Quantcast
Channel: VijayKarnataka
Viewing all articles
Browse latest Browse all 6795

ಕಾವೇರಿ ಕೊಳ್ಳದಲ್ಲಿ ಕಟ್ಟೆಯೊಡೆದ ಆಕ್ರೋಶ

$
0
0

ಮತ್ತೆ ಭುಗಿಲೆದ್ದ ಅಸಮಾಧಾನ, ಜೈಲ್ ಭರೋಗೆ ನಿರ್ಧಾರ /ಹೆದ್ದಾರಿ ಸಂಚಾರ ಅಸ್ತವ್ಯಸ್ತ ಬಲವಂತದ 'ಬಂದ್' ಇಲ್ಲ / ಮನೆಗೊಬ್ಬರಂತೆ ಕಾವೇರಿ ಚಳವಳಿಗೆ ಧುಮುಕಲು ಕರೆ

ಸುಪ್ರೀಂ ಕೋರ್ಟ್ ಆದೇಶದಿಂದ ಮಂಡ್ಯದಲ್ಲಿ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಜೈಲ್ ಭರೋ ಚಳವಳಿಗೆ ಮುಂದಾಗಲು ಮಾದೇಗೌಡರು ಕರೆ ನೀಡಿದ್ದಾರೆ. ಮನೆಗೊಬ್ಬರಂತೆ ಚಳವಳಿಗೆ ಧುಮುಕಬೇಕೆಂದೂ ಸಲಹೆ ನೀಡಿರುವ ಅವರು, ನಾವಾಗಿಯೇ ಬಂದ್‌ಗೆ ಕರೆ ನೀಡುವುದಿಲ್ಲ, ವರ್ತಕರು ಸ್ವಯಂ ಪ್ರೇರಿತರವಾಗಿ ಅಂಗಡಿಗಳನ್ನು ಮುಚ್ಚಿ ಚಳವಳಿಗೆ ಬೆಂಬಲ ನೀಡಲಿ ಎಂದಿದ್ದಾರೆ. ಸಂಸದ ಹಾಗೂ ಇಬ್ಬರು ಶಾಸಕರು ರಾಜೀನಾಮೆ ಘೋಷಿಸಿ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ.

-----


ಮಂಡ್ಯ: ತಮಿಳುನಾಡಿಗೆ ಮತ್ತೆ ಏಳು ದಿನಗಳ ಕಾಲ 6 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದಿಂದ ಮಂಡ್ಯದಲ್ಲಿ ಆಕ್ರೋಶ ಮತ್ತೆ ಭುಗಿಲೆದ್ದಿದೆ.

ಆದೇಶ ಪ್ರಕಟವಾದ ಬೆನ್ನಲ್ಲೇ ನಿಷೇಧಾಜ್ಞೆ ನಡುವೆಯೂ ನಾನಾ ಸಂಘಟನೆಗಳ ಕಾರ‌್ಯಕರ್ತರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ತಂಡೋಪತಂಡವಾಗಿ ಆಗಮಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಗಳಿಂದ ಸತತ ಮೂರು ತಾಲು ಕಾಲ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದರೂ ರೈತರು ಮತ್ತು ಸಂಘಟನೆಗಳ ಸದಸ್ಯರ ಹೋರಾಟಕ್ಕೆ ಮೂಕ ಪ್ರೇಕ್ಷಕರಾಗಿದ್ದರು. ಕೆಲ ಮುಖಂಡರು ಮುಖ್ಯ ರಸ್ತೆಯಲ್ಲೇ ಉರುಳು ಸೇವೆ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿದೆ.

