ಹೊಸದಿಲ್ಲಿ/ ಮುಂಬಯಿ/ ಕೋಲ್ಕೊತಾ/ ತಿರುವನಂತಪುರ: ಹಳೆ ನೋಟುಗಳನ್ನು ಹೊಸ ಕರೆನ್ಸಿಗೆ ಬದಲಿಸಿಕೊಳ್ಳಲು ದೇಶಾದ್ಯಂತ ಜನರು ಬ್ಯಾಂಕು ಮತ್ತು ಎಟಿಎಂಗಳಿಗೆ ಮುಗಿಬಿದ್ದಿರುವುದರಿಂದ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸರಕಾರ ಹೆಚ್ಚುವರಿ ಕ್ರಮ ಕೈಗೊಂಡಿದೆ.
ಜನಜಂಗುಳಿ ಮತ್ತು ಕೋಲಾಹಲದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುವಂತೆ ಎಲ್ಲ ಬ್ಯಾಂಕುಗಳು, ಎಟಿಎಂಗಳು ಮತ್ತು ಹಣ ಸಾಗಿಸುವ ವಾಹನಗಳಿಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ.
ಅಷ್ಟೇ ಅಲ್ಲ, ಪ್ರತಿ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಂದ ಪ್ರತಿಕ್ಷಣದ ಮಾಹಿತಿ ಪಡೆಯಲು ಮೂವರು ಅಧಿಕಾರಿಗಳ ತಂಡವನ್ನು ನಿಯೋಜಿಸಿದೆ.
ಮೊದಲ ದಿನ ಸಹನೆ, ಎರಡನೇ ದಿನ ಅಸಹನೆ
500, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಕೇಂದ್ರ ಸರಕಾರದ ಕ್ರಮವನ್ನು ಮೊದಲ ದಿನವಾದ ಗುರುವಾರ ಸಹನೆ ಹಾಗೂ ಸಂತೋಷದಿಂದ ಸ್ವೀಕರಿಸಿದ್ದ ಜನರು, ಎರಡನೇ ದಿನವಾದ ಶುಕ್ರವಾರ ವಿನೂತನ ಕ್ರಮದಿಂದ ತಮಗಾಗುತ್ತಿರುವ ತೊಂದರೆಯಿಂದ ಆಕ್ರೋಶಗೊಂಡರು. ದೇಶಾದ್ಯಂತ ಎಲ್ಲ ಬ್ಯಾಂಕುಗಳು ಮತ್ತು ಎಟಿಎಂಗಳ ಮುಂದೆ ಉದ್ದನೆಯ ಸರತಿ ಸಾಲು ಕಂಡುಬಂದವು. ಹಲವು ತಾಸು ಕಳೆದರೂ ಹೊಸ ಕರೆನ್ಸಿ ಕೈಸೇರದ್ದರಿಂದ ಜನರ ಸಹನೆಯ ಕಟ್ಟೆಯೊಡೆದು ಗದ್ದಲಕ್ಕೆ ಕಾರಣವಾಯಿತು. ಬ್ಯಾಂಕ್ ಸಿಬ್ಬಂದಿ ಎಷ್ಟೇ ಹರಸಾಹಸ ಪಟ್ಟರೂ ಜನಜಂಗುಳಿ ಕರಗಿಸಲು ಸಾಧ್ಯವಾಗಲಿಲ್ಲ.
