* ಪದ್ಮಾ ಶಿವಮೊಗ್ಗ
ಕಳೆದ ವರ್ಷ ಭಾರೀ ವಿವಾದವನ್ನೆಬ್ಬಿಸಿದ್ದ ನಟಿ ಮೈತ್ರೇಯ ಗೌಡ ಅಭಿನಯದ 'ಅಕ್ಷತೆ' ಚಿತ್ರ ಸದ್ದು ಗದ್ದಲವಿಲ್ಲದೆ ರಿಲೀಸ್ ಆಗಿದೆ. ವಿವಾದ ಹಬೆಯಾಡುತ್ತಿದ್ದಾಗಲೇ ಸೆಟ್ಟೇರಿದ ಚಿತ್ರ ಪ್ರಾರಂಭದಲ್ಲೇ ಸದ್ದು ಮಾಡಿದ್ದು ಹೆಚ್ಚು. ಈ ಚಿತ್ರದ ಕಥೆ ಮೈತ್ರೇಯ ಮತ್ತು ಕಾರ್ತಿಕ್ ನಡುವಿನ ಪ್ರೇಮ ಕತೆಯೋ ಅಥವಾ ಅದೇ ಸಮಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಕತೆಯೋ ಎಂಬ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಈ ನಿರೀಕ್ಷೆಯಲ್ಲಿ ಚಿತ್ರಮಂದಿರಕ್ಕೆ ಹೋದರೆ ನಿರಾಶೆ ಖಂಡಿತ. ಸಾದಾ ಸೀದಾ ಕ್ರೈಮ್ ಸ್ಟೋರಿಯ ಚಿತ್ರ ಇದಾಗಿದೆ. ಗಟ್ಟಿಯಾಗಿಲ್ಲದ ಕತೆ ಪೇಲವ ನಿರ್ದೇಶನದಿಂದ ಇನ್ನಷ್ಟು ಸೊರಗಿದೆ.
ಅಪ್ಪನನ್ನು ಚಿಕ್ಕಂದಿನಲ್ಲೇ ಕಳೆದುಕೊಂಡ ಐಎಎಸ್ ಅಧಿಕಾರಿ ಅರ್ಜುನ್ (ಕಾರ್ತಿಕ್)ನನ್ನು ತಾಯಿ (ವಿನಯಾ ಪ್ರಸಾದ್) ಕಷ್ಟಪಟ್ಟು ಬೆಳೆಸಿರುತ್ತಾಳೆ. ಮಗನಿಗೂ ಅಮ್ಮ ಅಂದರೆ ಪ್ರಾಣ. ಇವರಿಗೆ ಆಶ್ರಯ ನೀಡಿದ ಶ್ರೀಮಂತನೇ ತನ್ನ ಮಗಳನ್ನು (ಮೈತ್ರೇಯ ಗೌಡ) ಅರ್ಜುನ್ಗೆ ಕೊಟ್ಟು ಮದುವೆ ಮಾಡಲು ಮುಂದಾಗುತ್ತಾನೆ. ಎಲ್ಲವೂ ಸರಾಗವಾಗಿ ಸಾಗಿರುವಾಗ ಮದುವೆಯ ಹಿಂದಿನ ದಿನ ಅರ್ಜುನ್ ನಾಪತ್ತೆಯಾಗುತ್ತಾನೆ. ಇವನನ್ನು ಹುಡುಕಲು ಖಡಕ್ ಪೋಲಿಸ್ ಆಫೀಸರ್ ಅಭಿ (ವೆಂಕಟೇಶ್) ಎಂಟ್ರಿಯಾಗುತ್ತದೆ. ಅರ್ಜುನ್ ಏನಾದ? ಹಿಂದಕ್ಕೆ ಬರುತ್ತಾನಾ? ನಿಗೂಢ ನಾಪತ್ತೆ ಹಿಂದಿನ ಸ್ಟೋರಿ ಏನು ಎನ್ನುವುದು ಸಿನಿಮಾ. ನಿರ್ದೇಶಕ ರಾಜು ದೇವಸಂದ್ರ ಮಾಮೂಲಿ ಕ್ರೈಂ ಸ್ಟೋರಿಯ ಚಿತ್ರಕ್ಕೆ ಅಕ್ಷತೆ ಅಂತ ಏಕೆ ಹೆಸರಿಟ್ಟರು ತಿಳಿಯುವುದಿಲ್ಲ. ಚಿತ್ರದಲ್ಲಿ ಭ್ರಷ್ಟ ಪೋಲಿಸ್, ಇವರನ್ನು ಕೈಗೊಂಬೆಯಂತೆ ಕುಣಿಸುವ ಗಣಿ ದೊರೆ, ರಾಜಕಾರಣಿಗಳಿಂದ ಪ್ರಾಮಾಣಿಕ ಪೋಲಿಸ್ ಎದುರಿಸುವ ಪರಿಸ್ಥಿತಿ ತೋರಿಸಲಾಗಿದೆ.
