* ಹರೀಶ್ ಬಸವರಾಜ್
ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಯಶಸ್ವಿ ನಾಯಕರು ಸಿಗುತ್ತಾರೆ. ಆ ಪೈಕಿ ಮಹೇಂದ್ರ ಸಿಂಗ್ ಧೋನಿ ಕೂಡಾ ಒಬ್ಬರಾದರೂ ಸ್ವಲ್ಪ ಸ್ವೆಷಲ್. ನಮ್ಮ ದೇಶಕ್ಕೆ ಎರಡೆರಡು ವಿಶ್ವ ಕಪ್ ತಂದು ಕೊಟ್ಟ ನಾಯಕ. ಸಾಮಾನ್ಯ ಕುಟುಂಬದಿಂದ ಬಂದು ವಿಶ್ವ ಪ್ರಸಿದ್ಧ ಆಟಗಾರನಾಗಿ ಮಿಂಚಿದವರು. ಅವರ ಜೀವನ ಬೆಳ್ಳಿತೆರೆಗೆ ಬರುತ್ತದೆ ಎಂದಾಗ ಅದರಲ್ಲಿ ಏನಿರುತ್ತದೆ? ಏನಿರುವುದಿಲ್ಲ? ಎನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ದೇಶಿಯ ಹಾಗೂ ವಿದೇಶಿ ಕ್ರಿಕೆಟ್ ಆಟಗಾರರಿಗೂ ಇತ್ತು. ನಿರ್ದೇಶಕ ನೀರಜ್ ಪಾಂಡೆ ಮತ್ತವರ ತಂಡ ಎಲ್ಲರ ನಂಬಿಕೆಗೆ ಘಾಸಿ ಮಾಡದೇ ಧೋನಿ ಕಥೆಯನ್ನು ಸಮರ್ಥವಾಗಿ ತೆರೆಗೆ ಅಳವಡಿಸಿದೆ.
‘ಎಂ ಎಸ್ ಧೋನಿ’ ದಿ ಅನ್ ಟೋಲ್ಡ್ ಸ್ಟೋರಿ’ಚಿತ್ರದಲ್ಲಿ ಧೋನಿ ಅನುಭವಿಸಿರುವ ಕಷ್ಟಗಳಿವೆ. ಕ್ರಿಕೆಟ್ಗಾಗಿ ರೈಲ್ವೆ ಇಲಾಖೆಯಲ್ಲಿದ್ದ ಕೆಲಸ ಬಿಟ್ಟ ಕತೆ ಹೃದಯಸ್ಪರ್ಶಿಯಾಗಿದೆ. ಮಗ ಆಟವಾಡುತ್ತಾ ದಾರಿ ತಪ್ಪುತ್ತಿದ್ದಾನೆ ಎನ್ನುವ ಮಧ್ಯಮ ವರ್ಗದ ತಂದೆಯ ತಳಮಳವಿದೆ. ಲವ್ ಫೇಲ್ಯೂರ್ ಆದಾಗ ಸಾಮಾನ್ಯ ಹುಡುಗರಂತೆ ಭಾವನಾತ್ಮಕವಾಗಿ ದುಃಖಿಸುವ ಧೋನಿ ಮನಸ್ಸಿಗೆ ಟಚ್ ಆಗುತ್ತಾರೆ. ಉತ್ತಮ ತಂಡ ಕಟ್ಟಲು ಅತ್ಯಂತ ನಿಷ್ಠುರವಾಗಿ ನಡೆದುಕೊಳ್ಳುವ ಧೋನಿಯೂ ಇಷ್ಟವಾಗುತ್ತಾರೆ. ಹೀಗೆ ಇಡೀ ಚಿತ್ರದಲ್ಲಿ ಧೋನಿಯ ಹಲವಾರು ಮುಖಗಳು ಅನಾವರಣಗೊಂಡಿವೆ.