ಖಾಲಿಯಾದ ಕರೆನ್ಸಿ, ಎಟಿಎಂಗಳು ಬಂದ್
500 ರೂ. ಮುಖಬೆಲೆಯ ಹೊಸ ಕರೆನ್ಸಿ ಇನ್ನೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. 2000 ರೂ. ಮುಖಬೆಲೆಯ ಕರೆನ್ಸಿ ಸಾಕಷ್ಟು ದಾಸ್ತಾನು ಇತ್ತಾದರೂ, ಅದು ಗಾತ್ರದಲ್ಲಿ ಚಿಕ್ಕದಾಗಿದ್ದರಿಂದ ಎಟಿಎಂ ಮಷೀನ್ಗಳ ಮೂಲಕ ಅವುಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಹೀಗಾಗಿ 2000 ನೋಟುಗಳನ್ನು ಬ್ಯಾಂಕ್ಗಳಿಗೆ ಹೋಗಿಯೇ ಪಡೆಯಬೇಕಾಗಿದ್ದರಿಂದ ಬ್ಯಾಂಕ್ಗಳಲ್ಲಿ ಜನದಟ್ಟನೆ ವಿಪರೀತವಿತ್ತು. ಎಟಿಎಂಗಳಲ್ಲಿ ಕೇವಲ 100, 50 ರೂ. ಮುಖಬೆಲೆಯ ನೋಟುಗಳು ಮಾತ್ರ ಲಭ್ಯವಿದ್ದುದರಿಂದ ಅವು ಬೇಗನೇ ಖಾಲಿಯಾಗಿ, ಕೆಲವೇ ಗಂಟೆಗಳಲ್ಲಿ ಬಂದ್ ಆದವು. ಇದು ಜನರ ಆಕ್ರೋಶಕ್ಕೆ ಕಾರಣವಾಯಿತು. ಕೆಲವು ಖಾಸಗಿ ಬ್ಯಾಂಕ್ಗಳ ಎಟಿಎಂಗಳಂತೂ ಶುಕ್ರವಾರ ಬಳಕೆಗೆ ತೆರೆಯಲಿಲ್ಲ. ಎಲ್ಲೆಡೆ ಔಟ್ ಆಫ್ ಆರ್ಡರ್ ಬೋರ್ಡ್ಗಳು ರಾರಾಜಿಸಿದವು. ಹಾಗಾಗಿ ಇದ್ದ ಕೆಲವೇ ಎಟಿಎಂಗಳು ಜನಸಂದಣಿ ಭಾರ ತಾಳಲಾರದೇ ಕೆಟ್ಟುಕೂತವು. ಸರಿಯಿದ್ದ ಬೆರಳೆಣಿಕೆಯಷ್ಟು ಎಟಿಎಂಗಳಲ್ಲಿ ಜನದಟ್ಟನೆ ವಿಪರೀತವಾಗಿತ್ತು.
ಭೀತಿ ಬೇಡ, ಕಷ್ಟಪಟ್ಟು ಗಳಿಸಿದ ಹಣ ಸುರಕ್ಷಿತ: ಸರಕಾರ ಅಭಯ
ನೋಟು ರದ್ಧು ಬಗ್ಗೆ ಜನರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು. ಜನರು ಬೆವರು ಸುರಿಸಿ ಗಳಿಸಿದ ಹಣದಲ್ಲಿ ಒಂದೇಒಂದು ಪೈಸೆ ನಷ್ಟವಾಗದಂತೆ ಸರಕಾರ ಎಚ್ಚರಿಕೆ ವಹಿಸಿದೆ ಎಂದು ಕೇಂದ್ರ ಸರಕಾರವು ಸಾರ್ವಜನಿಕರಿಗೆ ಅಭಯ ನೀಡಿದೆ.
ತಮ್ಮ ಬಳಿ ಇರುವ 500, 1000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಸರಕಾರ ಸಾಕಷ್ಟು ಕಾಲಾವಕಾಶ ನೀಡಿದೆ. ಆದ್ದರಿಂದ ಜನರು ಅವಸರ ಪಡುವ ಅಗತ್ಯವಿಲ್ಲ. ಡಿ.30ರವರೆಗೂ ಜನರು ಹಳೆ ಕರೆನ್ಸಿಯನ್ನು ಹೊಸ ನೋಟುಗಳಿಗೆ ಬದಲಿಸಿಕೊಳ್ಳಬಹುದು. ಹಳೆ ನೋಟುಗಳನ್ನು ಎಷ್ಟು ದೊಡ್ಡ ಮೊತ್ತವಾದರೂ ಸರಿ ಬ್ಯಾಂಕ್ಗಳಲ್ಲಿ ಡಿಪಾಸಿಟ್ ಮಾಡಬಹುದು. 2.5 ಲಕ್ಷ ರೂ.ವರೆಗಿನ ಡಿಪಾಸಿಟ್ಗೆ ಯಾವುದೇ ತೊಂದರೆ ಎದುರಾಗದು ಎಂದು ಸರಕಾರ ಸ್ಪಷ್ಟಪಡಿಸಿದೆ.
