ಲಖನೌ: ಗುರುವಾರವಷ್ಟೇ ಲೋಕಸಭೆಯಲ್ಲಿ 'ಘರ್ ಘರ್ ಮೋದಿ ಅಲ್ಲ, ಅರ್ಹರ್ ಮೋದಿ' ಎಂದು ಲೇವಡಿ ಮಾಡುವ ಮೂಲಕ ಸದ್ದು ಮಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಉತ್ತರ ಪ್ರದೇಶದಲ್ಲಿ ಚುನಾವಣೆ ಕಹಳೆ ಊದಿದ್ದಾರೆ. ಲಖನೌದಲ್ಲಿ ನಡೆದ 'ಉತ್ತರ ಪ್ರದೇಶ ಉದ್ಘೋಷ' ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತರ ಪಕ್ಷಗಳೆಲ್ಲ ಉತ್ತರ ಪ್ರದೇಶದ ಬಗ್ಗೆ ಬಾಯಿ ಮಾತಿನ ಕಳಕಳಿ ತೋರುತ್ತಾರೆ, ಆದರೆ, ಅತ್ಯುನ್ನತ ಅನುಭವ ಹೊಂದಿರುವ ಶೀಲಾ ದೀಕ್ಷಿತ್ ಉತ್ತರ ಪ್ರದೇಶದ ಚಿತ್ರವನ್ನೇ ಬದಲಿಸಲಿದ್ದಾರೆ ಎಂದು ಹೇಳಿದರು. ಚುನಾವಣೆ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಕಲ್ಪನೆಯ ಈ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ, ಬ್ಲಾಕ್ ಮತ್ತು ಬೂತ್ ಮಟ್ಟದ ಕಾರ್ಯಕರ್ತರು ಭಾಗವಹಿಸಿದ್ದರು ಮತ್ತು ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ರಾಜ್ಯದ ಪ್ರಧಾನ ಪಾತ್ರಗಳಾದ ಬಿಎಸ್ಪಿ, ಎಸ್ಪಿ ಮತ್ತು ಬಿಜೆಪಿಗಳು ಸುಳ್ಳಿನ ರಾಜಕೀಯದಲ್ಲಿ ತೊಡಗಿವೆ ಎಂದು ಹೇಳಿದ ಅವರು, ಕಾಂಗ್ರೆಸ್ ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟುವ ರಾಜಕಾರಣ ಮಾಡುವುದಿಲ್ಲ ಎಂದರು. ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಶೀಲಾ ದೀಕ್ಷಿತ್ ಸೂಕ್ತ ಆಯ್ಕೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಶೀಲಾ ಅವರು ದಿಲ್ಲಿಯ ಚಿತ್ರಣವನ್ನೇ ಬದಲಿಸಿದ ಹೆಗ್ಗಳಿಕೆ ಹೊಂದಿದವರು. ಅವರನ್ನು ಕಿತ್ತೊಗೆದು ಬರೀ ನಾಟಕದಿಂದಲೇ ಜೀವನ ಕಳೆಯುತ್ತಿರುವ ಪಕ್ಷಕ್ಕೆ ಅಧಿಕಾರ ನೀಡಿದ ದಿಲ್ಲಿ ಜನ ಈಗ ಪರಿತಪಿಸುತ್ತಿದ್ದಾರೆ,'' ಎಂದು ಹೇಳಿದರು. ಅಖಿಲೇಶ್ ಒಳ್ಳೆ ಹುಡ್ಗ ರಾಹುಲ್ ಗಾಂಧಿ ಅವರು 'ಅಖಿಲೇಶ್ ಯಾದವ್ ಒಳ್ಳೆ ಹುಡ್ಗ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಹೊಗಳಿದ್ದಾರೆ. ಆದರೆ, ಅವರ ಸರಕಾರ ಮಾತ್ರ ಕೆಲಸ ಮಾಡ್ತಿಲ್ಲ ಎಂದು ದೂರಿದ್ದಾರೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಎಸ್ಪಿ ಜತೆ ಮೈತ್ರಿ ಮಾಡಿಕೊಳ್ಳುವ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
↧
ಉ.ಪ್ರ: ರಾಹುಲ್ ಚುನಾವಣೆ ಕಹಳೆ
↧