ಚೆನ್ನೈ: ಕೇಂದ್ರ ಸರಕಾರದ ಜತೆಗಿನ ಮಾತುಕತೆ ಮುರಿದುಬಿದ್ದಿದ್ದು, ಜುಲೈ 29ರಂದು ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಬ್ಯಾಂಕ್ ಸಂಘಟನೆಗಳ ಒಕ್ಕೂಟ(ಯುಎಫ್ಬಿಯು) ಕರೆ ನೀಡಿದೆ. 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ''ಕೇಂದ್ರದ ಬ್ಯಾಂಕಿಂಗ್ ನೀತಿಗಳು ಮತ್ತು ಸುಧಾರಣಾ ಕ್ರಮಗಳಿಂದ ಆಗುವ ತೊಂದರೆ ಕುರಿತು ಸಭೆಯಲ್ಲಿ ವಿವರಿಸಲಾಯಿತು. ಆದರೆ ಐಬಿಎ ಅಥವಾ ಸರಕಾರದ ಪ್ರತಿನಿಧಿಗಳಿಂದ ಸಮರ್ಪಕ ಪ್ರತಿಸ್ಪಂದನೆ ದೊರೆಯಲಿಲ್ಲ. ಬದಲಿಗೆ ಸರಕಾರದ ನೀತಿಗಳನ್ನು ಕೇವಲ ಸಮರ್ಥಿಸಿಕೊಂಡರು. ಹೀಗಾಗಿ ಮುಷ್ಕರ ನಿರ್ಧಾರವಾಗಿದೆ,'' ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ(ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿದ್ದಾರೆ. ''ಕೇಂದ್ರ ಕಾರ್ಮಿಕ ಸಚಿವಾಲಯದ ಮುಖ್ಯ ಕಾರ್ಮಿಕ ಆಯುಕ್ತರು(ಕೇಂದ್ರೀಯ) ದಿಲ್ಲಿಯಲ್ಲಿ ಸಭೆ ಕರೆದಿದ್ದರು. 9 ಬ್ಯಾಂಕ್ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಾರ್ವಜನಿಕ ವಲಯದ ಬ್ಯಾಂಕ್ಗಳು, ಹಳೆಯ ಖಾಸಗಿ ಬ್ಯಾಂಕ್ಗಳು ಮತ್ತು ವಿದೇಶಿ ಬ್ಯಾಂಕ್ಗಳ 80,000 ಶಾಖೆಗಳ 10 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಮತ್ತು ಅಧಿಕಾರಿಗಳು ಮುಷ್ಕರಕ್ಕೆ ಸಜ್ಜಾಗಿದ್ದಾರೆ,'' ಎಂದು ವೆಂಕಟಾಚಲ ಹೇಳಿದ್ದಾರೆ.
↧
ಬ್ಯಾಂಕ್ ಮುಷ್ಕರ ನಾಳೆ
↧