Quantcast
Channel: VijayKarnataka
Viewing all articles
Browse latest Browse all 6795

ಗಣಜೂರಲ್ಲಿ ಚಿನ್ನ ಗಣಿಗಾರಿಕೆ ಘಟಕ ಸ್ಥಾಪನೆಗೆ ಹಿನ್ನಡೆ

$
0
0

ತಾಂತ್ರಿಕ ಅನುಮೋದನೆ ನೀಡಲು ರಾಜ್ಯ ಸರಕಾರ ಮೀನಮೇಷ
* ರಾಜು ನದಾಫ ಹಾವೇರಿ

ಕೇಂದ್ರ ಸರಕಾರ ಜುಲೈ 2015ರಲ್ಲೇ ಅನುಮತಿ ನೀಡಿದ್ದರೂ ರಾಜ್ಯ ಸರಕಾರ ತಾಂತ್ರಿಕ ಅನುಮೋದನೆ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಜಿಲ್ಲೆಯ ಗಣಜೂರಿನಲ್ಲಿ ಡೆಕ್ಕನ್ ಎಕ್ಸ್‌ಪ್ಲೋರೇಷನ್ ಸರ್ವಿಸ್ ಪ್ರೈ.ಲಿ. ಕಂಪನಿಯ ಚಿನ್ನ ಉತ್ಪಾದನೆ ಹಾಗೂ ಸಂಸ್ಕರಣಾ ಘಟಕ ಸ್ಥಾಪನೆ ವಿಳಂಬವಾಗಿದೆ.

ಆಗಲೇ ಅನುಮೋದನೆ ನೀಡಿದ್ದರೆ 2016ರ ಮೇ ವೇಳೆಗೆ ಗಣಜೂರು ಬಳಿ ಡೆಕ್ಕನ್ ಕಂಪನಿಯ ಚಿನ್ನದ ಉತ್ಪ್ಪಾದನಾ ಘಟಕ ಕಾರ್ಯಾರಂಭಗೊಳ್ಳಬೇಕಿತ್ತು. ಗಣಜೂರಿನಲ್ಲಿ ಚಿನ್ನದ ನಿಕ್ಷೇಪವಿದೆ ಎಂಬ ಅಂಶ ಬೆಳಕಿಗೆ ಬಂದಿದ್ದೇ 2010ರ ಜಿಮ್‌ನಿಂದ (ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ). ಡೆಕ್ಕನ್ ಕಂಪನಿ ಇಲ್ಲಿ ಚಿನ್ನದ ನಿಕ್ಷೇಪ ಇರುವುದನ್ನು ಖಚಿತ ಪಡಿಸಿತ್ತು.

ಕೇಂದ್ರ ಕೊಟ್ಟರೂ ಕೊಡದ ರಾಜ್ಯ:

ಕಂಪನಿ ಮೂಲಗಳ ಪ್ರಕಾರ, 2003ರಲ್ಲಿ ಖನಿಜಾನ್ವೇಷಣೆ ಹಾಗೂ ಗಣಿಗಾರಿಕೆ ನೀತಿ ಅನ್ವಯ ಅಧಿಕೃತ ಲೈಸನ್ಸ್ ಪಡೆದು 2.2 ಚದುರ ಕಿ.ಮೀ. ಪ್ರದೇಶದಲ್ಲಿ ಉತ್ಖನನ ಕೈಗೊಂಡ ಕಂಪನಿ ಇಲ್ಲಿ ಚಿನ್ನದ ನಿಕ್ಷೇಪ ಇರುವುದನ್ನು ದೃಢಪಡಿಸಿಕೊಂಡಿತು. ಭೂವೈಜ್ಞಾನಿಕ ಸಮೀಕ್ಷೆ ಕೈಗೊಂಡ ವೇಳೆ ಅಂದಾಜು 10 ಟನ್ ಚಿನ್ನದ ನಿಕ್ಷೇಪ ಇರುವುದನ್ನು ಖಚಿತಪಡಿಸಿಕೊಂಡಿದೆ. ಅಲ್ಲದೇ ಈ ಪ್ರದೇಶದಲ್ಲಿ ಚಿನ್ನದ ಉತ್ಪಾದನೆ ಹಾಗೂ ಸಂಸ್ಕರಣಾ ಘಟಕ ಸ್ಥಾಪಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉನ್ನತ ಸಮಿತಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು.

ಈ ಮನವಿಗೆ ತಕ್ಷಣ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ 2010 ಮತ್ತು 2011ರಲ್ಲಿ ಜರುಗಿದ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಕಂಪನಿ ಗಣಜೂರ ಪ್ರದೇಶದಲ್ಲಿ ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಉತ್ಪಾದನೆ ಹಾಗೂ ಸಂಸ್ಕರಣಾ ಘಟಕ ಸ್ಥಾಪಿಸಲು ಸಿದ್ಧವಿರುವುದಾಗಿ ತಿಳಿಸಿತು. ನಂತರ ಈ ಘಟಕ ಸ್ಥಾಪನೆಗೆ ಕನಿಷ್ಠ 200 ಎಕರೆ ಜಮೀನು ಜತೆಗೆ ನೀರಿನ ಸೌಲಭ್ಯ ಒದಗಿಸುವಂತೆಯೂ ಮನವಿ ಸಲ್ಲಿಸಿತು.

