Quantcast
Channel: VijayKarnataka
Viewing all articles
Browse latest Browse all 6795

ಜಿಗರ್‌ಥಂಡಾ ಪಾತ್ರಕ್ಕೆ ರವಿಶಂಕರ್ ಫಿದಾ

$
0
0

-ಹಾಡು, ನಟನೆ ಇಷ್ಟದ ಕೆಲಸ/ಹಾಡುತ್ತಲೇ ಇರುವಾಸೆ-

ನಟ ರವಿಶಂಕರ್‌ ಈಗ ಹೀರೊ, ಗಾಯಕ, ವಿಲನ್‌, ಕಾಮಿಡಿಯನ್‌ ಎಲ್ಲವೂ ಆಗಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಇವರ 50ನೇ ಕನ್ನಡ ಚಿತ್ರ ಜಿಗರ್‌ ಥಂಡಾ. ಖತರ್‌ನಾಕ್‌ ವಿಲನ್‌ ಮತ್ತು ಕಾಮಿಡಿಯನ್‌ ಆಗಿ ಕಾಣಿಸಿಕೊಂಡಿರುವ ಅವರೊಂದಿಗಿನ ಮಾತುಕತೆ ಇಲ್ಲಿದೆ.

ಪದ್ಮಾ ಶಿವಮೊಗ್ಗ

ಜಿಗರ್‌ ಥಂಡಾ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?

ಸ್ಕ್ರಿಪ್ಟೇ ವಿಶೇಷವಾಗಿದೆ. ಸಾಮಾನ್ಯವಾಗಿ ಹೀರೊ ಓರಿಯೆಂಟೆಂಡ್‌ ಸಿನಿಮಾಗಳನ್ನು ನಾವು ನೋಡುತ್ತೇವೆ. ಈ ಚಿತ್ರದಲ್ಲಿ ವಿಲನ್‌ ಮೇಲೆ ಫೋಕಸ್‌ ಮಾಡಿದ್ದಾರೆ. ತಮಿಳಿನಲ್ಲಿ ಈ ಚಿತ್ರವನ್ನು ನೋಡಿದ ರಜನಿಕಾಂತ್‌ ವಿಲನ್‌ ಕ್ಯಾರೆಕ್ಟರ್‌ ಎಷ್ಟು ಚೆನ್ನಾಗಿದೆ, ನನಗೇ ಹೇಳಿದ್ದರೆ ಮಾಡುತ್ತಿದ್ದೆ ಎಂದಿದ್ದರಂತೆ. ಸುದೀಪ್‌ರಿಗೆ ಅಪ್ರೋಚ್‌ ಮಾಡಿದ್ದ ಪಾತ್ರ. ಅವರು ಮಾಣಿಕ್ಯ ಮಾಡುತ್ತಿದ್ದರಿಂದ ಒಪ್ಪಿಕೊಂಡಿಲ್ಲ. ಅಂಥದ್ದೊಂದು ಪಾತ್ರ ಕನ್ನಡದಲ್ಲಿ ನನಗೆ ಸಿಕ್ಕಿರೋದು ದೊಡ್ಡ ವಿಚಾರ. ವಿಲನ್‌ ಪಾತ್ರವಾಗಿದ್ದರೂ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಇದೇ ಮುಖ್ಯ ಪಾತ್ರ ಅನ್ನಿಸುವ ಹಾಗಿದೆ. ಎಲ್ಲಾ ರಸಗಳಿವೆ. ಖತರ್‌ನಾಕ್‌ ವಿಲನ್‌, ಖತರ್‌ನಾಕ್‌ ಕಾಮಿಡಿಯನ್‌ ಎಲ್ಲಾ ಮಿಕ್ಸ್‌ ಆಗಿರುವ ಪಾತ್ರ ಆರ್ಮುಗಮ್‌ದು. ಈ ಚಿತ್ರದಲ್ಲಿ ಫಸ್ಟ್‌ ಟೈಮ್‌ ಡ್ಯಾನ್ಸ್‌ ಕೂಡಾ ಮಾಡಿದ್ದೇನೆ. ಐಟಂ ಡ್ಯಾನ್ಸ್‌ ಥರ ಇದೆ ಅದು.

ನಿಮ್ಮ 50ನೇ ಚಿತ್ರ ಇದು ಎನ್ನಲಾಗುತ್ತಿದೆ. ಹೇಗನ್ನಿಸುತ್ತಿದೆ?

1991ರಲ್ಲಿ 'ಹಳ್ಳಿ ಕೃಷ್ಣ ಡೆಲ್ಲಿ ರಾಧ' ಚಿತ್ರ ನನ್ನ ಮೊದಲ ಕನ್ನಡ ಚಿತ್ರ. ಬೇರೆಲ್ಲಾ ಭಾಷೆಗಿಂತ ಹೆಚ್ಚು ಕನ್ನಡದಲ್ಲಿ ನಟಿಸಿರೋದು. ಇನ್ನೊಂದು ವಿಶೇಷ ಏನೆಂದರೆ, ಸುದೀಪ್‌ರ 'ಕೆಂಪೇಗೌಡ' ಚಿತ್ರ ನನಗೆ ಬ್ರೇಕ್‌ ಕೊಟ್ಟಿತು. ಈಗ ಕಿಚ್ಚ ಕ್ರಿಯೇಷನ್ಸ್‌ನಲ್ಲೇ 50ನೇ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದು ಕಾಕತಾಳೀಯ. ಇದು ಬಹಳ ಸಂತಸ ಕೊಟ್ಟಿದೆ. ಈ ಸ್ಥಾನದಲ್ಲಿ ಇರೋಕೆ ಕನ್ನಡದ ಪ್ರೇಕ್ಷಕರು ಕಾರಣ. ಇಂಥದ್ದೊಂದು ಅವಕಾಶ ಕೊಟ್ಟು ಈ ಮಟ್ಟಕ್ಕೆ ನನ್ನನ್ನು ಬೆಳೆಸಿದ್ದಾರೆ. ಅಪ್ಪನಾಗಿ, ವಿಲನ್‌ ಆಗಿ, ಕಾಮಿಡಿ ಆಕ್ಟರ್‌ ಆಗಿ ನಾನು ನಟಿಸಿದ್ದೇನೆ.