ಆತ್ಮಕಥೆಗಳನ್ನು ಆಧರಿಸಿದ ಚಿತ್ರಗಳಲ್ಲಿ ಒಂದಷ್ಟು ವಿವಾದಗಳು ಇರಲೇಬೇಕು ಎಂಬುದು ಸಿದ್ಧಸೂತ್ರ. ಈ ಸಿನಿಮಾ ಅದನ್ನು ಮೀರಿದೆ. ಇಲ್ಲಿ ನಿರ್ದೇಶಕ ನೀರಜ್ ಪಾಂಡೆ ಯೋಚನೆಗಳು ಗಮನ ಸೆಳೆಯುತ್ತವೆ. ಇಡೀ ಸಿನಿಮಾದಲ್ಲಿ ಅವರು ಎಲ್ಲೂ ಯಾರನ್ನೂ ದೂಷಿಸುವ ಕೆಲಸ ಮಾಡಿಲ್ಲ.
ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಸಣ್ಣ ಕೆಲಸ ಮಾಡಿಕೊಂಡಿದ್ದ ಪಾನ್ ಸಿಂಗ್ ಧೋನಿ ಎಂಬ ಸಾಮಾನ್ಯ ತಂದೆಯ ಮಗನಾದ ಧೋನಿ, ಮೂಲತಃ ಫುಟ್ಬಾಲ್ ಗೋಲ್ ಕೀಪರ್. ಶಾಲೆಯ ಕ್ರಿಕೆಟ್ ತಂಡದಲ್ಲಿ ವಿಕೇಟ್ ಕೀಪರ್ ಇಲ್ಲದ ಕಾರಣ ಅವಕಾಶ ಪಡೆಯುವ ಆತ, ಮುಂದೆ ಇಡೀ ವಿಶ್ವವೇ ನಿಬ್ಬೆರಗಾಗಿ ಭಾರತದತ್ತ ತಿರುಗಿ ನೋಡುವ ಕ್ರಿಕೆಟ್ಪಟುವಾಗುತ್ತಾನಲ್ಲಾ.. ಅದೇ ಇಡೀ ಸಿನಿಮಾ.
ಶಾಲಾ ದಿನಗಳಲ್ಲಿ ಮೂರು ಗಂಟೆ ಪರೀಕ್ಷೆಯನ್ನು ಎರಡೂವರೆ ಗಂಟೆ ಮಾತ್ರ ಬರೆದು, ಕ್ರಿಕೆಟ್ಗಾಗಿ ಓಡಿಬಿಡುವ ಧೋನಿಯ ಆಟದ ಹಸಿವು ಮನ ಸೆಳೆಯುತ್ತದೆ. ನಂತರ ಬಿಹಾರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ, ಅಲ್ಲಿಂದ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಗಿಟ್ಟಿಸಿ, ಅಲ್ಲೂ ಕೆಲಸ ಮಾಡಲಾಗದೆ ಕ್ರಿಕೆಟ್ನತ್ತ ಸೆಳೆತ ಹೆಚ್ಚಿ ಕೆಲಸ ಬಿಡುತ್ತಾರೆ. ಆಮೇಲೆ ಭಾರತ ತಂಡ ಸೇರಲು ಏನೆಲ್ಲ ಕಷ್ಟ ಪಡುತ್ತಾರೆ? ಆ ನಂತರದ ಕಥೆ ಏನು? ತಂಡದ ನಾಯಕರಾಗಿ ತೆಗೆದುಕೊಂಡ ಕೆಲ ನಿಷ್ಠುರ ನಡೆಗಳೇನು? ಎಂಬುದಕ್ಕೆ ಇಡೀ ಚಿತ್ರ ಉತ್ತರ ನೀಡುತ್ತದೆ.
