Quantcast
Channel: VijayKarnataka
Viewing all articles
Browse latest Browse all 6795

ಮಳೆ ನಕ್ಷತ್ರಗಳು ಹೇಳುವ ಮಳೆಕಥೆಗಳು

$
0
0

ಮಳೆ ಹೆಚ್ಚಿದರೆ ಅದಕ್ಕೆ ನಕ್ಷತ್ರ ಕಾರಣ ಹೇಳುತ್ತದೆ. ಬಿಸಿಲು ಹೆಚ್ಚಾದರೂ ಆ ಸಮಯದ ನಕ್ಷತ್ರ ಯಾವುದೆಂದು ತಿಳಿದುಕೊಂಡರೆ ಅಲ್ಲಿ ಉತ್ತರ ಸಿಗುತ್ತದೆ. ಮಳೆ ನಕ್ಷತ್ರಗಳ ಮೂಲಕ ಮಳೆಯ ರೀತಿ ನೀತಿಯನ್ನು ತಿಳಿದುಕೊಳ್ಳುವುದೇ ಕುತೂಹಲಕರ.

- ಉಷಾ ಭಟ್‌ ಕ್ಯಾದಗಿಮನೆ

ನಕ್ಷತ್ರ ನೋಡಿ ಮಳೆಯ ತೀವ್ರತೆಯನ್ನು ಅರಿವ ವಿದ್ಯೆ ಬರಿಯ ಹಳ್ಳಿಗರಿಗೆ ಮಾತ್ರ ಅಗತ್ಯದಲ್ಲ, ನಗರದವರಿಗೂ ಅನ್ವಯವಾಗುವ ಜ್ಞಾನವಿದು. ಮಲೆನಾಡಿನಲ್ಲಂತೂ ಮಳೆ ನಕ್ಷತ್ರಗಳ ಬಗ್ಗೆ ಪ್ರತಿಯೊಬ್ಬ ಹಳ್ಳಿ ಹೈದನೂ ಅಭ್ಯಾಸ ಅರಿವು ಹೊಂದಿರುತ್ತಾನೆ. ಅವರು ವಿಶೇಷತಃ ಪ್ರಕೃತಿಯ ಮೇಲೆ ಅವಲಂಬಿತರಾಗಿರುವ ಮಣ್ಣಿನ ಮಕ್ಕಳು. ಬಿಸಿಲು ಹೆಚ್ಚಾದರೂ ಏಕೆ ಹೆಚ್ಚಾಯಿತು? ಹಾಗೆಯೇ ಚಳಿ ಹೆಚ್ಚಾದರೂ ಹೇಗೆ ಏಕೆ ಹೆಚ್ಚಾಯಿತು? ಎಂಬ ಜ್ಞಾನ ವಿಜ್ಞಾನವನ್ನು ಬಲ್ಲರು. ಅದೇ ರೀತಿ ಮಳೆಯ ಬಗ್ಗೂ ಕ್ರಿಯಾಶೀಲರು.

