ರಣವಿಕ್ರಮ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿ ಪಡೆದಿರುವ ಪುನೀತ್ ರಾಜ್ಕುಮಾರ್ ಮತ್ತು ಅತ್ಯುತ್ತಮ ನಟಿ ಅವಾರ್ಡ್ ತಮ್ಮದಾಗಿಸಿಕೊಂಡಿರುವ ಪರೂಲ್ ಯಾದವ್ ಲವಲವಿಕೆಯ ಜತೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ. - ಪದ್ಮಿನಿ ಎಸ್.ಜೈನ್ ಶನಿವಾರ(ಜೂ.18)ವಷ್ಟೇ 63ನೇ ಬ್ರಿಟಾನಿಯಾ ಫಿಲ್ಮ್ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್ನಲ್ಲಿ ನಡೆಯಿತು. ಈ ಸಮಾರಂಭಕ್ಕೆ ಕನ್ನಡ ಸಿನಿಮಾ ರಂಗ ಕೂಡ ಸಾಕ್ಷಿಯಾಗಿತ್ತು. ಕನ್ನಡಕ್ಕೆ ಈ ಬಾರಿ ಒಟ್ಟು 12 ಪ್ರಶಸ್ತಿಗಳು ಬಂದಿದ್ದು, ಪುನೀತ್ ರಾಜ್ಕುಮಾರ್ ಸತತ ನಾಲ್ಕನೇ ಬಾರಿ 'ಫಿಲ್ಮ್ ಫೇರ್ ಅತ್ಯುತ್ತಮ ನಟ ಅವಾರ್ಡ್'ಗೆ ಭಾಜನರಾದರು. ಈ ಬಾರಿ ಅವರಿಗೆ 'ರಣವಿಕ್ರಮ' ಚಿತ್ರದಲ್ಲಿನ ನಟನೆಗೆ ಪ್ರಶಸ್ತಿ ಬಂದಿದೆ. ಲವಲವಿಕೆಯ ಜತೆ ಈ ಖುಷಿಯನ್ನು ಪುನೀತ್ ಹಂಚಿಕೊಂಡಿದ್ದು ಹೀಗೆ, 'ನಾಲ್ಕನೇ ಬಾರಿ ಫಿಲ್ಮ್ ಫೇರ್ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ನನಗೆ ಬಂದಿದ್ದು ಖುಷಿ ಹೆಚ್ಚಿದೆ. ಜತೆಗೆ ಸ್ಫೂರ್ತಿ ತುಂಬಿದೆ. ಈ ಪ್ರಶಸ್ತಿಯನ್ನು ನಾನು ಎಂದಿನಂತೆ ನನ್ನ ಅಪ್ಪ-ಅಮ್ಮನಿಗೆ ಅರ್ಪಿಸುತ್ತೇನೆ. ಅಲ್ಲದೇ, ಈ ಪ್ರಶಸ್ತಿಗೆ ಕಾರಣರಾದ 'ರಣವಿಕ್ರಮ' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರೂ ಕೂಡ ನನ್ನ ಖುಷಿಯಲ್ಲಿ ಪಾಲಿದೆ' ಅಂತಾರೆ. 