ಹರಿಪ್ರಿಯಾ ಮದುವೆ ಆಗುತ್ತಿದ್ದಾರೆ. ಹಾಗಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಅನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬಂದಿತ್ತು. ಅಲ್ಲದೇ ನೀರ್ ದೋಸೆ ಚಿತ್ರದ ಕಾಲ್ಗರ್ಲ್ ಪಾತ್ರ ಅವರನ್ನು ಮುಜುಗರಕ್ಕೀಡುಮಾಡಿದೆ ಅನ್ನುವ ಸುದ್ದಿಯೂ ಇತ್ತು. ಈ ಎಲ್ಲದರ ಕುರಿತು ಅವರ ಪ್ರತಿಕ್ರಿಯೆ ಇಲ್ಲಿದೆ. - ಶರಣು ಹುಲ್ಲೂರು ನೀರ್ ದೋಸೆ ಚಿತ್ರದಲ್ಲಿ ಕಾಲ್ಗರ್ಲ್ ಪಾತ್ರ ನಿರ್ವಹಿಸುವ ಮೂಲಕ ಅಚ್ಚರಿ ಮೂಡಿಸಿದ್ದ ಹರಿಪ್ರಿಯಾ, ಸದ್ಯ ಏನು ಮಾಡುತ್ತಿದ್ದಾರೆ ಅನ್ನುವ ಕ್ಯೂರಿಯಾಸಿಟಿ ಅವರ ಅಭಿಮಾನಿಗಳಲ್ಲಿತ್ತು. ಅವರು ಮದುವೆ ಆಗುತ್ತಿದ್ದಾರೆ ಅನ್ನುವ ಮಾತೂ ಕೇಳಿಬಂದಿತ್ತು. ಇವೆಲ್ಲದರ ಕುರಿತು ಲವಲವಿಕೆಯ ನೇರಮಾತಿಗೆ ಸಿಕ್ಕಿದ್ದಾರೆ ಈ ನಟಿ. ಸಿನಿಮಾದಾಚೆಯೂ ಒಂದಿಷ್ಟು ವಿಷಯಗಳನ್ನು ಮಾತನಾಡಿದ್ದಾರೆ. * ಕಾಲ್ಗರ್ಲ್ ಪಾತ್ರದ ನಂತರ ಮತ್ತೆ ಅಂಥದ್ದೇ ಪಾತ್ರಗಳು ನಿಮ್ಮನ್ನು ಅರಿಸಿಕೊಂಡು ಬಂದವಾ? - ಹೌದು. ಆದರೆ, ನಾನು ಒಪ್ಪಿಕೊಳ್ಳಲಿಲ್ಲ. ಒಂದು ಪ್ರಯತ್ನ ಮಾಡಿ ಗೆದ್ದಾಗ ಮತ್ತೆ ಅದನ್ನೇ ಮಾಡುವುದು ಸರಿಯಲ್ಲ ಅನಿಸಿತು. ಕಾಲ್ಗರ್ಲ್ ಪಾತ್ರ ನಿರ್ವಹಿಸುವಲ್ಲಿ ನಾನು ಸೋತಿದ್ದರೆ ಖಂಡಿತ ಮತ್ತೆ ಅಂತಹ ಪಾತ್ರ ಒಪ್ಪಿಕೊಳ್ಳುತ್ತಿದ್ದೆ. ಕಾಲ್ಗರ್ಲ್ ಪಾತ್ರದ ಬಗ್ಗೆ ಯಾರೂ ನೆಗೆಟಿವ್ ಆಗಿ ಮಾತನಾಡಲಿಲ್ಲ. ತುಂಬಾನೇ ಇಷ್ಟಪಟ್ಟಿದ್ದಾರೆ. ಶಿವರಾಜ್ ಕುಮಾರ್, ಜಗ್ಗೇಶ್ ಸೇರಿದಂತೆ ಹಲವು ನಟರು ಬೆನ್ನುತಟ್ಟಿದ್ದಾರೆ. * ಹಾಗಾದರೆ, ನಿಮ್ಮ ಕೈತುಂಬ ಆಫರ್ಗಳು ಇರಬೇಕಿತ್ತು. ಏಕೆ ಹೊಸ ಚಿತ್ರಗಳನ್ನು ಒಪ್ಪಿಕೊಂಡಿಲ್ಲ? - ಸದ್ಯ ಭರ್ಜರಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ತುಂಬ ಸ್ಟೋರಿಗಳನ್ನೂ ಕೇಳುತ್ತಿದ್ದೇನೆ. ಶೂಟಿಂಗ್ ಸಮಯದಲ್ಲೂ ಇ-ಮೇಲ್ನಲ್ಲಿ ಸ್ಕ್ರಿಪ್ಟ್ ತರಿಸಿಕೊಂಡು