ಈ ವೇಳೆ ರಾಜ್ಯ ಸರಕಾರ ಅರ್ಜಿಗೆ ಸ್ಪಂದಿಸುವ ಮೂಲಕ ಒಪ್ಪಿಗೆ ನೀಡಿತು. ತತ್ಪರಿಣಾಮ ಕಂಪನಿ ಗಣಿಗಾರಿಕೆ ನಡೆಸಲು ಲೈಸನ್ಸ್‌ಗೆ ಅರ್ಜಿ ಸಲ್ಲಿಸಿತು. ಮುಂದೆ ಕೇಂದ್ರವೂ ಅನುಮತಿ ನೀಡಿತು. ಆದರೆ ಈಗ ರಾಜ್ಯ ಸರಕಾರ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ.

ನಿರುದ್ಯೋಗ ನಿವಾರಣೆ:

ಚಿನ್ನದ ಉತ್ಪಾದನಾ ಘಟಕ ಆರಂಭಗೊಂಡಲ್ಲಿ ಪ್ರತಿ ಟನ್‌ಗೆ 3 ಗ್ರಾಂ ಚಿನ್ನದ ಉತ್ಪಾದನೆ ಆಧರಿಸಿ ನಿತ್ಯ 1000 ಟನ್ ಅದಿರು ಉತ್ಪಾದನೆ ಮತ್ತು ಸಂಸ್ಕರಣೆ ಮಾಡಬಹುದಾಗಿದೆ. ಜತೆಗೆ ಈ ಭಾಗದ ಕನಿಷ್ಠ 250 ನಿರುದ್ಯೋಗಿಗಳಿಗೆ ಕೌಶಲ ಆಧರಿಸಿ ಉದ್ಯೋಗ ನೀಡುವ ಹಾಗೂ ಕೌಶಲ ವೃದ್ಧಿಸುವ ತರಬೇತಿ ಕೇಂದ್ರ ಆರಂಭಿಸುವ ಯೋಜನೆಯನ್ನೂ ಕಂಪನಿ ಹೊಂದಿದೆ.

''ಕೆಲಸ ನಿರ್ವಹಿಸುವ ಸಿಬ್ಬಂದಿಗೆ, ಈ ಘಟಕಕ್ಕೆ ಭೂಮಿ ಒದಗಿಸುವ ರೈತರ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಕೇಂದ್ರ ತೆರೆಯುವುದು ಹಾಗೂ ಸಿಬ್ಬಂದಿಗೆ ಸುಸಜ್ಜಿತ ಮನೆ ನಿರ್ಮಿಸಿ ಕೊಡುವ ಮೂಲಕ ಈ ಪ್ರದೇಶವನ್ನೇ ಮಾದರಿ ನಗರವನ್ನಾಗಿ ಮಾರ್ಪಡಿಸುವ ಯೋಜನೆಯ ನೀಲನಕ್ಷೆ ಸಿದ್ಧಗೊಂಡಿದೆ,'' ಎನ್ನುತ್ತಾರೆ ಕಂಪನಿ ನಿರ್ದೇಶಕ ಎಸ್.ಸಿ.ಆರ್. ಪೇಶ್ವಾ .

-----

ಈಗ 350 ಕೋಟಿ ರೂ. ವೆಚ್ಚ ಮಾಡಲು ಕಂಪನಿ ಸಿದ್ಧವಿದೆ. ರಾಜ್ಯ ಸರಕಾರ ಅನುಮತಿ ನೀಡಿದಲ್ಲಿ 2018ರ ಆರಂಭದಲ್ಲೇ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿದೆ. ಸದ್ಯಕ್ಕೆ ಚಿನ್ನದ ಗಣಿಗಾರಿಕೆಗೆ 72 ಎಕರೆ ಭೂಮಿಯನ್ನು ರೈತರಿಂದ ಖರೀದಿಸಲು ಒಪ್ಪಂದ ಮಾಡಿಕೊಂಡು ಪ್ರತಿ ಎಕರೆಗೆ 1.25 ಲಕ್ಷ ರೂ. ಮುಂಗಡ ನೀಡಲಾಗಿದೆ.

-ಸಂದೀಪ ಲಖ್ವಾರಾ, ಎಂಡಿ, ಡೆಕ್ಕನ್ ಎಕ್ಸ್‌ಪ್ಲೋರೇಶನ್ ಸರ್ವಿಸ್ ಪ್ರೈ.ಲಿ.ಕಂಪನಿ

ಗಣಜೂರ ಗ್ರಾಮದಲ್ಲಿ ಚಿನ್ನ ಉತ್ಪಾದನೆ ಘಟಕ ಸ್ಥಾಪನೆ ಕುರಿತಂತೆ ಕೇಂದ್ರ ಕಚೇರಿ ಮೂಲಕವೇ ಪತ್ರ ವ್ಯವಹಾರ ನಡೆದಿದ್ದು, ತಕ್ಷಣಕ್ಕೆ ಯಾವುದೇ ಮಾಹಿತಿ ಜಿಲ್ಲೆಯ ಕಚೇರಿಯಲ್ಲಿ ಲಭ್ಯವಿಲ್ಲ.

-ಸಿಖಂದರ್ ಭಾಷಾ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಹಾವೇರಿ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>