ಸೂರ್ಯ ಸಂಕ್ರಾಂತಿ ಸಮಯವನ್ನು ಅನುಲಕ್ಷಿಸಿ ಆದ್ರ್ರಾ ನಕ್ಷತ್ರ ಪ್ರವೇಶವನ್ನು ಊರಿನ ಪಂಡಿತರಿಂದ ತಿಳಿಯುತ್ತಾರೆ. ಅವರು ವಾರ, ತಿಥಿ, ನಕ್ಷತ್ರ, ಯೋಗ, ಕರಣವನ್ನು ವಿವರಿಸಿ ಮಳೆಯ ಪ್ರಮಾಣವನ್ನು ಪಂಚಾಂಗ ರೀತ್ಯಾ ಪ್ರಸ್ತುತಪಡಿಸುತ್ತಾರೆ. ಇದರ ಮೇಲೆ ಪ್ರತಿ ಮಳೆಗೆ ಮತ್ತು ನಕ್ಷತ್ರಕ್ಕೆ ಒಂದೊಂದು ವಾಹನಗಳನ್ನು ಕಲ್ಪಿಸುತ್ತಾರೆ. ಆ ವಾಹನಗಳ ಎತ್ತರ, ಗಾತ್ರ ಇವುಗಳ ಮೇಲೆ ಆ ನಕ್ಷತ್ರದಲ್ಲಿ ಮಳೆ ಹುಯ್ಯುತ್ತದೆ ಎಂಬ ನಂಬಿಕೆ. ಪ್ರತಿವರ್ಷ ಆ ನಕ್ಷತ್ರಗಳು ತಮ್ಮ ವಾಹನಗಳನ್ನು ಬದಲಿಸುತ್ತವೆ. ಉದಾ: ಈ ವರ್ಷ ಆದ್ರ್ರಾ ನಕ್ಷತ್ರ ಆನೆ ಮೇಲೇರಿ ಬಂದಿದೆ ಎಂದಾದರೆ ಆಗ ಮಳೆ ವಿಪರೀತ ಹೆಚ್ಚು. ಆನೆಯಂಥ ಮೋಡಗಳೇ ಬಂದು ನಾಡನ್ನು ಮಳೆಯಿಂದ ತುಂಬಿ ಬಿಡುತ್ತವೆ. ಅದೇ ರೀತಿ ಇನ್ನೊಂದು ವರ್ಷ ಆದ್ರ್ರಾ ನಕ್ಷತ್ರವು ನದಿಯ ಬೆನ್ನೇರಿ ಬಂದರೆ ಆ ವರ್ಷ ತುಂತುರು ಮಳೆ ಅಥವಾ ಬಿಟ್ಟು ಬಿಟ್ಟು ಮಳೆ. ಹೀಗೆ ಮಳೆಯ ಮೌಲ್ಯಮಾಪನವನ್ನು ಮಾಡುತ್ತಾರೆ. ಇದನ್ನೇ ಪಂಚಾಂಗ ಕರ್ತರು ಆಯಾ ನಕ್ಷತ್ರಾರಂಭಕ್ಕೆ ಸುವೃಷ್ಟಿ, ಅತಿವೃಷ್ಟಿ, ಮಧ್ಯವೃಷ್ಟಿ ಎಂದು ಹೆಸರಿಸುತ್ತಾರೆ. ಕೃತ್ತಿಕಾ ನಕ್ಷತ್ರದಲ್ಲಿ ಭೂಮಿ ಕಾಯುತ್ತದೆ. ಕಳ್ಳ ಮಳೆ ಬಿದ್ದರೆ ಕೃತ್ತಿಕೆ ಹುಳುಕು ಮಳೆ ಎನ್ನುತ್ತಾರೆ. ರೋಹಿಣಿ ಮಳೆಗೆ ಓಣಿಯಲ್ಲಿ ಅಥವಾ ಬೀದಿಯೆಲ್ಲ ಬೀಜವೆನ್ನುತ್ತಾರೆ. ಯಾಕೆಂದರೆ ಎಂಟು ತಿಂಗಳು ಬಿಸಿಲಿನಲ್ಲಿ ಬೆಂದ ಭೂಮಿ ತನ್ನ ಬಸಿರಿನಲ್ಲಿಟ್ಟುಕೊಂಡ ಬೀಜಗಳನ್ನು ಹೊರಚೆಲ್ಲಿ ಪ್ರತಿಯೊಂದು ಕಡೆಯಲ್ಲಿಯೂ ರೋಹಿಣಿಗೆ ಬಿದ್ದ ಮಳೆಗೆ ಅವು ಮೊಳಕೆಯೊಡೆಯುತ್ತವೆ. ಭೂಮಿಯೆಲ್ಲ ಹಸಿರು ಹಾಸಿಗೆಯಾಗುತ್ತದೆ.

