Quantcast
Channel: VijayKarnataka
Viewing all articles
Browse latest Browse all 6795

ಟ್ಯಾಂಕರ್ ಹಗರಣ: ಕೇಜ್ರಿ, ಶೀಲಾ ವಿಚಾರಣೆ?

$
0
0

ಎಸಿಬಿಯಿಂದ ಎಫ್‌ಐಆರ್ ದಾಖಲು ಬೆದರಿಕೆಗೆ ಬಗ್ಗಲ್ಲ ಎಂದ ದಿಲ್ಲಿ ಸಿಎಂ
ಹೊಸದಿಲ್ಲಿ: ದಿಲ್ಲಿಯ ಜಲಮಂಡಳಿಯಲ್ಲಿ ನಡೆದಿರುವ 400 ಕೋಟಿ ರೂ. ವಾಟರ್ ಟ್ಯಾಂಕರ್ ಹಗರಣ ದಿಲ್ಲಿ ಸಿಎಂ ಕೇಜ್ರಿವಾಲ್ ಹಾಗೂ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಪಾಲಿಗೆ ಹಾವಾಗಿ ಸುತ್ತಿಕೊಳ್ಳುವ ಸಾಧ್ಯತೆಯಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಎಫ್‌ಐಆರ್ ದಾಖಲಿಸಿರುವ ದಿಲ್ಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ತಂಡ, ಕೇಜ್ರಿವಾಲ್ ಹಾಗೂ ಶೀಲಾ ದೀಕ್ಷಿತ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಜಲಸಂಪನ್ಮೂಲ ಸಚಿವ ಕಪಿಲ್ ಮಿಶ್ರಾ ಹಾಗೂ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಅವರ ಕಡೆಯಿಂದ ಎರಡು ದೂರುಗಳು ಬಂದಿವೆ ಎಂದು ಎಸಿಬಿ ವಿಶೇಷ ಆಯುಕ್ತ ಎಂ ಕೆ. ಮೀನಾ ತಿಳಿಸಿದ್ದಾರೆ.

''ದೂರಿನ ಆಧಾರದ ಮೇಲೆ ಐಪಿಸಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಹಲವು ಪರಿಚ್ಛೇದಗಳಡಿ ಎಫ್‌ಐಆರ್ ದಾಖಲಿಸಲಾಗಿದ್ದು, ಅಗತ್ಯಬಿದ್ದರೆ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗುವುದು,'' ಎಂದು ಮೀನಾ ಹೇಳಿದ್ದಾರೆ.

ಬೆದರಿಕೆಗಳಿಗೆ ಬಗ್ಗಲ್ಲ: ಕೇಜ್ರಿವಾಲ್

ಎಫ್‌ಐಆರ್ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

''ಪ್ರಧಾನಿ ಮೋದಿ ಅವರು ಸುಳ್ಳು ದೂರು ಹಾಗೂ ತನಿಖೆಗಳ ಮೂಲಕ ಎಲ್ಲರನ್ನೂ ಬೆದರಿಸುತ್ತಾರೆ. ಆದರೆ, ನಾನು ಇವುಗಳಿಗೆಲ್ಲಾ ಹೆದರುವ ಸ್ವಭಾವದವನಲ್ಲ. ಅವರು ಎಷ್ಟೇ ಎಫ್‌ಐಆರ್‌ಗಳನ್ನು ದಾಖಲಿಸಿದರೂ ಹೀಗೆಯೇ ಮೋದಿ ವಿರುದ್ಧ ನನ್ನ ಧ್ವನಿ ಎತ್ತುತ್ತಲೇ ಇರುತ್ತೇನೆ. ಆದರೆ ಇದನ್ನು ಅವರು ಸಹಿಸುತ್ತಿಲ್ಲ. ಎಲ್ಲಾ ತನಿಖಾ ಸಂಸ್ಥೆಗಳೂ ಮೋದಿ ಅವರ ಹತೋಟಿಯಲ್ಲಿವೆ. ಸಿಬಿಐ, ದಿಲ್ಲಿ ಪೊಲೀಸರ ಬಳಿಕ ಇದೀಗ ಎಸಿಬಿಯನ್ನು ನನ್ನ ಮೇಲೆ ಚೂಬಿಟ್ಟಿದ್ದಾರೆ. ಮೋದಿ ಅವರ ಸಿಬಿಐ, ಎಸಿಬಿಗಳ ಬಗ್ಗೆ ನನಗೆ ಭಯವಿಲ್ಲ,'' ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.