ಶ್ರೀನಿವಾಸ ರಾಜು ನಿರ್ದೇಶನದ 'ಸುರಭಿ- ಕೇರ್‌ ಆಫ್‌ ಸುಬ್ಬು ಡ್ರಾಮಾ ಕಂಪನಿ' ಚಿತ್ರದ ಮೂಲಕ ಹೀರೊ ಆಗಲಿದ್ದೀರಿ..

ಹೀರೊ ಏನಲ್ಲ. ಒಂದು ಡ್ರಾಮಾ ಕಂಪನಿಯ ಮಾಲೀಕನ ಪಾತ್ರದಲ್ಲಿ ನಾನು ನಟಿಸಲಿದ್ದೇನೆ. ಅವನಿಂದಲೇ ಕತೆ ಸಾಗುತ್ತದೆ. ಹೀರೋಯಿಸಂ ಇಲ್ಲ. ಮುಖ್ಯ ಪಾತ್ರ ಅಂತ ಹೇಳಬಹುದು.

ಪಾತ್ರಕ್ಕೆ ಹೇಗೆ ಪ್ರಿಪೇರ್‌ ಆಗ್ತೀರಾ?

ನನ್ನದು ಬಹಳ ಕಡಿಮೆ. ಸ್ಕ್ರಿಪ್ಟ್‌ ಬರೆಯುವಾಗಲೇ ಪಾತ್ರದ ಸೃಷ್ಟಿ ಆಗಿಬಿಟ್ಟಿರುತ್ತೆ. ರೈಟರ್‌, ನಿರ್ದೇಶಕ ಹೋಂವರ್ಕ್‌ ಮಾಡಿದ ಮೇಲೆ ನನ್ನದು. ಅರ್ಧ ಪ್ರಿಪರೇಷನ್‌ ಅವರೇ ಮಾಡಿರುತ್ತಾರೆ. ಅದನ್ನು ಮಾಡಿ ತೋರಿಸೋದಷ್ಟೇ ನನ್ನ ಕೆಲಸ. ನನಗೆ ಬೇರೆ ಯಾವ ರೀತಿ ಪಾತ್ರ ಕ್ರಿಯೇಟ್‌ ಮಾಡಬಹುದು ಅಂತ ಯೋಚಿಸೋಕೆ ಶುರು ಮಾಡಿದ್ದಾರೆ. ಇದು ದೊಡ್ಡ ವಿಚಾರ ಅಲ್ವಾ?

ಜಿಗರ್‌ ಥಂಡಾದಲ್ಲಿ ಒಂದು ಹಾಡನ್ನೂ ಹಾಡಿದ್ದೀರಿ..

ನಾನು ಶಾಸ್ತ್ರೀಯ ಸಂಗೀತ ಕಲಿತವನು. ಮಧ್ಯದಲ್ಲಿ ಬಿಟ್ಟಿದ್ದೆ. ಹಾಡೋದು ನನಗೆ ಇಷ್ಟದ ಕೆಲಸ. ಯಾವಾಗಲೂ ಹಾಡಿಕೊಂಡೇ ಇರುತ್ತೇನೆ. ಜಿಗರ್‌ ಥಂಡಾದಲ್ಲಿ ಹಾಡೋಕೆ ಅವಕಾಶ ಸಿಕ್ಕಿತು. ಮುಂದೆಯೂ ಹಾಡುತ್ತಾ ಇರೋಕೆ ಬಯಸುತ್ತೇನೆ.

ಜಿಗರ್‌ ಥಂಡಾ ಚಿತ್ರ ಯಾಕೆ ನೋಡಬೇಕು ಅಂತ ಹೇಳ್ತೀರಿ?

ಈಗ ಕನ್ನಡ ಇಂಡಸ್ಟ್ರಿಯಲ್ಲಿ ಟ್ರೆಂಡ್‌ ಬದಲಾಗಿದೆ. 'ಬಾಹುಬಲಿ'ಯಂಥ ಚಿತ್ರದೆದುರು 'ರಂಗಿತರಂಗ' ಗೆದ್ದಿದೆ. ಮಾಲ್‌ಗೆ ಹೋಗಿದ್ದಾಗ ಥಿಯೇಟರ್‌ ಎದುರು ಜನ ಕಿಕ್ಕಿರಿದು ತುಂಬಿದ್ರು. ನಾನು ಬಾಹುಬಲಿಗೆ ಅಂದುಕೊಂಡು ಬೇಸರಪಟ್ಟುಕೊಂಡೆ. ಆಮೇಲೆ ನೋಡಿದರೆ ಎಲ್ಲಾ ರಂಗಿತರಂಗಕ್ಕೆ ಹೋದರು. ಬಹಳ ಖುಷಿಯಾಯ್ತು. ಒಳ್ಳೆಯ ಚಿತ್ರಗಳು ಬರುತ್ತಿವೆ. ಜಿಗರ್‌ ಥಂಡಾ ಚಿತ್ರವೂ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತೆ. ಹೊಸ ಥರ ