ಆ್ಯಂಬುಲೆನ್ಸ್ನಲ್ಲಿ ಕೋಟಿಗಟ್ಟಲೆ ಕಪ್ಪು ಹಣ ಚುನಾವಣೆಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದನ್ನು ಕದ್ದರೆ ನಾವು ಲೈಫ್ನಲ್ಲಿ ಸೆಟ್ಲ್ ಆಗಬಹುದು ಎಂಬ ಯೋಚನೆಯೊಂದಿಗೆ ಮಾಸ್ಟರ್ ಪ್ಲಾನ್ ಹಾಕುವ ಇಬ್ಬರು ನಾಯಕರು ಸಕ್ಸಸ್ ಆಗುತ್ತಾರಾ ಇಲ್ಲವಾ ಎಂಬ ಥ್ರಿಲ್ಲರ್ ಕಥೆಯೊಂದಿಗೆ ಈ ವಾರ ಹೊಸ ತಂಡವೊಂದು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ.
ಮಗ ಎಂಜಿನಿಯರ್ ಆಗಲೆಂಬ ಕನಸು ಅಪ್ಪನದು. ಎಂಜಿನಿಯರಿಂಗ್ನ್ನು ಅರ್ಧಕ್ಕೆ ನಿಲ್ಲಿಸಿ ವಾರ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ನಾಯಕ ಗುರು. ರಾಜಕೀಯ ವ್ಯಕ್ತಿಯೊಬ್ಬನ 'ಮುತ್ತಿನ' ಪ್ರಸಂಗವನ್ನು ವರದಿ ಮಾಡಿ ಫೇಮಸ್ ಆಗುವ ಗುರುವಿಗೆ ಒಬ್ಬ ಗೆಳೆಯ, ಅವನಿಗೆ ಮತ್ತೊಬ್ಬ ಗೆಳೆಯ. ಈ ಮೂರನೆಯವನಿಗೆ ಸಿನಿಮಾದಲ್ಲಿ ನಾಯಕನಾಗುವ ಹಂಬಲ. ಕಡಿಮೆ ಸಂಬಳಕ್ಕೆ ಮನೆಯಲ್ಲಿ ಹೀಯಾಳಿಸಿಕೊಂಡ ಗುರುವಿಗೆ ಈತ ಜತೆಯಾಗುತ್ತಾನೆ. ಇವರಿಬ್ಬರೇ ಚುನಾವಣೆಗಾಗಿ ವರ್ಗಾವಣೆಯಾಗುವ ಕಪ್ಪು ಹಣವನ್ನು ಕದಿಯುವ ಪ್ಲಾನ್ ಮಾಡುವುದು. ಸಿನಿಮಾಕ್ಕೊ ಂದು ವೇಗ ಸಿಗುವುದು ಇಲ್ಲಿಯೇ. ಕಥೆ ಇರುವುದೂ ಇಲ್ಲೇ. ಹೀಗಾಗಿ ಮಧ್ಯಂತರದವರೆಗೆ ಸಿನಿಮಾ ಪೇಲವವಾಗಿದೆ.
ಥ್ರಿಲ್ಲಿಂಗ್ ಅನುಭವ ಕೊಡುವ ಕಥೆ, ಸುಂದರವಾದ ನಾಯಕಿಯರು, ಸ್ಮಾರ್ಟ್ ನಾಯಕರು, ಉತ್ತಮ ಪೋಷಕ ನಟರು, ಉತ್ತಮ ಹಿನ್ನೆಲೆ ಸಂಗೀತ ಎಲ್ಲವೂ ಇದರಲ್ಲಿವೆ. ಆದರೆ ಸರಿಯಾದ ಚಿತ್ರಕಥೆ ಇಲ್ಲದೆ ಸಿನಿಮಾ ಸೊರಗಿದೆ. ನಿರ್ದೇಶಕರೇ ಹೇಳಿದಂತೆ ಈ ಸಿನಿಮಾಗೆ ಪತ್ರಿಕೆಯಲ್ಲಿ ಬಂದ ಕಥೆಯೊಂದು ಪ್ರೇರಣೆ. ಅದಕ್ಕಾಗಿಯೇ ಸಿನಿಮಾದಲ್ಲಿ ಪತ್ರಿಕೆ, ಪೀತ ಪತ್ರಿಕೋದ್ಯಮವನ್ನು ಚೆನ್ನಾಗಿ ತೋರಿಸಿದ್ದಾರೆ.
ನಾಯಕರಾಗಿ ಕಾಣಿಸಿಕೊಂಡಿರುವ ಲಿಖಿತ್ ಸೂರ್ಯ ಮತ್ತು ನಿರಂತ್ ಕ್ಯಾಮರಾ ಕಣ್ಣಿಗೆ ಇಬ್ಬರೂ ಚೆನ್ನಾಗಿ ಕಾಣುತ್ತಾರಾದರೂ ಅಭಿನಯದಲ್ಲಿ ಯಾವುದೇ ಅಂಕ ಗಿಟ್ಟಿಸಿಕೊಳ್ಳುವುದಿಲ್ಲ. ಇಬ್ಬರು ನಾಯಕರಿಗೆ ಬರೀ ಲವ್ ಮಾಡಲು ಮತ್ತು ಡ್ಯುಯೆಟ್ ಹಾಡಲು ಮಾತ್ರ ನಾಯಕಿಯರು ಸಿನಿಮಾದಲ್ಲಿದ್ದಾರೆ. ರಂಗಾಯಣ ರಘು ಬಿಟ್ಟರೆ ಪೋಷಕ ನಟರ ಸರಿಯಾದ ಬಳಕೆ ಸಿನಿಮಾದಲ್ಲಾಗಿಲ್ಲ. ಅಚ್ಯುತಕುಮಾರ್ ಹೀಗೆ ಬಂದು ಹಾಗೆ ಹೋಗುತ್ತಾರೆ.
ಸುಜಯ್ಕುಮಾರ್ ಎಂಬ ನವಪ್ರತಿಭೆಯ ಕ್ಯಾಮೆರಾ ವರ್ಕ್ ಸಿನಿಮಾದ ಹೈಲೈಟ್. ಹಿನ್ನೆಲೆ ಸಂಗೀತ ಮತ್ತು ಹಾಡುಗಳಲ್ಲಿ ಕಲಾವಿದರ ಕಾಸ್ಟ್ಯೂಮ್ ಗಮನ ಸೆಳೆಯುತ್ತದೆ. ನಿರ್ಮಾಪಕರು ಮೇಕಿಂಗ್ನಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ ಎನ್ನುವುದು ಎದ್ದು ಕಾಣುತ್ತದೆ.
ಒಂದು ಚೆಂದದ ಕಥೆಗೆ ತಕ್ಕ ಚಿತ್ರಕಥೆ ರಚಿಸದಿದ್ದರೆ, ಅದಕ್ಕೆ ಪೂರಕ ಪ್ರೆಸೆಂಟೇಶನ್ ಇಲ್ಲದಿದ್ದರೆ ಏನಾಗಬಹುದೊ ಅದು 'ಲೈಫ್ ಸೂಪರ್'ನಲ್ಲಾಗಿದೆ.
* ಹರೀಶ್ ಬಸವರಾಜ್