ದುರಾಸೆಗೆ ಬಲಿಬೀಳಬೇಡಿ
ಕಾಳಧನಿಕರ ಆಮಿಷಗಳಿಗೆ ಬಲಿಯಾಗಬೇಡಿ ಎಂದೂ ಜನರಿಗೆ ಸರಕಾರ ಎಚ್ಚರಿಕೆ ನೀಡಿದೆ. ಹೆಚ್ಚು ಮೊತ್ತದ ಹಣವನ್ನು ತಮ್ಮ ಖಾತೆಗಳಿಗೆ ಡಿಪಾಸಿಟ್ ಮಾಡಿ, ಹೊಸ ಕರೆನ್ಸಿಯನ್ನು ತೆಗೆದುಕೊಡುವಂತೆ ಮತ್ತು ಇದಕ್ಕಾಗಿ ಕಮಿಷನ್ ನೀಡುವ ಅಪರಿಚಿತರು ಅಥವಾ ಕಾಳಧನಿಕರ ಆಮಿಷಗಳಿಗೆ ಜನರು ಬಲಿಯಾಗಬಾರದು. ಹೆಚ್ಚು ಮೊತ್ತದ ಠೇವಣಿಗಳನ್ನು ಇರಿಸಿದರೆ, ವರಮಾನ ತೆರಿಗೆ ಅಧಿಕಾರಿಗಳಿಗೆ ವಿವರಣೆ ನೀಡಬೇಕಾಗುತ್ತದೆ ಎಂದೂ ಸರಕಾರ ಎಚ್ಚರಿಸಿದೆ.
ಎಟಿಎಂನಲ್ಲಿ ಸರತಿ ನಿಂತ ರಾಹುಲ್ ಗಾಂಧಿ
ಕರೆನ್ಸಿ ಬದಲಾವಣೆಗೆ ದೇಶಾದ್ಯಂತ ಕೋಲಾಹಲ ಉಂಟಾಗಿರುವ ನಡುವೆಯೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹೊಸದಿಲ್ಲಿಯಲ್ಲಿ ಸಾರ್ವಜನಿಕರೊಂದಿಗೆ ಸರತಿ ಸಾಲಿನಲ್ಲಿ ನಿಂತು ಎಟಿಎಂನಿಂದ ಹಣ ಡ್ರಾ ಮಾಡಿದರು. ಪಾರ್ಲಿಮೆಂಟ್ ಸ್ಟ್ರೀಟ್ನಲ್ಲಿರುವ ಎಸ್ಬಿಐ ಎಟಿಎಂಗೆ ಬಿಗಿಭದ್ರತೆ ನಡುವೆ ಶುಕ್ರವಾರ ಸಂಜೆ 4.20ಕ್ಕೆ ಆಗಮಿಸಿದ ರಾಹುಲ್, ಆಗಲೇ ಅಲ್ಲಿದ್ದ ಉದ್ದನೆಯ ಸರತಿಯಲ್ಲಿ ನಿಂತರು.