'ಒಬ್ಬ ನಟನಿಗೆ ಆತ ನಟಿಸಿದ ಚಿತ್ರವನ್ನು ಜನ ಗುರುತಿಸುವುದೇ ದೊಡ್ಡ ಪ್ರಶಸ್ತಿ. ಅದಕ್ಕಿಂತ ಬೇರೆ ಖುಷಿಯಿಲ್ಲ. ಪ್ರತಿ ಸಿನಿಮಾವೂ ನಮಗೆ ಪರೀಕ್ಷೆ ಇದ್ದ ಹಾಗೆ. ಅಲ್ಲಿ ಗೆದ್ದಾಗ ಸಿಗುವ ಖುಷಿಯೇ ಬೇರೆ. ಈ ಪ್ರಶಸ್ತಿ, ಸನ್ಮಾನಗಳು ನಮ್ಮಲ್ಲಿ ಇನ್ನಷ್ಟು ಹುರುಪು ತುಂಬಲಿಕ್ಕಾಗಿ ಇರುವಂಥವುಗಳು. ಮುಂದಿನ ಚಿತ್ರಗಳಲ್ಲಿ ಇನ್ನೂ ಹೆಚ್ಚು ಶ್ರಮ ಹಾಕಲು ಇವು ಬೂಸ್ಟ್ ಮಾಡುತ್ತವೆ' ಅನ್ನುವುದು ಪುನೀತ್ ಮಾತು. ಆಟಗಾರ ಚಿತ್ರದ ನಟನೆಗಾಗಿ ಮೊದಲ ಬಾರಿಗೆ ಫಿಲ್ಮ್ಫೇರ್ ಪ್ರಶಸ್ತಿ ಪಡೆದಿದ್ದಾರೆ ಪರೂಲ್ ಯಾದವ್. ಮುಂಬೈ ಮೂಲದ ಈ ನಟಿಗೆ, ಕನ್ನಡದಲ್ಲೇ ಶಾಶ್ವತವಾಗಿ ನೆಲೆಯೂರಲು ಪ್ರಶಸ್ತಿ ಪ್ರೇರೇಪಿಸಿದೆಯಂತೆ. 'ಬ್ಲ್ಯಾಕ್ ಲೇಡಿಯನ್ನು ಒಮ್ಮೆಯಾದರೂ ಕೈಯಲ್ಲಿ ಹಿಡಿದುಕೊಳ್ಳಬೇಕು ಅನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ನನ್ನ ಕನಸು ಕೊನೆಗೂ ಈಡೇರಿದೆ. ಈ ಪ್ರಶಸ್ತಿಯನ್ನು ನಾನು ಅಮ್ಮ ಮತ್ತು ಚಿತ್ರತಂಡಕ್ಕೆ ಡೆಡಿಕೇಟ್ ಮಾಡುತ್ತೇನೆ. ಅವರೇ ನನ್ನ ಸಾಧನೆಗೆ ಸ್ಫೂರ್ತಿ. ಅವರ ಅನಾರೋಗ್ಯದ ಕಾಲದಲ್ಲೂ ನನ್ನ ಬೆಂಬಲಕ್ಕೆ ನಿಂತು ಹುರಿದುಂಬಿಸಿದ್ದಾರೆ. ಇತ್ತೀಚೆಗೆ ನಾನು ಹಣಕ್ಕಿಂತಲೂ ನಟನೆಗೆ ಅವಕಾಶ ಇರುವ ಪಾತ್ರಗಳಿಗೆ ಜಾಸ್ತಿ ಪ್ರಾಮುಖ್ಯತೆ ಕೊಡುತ್ತಿದ್ದೇನೆ. ಅದರ ಫಲವಾಗಿ ನನ್ನ ಮನೆಯಲ್ಲಿ ಈಗ ಅವಾರ್ಡ್, ಶೀಲ್ಡ್ಗಳು ತುಂಬಿವೆ. ಈ ಬ್ಲ್ಯಾಕ್ ಲೇಡಿಗಾಗಿ ಬೇರೆಯೇ ಜಾಗ ಮಾಡಿ ಅಲ್ಲಿ ಇಡುತ್ತೇನೆ' ಅಂತಾರೆ ಪರೂಲ್. ಈ ಪ್ರಶಸ್ತಿಗಾಗಿ ಅವರನ್ನು ಗುರುತಿಸಿರುವ ಪ್ರೇಕ್ಷಕರಿಗೂ ಧನ್ಯವಾದ ಹೇಳಿರುವ ಪರೂಲ್, ' ನಾನಿನ್ನೂ ಫಿಲ್ಮ್ ಫೇರ್ ಅವಾರ್ಡ್ ಕ್ಷಣದ ಗುಂಗಿನಿಂದ ಹೊರ ಬಂದಿಲ್ಲ. ಹ್ಯಾಂಗ್ ಓವರ್ ಹಾಗೇ ಇದೆ. ನನ್ನ ಅಮ್ಮ ಇನ್ನೂ ಪ್ರಶಸ್ತಿ ನೋಡಿಲ್ಲ. ಅವರು ಮುಂಬೈನಲ್ಲಿದ್ದಾರೆ. ಪ್ರಶಸ್ತಿ ಸಿಕ್ಕ ತಕ್ಷಣ ಅದರ ಜತೆಗೆ ನಿಂತು ಪೋಟೋ ತೆಗೆದು ಕಳಿಸು ಅಂದರು. ಕಳಿಸಿದ ತಕ್ಷಣವೇ ಅವರು ಹೆಮ್ಮೆಯಿಂದ ಪ್ರತಿಕ್ರಿಯಿಸಿದರು. ಆ ಕ್ಷಣವನ್ನು ನಾನು ಯಾವತ್ತಿಗೂ ಮರೆಯಲ್ಲ' ಅಂತಾರೆ. 