Quantcast
Channel: VijayKarnataka
Viewing all articles
Browse latest Browse all 6795

ಕ್ರಾಸ್ ಕನೆಕ್ಷನ್: ಉಳ್ಳವರು ಸಿರಿಧಾನ್ಯವ ತಿನ್ನುವರು ನಾ ಹೇಗೆ ತಿನ್ನಲಿ ಬಡವನಯ್ಯ?

$
0
0

ಕ್ರಾಸ್ ಕನೆಕ್ಷನ್: ಪಿ ಕುಸುಮಾ ಆಯರಹಳ್ಳಿ

ಡಾಕ್ಟರ್‌ ಒಬ್ಬರ ಭಾಷಣ ಕೇಳಿ ಪ್ರಭಾವಿತಳಾದೆ. ಆರ್ಥರೈಟಿಸ್‌ ಇದ್ದವರಿಗೆ ನವಣೆ ಉತ್ತಮ ಪರಿಹಾರ ಅಂತ ಅವರು ಹೇಳಿದ್ದರು. ಗುರು ಪತ್ನಿ ಒಬ್ಬರಿಗೆ ಆ ಕಾಯಿಲೆ ಇದೆ. ಅವರಿಗಾಗಿ ನವಣೆಯ ಅಡುಗೆ ಮಾಡಿಕೊಂಡು ಹೋದೆ. ಗುರು ಪತ್ನಿ ತಿಂದರು, ಆದರೆ ಗುರುಗಳು ನಿರಾಕರಿಸಿದರು. ಸಾಮಾನ್ಯವಾಗಿ ಎಲ್ಲ ಹೊಸ ಪ್ರಯೋಗಗಳಿಗೂ ಹೊಂದಿಕೊಳ್ಳಲು ಯತ್ನಿಸುವ ಗುರುಗಳು ಹೀಗೆ ಏಕೆ ನಿರಾಕರಿಸುತ್ತಿದ್ದಾರೆ. ಆದೂ ಸಿರಿ ಧಾನ್ಯವನ್ನು? ಕುತೂಹಲಕ್ಕೆ ಕೇಳಿದೆ. ಅದು ಸಮಾನತೆಗೆ ವಿರುದ್ಧ ಅಂದರು. ನವಣೆಗೂ ಸಮಾನತೆಗೂ ಏನು ಸಂಬಂಧ ಕೇಳಿದೆ. ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಮೇಲ್ವರ್ಗದವರಾದ ಜನ ಯಾವತ್ತೂ ಬಡವರ ಆಹಾರವನ್ನ ತಿನ್ನದಿದ್ದರೆ ಅದು ದೊಡ್ಡ ಅಸಮಾನತೆ. ಬಡವರು ತಿನ್ನುವ ಆಹಾರವೆ ಸಿರಿವಂತರು ತಿನ್ನುವ ಆಹಾರವಾಗುವುದರಲ್ಲೆ ನಿಜವಾದ ಸಮಾನತೆ ಇದೆ ಎಂದರು. ಎಂದೊ ಓದಿದ್ದ ಆಂಧ್ರದ ಸಮಾಜವಾದಿಯೊಬ್ಬನ ಈ ಚಿಂತನೆ ಅವರನ್ನ ಪ್ರಭಾವಿಸಿತ್ತಂತೆ.

