ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಕಾರ್ಯವೈಖರಿಯ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಯೋಜಿತ ಲೋಧಾ ಸಮಿತಿಯ ವಿಚಾರಣೆಯು ಅಂತ್ಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಅತ್ಯಂತ ಸುದೀರ್ಘವಾಗಿ ನಡೆದ ವಿಚಾರಣೆಯಲ್ಲಿ ಬಿಸಿಸಿಐನ ನಿಧಿ ಹಂಚಿಕೆ ಹಾಗೂ ಅಸಮರ್ಪಕ ಲೆಕ್ಕ ಪರಿಶೋಧನೆ ಇವುಗಳ ಬಗ್ಗೆ ನ್ಯಾಯಾಲಯ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತು. ಗೋವಾ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಮಾಡಿರುವ ಹಣ ದುರುಪಯೋಗದ ಬಗ್ಗೆಯೂ ವಿಚಾರಣೆ ನಡೆಯಿತು. ಗೋವಾ ಕ್ರಿಕೆಟ್ ಸಂಸ್ಥೆಗೆ ಇದುವರೆಗೂ 141 ಕೋಟಿ ರೂ. ನೀಡಲಾಗಿತ್ತು. ಆದರೆ ಹಣದ ಅವ್ಯವಹಾರದ ಹಿನ್ನೆಲೆಯಲ್ಲಿ ಅಲ್ಲಿ ಮೂವರು ಪದಾಧಿಕಾರಿಗಳನ್ನು ಗೋವಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ದಿಲ್ಲಿ ಕ್ರಿಕೆಟ್ ಸಂಸ್ಥೆ ಹಾಗೂ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅವ್ಯವಸ್ಥೆಯ ಬಗ್ಗೆಯೂ ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ಹಾಗೂ ಎಫ್ಎಂಐ ಕಾಲೀಫುಲ್ಲಾ ಅವರನ್ನೊಳಗೊಂಡ ಸಮಿತಿಯು ಪ್ರಶ್ನಿಸಿತು. ಠಾಕೂರ್ ವಿರುದ್ಧ ಕ್ರಿಮಿನಲ್ ಕೇಸ್ ನೂತನವಾಗಿ ಆಯ್ಕೆಗೊಂಡಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ವಿರುದ್ಧ ಮೂರು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ಬಿಹಾರ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆದಿತ್ಯ ವರ್ಮಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಬಿಹಾರ್ ಕ್ರಿಕೆಟ್ ಸಂಸ್ಥೆ ಪರ ವಕೀಲರಾದ ಗೋಪಾಲ್ ಸುಬ್ರಹ್ಮಣ್ಯಂ ಠಾಕೂರ್ ವಿರುದ್ಧದ ಆರೋಪವನ್ನು ಸಮರ್ಥಿಸಿಕೊಂಡು, ಕ್ರಿಮಿನಲ್ ಆರೋಪವನ್ನು ಎದುರಿಸುತ್ತಿರುವ ಯಾರೇ ಆದರೂ ಬಿಸಿಸಿಐನ ಪ್ರಧಾನ ಹುದ್ದೆಯಿಂದ ದೂರ ಇರಬೇಕು ಎಂದು ಲೋಧಾ ಸಮಿತಿಯಲ್ಲಿ ಹೇಳಲಾಗಿರುವ ಅಂಶವನ್ನು ನ್ಯಾಯಾಲಯದ ಮುಂದೆ ತಿಳಿಸಿದರು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸದಸ್ಯರು ಮಾತ್ರವಲ್ಲದೆ ಚಾಲಕರು, ಸೇವಕರು ಹಾಗೂ ಮಕ್ಕಳು ಕೂಡ ಸಂಸ್ಥೆಯ ಸದಸ್ಯತ್ವ ಹೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ಸುಬ್ರಹ್ಮಣ್ಯಂ ತಿಳಿಸಿದರು. ರಾಜ್ಯ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ನೀಡಿರುವ ಹಣವನ್ನು ವ್ಯಯ ಮಾಡುತ್ತವೆ. ಆದರೆ ಹಣ ವ್ಯಯ ಮಾಡಿರುವ ಬಗ್ಗೆ ಯಾವುದೇ ಪ್ರಮಾಣ ಪತ್ರಗಳನ್ನು ನೀಡದಿರುವಾಗ ಮತ್ತೆ ಹಣ ಮಂಜೂರಾತಿ ಯಾಕೆ ಮಾಡುತ್ತೀರಿ ಎಂದು ನ್ಯಾಯಾಲಯ ಬಿಸಿಸಿಐ ಪರ ವಕೀಲರಾದ ಕೆ.ಕೆ. ವೇಣುಗೋಪಾಲ್ ಅವರನ್ನು ಪ್ರಶ್ನಿಸಿದೆ. ಇದೇ ವೇಳೆ ಲೋಧಾ ಸಮಿತಿಯ ಶಿಫಾರಸುಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು. ''ಗೋವಾ, ಬಿಹಾರ್, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ, ಅಲ್ಲದೆ ಆ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಸ್ಥಗಿತಗೊಳಿಸಲಾಗಿದೆ,'' ಎಂದು ಬಿಸಿಸಿಐ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
↧
ಲೋಧಾ ವರದಿ ಅನುಷ್ಠಾನ:ತೀರ್ಪು ಕಾಯ್ದಿರಿಸಿದ ಸುಪ್ರೀಂ
↧