ಮೃಗಶಿರಕ್ಕೆ ಮನ್ನಣೆ

ಮೃಗಶಿರಾ ನಕ್ಷತ್ರ ಮಳೆಗೆ ಮಿರ್ಗಿ ಮಳೆ ಎಂದು ಹಳ್ಳಿಗರು ಕರೆಯುತ್ತಾರೆ. ಮೃಗಶಿರಾ ಅಂದರೆ ಸಾಲಾಗಿ ಮೂರು ನಕ್ಷತ್ರಗಳು. ಜಿಂಕೆಯು ಒಮ್ಮೆಯಲ್ಲಿ ನಿಂತಂತೆಯೇ ಆಕಾರ. ಬಹುದೂರದಲ್ಲಿ ಇನ್ನೊಂದು ಪ್ರಕಾಶಮಾನವಾದ ದೊಡ್ಡ ನಕ್ಷತ್ರ. ಈ ನಕ್ಷತ್ರಪುಂಜವನ್ನು ಮೃಗಶಿರಾ ಎಂದು ಕರೆಯುತ್ತಾರೆ. ಈ ನಕ್ಷತ್ರ ಪುಂಜವು 700 ಯೋಜನ ವಿಸ್ತೀರ್ಣ (8400 ಮೈಲು) ಇದೆ ಎಂದು ಖಗೋಲ ಶಾಸ್ತ್ರಜ್ಞರ ಅಭಿಪ್ರಾಯ. ರೋಹಿಣಿ ಮಳೆಗೆ ಸಮೃದ್ಧವಾಗಿ ಚಿಗುರಿದ ಹುಲ್ಲನ್ನು ಮೇಯ್ದ ಈ ರೀತಿಯ ಚತುಷ್ಪಾದ ಪ್ರಾಣಿಗಳಿಗೆ ಆನಂದವನ್ನುಮಟು ಮಾಡುವ ನಕ್ಷತ್ರ ಮೃಗಶಿರಾ. ಮೃಗಶಿರಾದ ಮಳೆ ರಭಸದಿಂದ ಬಿದ್ದು ಹೋಗುವುದಿಲ್ಲ. ಕಣ್ಣು ಕುಕ್ಕುವ ಬಿಸಿಲಿನಿಂದ ಬೆವರು ಸುರಿಸುವಂಥ ಉಷ್ಟತೆಯಿಲ್ಲ. ಹದವಾದ ಮಿತವಾದ ಮಣ್ಣಿಗೆ ಪೂರಕವಾದ ಪೋಷಕಾಂಶದ ಮಳೆ. ಈ ನಕ್ಷತ್ರ ಮಳೆಯಲ್ಲಿ ಊರಿದ ಯಾವುದೇ ಸಸ್ಯಗಳು ಸಾಯುವುದಿಲ್ಲ.

ಆದ್ರಾ ಅಬ್ಬರ

ಆದ್ರ್ರಾ ನಕ್ಷತ್ರಕ್ಕೆ ಹಳ್ಳಿಗರು 'ಆರಿದ್ರಾ' ಎನ್ನುತ್ತಾರೆ. 'ಆರಿದ್ರಾ ಮಳೆ ಹೊಯ್ದರೆ ಆರು ನಕ್ಷತ್ರ ಮಳೆ ಹೊಯ್ತದೆ' ಅನ್ನುತ್ತಾರೆ. ಆರಿದ್ರಾ ನಕ್ಷತ್ರಕ್ಕೆ ರುದ್ರನು ಅಧಿದೇವತೆ. ಆತನು ಭೂದೇವಿಗೆ ನೀರು ಕುಕಡಿಸಿ ಹೋಗುತ್ತಾನೆ. ಅನಂತರದ ಮಳೆಗಳಲ್ಲಿ ಭೂದೇವಿಯ ಮೇಲ್ಹೊದಿಕೆ ಹುಲ್ಲು ಪೈರುಗಳಿಂದ ಆಚ್ಛಾದಿತವಾಗಿ ಬಿಟ್ಟಿರುತ್ತದೆ. ನೀರು ನೆಲದೊಳಗೆ ಇಂಗುವುದಿಲ್ಲ. ಹರಿದು ಹೋಗಿಬಿಡುತ್ತದೆ. ಆದ್ರ್ರಾ ನಕ್ಷತ್ರದಿಂದ ವರ್ಷಾಧಾರೆ ಆರಂಭ. ಆದ್ರ್ರಾ, ಪುನರ್ವಸು, ಪುಷ್ಯಾ, ಆಶ್ಲೇಷ, ಮಘಾ, ಹುಬ್ಬಾ - ಈ ಆರು ಮಳೆಗಳು ಸತತವಾಗಿ ಹೊಯ್ದರೆ ಧರಿತ್ರಿಯು ಸಂಪದ್ಭರಿತವಾಗುತ್ತದೆ. ಆದ್ರ್ರಾ ಮಳೆ ಇಲ್ಲವಾದರೆ ವರ್ಷವಿಡೀ ಬರಗಾಲವೆಂದೇ ತಿಳಿಯುತ್ತಾರೆ. ಇಷ್ಟು ಗಾಢವಾಗಿ ಧರಿತ್ರಿಯ ರಸೋತ್ಪತ್ತಿಗೆ ಮತ್ತು ಆದ್ರ್ರಾ ಮಳೆಗೂ ಸಂಬಂಧವಿದೆ.