ಎಫ್‌ಐಆರ್ ಮಾಮೂಲಿ ಪ್ರಕ್ರಿಯೆ: ಕಾಂಗ್ರೆಸ್

ಟ್ಯಾಂಕರ್ ಹಗರಣದಲ್ಲಿ ಶೀಲಾ ದೀಕ್ಷಿತ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ಮಾಮೂಲಿ ಪ್ರಕ್ರಿಯೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.''ಯಾವುದೇ ಹಗರಣ ಅಥವಾ ಆರೋಪದ ಸತ್ಯಾಸತ್ಯತೆ ತನಿಖೆಯ ಬಳಿಕ ನಿರ್ಧಾರವಾಗುತ್ತದೆ. ಇದು ತನಿಖೆಯ ಆರಂಭವೇ ಹೊರತು ಅಂತಿಮ ವರದಿಯಲ್ಲ,'' ಎಂದು ಕಾಂಗ್ರೆಸ್ ನಾಯಕ ಚಾಕೊ ಹೇಳಿದ್ದಾರೆ.

ಏನಿದು ಪ್ರಕರಣ

2012ರಲ್ಲಿ ಶೀಲಾ ದೀಕ್ಷಿತ್ ಸಿಎಂ ಆಗಿದ್ದಾಗ, ದಿಲ್ಲಿ ಜಲಮಂಡಳಿ 385 ಸ್ಟೈನ್‌ಲೆಸ್ ಸ್ಟೀಲ್ ನೀರಿನ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದಿತ್ತು. ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ 2015ರ ಜೂನ್‌ನಲ್ಲಿ ಆಪ್ ಸರಕಾರ ಸತ್ಯಶೋಧನಾ ಸಮಿತಿಯನ್ನು ರಚಿಸಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ 400 ಕೋಟಿ ರೂ. ಅಕ್ರಮ ನಡೆದಿದೆ ಎಂದು ಸಮಿತಿ ಕಳೆದ ಆಗಸ್ಟ್‌ನಲ್ಲಿ ಕೇಜ್ರಿವಾಲ್ ಸರಕಾರಕ್ಕೆ ವರದಿ ನೀಡಿತ್ತು. ಅಕ್ರಮದ ಬಗ್ಗೆ ವರದಿ ಹೊರತಾಗಿಯೂ ಟೆಂಡರ್ ರದ್ದುಪಡಿಸದೆ ಸರಕಾರಕ್ಕೆ ಕೇಜ್ರಿವಾಲ್ ನಷ್ಟ ಉಂಟು ಮಾಡಿದ್ದಾರೆ ಎಂಬುದು ಬಿಜೆಪಿ ಆರೋಪ. ಕಳೆದ ತಿಂಗಳು ದಿಲ್ಲಿ ಸರಕಾರ ಈ ವರದಿಯನ್ನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಜಂಗ್ ಅವರಿಗೆ ಕಳುಹಿಸಿದೆ.

ಈ ಮಧ್ಯೆ, ಕೇಜ್ರಿವಾಲ್ ಅವರು ಸಮಿತಿಯ ವರದಿಯನ್ನು 11 ತಿಂಗಳ ಕಾಲ ಮುಚ್ಚಿಟ್ಟಿದ್ದಾರೆ ಎಂದು ಆರೋಪಸಿ ಬಿಜೆಪಿ ಮುಖಂಡ ವಿಜೇಂದರ್ ಗುಪ್ತ ದಿಲ್ಲಿ ಲೆಫ್ಟಿನೆಂಟ್ ಜನರಲ್ ಜಂಗ್ ಅವರಿಗೆ ಪತ್ರ ಬರೆದಿದ್ದರು. ಮತ್ತೊಂದೆಡೆ, ದಿಲ್ಲಿ ಜಲಸಂಪನ್ಮೂಲ ಸಚಿವರೂ ತನಿಖೆ ಆದೇಶಕ್ಕೆ ಒತ್ತಾಯಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ರವಾನಿಸಿದ್ದರು.

ಇದೆಲ್ಲದರ ನಡುವೆ, ಸತ್ಯಶೋಧನಾ ಸಮಿತಿ ವರದಿ ಹಾಗೂ ಗುಪ್ತ ಬರೆದ ಪತ್ರವನ್ನು ಲೆಫ್ಟಿನೆಂಟ್ ಜನರಲ್ ಅವರು ಎಸಿಬಿಗೆ ರವಾನಿಸಿದ್ದು, ತನಿಖೆಗೆ ಸೂಚಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>