‘‘ಕೇಂದ್ರದ ವಿವೇಚನಾರಹಿತವಾದ ಕ್ರಮದಿಂದ ಸಂಕಷ್ಟಕ್ಕೀಡಾಗಿರುವ ಜನರೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಲು ನಾನು ಸರತಿಯಲ್ಲಿ ನಿಂತಿದ್ದೇನೆ,’’ ಎಂದು ರಾಹುಲ್ ಹೇಳಿದರು. ಸುಮಾರು 40 ನಿಮಿಷಗಳ ಕಾಲ ಸರತಿಯಲ್ಲಿ ನಿಂತು, ಜನರ ಕಷ್ಟಗಳನ್ನು ಆಲಿಸಿದ ರಾಹುಲ್, ಹೊಸ ಕರೆನ್ಸಿಯನ್ನು ಪಡೆದು ಮರಳಿದರು. ರಾಹುಲ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಜನರು ಅವರೊಂದಿಗೆ ಸೆಲಿಧಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರಿಂದ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ಉಂಟಾಗಿತ್ತು.
ಇನ್ನೂ ಮೂರು ದಿನ ಹೆದ್ದಾರಿ ಪಯಣ ಉಚಿತ
ನೋಟುಗಳನ್ನು ರದ್ದುಪಡಿಸಿದ ಕೇಂದ್ರ ಸರಕಾರದ ಕ್ರಮ ಹೆದ್ದಾರಿ ಪಯಣಿಗರಿಗೆ ಸ್ವಲ್ಪ ಲಾಭವನ್ನೇ ತಂದಿದೆ. ಹೊಸ ಕರೆನ್ಸಿ ಕೊರತೆ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಟೋಲ್ರಹಿತ ಪಯಣವನ್ನು ಇನ್ನೂ ಮೂರು ದಿನ ಅಂದರೆ ನ.14ರವರೆಗೆ ವಿಸ್ತರಿಸಲಾಗಿದೆ. ದೇಶದ ಎಲ್ಲಾ ಹೆದ್ದಾರಿಗಳಿಗೆ ನ.14ರವರೆಗೆ ಪ್ರಯಾಣಿಕರು ಟೋಲ್ರಹಿತವಾಗಿ ಪ್ರಯಾಣಿಸಬಹುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಬಿಲ್, ತೆರಿಗೆ, ಶುಲ್ಕ ಪಾವತಿ ಅವಧಿ ಮೂರು ದಿನ ವಿಸ್ತರಣೆ
ವಿದ್ಯುತ್, ನೀರು, ದೂರವಾಣಿ ಮೊದಲಾದ ಬಿಲ್ ಪಾವತಿ, ತೆರಿಗೆ ಪಾವತಿಗೆ ಹಳೆಯ 500, 1000 ನೋಟುಗಳ ಸ್ವೀಕಾರವನ್ನು ಇನ್ನೂ ಮೂರು ದಿನಗಳವರೆಗೆ ಅಂದರೆ, ನ.14ರವರೆಗೆ ಸರಕಾರ ವಿಸ್ತರಿಸಿದೆ. ಇದು ಹಾಪ್ಕಾಮ್ಸ್, ಹಾಲಿನ ಬೂತ್, ಜನತಾಬಜಾರ್ ಮೊದಲಾದ ರಾಜ್ಯ ಮತ್ತು ಕೇಂದ್ರ ಸರಕಾರಿ ಸ್ವಾಮ್ಯದ ಮಳಿಗೆಗಳಿಗೂ ಅನ್ವಯಿಸುತ್ತದೆ. ಆಸ್ಪತ್ರೆಗಳು, ಮೆಡಿಕಲ್ಶಾಪ್ಗಳಲ್ಲೂ ಹಳೆ ನೋಟುಗಳನ್ನು ಸ್ವೀಕರಿಸಬೇಕು ಎಂದು ಸರಕಾರ ಈಗಾಗಲೇ ಸೂಚಿಸಿದೆ.
ಜನಜಂಗುಳಿ, ಕೋಲಾಹಲ ತಪ್ಪಿಸಲು ಕ್ರಮ/ ಇನ್ನೂ ಮೂರು ದಿನ ಹೆದ್ದಾರಿ ಪಯಣ ಉಚಿತ/ ಬಿಲ್ ಪಾವತಿಗೆ ಹಳೆ ನೋಟು ಬಳಸಬಹುದು