Quantcast
Channel: VijayKarnataka
Viewing all articles
Browse latest Browse all 6795

ಕಾವೇರಿ ವಿವಾದ: ಸಿಎಂಗೆ ಅತ್ತ ದರಿ ಇತ್ತ ಪುಲಿ

$
0
0

'ಮಾಡು ಇಲ್ಲವೆ ಮಡಿ' ಸಂದರ್ಭ ಅಡಕತ್ತರಿಯಲ್ಲಿ ಸಿದ್ದರಾಮಯ್ಯ ನಾಡಿನ ಹಿತವೋ, ಅಧಿಕಾರವೋ? ಇಂದು ಸಂಪುಟದಲ್ಲಿ ನಿರ್ಧಾರ

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಂಗಳವಾರ ನೀಡಿದ ಆದೇಶ ರಾಜ್ಯದ ಪಾಲಿಗೆ ಅರಗಿಸಿಕೊಳ್ಳಲಾಗದ ಆಘಾತ ನೀಡಿದ್ದು, ರಾಜ್ಯ ಸರಕಾರದ ಪಾಲಿಗೆ 'ಮಾಡು ಇಲ್ಲವೆ ಮಡಿ' ಸಂದರ್ಭ ಸೃಷ್ಟಿಸಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಲಾಗದೆ 'ಭಾರವಾದ ಹೃದಯದೊಂದಿಗೆ' ರಾಜ್ಯದ ಹಿತ ಬಲಿ ಕೊಟ್ಟು ತಮಿಳುನಾಡಿಗೆ ನೀರು ಹರಿಸಿದ್ದ ರಾಜ್ಯಕ್ಕೆ ಕೋರ್ಟ್ ಮಂಗಳವಾರ ಮತ್ತೆ ಅನಿರೀಕ್ಷಿತ ಆಘಾತ ನೀಡಿದೆ. ಹೀಗಾಗಿ ಸರಕಾರದ ಮುಂದಿನ ನಿಲುವು ಬುಧವಾರದ ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ.

ಪಕ್ಷ, ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೈಗೊಳ್ಳುವ ತೀರ್ಮಾನ ಮಹತ್ವ ಪಡೆದುಕೊಂಡಿದ್ದು, ನಾಡಿನ ಹಿತ ಮುಖ್ಯವೋ ಅಥವಾ ಅಧಿಕಾರವೋ ಎಂಬ ಅಡಕತ್ತರಿಯಲ್ಲಿ ಸಿಎಂ ಸಿಲುಕಿದ್ದಾರೆ. ಈ ಎರಡು ಆಯ್ಕೆಗಳಲ್ಲಿ ಒಂದು ದಿಟ್ಟ ತೀರ್ಮಾನಕ್ಕೆ ಸರಕಾರ ಬರಲೇಬೇಕಿದೆ.

ಎಷ್ಟೇ ಮಹತ್ವದ ಪ್ರಕರಣವಾದರೂ ಇಷ್ಟೊಂದು ಕ್ರಿಯಾಶೀಲವಾಗಿರದ ಸುಪ್ರೀಂಕೋರ್ಟ್ ತನ್ನದೇ ಆದೇಶಗಳ ಕಾಲಾವಧಿ ಮುಗಿಯುವ ಮುನ್ನವೇ ಪೆಟ್ಟಿನ ಮೇಲೆ ಪೆಟ್ಟು ಎಂಬಂತೆ ಆದೇಶ ಹೊರಡಿಸುತ್ತಲೇ ಇದೆ. ಮತ್ತೆ ಆದೇಶ ಪಾಲಿಸುವುದು ಸಾಧ್ಯವೇ ಇಲ್ಲ ಎಂದು ಸಿಎಂ ಆಪ್ತರಲ್ಲಿ ಹೇಳಿಕೊಂಡಿದ್ದರು. ತಂತಿ ಮೇಲಿನ ನಡಿಗೆಯಲ್ಲೇ ಆಶಾಭಾವನೆಯಿಂದ ಪ್ರಕರಣ ನಿಭಾಯಿಸುತ್ತಿದ್ದ ಸಿಎಂ ಪಾಲಿಗೆ ಈಗಂತೂ ಅತ್ತ ದರಿ, ಇತ್ತ ಪುಲಿ ಎಂಬ ಸ್ಥಿತಿ ಬಂದೊದಗಿದೆ.

ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿದ್ದ ಮೂಲದಾವೆ ಅ. 18ಕ್ಕೆ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಿತ ಬಲಿ ಕೊಟ್ಟು ಕೋರ್ಟ್ ಆದೇಶದಂತೆ ಜಲಾಶಯಗಳ ನೀರನ್ನು ತಮಿಳುನಾಡಿಗೆ ಸರಕಾರ ಹರಿಸಿತ್ತು. ಸೋಮವಾರದ ಮೇಲುಸ್ತುವಾರಿ ಸಮಿತಿ ಸಭೆ ಹಾಗೂ ಮಂಗಳವಾರ ವಿಚಾರಣೆ ಕಾಲಕ್ಕೂ ಈ ಅಸಹಾಯಕತೆ ಬಗ್ಗೆ ಸೂಚ್ಯವಾಗಿ ಗಮನ ಸೆಳೆಯಲಾಗಿತ್ತು. ಆದರೂ, ಕೋರ್ಟ್ ನೀಡಿರುವ ತೀರ್ಮಾನ ಸರಕಾರವನ್ನು ಇಕ್ಕಟ್ಟಿಗೆ ದೂಡಿದೆ.

ಕೋರ್ಟ್ ತೀರ್ಮಾನ ಪಾಲನೆ ಮಾಡಲು ಹೊರಟರೆ ಸ್ವಂತ ಮಕ್ಕಳನ್ನು ಹಸಿವಿನಿಂದ ಸಾಯಲು ಬಿಟ್ಟು ಸಮಾಜ ಸೇವೆಗೆ ಹೊರಟಂತಾಗುತ್ತದೆ. ಹೀಗಾಗಿ ಕೋರ್ಟ್ ಆದೇಶ ಪಾಲನೆ ವಿಚಾರದಲ್ಲಿ ಸಿಎಂ ಅಗ್ನಿಪರೀಕ್ಷೆಗೆ ಒಳಗಾಗಲಿದ್ದಾರೆ. ಸಂವಿಧಾನಾತ್ಮಕ ಕರ್ತವ್ಯ ಪಾಲನೆಗೆ ಟೊಂಕಕಟ್ಟಿ ನಿಂತರೆ ನಾಡಿನ ಜನರ ಎದುರು ಖಳನಾಯಕ ಪಟ್ಟ ಕಟ್ಟಿಕೊಳ್ಳಬೇಕಾದ ಸ್ಥಿತಿ ಇದೆ. ತೀರ್ಪಿಗೆ ಇಡೀ ನಾಡಿನಲ್ಲಿ ಪಕ್ಷಭೇದವಿಲ್ಲದೆ ಮಠಾಧೀಶರು, ಸಂಘಸಂಸ್ಥೆಗಳೂ ಆಕ್ರೋಶ ವ್ಯಕ್ತಪಡಿಸುತ್ತಿವೆ. ಹೀಗಾಗಿ ಸರಕಾರದ ಹೆಜ್ಜೆ ಕುತೂಹಲ ಕೆರಳಿಸಿದೆ.

ಮೇಲಿಂದ ಮೇಲೆ ಮರ್ಮಾಘಾತ:

ನ್ಯಾಯಾಧಿಕರಣದ ಐತೀರ್ಪಿನಂತೆ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಲು ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ಆಧರಿಸಿ ಸುಪ್ರೀಂಕೋರ್ಟ್ 10 ದಿನಗಳ ಕಾಲ ನಿತ್ಯ 15 ಸಾವಿರ ಕ್ಯೂಸೆಕ್ ನೀರನ್ನು ಬೀಡಲು ಸೆ. 5ರಂದು ಆದೇಶಿಸಿತ್ತು. ಈ ಆದೇಶ ಮಾರ್ಪಡಿಸುವಂತೆ ರಾಜ್ಯ ಕೋರಿದಾಗ 10 ದಿನ ನಿತ್ಯವೂ 12 ಸಾವಿರ ಕ್ಯೂಸೆಕ್ ಬಿಡಲು ಸೆ. 12ರಂದು ಮಧ್ಯಾಂತರ ಆದೇಶ ಹೊರಡಿಸಿತು. ಈ ಮಧ್ಯೆ, ಕಾವೇರಿ ಮೇಲುಸ್ತುವಾರಿ ಸಮಿತಿ ಸೋಮವಾರ ಸಭೆ ಸೇರಿ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಸೂಚಿಸಿತ್ತು. ಈ ತೀರ್ಮಾನದಿಂದ ತುಸು ಸಮಾಧಾನ ಸಿಕ್ಕಿತು ಎನ್ನುವಾಗಲೇ ಸೆ. 27ರವರೆಗೆ ನಿತ್ಯವೂ 6 ಸಾವಿರ ಕ್ಯೂಸೆಕ್ ನೀರು ಬಿಡಲು ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿರುವುದು ರಾಜ್ಯಕ್ಕೆ ದೊಡ್ಡ ಆಘಾತ ನೀಡಿದೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>