* ಹರೀಶ್ ಬಸವರಾಜ್ ದರ್ಶನ್ ಮತ್ತು ಯೋಗರಾಜ್ ಭಟ್ ಒಂದಾಗುತ್ತಾರಾ ಅನ್ನುವ ಪ್ರಶ್ನೆ ಹಲವು ವರ್ಷಗಳಿಂದ ಎದ್ದಿತ್ತು. ಬಹುತೇಕವಾಗಿ ಸಾಹಸ ಪ್ರಧಾನ ಕತೆಗಳನ್ನು ಆಯ್ದುಕೊಳ್ಳುವ ದರ್ಶನ್ ಮತ್ತು ರಸವತ್ತಾದ ಮಾತು ಮತ್ತು ಪ್ರೇಮಕತೆಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿರುವ ಯೋಗರಾಜ್ ಭಟ್ ಒಟ್ಟಾಗಿ ಸಿನಿಮಾ ಮಾಡುತ್ತಾರಾ ಎಂಬ ಚರ್ಚೆ ಕೂಡ ಸ್ಯಾಂಡಲ್ವುಡ್ನಲ್ಲಿ ನಡೆದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಎರಡು ಅಪರೂಪದ ಜೋಡಿಗಳು ಒಂದಾಗುತ್ತಿವೆ. ಪ್ರೇಕ್ಷಕರ ಬಹುದಿನದ ಕನಸು ಆದಷ್ಟು ಬೇಗ ಈಡೇರಲಿದೆ. ಸದ್ಯ ಯೋಗರಾಜ್ ಭಟ್ 'ದನಕಾಯೋನು' ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಚಾಲೇಂಜಿಂಗ್ ಸ್ಟಾರ್ 'ಚಕ್ರವರ್ತಿ' ಚಿತ್ರದ ಶೂಟಿಂಗ್ನಲ್ಲಿ ಬಿಝಿ ಆಗಿದ್ದಾರೆ. ಸದ್ಯ ತಾವು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಂಡು ಹೊಸ ಚಿತ್ರದ ಕೆಲಸದಲ್ಲಿ ತೊಡಗಲಿದ್ದಾರಂತೆ. 'ದರ್ಶನ್ ಚಿತ್ರಕ್ಕೆ ನಿರ್ದೇಶನ ಮಾಡುವುದು ನಿಜ. ಈ ಕೆಲಸ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಸಾಕಷ್ಟು ಕೆಲಸಗಳು ಆಗಬೇಕು. ಈಗಾಗಲೇ ದರ್ಶನ್ ಜತೆ ಮಾತಾಡಿದ್ದೇನೆ. ಅವರೂ ಕೂಡ ಸಿನಿಮಾ ಮಾಡಲು ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಸಿನಿಮಾ ಸೆಟ್ಟೇರುವುದಕ್ಕೆ ಸಾಕಷ್ಟು ಸಮಯವಿದು. ಈ ಮಧ್ಯೆ ಗಣೇಶ್ ಮತ್ತು ನಾನು ಮತ್ತೊಂದು ಚಿತ್ರ ಮಾಡಲಿದ್ದೇವೆ. ಆ ಸಿನಿಮಾದ ಕಾರ್ಯದಲ್ಲಿ ಸದ್ಯ ನಾನು ತೊಡಗಿಕೊಂಡಿದ್ದೇನೆ' ಅಂತಾರೆ ಯೋಗರಾಜ್ ಭಟ್. ಈ ವರ್ಷದಲ್ಲಿ ಯೋಗರಾಜ್ ಭಟ್ ಸಾಕಷ್ಟು ಅಚ್ಚರಿಯ ಸುದ್ದಿಗಳನ್ನು ಕೊಡುತ್ತಿದ್ದಾರೆ. ಐದಾರು ವರ್ಷಗಳ ನಂತರ ಮತ್ತೆ ಗಣೇಶ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಜವಾಬ್ದಾರಿ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಮೊನ್ನೆಯಷ್ಟೇ ಇವರ ನಿರ್ದೇಶನ ದನಕಾಯೋನು ಸಿನಿಮಾ ಐವತ್ತು ದಿನ ಪೂರೈಸಿದೆ. ಅಲ್ಲದೇ ಹೊಸ ನಿರ್ದೇಶಕರನ್ನು ಹುಡುಕಿ, ಅವರಿಗೆ ತಮ್ಮದೇ ಬ್ಯಾನರ್ನಲ್ಲಿ ಸಿನಿಮಾ ಮಾಡುವಂತೆ ಅವಕಾಶ ನೀಡಿದ್ದಾರೆ. ಸದಾ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯೋಗರಾಜ್ ಭಟ್, ಇದೇ ತಿಂಗಳು ಕೊನೆಯಲ್ಲಿ ಗಣೇಶ್ ಚಿತ್ರದ ಶೂಟಿಂಗ್ನಲ್ಲಿ ತೊಡಗಲಿದ್ದಾರೆ. ನಂತರ ಹೊಸ ಹುಡುಗನಿಗಾಗಿ ನನ್ನ ಹೆಸರೇ ಅನುರಾಗಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಾರೆ. ಅಲ್ಲದೇ ನೀರ್ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಅವರಿಗೆ ಒಂದು ಸಿನಿಮಾ ನಿರ್ಮಾಣ ಮಾಡುವ ಪ್ಲಾನ್ ಕೂಡ ಇದೆ.
↧
ದರ್ಶನ್ ಚಿತ್ರಕ್ಕೆ ಯೋಗರಾಜ್ ಭಟ್ ಡೈರೆಕ್ಷನ್
↧