಾರವೇಕೆ ಈ ಸ್ಥಳಕ್ಕೆ ವಿಶೇಷ ಬಸ್ಗಳನ್ನು ಏರ್ಪಡಿಸಬಾರದು? ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಬಸ್ಸುಗಳು ಇಲ್ಲಿಗೆ ಸಂಚರಿಸುತ್ತವೆ. ಆದರೆ ಈ ಬಸ್ಸುಗಳ ಶುಲ್ಕ ನೀತಿ ಅವೈಜ್ಞಾನಿಕವಾಗಿದೆ. ಹೋಗಿ ಬರುವ ಅಂತರ ಐನೂರು ಕಿ.ಮೀ ಇದ್ದರೆ, ಈ ವೆಚ್ಚದ ಜತೆಗೆ ಹೆಚ್ಚು ವರಿಯಾಗಿ ಸಾವಿರಗಟ್ಟಲೆ ಮುಂಗಡ ಹಣವನ್ನು ವಸೂಲಿ ಮಾಡಲಾಗುತ್ತದೆ. ಯಾತ್ರೆ ಮುಗಿಸಿ ಬಂದು 15-20 ದಿನಗಳ ನಂತರ ಮುಂಗಡ ಹಣವನ್ನು ವಾಪಸ್ ನೀಡಲಾಗುತ್ತದೆ. ಈ ನಿಯಮದಿಂದ ಹೆಚ್ಚು ಮಂದಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟ. ಸರಕಾರ ಕೂಡಲೇ ಈ ನಿಯಮವನ್ನು ತೆಗೆದು ಹಾಕಬೇಕು. ಕೆಎಸ್ಟಿಡಿಸಿಯಲ್ಲದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಕೂಡ ಈ ಕ್ಷೇತ್ರಕ್ಕೆ ಸಂಚರಿಸುವ ವ್ಯವಸ್ಥೆ ಮಾಡಬೇಕು, ಇದಲ್ಲದೆ ರಾಜ್ಯ ಸರಕಾರವು ಕೂಡಲೇ ಕೇರಳ ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಿ ಈಗ ವಿಧಿಸಿರುವ ತೆರಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದು, ಎಲ್ಲರ ಪೂಜಾ ಹಕ್ಕುಗಳನ್ನು ಕಾಪಾಡುವುದು ಕೂಡ ಜಾತ್ಯತೀತ ತತ್ವ ಎನ್ನುವುದನ್ನು ತಿಳಿಯಬೇಕು.
↧
ಅಯ್ಯಪ್ಪ ಭಕ್ತರ ತಾಪತ್ರಯ ತಪ್ಪಿಸಿ
↧