63ನೇ ಫಿಲ್ಮ್ಫೇರ್ ಸೌತ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿಮಾ ತಾರೆಯರ ದಂಡೇ ನೆರೆದಿತ್ತು. ಈ ಅದ್ಧೂರಿ ಕ್ಷಣಗಳಿಗೆ ಸಿನಿ ರಂಗದ ಗಣ್ಯರು ಸಾಕ್ಷಿಯಾದರು. ಕನ್ನಡ ಸಿನಿಮಾಗಳ ಪೈಕಿ 'ರಂಗಿತರಂಗ' 4 ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿತು. ಉಳಿದಂತೆ ಕೆಲವು ಸುಂದರ ಕ್ಷಣಗಳು ಸೆರೆಯಾದದ್ದು ಇಲ್ಲಿದೆ... 'ನೆನೆಪೆ ನಿತ್ಯ ಮಲ್ಲಿಗೆ' (ಕೆಂಡಸಂಪಿಗೆ) ಹಾಡಿಗೆ ಜಯಂತ್ ಕಾಯ್ಕಿಣಿ ಅತ್ಯುತ್ತಮ ಗೀತ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಕ್ಷಣ 'ಕರೆಯೋಲೆ...' (ರಂಗಿತರಂಗ)ಗೆ ಧನಿಯಾದ ಇಂಚರಾ ರಾವ್ಗೆ ಬೆಸ್ಟ್ ಫೀಮೇಲ್ ಸಿಂಗರ್ ಪ್ರಶಸ್ತಿ ಸಿಕ್ಕ ಖುಷಿ 'ವಾಸ್ತು ಪ್ರಕಾರ' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಬಾಚಿದ ಹೆಮ್ಮೆಯಲ್ಲಿ ಸುಧಾರಾಣಿ ಅನೂಪ್ ಭಂಡಾರಿ 'ರಂಗಿತರಂಗ' ಚಿತ್ರದ ಮೂಲಕ ಬೆಸ್ಟ್ ಡೈರೆಕ್ಟರ್ ಪಟ್ಟಕ್ಕೇರಿದ್ದು ಸಂಭ್ರಮ ಶ್ರೀಧರ್ಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬ ಸಂಭ್ರಮ ಅತ್ಯುತ್ತಮ ಪೋಷಕ ನಟ ಶೀಲ್ಡ್ 'ರಂಗಿತರಂಗ' ಸಾಯಿಕುಮಾರ್ ಕೈಯಲ್ಲಿ ಹರಿಪ್ರಿಯಾ ತಕಧಿಮಿತ 'ನಾನು ಅವನಲ್ಲ ಅವಳು' ಚಿತ್ರಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಹೆಮ್ಮೆಯಲ್ಲಿ ಸಂಚಾರಿ ವಿಜಯ್
↧
ಫಿಲ್ಮ್ಫೇರ್ ಪ್ರಶಸ್ತಿ ಹೆಮ್ಮೆಯ ಸಂಕೇತ : ಪುನೀತ್ ಮತ್ತು ಪಾರೂಲ್
↧