ನವಣೆ, ಸಾಮೆ, ಅರ್ಕ, ಊದಲು, ಕೊರಲೆ, ಬರಗು ಸಿರಿ ಧಾನ್ಯಗಳ ಲಿಸ್ಟಿನಲ್ಲಿರುವ ಈ ಹೆಸರುಗಳನ್ನ ಕೇಳಿರುತ್ತೀರಿ ನೀವು. ಸಿರಿ ಧಾನ್ಯ ಉಪಯೋಗಿಸ್ತಿಲ್ವ ನೀವು ಅಂತ ಪ್ರಶ್ನೆ ಕೇಳಿ ಒಂದು ವೇಳೆ ನೀವು ಇಲ್ಲ ಅಂತ ತಲೆಯಾಡಿಸಿದರೆ ಮುಂದಿನ ಮುಕ್ಕಾಲುಗಳಂಟೆ ಸಿರಿಧಾನ್ಯಗಳ ಸಿರಿಯ ಪರಿ ನಿಮ್ಮ ಕಿವಿ ತುಂಬುವುದು ಗ್ಯಾರಂಟಿ. ಎಷ್ಟೆಷ್ಟೊ ರೋಗಗಳಿಗೆ ಔಷಧದ ಅಗತ್ಯವೆ ಇಲ್ಲದೆ ಈ ಧಾನ್ಯಗಳನ್ನು ಸೇವಿಸಿದ ಮಾತ್ರದಿಂದಲೆ ಹೇಗೆ ಪರಿಹಾರವಾಗುತ್ತದೆ ಎಂಬುದರಿಂದ ಹಿಡಿದು ಅಂತಹವರ ಉದಾಹರಣೆಯ ಉಪಕಥೆಗಳ ಮತ್ತು ಅವರೆಲ್ಲ ಅದರಲ್ಲಿ ಏನೆಲ್ಲ ಅಡುಗೆ ಮಾಡಬಹುದೆಂಬ ರೆಸಿಪಿಗಳವರೆಗೆ ಮತ್ತು ನೀವು ಇಂಟರ್‌ನೆಟ್‌ ಬಳಕೆದಾರರಾದರೆ ಇದಕ್ಕೆ ಸಂಬಂಧಿಸಿದ ಬರಹ ಮತ್ತು ಬರವಣಿಗೆಯ ಕೊಂಡಿಗಳನ್ನ ರವಾನಿಸಿಯೇ ಮಾತು ಮುಗಿಯುವುದು. ಸಿರಿಧಾನ್ಯಗಳ ವಿಚಾರಗಳಿಗೀಗ ಕ್ರಾಂತಿಯಷ್ಟೆ ನವೋತ್ಸಾಹ. ಎಲ್ಲಾ ಸರಿ ಕೇಜಿಗೆಷ್ಟು ಅಂತ ಕೇಳಿದ ಮೇಲೆ ಕಿಸೆ ಮುಟ್ಟಿ ನೋಡಿಕೊಳ್ಳಬೇಕೆನಿಸಿದರೆ ನಾವು ಜವಾಬ್ದಾರರಲ್ಲ.

