ಹೊಸದಿಲ್ಲಿ: ಸಂಸದ ಸುಬ್ರಮಣ್ಯಂ ಸ್ವಾಮಿ ಮಾಡುತ್ತಿರುವ ಟೀಕೆಗಳಿಂದ ಪಕ್ಷ ಮತ್ತು ಸರಕಾರದ ಘನತೆಗೆ ಆಗುತ್ತಿರುವ ಹಾನಿಯನ್ನು ಬಿಜೆಪಿ ಕೊನೆಗೂ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳ ಮತ್ತು ಸಚಿವರ ವಿರುದ್ಧ ಅನಾವಶ್ಯಕ ಹೇಳಿಕೆ ನೀಡದೇ ಬಾಯಿ ಮುಚ್ಚಿಕೊಂಡಿರುವಂತೆ ಸ್ವಾಮಿ ಅವರಿಗೆ ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಆರ್ಬಿಐ ಗವರ್ನರ್ ರಘುರಾಮ್ ರಾಜನ್, ಸರಕಾರದ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ, ಇತರ ಅಧಿಕಾರಿಗಳ ವಿರುದ್ಧ ಟೀಕೆ, ಸಚಿವ ಜೇಟ್ಲಿ ವಿರುದ್ಧ ವ್ಯಂಗ್ಯಭರಿತ ವಾಗ್ಭಾಣಗಳಿಂದ ಸ್ವಾಮಿ ಸರಕಾರಕ್ಕೆ ತೀವ್ರ ಮುಜುಗರದ ಪ್ರಸಂಗ ಸೃಷ್ಟಿಸಿದ್ದರು. ಶಿಸ್ತು ಕ್ರಮ ಬಯಸಿದ್ದ ಜೇಟ್ಲಿ ''ವಿದೇಶ ಪ್ರವಾಸದ ವೇಳೆ ಕೋಟು-ಸೂಟುಗಳಿಂದ ಅಲಂಕೃತರಾದ ನಮ್ಮ ಸಚಿವರು ಹೋಟೆಲ್ ಪರಿಚಾರಕರಂತೆ ಕಾಣುತ್ತಾರೆ,'' ಎಂಬ ಸ್ವಾಮಿ ವಾಗ್ಭಾಣದಿಂದ ತೀವ್ರ ಮನನೊಂದಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ, ಸ್ವಾಮಿ ವಿರುದ್ಧ ಶಿಸ್ತುಕ್ರಮ ಬಯಸಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಅವರು ತಮ್ಮ ಚೀನಾ ಪ್ರವಾಸ ಮೊಟಕುಗೊಳಿಸಿ ಒಂದು ದಿನ ಮುಂಚಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ ಎಂದೂ ಹೇಳಲಾಗಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಪಕ್ಷದ ವರಿಷ್ಠ ಸ್ವಾಮಿ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡು, ಹೇಳಿಕೆ ನೀಡುವಾಗ ಸಂಯಮ ವಹಿಸುವಂತೆ ತಿಳಿ ಹೇಳಿದ್ದಾರೆ ಎನ್ನಲಾಗಿದೆ.
↧
ತೆಪ್ಪಗಿರಲು ಸುಬ್ರಹ್ಮಣ್ಯಂ ಸ್ವಾಮಿಗೆ ಬಿಜೆಪಿ ಸೂಚನೆ?
↧