ಪುನರ್ವಸು ಪುನಃಶ್ಚೇತನ

ಪುನರ್ವಸು ಇದೊಂದು ಸಿಂಹಾಸನ ರೂಪದ ಚತುಷ್ಕೋನ ಆಕೃತಿಯದು. ಮೂರು ಸಾವಿರ ಅಣು ನಕ್ಷತ್ರಗಳು ತೇಜಃಪುಂಜ ರಾಶಿ. ಇದರ ಕ್ಷೇತ್ರ ಸಹಸ್ರಯೋಜನ. ಇದು ಭೂಮಿಯ ಕಾಠಿಣ್ಯವನ್ನು (ಜಾಡ್ಯವನ್ನು) ಮೃದುವಾಗಿಸುತ್ತದೆ. ಧಾರಯತಿ ಧರಿತ್ರಿ ಎನ್ನುವಂತೆ ಬೀಜ ಧಾರಣೆಯ, ಭೂಗರ್ಭದ ಸಂಯೋಜನೆ ಭವಿತವ್ಯದ ಸಮೃದ್ಧಿಯ ದ್ಯೋತಕ. ಈ ನಕ್ಷತ್ರದ ಮಳೆ ಆದ್ರ್ರಾ ನಕ್ಷತ್ರ ಮಳೆಯಂತೆ ಆರದೇ ಹುಯ್ಯಬೇಕು. ಇಲ್ಲವಾದರೆ ಭೂಮಿಯ ಉತ್ಪತ್ತಿಯಲ್ಲಿ ಏರುಪೇರಾಗುತ್ತದೆ. ಸಾಮಾನ್ಯವಾಗಿ ಎಲ್ಲ ಹೊಳೆ ಹಳ್ಳಗಳಲ್ಲಿಯೂ ನೀರು ತುಂಬುತ್ತದೆ. ನೆರೆ ಬರುವ ಅಥವಾ ಪ್ರವಾಹ ಬರುವ ಪ್ರಥಮ ನಕ್ಷತ್ರ ಪುನರ್ವಸು.

ಪುನರ್ವಸು ಮಳೆಗೆ ಭೂಮಿ ರಸಜ್ವಲೆಯಾಗುತ್ತಾಳೆಂದು ವರಾಹಮಿಹಿರ ಬರೆದಿದ್ದಾನೆ. ನೆರೆ ಬಂದರೂ ಕಾಡು ಮೇಡುಗಳಲ್ಲಿ ಹರಿದು ಬಂದು ಅಲ್ಲಿಯ ಜೀವಸತ್ವಗಳನ್ನು ತಂದು ಭೂಮಿಯನ್ನು ಫಲವತ್ತಾಗಿಸುತ್ತದೆ. ಸ್ತ್ರೀಯು ಪ್ರತಿ ತಿಂಗಳು ಬಹಿಷ್ಠೆಯಾಗಿ ದ್ರವಿಸುತ್ತಾಳೆ. ಆ ದ್ರವದಿಂದ ಪ್ರಕೃತಿಯೂ ಒಳ್ಳೆಯದಾಗುವುದಲ್ಲದೆ ಕೆಡುಕಾಗುವುದಿಲ್ಲ. 'ಪುನರ್ವಸೂನಾಂ ರಜಸ್ವಲಾ ಧರಿತ್ರಿಃ' ಎಂದಿದ್ದಾನೆ. ಇದಕ್ಕೇ ಸಿಂಹಾಸನ ರೂಪದಲ್ಲಿ ರಾಜನಂತೆ ರಾಷ್ಟ್ರವನ್ನು ಪಾಲಿಸುತ್ತದೆ ಪೋಷಿಸುತ್ತದೆ. ಇದನ್ನೇ ಪುನರ್‌+ವಸು ಎಂದಿರುವುದು.