ಅನ್ನ ಯಾವಾಗ ಉಣ್ಣುತ್ತಿದ್ದಿರಿ ಎಂದು ನಮ್ಮೂರಿನ ಅಜ್ಜ ಅಜ್ಜಿಯವರನ್ನ ಕೇಳಿದರೆ, ಅನ್ನವೇ, ಅನ್ನ ಎಲ್ಲಿತ್ತು? ಹಬ್ಬ ಹರಿದಿನಕ್ಕಷ್ಟೆ ಅನ್ನ ಎನ್ನುತ್ತಾರೆ. ಉಳಿದಂತೆ ಅವರು ತಮ್ಮ ಹೊಲಗಳಲ್ಲಿ ಬೆಳೆದ ರಾಗಿ, ಬಿಳಿ ಜೋಳ, ನವಣೆ ಉಚ್ಚೆಳ್ಳು,ಚಟ್ನೆಗಳಲ್ಲೆ ವರ್ಷವೆಲ್ಲ ಹೊಟ್ಟೆ ತುಂಬಿಸುತ್ತಿದ್ದದ್ದು. ಅದು ಬಡವರ ಆಹಾರವಾಗಿತ್ತು. ಮತ್ತು ಯಾರು ಸಾಮಾಜಿಕ ಮತ್ತು ಆರ್ಥಿಕವಾಗಿ ಮೇಲ್ವರ್ಗದಲ್ಲಿದ್ದರೊ ಅವರು ಅನ್ನ ಉಣ್ಣುತಿದ್ದರು. ಆಗ ರಾಗಿ ನವಣೆ, ಕೊರಳೆಗಳು ಬಡವರ ಕನಿಷ್ಟ ಆಹಾರವಾಗಿಯು ಅನ್ನ ಶ್ರೀಮಂತ ಶ್ರೇಷ್ಠ ಆಹಾರವಾಗಿಯು ಗೋಚರಿಸಿತ್ತು. ನಿಧಾನಕ್ಕೆ ಬಿಳಿ ಸಕ್ಕರೆಯಿಂದ ಹುಟ್ಟಿಕೊಂಡ ಖಾಯಿಲೆ ವ್ಯಾಪಿಸುತ್ತ ಕರಿ ರಾಗಿ ತನ್ನ ಸ್ಥಾನ ಮಾನ ಬದಲಿಸಿಕೊಂಡಿತು. ಮತ್ತು ಕಾಲ ಸರಿದು ಅನ್ನವೆಂಬುದು ಸರಕಾರದ ಸೊಸೈಟಿಯ ಸೊತ್ತಾಗುವ ಹೊತ್ತಿಗೆ ಮಹತ್ವ ಕಳೆದುಕೊಂಡು ತಿಳಿದವರೆಲ್ಲ ಸಿರಿಧಾನ್ಯದ ಮೊರೆಹೋಗುವಂತಾಗಿದೆ. '' ಈಗ ಆಫೀಸ್ರಾಗಿದಾನಲ್ಲ? ಅವರ ತಾತನ ಕಾಲದಲ್ಲಿ ತುಂಬ ಬಡತನ ನವಣಕ್ಕಿ ತಿಂದ್ಕೊಂಡು ಬದುಕ್ತಿದ್ರು ಪಾಪ,'' ಎನ್ನುವ ತಾತನಿಗೆ ಆ ಆಫೀಸರರ ಮಗಳು ''ಇವತ್ತಿನ ಬ್ರೇಕ್‌ಫಾಸ್ಟಿಗೆ ನವಣೆ ಪೊಂಗಲ್‌ ಮೆಲೆಟ್‌ ರೆಸಿಪಿ,'' ಅಂತ ಬರೆದು ಹೆಮ್ಮೆಯಿಂದ ಫೇಸ್‌ಬುಕ್ಕಿನಲ್ಲಿ ಹಾಕುವುದು ಗೊತ್ತಿರಲಿಕ್ಕಿಲ್ಲ. ದೇಶಾದ್ಯಂತ ಈಗ ಮಿಲೆಟ್‌ ಹೋಟೆಲ್‌ಗಳು ತಲೆ ಎತ್ತುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿವೆ. ಬೆಂಗಳೂರಿನಲ್ಲೆ ಏನಿಲ್ಲ ಅಂದರೂ ಮೂರ್ನಾಲು ಸಿರಿಧಾನ್ಯಗಳ ಹೋಟೆಲುಗಳಿವೆ. ಇನ್ನು ಮುಂದೆ ಇವುಗಳ ಸಂಖ್ಯೆ ಗಣಣೀಯವಾಗಿ ಏರಿದರು ಆಶ್ಚರ್ಯವಿಲ್ಲ.

ಅನುಮಾನವೇನು ಇಲ್ಲ. ಹಿಂದುರಿಗಿ ನೋಡಿದರೆ ನಾವು ಆಹಾರ ಪದ್ಧತಿಯಲ್ಲಿ ಯಾವಾಗ ಬಹುದೊಡ್ಡ ಬದಲಾವಣೆ ಮಾಡಿಕೊಂಡೆವೊ ಅಲ್ಲಿಂದಲೆ ನಮ್ಮ ಎಲ್ಲ ಸಮಸ್ಯೆಗಳು ಶುರುವಾದದ್ದು. ಮತ್ತು ಆಸ್ಪತ್ರೆಗಳ ಸಂಖ್ಯೆ ಏರುತ್ತಲೆ ಹೋದದ್ದು. ಆದರೆ ಹಸಿವಿನಿಂದ ವರ್ಷ ವರ್ಷವೂ ಜನ ಸಾಯುವ ಬಗ್ಗೆ ಸರಕಾರದ ವರದಿಗಳೇ ಹೇಳುವಾಗ, ಮೂರು ರೂಪಾಯಿ ಅಕ್ಕಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಜನಗಳ ಸಂಖ್ಯೆ ಕೋಟ್ಯಾಂತರ ಇರುವಾಗ ಎಂಬತ್ತು ನೂರು ರೂಪಾಯಿ ಒಂದೊಂದು ಕಡೆ ನೂರ ಐವತ್ತು ಕೊಟ್ಟು ಬಡವರು ಸಿರಿಧಾನ್ಯಗಳನ್ನ ಕೊಳ್ಳಬಹುದೆ?