ಇದಕ್ಕೂ ಮೊದಲು ಬೆಳಗ್ಗೆ ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಜಿ.ಮಾದೇಗೌಡ, ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನಾ ಧರಣಿ ನಡೆಯಿತು. ಕಡ್ಲೆಕಾಯಿ ತಿನ್ನುವ ಮೂಲಕ ವಿಶೇಷವಾಗಿ ಕಡ್ಲೆಕಾಯಿ ಚಳವಳಿಗೆ ಮಾದೇಗೌಡ ಚಾಲನೆ ನೀಡಿದರು. ಮಣ್ಣು ತಿನ್ನುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ‌್ಯಕರ್ತರು, ಜೆ.ಸಿ.ವೃತ್ತದಲ್ಲಿ ಹುರುಳಿ ಚೆಲ್ಲುವ ಮೂಲಕ ಮಂಡ್ಯವನ್ನು ಮತ್ತೆ ಬರಡುಗಾಡು ಮಾಡುವ ಪ್ರಯತ್ನ ಸರಕಾರ ಮತ್ತು ಕೋರ್ಟ್‌ನಿಂದ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತಸಂಘದ ಕಾರ‌್ಯಕರ್ತರು ತಲೆ ಮೇಲೆ ಚಪ್ಪಲಿ ಹೊತ್ತು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಂಸದ ಜಿ. ಮಾದೇಗೌಡ, ''ಕೋರ್ಟ್ ಆದೇಶವು ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿರುವುದರಿಂದ ಕನ್ನಡಿಗರು ಜೈಲ್ ಭರೋ ಚಳವಳಿಗೆ ಮುಂದಾಗಬೇಕು. ಮನೆಗೊಬ್ಬರಂತೆ ಚಳವಳಿಗೆ ಧುಮುಕಬೇಕು,'' ಎಂದು ಕರೆ ನೀಡಿದರು. ಮಂಡ್ಯ ಜಿಲ್ಲಾ ಬಂದ್‌ಗೆ ಕರೆ ನೀಡುವುದಿಲ್ಲ. ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಚಳವಳಿಗೆ ಬೆಂಬಲ ನೀಡಬೇಕು. ಬಲವಂತ ಮಾಡುವುದು ಬೇಡ ಎಂದು ಹೇಳಿದರು.

ಜನಪ್ರತಿನಿಧಿಗಳ ಸಭೆ ಇಂದು: ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೆ. 21ರ ಬೆಳಗ್ಗೆ 11ಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆದಿದೆ.

ಹೆದ್ದಾರಿ ಬಂದ್:

ಮಂಗಳವಾರ ಬೆಳಗ್ಗೆಯಿಂದ ನಡೆಯುತ್ತಿದ್ದ ಶಾಂತಿಯುತ ಹೋರಾಟವು ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ತೀವ್ರಗೊಂಡಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಆಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವೂ ಸ್ಥಗಿತಗೊಂಡಿದೆ.

-----

ರಾಜ್ಯ ಸರಕಾರ ಬೆಳೆ ಪರಿಹಾರ ಘೋಷಣೆ ಮಾಡಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ನಮ್ಮೊಂದಿಗೆ ಚಳವಳಿಗೆ ಧುಮುಕಬೇಕು.

- ಜಿ. ಮಾದೇಗೌಡ, ಮಾಜಿ ಸಂಸದ

ಕೋರ್ಟ್‌ನದು ಏಕಪಕ್ಷೀಯ ತೀರ್ಪು. ಇದರಿಂದ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರವನ್ನು ಕರ್ನಾಟಕದವರು ದ್ವೇಷಿಸುವಂತಾಗಿದೆ. ಹೋರಾಟದ ಕಿಚ್ಚನ್ನು ಕೋರ್ಟ್ ಹೆಚ್ಚಿಸಿದಂತಾಗಿದೆ. ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ತಮಿಳರೇ ಆಗಿರುವುದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಕರ್ನಾಟಕ ಸರಕಾರ ಬಲವಾಗಿ ಪ್ರಶ್ನಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

-ಕೆ.ಟಿ. ಶ್ರೀಕಂಠೇಗೌಡ, ವಿಧಾನ ಪರಿಷತ್ ಸದಸ್ಯ, ಮಂಡ್ಯ

**

ರಾಜೀನಾಮೆಗೆ ಮುಂದಾದ ಮಂಡ್ಯ ಸಂಸದ, ಶಾಸಕರು

ಮಂಡ್ಯ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಸಿ.ಎಸ್. ಪುಟ್ಟರಾಜು ಹಾಗೂ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಅವರು ರಾಜೀನಾಮೆ ಘೋಷಿಸಿ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನೂ ಮಾಡಿದ್ದಾರೆ.

ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ ಸಂಸದ ಸಿ.ಎಸ್. ಪುಟ್ಟರಾಜು ಅವರು ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರಿಗೆ ಸರಕಾರಿ ಸವಲತ್ತುಗಳನ್ನು ಹಿಂದಿರುಗಿಸಿ ಕೋರ್ಟ್ ತೀರ್ಪನ್ನು ಖಂಡಿಸಿದರು. ಬುಧವಾರ ಹೊಸದಿಲ್ಲಿಗೆ ತೆರಳಿ ಸ್ಪೀಕರ್ ಅವರಿಗೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಮಾಧ್ಯಮದವರಿಗೆ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಅವರು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ರಾಜೀನಾಮೆ ಸಲ್ಲಿಸುವ ದಿನಾಂಕವನ್ನು ಘೋಷಿಸುವುದಾಗಿ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು. ಕಾಲಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ತೆರಳಲಿರುವ ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರೂ ರಾಜೀನಾಮೆ ನೀಡಲು ನಿರ್ಧರಿದ್ದಾರೆ. ಇದಕ್ಕೆ ಪೂರಕವಾಗಿ ರಾಜೀನಾಮೆ ಪತ್ರ ಸಿದ್ಧಪಡಿಸುವಂತೆ ಆಪ್ತ ಸಹಾಯಕರಿಗೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

-----

ನಾವೂ ರಾಜೀನಾಮೆಗೆ ಸಿದ್ಧ: ಈಶ್ವರಪ್ಪ

ಸುಪ್ರೀಂ ಕೋರ್ಟ್ ತೀರ್ಪು ರಾಜ್ಯಕ್ಕೆ ಮರಣಶಾಸನ. ತಮಿಳುನಾಡಿಗೆ ನೀರು ಬಿಡುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅವರ ಜತೆ ನಾವೂ ರಾಜೀನಾಮೆ ನೀಡುತ್ತೇವೆ. ನೀರು ಬಿಡದೆ ಅವರು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಜೈಲಿಗೆ ಹೋದರೆ ನಾವೂ ಅವರ ಜತೆ ಜೈಲಿಗೆ ಹೋಗಲು ಸಿದ್ಧ. ಸಿಎಂ ತಕ್ಷಣ ದೃಢ ನಿರ್ಧಾರ ಕೈಗೊಳ್ಳಬೇಕು.

- ಕೆ.ಎಸ್. ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ

----

ಕೋರ್ಟಿನ ಹೊರಗೆ ಬಗೆಹರಿಯಲಿ: ದೇವನೂರು

ಕಾವೇರಿ ವಿವಾದ ಎರಡೂ ರಾಜ್ಯಗಳಿಗೆ ಸಂಬಂಧಪಟ್ಟಿರುವುದರಿಂದ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವುದು ಸೂಕ್ತ. ನಮ್ಮ ರಾಜಕಾರಣಿಗಳು ಸಮಸ್ಯೆ ಮುಂದುವರಿಸಿಕೊಂಡು ಹೋಗಲು ಕೋರ್ಟ್‌ಗೆ ಹೋಗುತ್ತಿದ್ದಾರೆ. ಈ ರಾಜಕಾರಣಿಗಳಿಗೆ ರಾಷ್ಟ್ರೀಯ ಜಲನೀತಿ ರೂಪಿಸುವ ತಾಕತ್ತು ಇದೆಯೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಅದಕ್ಕೆ ದೂರ ದೃಷ್ಟಿಯಿರಬೇಕು. ಕುಡಿಯುವ ನೀರಿಗಾಗಿ ಸಂಸತ್ತಿನಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು.

