* ನೋಟು ವಿನಿಮಯ ಸಂಕಷ್ಟ * ವೃದ್ಧರು, ಅನಾರೋಗ್ಯ ಪೀಡಿತರಿಗೆ ನೆರವು ಬೆಂಗಳೂರು; ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಹೊಸ ನೋಟುಗಳನ್ನು ಪಡೆಯಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅಶಕ್ತರಿಗೆ ನೆರವು ನೀಡಲು ನಗರದಲ್ಲಿ ಸ್ವಯಂ ಸೇವಕರ ಗುಂಪೊಂದು ಸಜ್ಜಾಗುತ್ತಿದೆ. ಮಲ್ಲೇಶ್ವರದ ಸಿವಿಲ್ ಸರ್ವಿಸ್ ಆರ್ಗನೈಸೇಷನ್ ಟ್ರಸ್ಟ್ನ ಹಸಿರು ಮಿಷನ್ ನೇತೃತ್ವದಲ್ಲಿ ಸ್ವಯಂ ಸೇವಕರ ಗುಂಪನ್ನು ಸಜ್ಜುಗೊಳಿಸಲಾಗುತ್ತಿದೆ. ಇವರ ನೆರವಿನೊಂದಿಗೆ ವಾರಾಂತ್ಯದ ರಜಾ ದಿನಗಳಲ್ಲಿ ನೆರವು ನೀಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ನ.19 ಮತ್ತು 20ರಂದು ನಗರದ ಕೆಲವು ಆಯ್ದ ಪ್ರದೇಶಗಳಲ್ಲಿ ಹಣದ ಅಗತ್ಯವುಳ್ಳ ಅಸಹಾಯಕ ನಾಗರಿಕರಿಗೆ ಈ ತಂಡ ನೆರವಾಗಲಿದೆ. ಎಚ್ಪಿ, ಎನ್ಟಿಟಿ ಮೊದಲಾದ ಸಾಫ್ಟ್ವೇರ್ ಕಂಪನಿಗಳು ಹಾಗೂ ಎಂಎಲ್ಎ (ಮಲ್ಲೇಶ್ವರಂ), ಮಹಾರಾಣಿ, ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಹೆಸರು ನೋಂದಾಯಿಸಿದ್ದಾರೆ. ಜತೆಗೆ ಶೇಷಾದ್ರಿಪುರಂ ಶಾಖೆಯ ಎಸ್ಬಿಎಂ ನೌಕರರು ಕೂಡ ಇವರಿಗೆ ನೆರವಾಗಲಿದ್ದಾರೆ. ಹೇಗೆ ನೆರವಾಗುತ್ತಾರೆ? ಹಿರಿಯ ನಾಗರಿಕರು, ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರು, ಅಂಗವಿಕಲರು ಗುರುತಿನ ಚೀಟಿ ಹಾಗೂ ಹಣವನ್ನು ಕೊಟ್ಟರೆ, ಅವರನ್ನು ಒಂದೆಡೆ ಕೂರಿಸಿ ಸರದಿ ಸಾಲಿನಲ್ಲಿ ಸ್ವಯಂ ಸೇವಕರು ನಿಲ್ಲಲಿದ್ದಾರೆ. ನಿರ್ದಿಷ್ಟ ವ್ಯಕ್ತಿಯ ಸರದಿ ಬಂದಾಗ ಸ್ವಯಂ ಸೇವಕರು ಆ ಜಾಗವನ್ನು ಫಲಾನುಭವಿಗಳಿಗೆ ಬಿಟ್ಟುಕೊಡಲಿದ್ದಾರೆ. ಬಳಿಕ ಸುಲಭವಾಗಿ ಹಣ ಪಡೆಯಬಹುದು. ಎಲ್ಲಿಲ್ಲಿ ಸ್ವಯಂ ಸೇವಕರು ಲಭ್ಯ ರಾಜಾಜಿನಗರ ಅಂಚೆ ಕಚೇರಿ, ವಿಜಯನಗರ ಅಂಚೆ ಕಚೇರಿ, ಮಲ್ಲೇಶ್ವರಂನ ಆಕ್ಸಿಸ್ ಬ್ಯಾಂಕ್ ಮತ್ತು ಅಂಚೆ ಕಚೇರಿ, ಪ್ರಶಾಂತನಗರದ (ವಿಜಯನಗರ ಬಳಿಯಿರುವ ಶೋಭಾ ಆಸ್ಪತ್ರೆ ಸಮೀಪ) ಎಸ್ಬಿಎಂ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಶಾಖೆಗಳು. ಸರತಿ ಸಾಲಿನಲ್ಲಿ ಸ್ವಯಂ ಸೇವಕರನ್ನು ನಿಲ್ಲಿಸುವ ಸೌಲಭ್ಯ ಒದಗಿಸುವುದರ ಜತೆಗೆ, ಎಲ್ಲ ಗ್ರಾಹಕರಿಗೆ ನೀರು-ಮಜ್ಜಿಗೆ ವಿತರಿಸಲು ಹಸಿರು ಮಿಷನ್ ನಿರ್ಧರಿಸಿದೆ. ಸಂಪರ್ಕ ಸಂಖ್ಯೆ ವಾರಾಂತ್ಯದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವವರು ಹಾಗೂ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯಲಾಗದ ವೃದ್ಧರು ಮತ್ತು ಇತರೆ ಅಸಹಾಯಕರು ಶುಕ್ರವಾರದೊಳಗೆ ಹಸಿರು ಮಿಷನ್ ಅನ್ನು ಸಂಪರ್ಕಿಸಬಹುದು. ಮೊಬೈಲ್: hasirubengaluru@gmail.com ---- ಸರತಿ ಸಾಲಿನಲ್ಲಿ ನಿಂತು ಹಣ ಪಡೆಯಲಾಗದ ಅಸಹಾಯಕರಿಗೆ ನೆರವಾಗುವುದು ನಮ್ಮ ಉದ್ದೇಶ. ಈ ಸಂಬಂಧ ಬ್ಯಾಂಕ್/ಅಂಚೆ ಮುಖ್ಯಸ್ಥರಿಂದ ಅನುಮತಿ ಪಡೆದಿದ್ದೇವೆ. ಇದಕ್ಕಾಗಿ ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಟ್ವಿಟರ್ಗಳ ಮೂಲಕ ಪ್ರಚಾರ ಮಾಡುತ್ತಿದ್ದೇವೆ. ಸ್ವಯಂ ಸೇವಕರನ್ನು ಆಹ್ವಾನಿಸುತ್ತಿದ್ದೇವೆ. ನಮ್ಮದೂ ಒಂದು ತಂಡವಿದ್ದು, ಈಗಾಗಲೇ 50 ಮಂದಿ ಹೆಸರು ನೋಂದಾಯಿಸಿದ್ದಾರೆ. ಶುಕ್ರವಾರದವರೆಗೆ ಅವಕಾಶವಿದೆ. ಆಸಕ್ತರು ಬಂದು ನಮ್ಮೊಂದಿಗೆ ಕೈ ಜೋಡಿಸಬಹುದು. -ಕಾವ್ಯಶ್ರೀ, ಹಸಿರು ಮಿಷನ್ ತಂಡದ ರೂವಾರಿ ಹಾಗೂ ಎನ್ಟಿಟಿ ಡೇಟಾ ಕಂಪನಿ ಉದ್ಯೋಗಿ ಊಟದ ವ್ಯವಸ್ಥೆ ದೀಪಾ ಸೋಲಾರ್ ಸಿಸ್ಟಂ ಪ್ರವೇಟ್ ಲಿಮಿಟೆಡ್ನ ನಾಗರಬಾವಿ ಶಾಖೆಯ ಎಂಡಿ ಕೆ.ಎಲ್.ಎಚ್. ರಾಯ ಅವರು ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಎಸ್ಬಿಎಂ ಶಾಖೆಯಲ್ಲಿ ಹಣಕ್ಕಾಗಿ ಸರದಿ ಸಾಲಿನಲ್ಲಿ ನಿಂತ ಎಲ್ಲ ಗ್ರಾಹಕರಿಗೂ ನಿತ್ಯ ಮಧ್ಯಾಹ್ನ 1 ರಿಂದ 2.30ರವರೆಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ನಿತ್ಯ ಸುಮಾರು 100-150 ಮಂದಿಯಿರುತ್ತಾರೆ. ಕಳೆದ ನಾಲ್ಕೈದು ದಿನದಿಂದ ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ''ಪ್ರತಿಯೊಬ್ಬರಿಗೂ ಹಣದ ಅನಿವಾರ್ಯತೆಯಿದ್ದು, ಅದನ್ನು ಪಡೆಯಲು ಜನರ ನೂಕುನುಗ್ಗಲಿದೆ. ಇಂತಹ ಸಂದರ್ಭದಲ್ಲಿ ಕ್ಯೂನಲ್ಲಿ ನಿಂತವರು ಅರ್ಧ, ಮುಕ್ಕಾಲು ದಿನ ನಿಲ್ಲಬೇಕಾಗುತ್ತದೆ. ಹೀಗಾಗಿ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ'' ಎಂದು ರಾಯ ಅವರು ತಿಳಿಸಿದ್ದಾರೆ.
ನೀರು-ಮಜ್ಜಿಗೆಯೂ ವಿತರಣೆ
↧
ಸರದಿಯಲ್ಲಿ ನಿಲ್ಲಲು ಸ್ವಯಂ ಸೇವಕರ ತಂಡ ಸಜ್ಜು
↧