ಓದುತ್ತಿದ್ದೇನೆ. ಹೊಸ ನಿರ್ದೇಶಕರ ಚಿತ್ರಗಳು ಕೂಡ ಇಂದು ಸಕ್ಸೆಸ್ ಆಗುತ್ತಿವೆ. ಹಾಗಾಗಿ ಯಾವುದನ್ನೂ ನೆಗ್ಲೆಕ್ಟ್ ಮಾಡುವಂತಿಲ್ಲ. ಸ್ಕ್ರಿಪ್ಟ್ ಫೈನಲ್ ಮಾಡಿದ್ದೇನೆ. ಯಾವುದಕ್ಕೂ ಸಹಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಹೊಸ ಚಿತ್ರಗಳಿಗೆ ಸಹಿ ಮಾಡುವೆ. * ಕಾಲ್ಗರ್ಲ್ ಪಾತ್ರ ಒಪ್ಪಿಕೊಳ್ಳುವಾಗ ನಿಮ್ಮ ವೃತ್ತಿ ಬದುಕಿಗೆ ಅದು ಡ್ಯಾಮೇಜ್ ಮಾಡುತ್ತದೆ ಅನ್ನುವ ಭಯ ಇತ್ತಾ? - ಪಾತ್ರ ಎಂಥದ್ದೇ ಆಗಿರಲಿ, ನಾವು ಯಾವ ಟೀಮ್ ಜತೆ ಕೆಲಸ ಮಾಡುತ್ತಿದ್ದೇವೆ ಅನ್ನುವುದು ಮುಖ್ಯ. ಮೊದಲಿನಿಂದಲೂ ನನಗೆ ಕಾಲ್ಗರ್ಲ್ ಪಾತ್ರಕ್ಕೆ ಕರೆ ಇದ್ದೇ ಇತ್ತು. ಆದರೆ, ನನ್ನನ್ನು ಯಾವ ರೀತಿಯಲ್ಲಿ ತೋರಿಸುತ್ತಾರೋ ಅನ್ನುವ ಭಯ ಖಂಡಿತ ಇತ್ತು. ನೀರ್ ದೋಸೆಯಲ್ಲಿ ಹಾಗೆ ಅನಿಸಲಿಲ್ಲ. ನಿರ್ದೇಶಕ ವಿಜಯ ಪ್ರಸಾದ್ ಕೂಡ ಗೌರವಯುತವಾಗಿಯೇ ಆ ಪಾತ್ರ ಕಟ್ಟಿಕೊಟ್ಟರು. * ಮದುವೆಯ ಆಲೋಚನೆಯಲ್ಲಿದ್ದೀರಾ? ಲವ್ ಮ್ಯಾರೇಜಾ ಅಥವಾ ಅರೇಂಜ್ಡ್ ಮದುವೆನಾ? - ಕುಟುಂಬದ ಯಾವುದೇ ಕಾರ್ಯಕ್ರಮಕ್ಕೆ ಹೋದರೂ, ಮದುವೆ ಪ್ರಸ್ತಾಪ ಇದ್ದೇ ಇರುತ್ತದೆ. ನಮ್ಮ ಕುಟುಂಬದಲ್ಲಿಯ ಕೊನೆಯ ಮಗಳು ನಾನು. ಬಹುತೇಕರ ಮದುವೆ ಆಗಿದೆ. ಹಾಗಾಗಿ ಅಮ್ಮನೂ ಒಂದೊಂದು ಸಲ ಒತ್ತಾಯ ಮಾಡುತ್ತಾ ಇರುತ್ತಾರೆ. ಸದ್ಯಕ್ಕಂತೂ ಮದುವೆ ಆಲೋಚನೆ ಇಲ್ಲ. ಲವ್ ಅಥವಾ ಅರೇಂಜ್ಡ್ ಅಂತ ಹೇಳುವುದು ಕಷ್ಟ ಆಗುತ್ತಿದೆ. ಲವ್ ಮಾಡಿದರೂ, ನಾನು ಅರೇಂಜ್ಡ್ ಮದುವೆ ಆಗುತ್ತೇನೆ. ಕುಟುಂಬದವರು ಹುಡುಗನನ್ನು ನೋಡಿದರೂ, ಆನಂತರ ಆ ಹುಡುಗನನ್ನು ಲವ್ ಮಾಡಿ ಮದುವೆ ಆಗುತ್ತೇನೆ. * ಸ್ಯಾಂಡಲ್ವುಡ್ನ ನಂಬರ್ ಒನ್ ನಟಿ ರೇಸ್ನಲ್ಲಿ ನೀವು ಇರೋಕೆ ಇಷ್ಟ ಪಡುತ್ತೀರಾ? - ಕನ್ನಡ ಸಿನಿಮಾ ರಂಗದಲ್ಲಿ ಕೇವಲ ಕರ್ನಾಟಕದ ನಟಿಯರು ಮಾತ್ರವಲ್ಲ, ಬೇರೆ ಭಾಷೆಯ ಹಿರೋಯಿನ್ಸ್ ಕೂಡ ನಟಿಸುತ್ತಿದ್ದಾರೆ. ಅವರ ಜತೆ ಕಾಂಪಿಟೇಶನ್ ಮಾಡುವುದು ತಪ್ಪು