- ಶರಣು ಹುಲ್ಲೂರು
ಸಿಪಾಯಿ ಅಂದಾಕ್ಷಣ ಇದು ಸೈನಿಕನ ಕತೆ ಇರಬಹುದಾ? ಎಂಬ ಕುತೂಹಲ ಮೂಡುವುದು ಸಹಜ. ನಿರ್ದೇಶಕ ರಜತ್ ಮಯೀ 'ಸಿಪಾಯಿ' ಸಿನಿಮಾದಲ್ಲಿ ಈ ಪದಕ್ಕೆ ಬೇರೆಯದೇ ಅರ್ಥ ಕಲ್ಪಿಸಿದ್ದಾರೆ. 'ಜನರ ಹಿತ ಕಾಪಾಡುವ ಪ್ರತಿಯೊಬ್ಬರೂ ಸಿಪಾಯಿ' ಎಂಬ ಸಂದೇಶ ಸಾರುವ ಮೂಲಕ ಪತ್ರಕರ್ತನಿಗೂ ಆ ಪಟ್ಟ ಕಟ್ಟಿದ್ದಾರೆ. ಆತನ ಬದುಕಿನ ಸುತ್ತ ರೋಚಕ ಕತೆ ಹೆಣೆದು ಸಿನಿಮಾ ಮಾಡಿದ್ದಾರೆ. ಹಾಗಾಗಿಯೇ ಚಿತ್ರವು ಒಂದಷ್ಟು ರೋಚಕ ಘಟನೆಗಳಿಗೆ ಸಾಕ್ಷಿ ಆಗುತ್ತದೆ.
ಹಾಗಂತ ಹೇಳೋಕೆ ಹೊರಟಿರುವ ಕತೆ ವಿಭಿನ್ನವಾಗಿದೆ ಅಂತ ಹೇಳುವುದು ಕಷ್ಟ. ಬಹುತೇಕ ಸಿನಿಮಾಗಳಲ್ಲಿ ನಾಯಕನಿಗೆ ಹಿನ್ನಲೆಯನ್ನೇ ಕೊಡದೆ ಸಿನಿಮಾ ಮಾಡಿದ್ದನ್ನು ನೋಡಿದ್ದೇವೆ. ಜಗತ್ತು ಮುಳುಗಿದರೂ ಹೀರೋ ಮಾತ್ರ ಸೂಪರ್ಮ್ಯಾನ್ ಆಗುವುದನ್ನು ಕಾಣುತ್ತೇವೆ. ಈ ಚಿತ್ರದಲ್ಲೂ ಅದೆಲ್ಲವೂ ಇದೆ. ನಾಯಕ ಮಾತ್ರ ಪತ್ರಕರ್ತ ಆಗಿರುತ್ತಾನಷ್ಟೆ.
ಆತ ಸಿದ್ದು (ಸಿದ್ಧಾರ್ಥ ಮಹೇಶ್) ವೃತ್ತಿಯಲ್ಲಿ ಕ್ರೈಂ ರಿಪೋರ್ಟರ್. ಹಿರಿಯ ಪತ್ರಕರ್ತ ನರಸಿಂಹರಾಜು (ಅಚ್ಯುತ್ಕುಮಾರ್) ಅವರ ಪುತ್ರ. ಅಪರಾಧ ಸುದ್ದಿಗಳನ್ನು ವಿಭಿನ್ನವಾಗಿ ಕಟ್ಟಿಕೊಡಬೇಕು ಅನ್ನುವುದು ಸಿದ್ದುಗಿರುವ ತುಡಿತ. ಹೀಗಾಗಿಯೇ ಅಪರಾಧ ಜಗತ್ತಿನೊಂದಿಗೆ ತಾನು ಬೆರೆತು ಸುದ್ದಿಗಳನ್ನು ಹೆಕ್ಕುತ್ತಾನೆ. ಅಲ್ಲಿದ್ದುಕೊಂಡೆ ನ್ಯೂಸ್ ಮಾಡುತ್ತಾನೆ. ಡ್ರಗ್ ಮಾಫಿಯಾ, ಮಾನವ ಕಳ್ಳ ಸಾಗಣೆಯ ವಿರುದ್ಧ ಸರಣಿಯಂತೆ ವರದಿ ಮಾಡುತ್ತಲೇ ಹೋಗುತ್ತಾನೆ. ಕೊನೆಗೊಂದು ದಿನ ಈತನೇ ಆ ಸುದ್ದಿಗಳನ್ನು ಮಾಡುತ್ತಿರುವುದು ಎಂದು ಡಾನ್ಗೆ ಗೊತ್ತಾಗುತ್ತದೆ. ಸಿದ್ದು ಮತ್ತು ಆತನ ತಂದೆಯನ್ನು ಮುಗಿಸಲು ಡಾನ್ ಮುಹೂರ್ತ ಫಿಕ್ಸ್ ಮಾಡುತ್ತಾನೆ. ಅಲ್ಲಿಂದ ಸಿದ್ದು