ಮೊದಲರ್ಧವನ್ನು ಎರಡು ಡ್ಯುಯೆಟ್ಗಳಿಗೆ, ಒಂದಿಷ್ಟು ಕಾಮಿಡಿ ಹೆಸರಿನ ಚೇಷ್ಟೆಗಳಿಗೆ ಬಳಸಿ ವ್ಯರ್ಥ ಮಾಡಲಾಗಿದೆ. ನಿಜವಾದ ಕತೆ ಪ್ರಾರಂಭ ಆಗುವುದೇ ದ್ವಿತೀಯಾರ್ಧದಿಂದ. ಮದುವೆ ಸಂಭ್ರಮದಲ್ಲಿದ್ದ ಅಧಿಕಾರಿ ನಾಪತ್ತೆಯಾದಾಗ ಪ್ರೇಕ್ಷಕನ ಕುತೂಹಲ ಕೆರಳುತ್ತದೆ. ಆದರೆ, ನಂತರ ಇದರ ಹಿಂದೆ ಸ್ವಾರಸ್ಯಕರವಾಗಿರುವುದೇನೂ ಇಲ್ಲದೆ ನಿರಾಶೆಯಾಗುತ್ತದೆ. ಎರಡು ಡ್ಯುಯೆಟ್, ಒಂದು ಐಟಂ ಸಾಂಗ್, ಎರಡು ಫೈಟ್, ಅಮ್ಮ ಮಗನ ಸೆಂಟಿಮೆಂಟ್ ಇರುವ ಚಿತ್ರ ಇದು.
ನಾಯಕ ನಟನಾದ ಕಾರ್ತಿಕ್ ವಿಶೇಷವಾಗಿ ಕಾಣದಿದ್ದರೂ ನಟನೆ ಪರವಾಗಿಲ್ಲ. ಆದರೆ, ನಾಯಕಿ ಮೈತ್ರೇಯ ಗೌಡ ಪರ್ಫಾಮೆನ್ಸ್ ವೀಕ್. ಹಾಗೆ ನೋಡಿದರೆ ವಿನಯಾ ಪ್ರಸಾದ್ ಗೆಳತಿಯ ಪಾತ್ರದಲ್ಲಿ ನರ್ಸ್ ಜಯಲಕ್ಷ್ಮಿ ಸಹಜವಾಗಿ ನಟಿಸಿದ್ದಾರೆ. ಪೋಲಿಸ್ ಪಾತ್ರದಲ್ಲಿ ನಟಿಸಿರುವ ರಾಜ್ ಸೂರ್ಯ ನೋಡೋಕೆ ಖಡಕ್ ಆಗಿ ಕಂಡರೂ ನಟನೆ ಸಪ್ಪೆ. ನಿರ್ದೇಶಕ ಎಲ್ಲ ವಿಭಾಗಗಳಲ್ಲಿ ಸರಿಯಾಗಿ ಕೆಲಸ ತೆಗೆಸಿದ್ದರೆ ಚಿತ್ರ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಚಿತ್ರದ ಸಂಭಾಷಣೆ ಗಮನ ಸೆಳೆಯುತ್ತದೆ. ಕ್ರೈಂ ಸ್ಟೋರಿ ಆದರೂ ಬಂಡಲ್ ದೃಶ್ಯಗಳಿಲ್ಲ ಅನ್ನೋದು ಸಮಾಧಾನದ ಸಂಗತಿ.
ಕನ್ನಡ ಚಿತ್ರ