ಆಗಿದ್ದರೆ ಸಿರಿಧಾನ್ಯಗಳಿರುವುದು ಸಿರಿವಂತರಿಗೆ ಮಾತ್ರವೇ? ಸದ್ಯಕ್ಕೆ ಹೌದು ಎಂದೇ ಹೇಳಬೇಕಾಗುತ್ತದೆ. ಈಗಾಗಲೆ ಎಷ್ಟೊ ಕಾರ್ಪೊರೆಟ್‌ ಕಂಪನಿಗಳು ಚಂದದ ಜಾಹಿರಾತಿನೊಂದಿಗೆ ಚಂದದ ಪ್ಯಾಕೆಟ್‌ನೊಂದಿಗೆ ಸಿರಿಧಾನ್ಯ ಮಾರುಕಟ್ಟೆ ಹಿಡಿದಿವೆ. ಅವೆಲ್ಲ ಬಡವರು ಕೊಂಡು ತಿನ್ನಲು ಸಾಧ್ಯವೇ ಇಲ್ಲ. ಈಗ ಅದನ್ನೆಲ್ಲ ತಿಂದು ಎಷ್ಟೊ ವರ್ಷ ಬದುಕಿಬಿಡ್ತೀವಿ ಅನ್ನುವ ಪ್ರಶ್ನೆಗಳಿವೆ. ಇವರು ಪ್ರಚಾರ ಮಾಡುವಷ್ಟು ಸತ್ವಗಳು ಶಕ್ತಿಗಳು ಅದರಲ್ಲಿ ಏನು ಇಲ್ಲ ಅಂತ ಆಯುರ್ವೇದ ವೈದ್ಯರುಗಳ ಒಂದು ಗುಂಪುಗಳು ಹೇಳುತ್ತದೆ. ಆದರೆ ಈ ವಾದ ಪ್ರತಿವಾದಗಳಾಚೆ ಗಮನಿಸಬೇಕಾದ ಮುಖ್ಯವಾದ ಅಂಶ ಒಂದಿದೆ. ಅದೇನೆಂದರೆ ಕಡಿಮೆ ನೀರಿನಲ್ಲಿ ಅಥವ ಮಳೆ ಆ]ತ ಭೂಮಿಯಲ್ಲಿ ಬೆಳೆಯುವಂತವು ಒಂದು ಕೆಜಿ ಅಕ್ಕಿ ಅಥವ ಸಕ್ಕರೆ ಆಗಲು ಬೇಕಾಗುವ ನೀರಿನ ಪ್ರಮಾಣಕ್ಕು ಈ ಧಾನ್ಯಗಳಿಗೆ ಬೇಕಾದ ನೀರಿನ ಪ್ರಮಾಣಕ್ಕು ಅಗಾಧ ವ್ಯತ್ಯಾಸವಿದೆ. ಮತ್ತು ಇವು ಬೆಳೆಯುವ ಅವಧಿಯು ಅಕ್ಕಿಯ ಅರ್ಧದಷ್ಟು ಮಾತ್ರ. ಈ ಸಲ ನೀರು ಕಡಿಮೆ ಇದೆ ಪರಾರ‍ಯಯ ಬೆಳೆ ಬೆಳೆಯಿರಿ ಅಂತ ಸರಕಾರವೇ ಹೇಳುವಂಥ ಸ್ಥಿತಿಯಲ್ಲಿ ಇದೊಂದು ಪರಾರ‍ಯಯವಾಗುವ ಸಾಧ್ಯತೆಯನ್ನು ತೆಗೆದು ಹಾಕುವಂತಿಲ್ಲ. ಸಾಮಾನ್ಯವಾಗಿ ನಾವು ಯಾವ ಪ್ರದೇಶಲ್ಲಿ ವಾಸಿಸುತ್ತೇವೆಯೋ ಅದೇ ಪ್ರದೇಶದಲ್ಲಿ ಬೆಳೆದ ಆಹಾರನ್ನು ತಿನ್ನುವುದು ಸರಿಯಾದ ಮಾರ್ಗ ಅದೇ ನಮ್ಮ ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳುವುದು ವೈಜ್ಞಾನಿಕ ಚಿಂತನೆಯಿಂದ ತೂಗಿ ಹೇಳಿದವರ ಮಾತು. ನೀರು ಆರೋಗ್ಯ ಎರಡು ಉಳಿಯುವುದಾದರೆ ಸಿರಿಧಾನ್ಯಗಳ ಬೆಳೆ ಮತ್ತು ಬಳಕೆ ಎರಡರಿಂದಲೂ ಉಪಯೋಗವಿದೆ. ಇದನ್ನು ಜನರಿಗೆ ತಲುಪಿಸಬೇಕಾದ ವ್ಯವಸ್ಥೆಯನ್ನು ಸರಕಾರ ನಿರ್ವಹಿಸಿದರೆ ಮಾತ್ರ ದೊಡ್ಡ ವ್ಯಾಪ್ತಿಯನ್ನು ತಲುಪಬಹುದು. ಎಲ್ಲೆಲ್ಲಿಂದಲೊ ಅಕ್ಕಿ ತರಿಸಿ ತುಂಬಿಸಿ ಲಾರಿಗಳಲ್ಲಿ ಸಾಗಿಸಿ ಗೋದಾಮುಗಳಲ್ಲಿ ಶೇಖರಿಸಿ ಹಂಚುವ ಬದಲು ಆಯಾ ಪ್ರದೇಶದ ಧಾನ್ಯಗಳನ್ನು ಸ್ಥಳೀಯವಾಗಿ ಖರೀದಿಸಿ ಸ್ಥಳೀಯವಾಗಿಯೇ ಹಂಚಿದರೆ ಆರೋಗ್ಯ ಆಹಾರ ವೈವಿಧ್ಯ ಎರಡು ಉಳಿಯುತ್ತದೆ. ಅದಕ್ಕಿಂತ ಮುಖ್ಯವಾಗಿ ಅಕ್ಕಿ ಸಾಗಾಣಿಕೆಯ ಭಾರಿ ವೆಚ್ಚವೂ ಉಳಿಯುತ್ತದೆ. ಮತ್ತೆ ಹೀಗೆ ಸರಕಾರ ಕೊಳ್ಳುವಂತಾದಾಗ ಜನರು ಬೆಳೆಯುವುದನ್ನು ಆರಂಭಿಸಿ ಕೈಗೆಟುಕದ ಬೆಲೆಯ ಸ್ಟಿಕರು ಅಂಟಿಸಿಕೊಂಡು ಕುಳಿತಿರುವ ಸಿರಿಧಾನ್ಯಗಳ ಬೆಳೆ ಇಳಿದು ಬಡವರ ಆಹಾರವು ಸಹಜವೂ ಸಮೃದ್ಧವು ಆಗಬಹುದು. ಅಷ್ಟೆ ಅಲ್ಲ, 20 ರೂಪಾಯಿಗೆ ರೈತರಿಂದ ಖರೀದಿಸಿ ನೂರು ರೂಪಾಯಿಗೆ ಮಾರುವ, ತಮ್ಮ ಬೇಡಿಕೆ ಪೂರೈಸಲು ಸಿರಿಧಾನ್ಯಗಳಿಗೂ ಔಷಧ ಸಿಂಪಡಿಸಲು ಹೇಳುವ ಕಂಪನಿಗಳ ಆಟಾಟೋಪಗಳಿಗೂ ಬ್ರೇಕ್‌ ಹಾಕಬಹುದು. ಹೀಗಾಗದ ಹೊರತು ''ಉಳ್ಳವರು ಸಿರಿಧಾನ್ಯವ ತಿನ್ನುವರು ನಾ ಹೇಗೆ ತಿನ್ನಲಿ ಬಡವನಯ್ಯ?'' ಅಂತ ಹಾಡಿಕೊಂಡು ಸುಮ್ಮನಿರಬೇಕಾಗುತ್ತದೆ. ಅಲ್ಲವೆ?


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!