ತಪ್ಪಿಸಿಕೊಳ್ಳುತ್ತಾನಾ ಅಥವಾ ವಿಷ ವರ್ತುಲದೊಳಗೆ ಸಿಕ್ಕು ನರಳುತ್ತಾನಾ ಅನ್ನುವ ಕತೆ ಇಲ್ಲಿದೆ. ಈ ಮಧ್ಯೆ ಅಲ್ಲಲ್ಲಿ ಒಂದಷ್ಟು ತಿರುವುಗಳಿವೆ. ಇವನೊಳಗೊಂದು ಪ್ರೀತಿ ಚಿಗುರುತ್ತದೆ. ದಿವ್ಯಾ (ಶ್ರುತಿ ಹರಿಹರನ್) ಎಂಬ ವಿದ್ಯಾರ್ಥಿನಿ ಜತೆ ಪ್ರೇಮಾಂಕುರ ಆಗುತ್ತದೆ. ಈ ಪ್ರೀತಿಯನ್ನು ಡಾನ್ಗಳು ದ್ವೇಷ ಸಾಧನೆಗಾಗಿ ಬಳಸಿಕೊಳ್ಳುತ್ತಾರೆ. ಹೀಗೆ ಕತೆ ಸಾಗುತ್ತದೆ. ಆದರೆ, ಯಾವ ತಿರುವುಗಳೂ ಥ್ರಿಲ್ ನೀಡುವುದಿಲ್ಲ. ಕತೆಯ ಮುಂದುವರಿಕೆಗಾಗಿ ಬಳಸಿದ ಟೂಲ್ನಂತೆ ಭಾಸವಾಗುತ್ತವೆ.
ಹೇಳುವ ಕ್ರಮದಲ್ಲಿ ನಿರ್ದೇಶಕರು ಒಂದಿಷ್ಟು ಜಾಣ್ಮೆ ತೋರಿದ್ದರೂ, ಅದನ್ನು ಪ್ರೇಕ್ಷಕನಿಗೆ ದಾಟಿಸಲು ಹರಸಾಹಸ ಪಡುತ್ತಾರೆ. ಸಂದರ್ಭವೇ ಇಲ್ಲದಂತೆ ಹಾಡುಗಳನ್ನು ತೂರಿಸುತ್ತಾರೆ. ಹಾಗಾಗಿ 'ಯಾರ ಹಣೆಯಲಿ ಏನಿದೆಯೋ' ಎಂಬ ಗೀತೆಯ ಹೊರತಾಗಿ, ಯಾವ ಸಾಂಗ್ ಕೂಡ ಕತೆಯೊಂದಿಗೆ ಹೊಂದಿಕೊಂಡಿಲ್ಲ.
ನಾಯಕ ಸಿದ್ಧಾರ್ಥ ಮಹೇಶ್ ಅವರ ಪಾತ್ರ ಪೋಷಣೆಯಲ್ಲಿ ಮತ್ತಷ್ಟು ಶ್ರಮ ಬೇಡಿದರೂ, ಚೊಚ್ಚಲು ಸಿನಿಮಾದಲ್ಲಿ ಭರವಸೆ ಮೂಡಿಸುತ್ತಾರೆ. ಶ್ರುತಿ ಹರಿಹರನ್ ಪಾತ್ರಕ್ಕೆ ಅಷ್ಟೊಂದು ಸ್ಕೋಪ್ ಇಲ್ಲ. ಹೀಗಾಗಿ ಹಾಡಿಗೆ ಮಾತ್ರ ಸೀಮಿತರಾಗಿ ಉಳಿಯುತ್ತಾರೆ. ಪತ್ರಕರ್ತ ಮತ್ತು ತಂದೆ ಎರಡೂ ಭಾವಗಳನ್ನು ಅಚ್ಯುತ್ ಕುಮಾರ್ ಸಮರ್ಥವಾಗಿ ನಿಭಾಯಿಸಿದ್ದಾರೆ. ನಾಯಕನ ಗೆಳೆಯನಾಗಿ ಸಂಚಾರಿ ವಿಜಯ್, ಚಾನೆಲ್ನ ಮುಖ್ಯಸ್ಥನಾಗಿ ಗೌರೀಶ್ ಅಕ್ಕಿ ಇಷ್ಟವಾಗುತ್ತಾರೆ.
ಕತೆಯೊಂದಿಗೆ ಹಾಡುಗಳು ಸಾಗದೇ ಇರುವುದರಿಂದ ಅಜನೀಶ್ ಲೋಕನಾಥ್ ಅವರ ಸಂಗೀತ ಕಿವಿಯೊಳಗೆ ಹೋದರೂ, ಹೃದಯಕ್ಕೆ ಇಳಿಯುವುದಿಲ್ಲ. ಹೊಸ ಹುಡುಗರ ಮೊದಲ ಪ್ರಯತ್ನ ಅನ್ನುವ ಕಾರಣಕ್ಕಾದರೂ ಸಿಪಾಯಿಯನ್ನೊಮ್ಮೆ ನೋಡಬಹುದು.
ಕನ್ನಡ: ಸಿಪಾಯಿ