ಪುನರ್ವಸುವಿನ ಸೆರಗನ್ನು ಹಿಡಿದುಕೊಂಡು ಬರುವುದು ಪುಷ್ಯಾ ನಕ್ಷತ್ರ. ಪುಷ್ಯಾವನ್ನು ಹಳ್ಳಿಭಾಷೆಯಲ್ಲಿ ಸಣ್ಣ ಪುಷ್ಯಾ, ದೊಡ್ಡ ಪುಷ್ಯಾ ಎನ್ನುತ್ತಾರೆ. ಇದರ ಕ್ಷೇತ್ರ ದ್ವಿಸಹಸ್ರಯೋಜನ ವಿಸ್ತೀರ್ಣ. ಇದು ಮಳೆಗಾಲದ ಮಧ್ಯ ನಕ್ಷತ್ರ. ಇದನ್ನು ಹುಚ್ಚ ಪುಷ್ಯಾ ಎಂದು ಕರೆಯುತ್ತಾರೆ. ಈ ನಕ್ಷತ್ರ ಮಳೆಯಲ್ಲಿ ಗಿಡಗಂಟೆ, ಮರಗಳು ಕ್ಷಾರಾಂಶವನ್ನು ವೃದ್ಧಿಸಿಕೊಳ್ಳುತ್ತವೆ. ಕಾಯಿಪಲ್ಲೆಗಳು ಲಭ್ಯವಾಗುತ್ತವೆ. ಲಕ್ಷಾಂತರ ಜಾತಿಯ ಮೀನುಗಳು ಮರಿ ಇಡುತ್ತವೆ. ಕೆಲವು ಜಾತಿಯ ಹಾವುಗಳು, ಸರೀಸೃಪಗಳು ಮರಿ ಹಾಕುತ್ತವೆ. ಪುಷ್ಯದ ನಂತರ ಬರುವುದೇ ಆಶ್ಲೇಷಾ ನಕ್ಷತ್ರ. ಇದು ಸರ್ಪ ದೇವತೆಯ ನಕ್ಷತ್ರ. ಕ್ರಿಮಿ ಕೀಟ ಹುಳ ಹುಪ್ಪಟೆ ಇಲಿ ಕಪ್ಪೆಗಳನ್ನು ತಿನ್ನುತ್ತವೆ. ಇದನ್ನು ಗಾಂಧೀಜಿ, 'ಕ್ಷೇತ್ರಪಾಲ' ಎಂದೇ ಕರೆದಿದ್ದಾರೆ. ಮುಂದೆ ಮಘಾ. ಇದು ಮಹಾನಕ್ಷತ್ರ. ಪ್ರಕೃತಿಯಲ್ಲಿ ನಾನಾ ತರದ ಮೊಗ್ಗೆಗಳು ಅರಳಿ ಮೆರವಣಿಗೆಯಾಗುತ್ತದೆ. ಇವು ಹುಬ್ಬಾ ನಕ್ಷತ್ರ ಮಳೆಯಲ್ಲಿ ತೋಯುತ್ತವೆ. ಅದಕ್ಕೆ ಹುಬ್ಬಾ ಮಳೆ ಅಬ್ಬೆ ಹಾಲು ಸವಿದಂತೆ ಎಂದು ಹಳ್ಳಿಗರು ಹೇಳುತ್ತಾರೆ. ಹಳ್ಳಿಗಾಡಿನ ಮಣ್ಣಿನ ಮಕ್ಕಳ ಈ ಜ್ಞಾನ ವಿಜ್ಞಾನ ಅವರ ಜನಪದ ಹಾಡುಗಳಲ್ಲಿಯೂ ಹರಿದಾಡಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>