- ದೇವನೂರು ಮಹಾದೇವ, ಸಾಹಿತಿ

----

ಪ್ರಧಾನಿಯನ್ನು ದೂರಬೇಡಿ: ಸುರೇಶ್‌ಕುಮಾರ್

ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಲು ಆಗುವುದಿಲ್ಲ. ಈ ವಿಚಾರ ಗೊತ್ತಿದ್ದರೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಪ್ರಧಾನಿಯನ್ನು ವಿನಾಕಾರಣ ದೂರುತ್ತಿದೆ. ಕಾವೇರಿ ಮೇಲುಸ್ತುವಾರಿ ಸಮಿತಿಗೆ ರಾಜ್ಯ ಸರಕಾರ ಸರಿಯಾದ ಮಾಹಿತಿ ನೀಡಬೇಕಿತ್ತು. ಈ ಸಂಬಂಧ ಮಾಹಿತಿ ನೀಡಲು ಅಧಿಕಾರಿಗಳಿಗೆ ಸಿಎಂ ಸೂಕ್ತ ಸೂಚನೆ ನೀಡಬೇಕಿತ್ತು. ಇದರ ಬದಲು ಸರಕಾರ ಪ್ರಧಾನಿಯವರ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ.

- ಸುರೇಶ್ ಕುಮಾರ್, ಬಿಜೆಪಿ ರಾಜ್ಯ ವಕ್ತಾರ

----

ಪ್ರಧಾನಿ ರಾಜಕಾರಣ: ಖಾದರ್ ಕಿಡಿ

ಕಾವೇರಿ ವಿವಾದ ಬಗೆಹರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸದೇ ನಿರ್ಲಕ್ಷ ತೋರಿದ್ದಾರೆ. ಭೇಟಿ ಕೋರಿ ಸಿಎಂ ಮನವಿ ಸಲ್ಲಿಸಿದರೂ ಅವಕಾಶ ನೀಡದೇ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದ ವಿದ್ಯಾರ್ಥಿನಿಯ ಟ್ಟೀಟ್‌ಗೆ ಸ್ಪಂದಿಸುವ ಪ್ರಧಾನಿಗೆ ಮುಖ್ಯಮಂತ್ರಿ ಬರೆದ ಪತ್ರಕ್ಕೆ ಉತ್ತರಿಸಲು ಸಾಧ್ಯವಾಗುವುದಿಲ್ಲವೇ? ಇದು ರಾಜಕಾರಣವಲ್ಲದೇ ಮತ್ತೇನು? ಕಾವೇರಿ ವಿಷಯದಲ್ಲಿ ಸಿಎಂ ಏನೇ ನಿರ್ಧಾರ ತೆಗೆದುಕೊಂಡರೂ ನಾವೆಲ್ಲ ಬದ್ಧ.

- ಯು.ಟಿ. ಖಾದರ್, ಆಹಾರ ಸಚಿವ

-----

ನ್ಯಾಯಾಂಗ ನಿಂದನೆ ಆಗುವುದಿಲ್ಲ: ಪ್ರತಾಪಸಿಂಹ

ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಲು ಸಿಎಂ ಸಿದ್ದರಾಮಯ್ಯ ಸರಿಯಾದ ತಯಾರಿ ಮಾಡಿಲ್ಲ. ನೀರಿಲ್ಲದೆ ಇದ್ದಾಗ ಅದನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆ ಆಗುವುದಿಲ್ಲ. ಇದರಿಂದ ಸಿಎಂ ಅವರ ಕುರ್ಚಿ ಹೋಗುವ ಪ್ರಸಂಗ ಬರುವುದಿಲ್ಲ. ಪ್ರಧಾನಿಗೆ ಪತ್ರ ಬರೆಯುವ ಬದಲು ಜಯಲಲಿತಾ ಜತೆ ಸಿಎಂ ಮಾತನಾಡಬೇಕು.

- ಪ್ರತಾಪ ಸಿಂಹ, ಸಂಸದ



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>