ಅನ್ನುವುದು ನನ್ನ ಭಾವನೆ. ಕನ್ನಡದ ನಟಿಯರ ಜತೆ ಸ್ಪರ್ಧೆಗೆ ಇಳಿಯೋಕೆ ನಾನಂತೂ ಒಪ್ಪುವುದಿಲ್ಲ. ಇವತ್ತು ನಂಬರ್ ಒನ್ ಅನಿಸಿಕೊಂಡವರು, ನಾಳೆ ಏನಾಗಿರುತ್ತಾರೋ ಗೊತ್ತಿಲ್ಲ. ಹಾಗಾಗಿ ನಾನು ರೇಸ್ನಲ್ಲಿ ಇರೋಕೆ ಇಷ್ಟ ಪಡುವುದಿಲ್ಲ. ಒಳ್ಳೆಯ ನಟಿಯಾಗಿ ಇರೋಕೆ ಇಷ್ಟ ಪಡುತ್ತೇನೆ. * ತುಂಬಾನೇ ಕಷ್ಟಪಟ್ಟು ಈ ಮಟ್ಟಕ್ಕೆ ಬಂದವರು ನೀವು. ಈ ಗೆಲುವನ್ನು ಯಾರಿಗೆ ಅರ್ಪಿಸುತ್ತೀರಿ? - ನಾನು ಇಂಡಸ್ಟ್ರಿಗೆ ಬಂದಾಗ 16 ವರ್ಷದವಳಾಗಿದ್ದೆ. ಆಗ ತಾನೆ ಹೊಸ ವಿಚಾರಗಳನ್ನು ಕಲಿಯುತ್ತಿದ್ದೆ. ತುಂಬಾ ಮಿಸ್ಟೇಕ್ ಮಾಡಿ, ಕಲಿತಿದ್ದೇನೆ. ಯಾರೋ ನನ್ನನ್ನು ಸಿನಿಮಾ ರಂಗಕ್ಕೆ ತಂದು ಬಿಟ್ಟಿದ್ದರೆ, ಬಹುಶಃ ಕಷ್ಟ ಅಂದರೆ ಏನು ಅಂತ ಅರ್ಥ ಆಗುತ್ತಿರಲಿಲ್ಲ. ಗಾಡ್ ಫಾದರ್ ಇಲ್ಲದೇ ಬಂದಿರುವ ಈ ಜರ್ನಿ ನನಗೆ ಖುಷಿ ಕೊಟ್ಟಿದೆ. ಸಾಕಷ್ಟು ಕಲಿಸಿದೆ. ಹಾಗಾಗಿ ಈ ಗೆಲುವನ್ನು ನಾನು ನನ್ನ ತಾಯಿಗೇ ಅರ್ಪಿಸುತ್ತೇನೆ. ನನ್ನ ಸುಖ-ದುಃಖದಲ್ಲಿ ಭಾಗಿ ಆದವರು ಅವರೊಬ್ಬರೇ. ಜತೆಗೆ ನಾನು ಸಿನಿಮಾ ಮಾಡಿದ ಅಷ್ಟೂ ಟೀಮ್ಗೂ ಗೆಲುವಿನಲ್ಲಿ ಪಾಲಿದೆ. ಒಬ್ಬರೇ ನನ್ನನ್ನು ಬೆಳೆಸಿದರು ಅನ್ನುವುದು ತಪ್ಪಾಗುತ್ತದೆ. * ಇವತ್ತಿಗೂ ತುಂಬಾನೇ ಕಾಡುತ್ತಿರುವ ನೋವು ಯಾವುದು? - ನನ್ನ ತಂದೆಯನ್ನು ಕಳೆದುಕೊಂಡಿದ್ದು. ಎಂಥ ನೋವಿದ್ದರೂ ನಾನು ಸಹಿಸಿಕೊಳ್ಳುತ್ತೇನೆ. ಅದನ್ನು ಮರೆಯುವುದಕ್ಕೆ ಪ್ರಯತ್ನ ಪಡುತ್ತೇನೆ. ಆದರೆ, ಅಪ್ಪ ನಮ್ಮಿಂದ ದೂರ ಆಗಿದ್ದು ಇವತ್ತಿಗೂ ಆಘಾತ ತರುತ್ತಿದೆ. * ಭರ್ಜರಿ ಸಿನಿಮಾದಲ್ಲಿ ನಿಮ್ಮದು ಎಂತಹ ಪಾತ್ರ? - ಭರ್ಜರಿ ಸಿನಿಮಾದಲ್ಲಿ ನಾನು ಉತ್ತರ ಕರ್ನಾಟಕದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಅವಳು ತುಂಬಾ ಇನೋಸೆಂಟ್ ಹುಡುಗಿ. ಏನೇ ಮಾತಾಡಿದರೂ ಅದರಲ್ಲೊಂದು ಅರ್ಥ ಇರುತ್ತದೆ.
↧
ನಂ.1 ನಟಿ ರೇಸ್ನಲ್ಲಿ ಇರೋಕೆ ಇಷ್ಟಪಡಲ್ಲ ಎಂದ ಹರಿಪ್ರಿಯಾ
↧