ಧೋನಿ ಬಿಹಾರ ತಂಡವನ್ನು ಪ್ರತಿನಿಧಿಸುವಾಗ ಯುವರಾಜ್ ಸಿಂಗ್ ಪಾತ್ರ ಬರುತ್ತದೆ. ಇದು ಬಿಟ್ಟರೆ ಇಡೀ ಸಿನಿಮಾದಲ್ಲಿ ಕ್ರಿಕೆಟ್ ಆಟಗಾರರನ್ನು ಪಾತ್ರಧಾರಿಗಳಾಗಿ ಬಳಸಿಕೊಂಡಿಲ್ಲ. ಆದರೆ, ಧೋನಿಯ ಕ್ರಿಕೆಟ್ ಜೀವನಕ್ಕೆ ಸಾಕ್ಷಿಯಾದ ಮತ್ತು ಸಹಾಯ ಮಾಡಿದ ಎಲ್ಲ ಗೆಳೆಯರು ಮತ್ತು ಅವರ ಶಿಕ್ಷಕರು ತೆರೆ ಮೇಲೆ ಬರುತ್ತಾರೆ ಎನ್ನುವುದು ವಿಶೇಷ. ಇದರ ಮಧ್ಯೆ ವಿಮಾನದಲ್ಲಿ ಸಿಗುವ ಗೆಳತಿ, ಬಂದಷ್ಟೇ ವೇಗದಲ್ಲಿ ಕಣ್ಮರೆಯಾಗುತ್ತಾಳೆ. ಅವಳು ಮರಣ ಹೊಂದುವ ಹೊತ್ತಿಗೆ ಧೋನಿ ಸ್ಟಾರ್ ಆಟಗಾರನಾಗಿ ಹೊರ ಹೊಮ್ಮಿರುತ್ತಾರೆ. ಆದರೂ ಗೆಳತಿಯ ಸಾವಿನಿಂದ ನೊಂದಿದ್ದ ಅವರು ನಡು ರಸ್ತೆಯಲ್ಲಿ ನಿಂತು ಅಳುವ ದೃಶ್ಯ ಅದ್ಭುತವಾಗಿ ಚಿತ್ರಿತವಾಗಿದೆ.
ಧೋನಿ ಕ್ರಿಕೆಟ್ ಜೀವನಕ್ಕೆ ಅವನ ಅಕ್ಕ ಮತ್ತು ಗೆಳತಿ ಸ್ಪೂರ್ತಿಯಾಗಿದ್ದರು ಎಂದು ತೋರಿಸಲಾಗಿದೆ. ಪತ್ನಿ ಸಾಕ್ಷಿ ಪಾತ್ರ ಗೆಳತಿಯ ಪಾತ್ರದಷ್ಟು ಪರಿಣಾಮಕಾರಿಯಾಗಿಲ್ಲ. ಇನ್ನು ಧೋನಿ ಪಾತ್ರಧಾರಿ ಸುಶಾಂತ್ ರಜಪೂತ್ ಅವರದ್ದು ಚುರುಕಿನ ಅಭಿನಯ. ಸಹೋದರಿ ಪಾತ್ರದಲ್ಲಿ ಭೂಮಿಕಾ ಚಾವ್ಲಾ ಅವರದ್ದು ಸಮತೂಕದ ಅಭಿನಯ. ತಂದೆ ಪಾತ್ರದಲ್ಲಿ ಅನುಪಮ್ ಖೇರ್ ಅತ್ಯುತ್ತಮ.
ಮೂರು ಗಂಟೆ ಹತ್ತು ನಿಮಿಷ ಪ್ರೇಕ್ಷಕರನ್ನು ಹಿಡಿದು ಕೂರಿಸುವುದು ಚಿತ್ರಕಥೆ ರಚಿಸಿರುವ ನೀರಜ್ ಪಾಂಡೆ ಮತ್ತು ದಿಲೀಪ್ ಜಾ ಅವರ ಹೆಗ್ಗಳಿಕೆ. ಹಾಡುಗಳು ಚಿತ್ರಕತೆಗೆ ಪೂರಕವಾಗಿದೆ. ಕ್ಯಾಮೆರಾ ವರ್ಕ್ ಸಾಧಾರಣ, ಸಿನಿಮಾ ಕತೆಗೆ ಎಷ್ಟು ಬೇಕೋ ಅಷ್ಟಿದೆ. ಛಲ ಮತ್ತು ಆಸಕ್ತಿ ಇದ್ದರೆ ಸಾಮಾನ್ಯರೂ ಅಸಾಮಾನ್ಯರಾಗಬಹುದು ಎಂಬುದಕ್ಕೆ ಧೋನಿ ಸಾಕ್ಷಿ. ಈ ಸಿನಿಮಾ ಅದಕ್ಕೆ ಹಿಡಿದ ಕೈಗನ್ನಡಿ.
ಹಿಂದಿ ಚಿತ್ರ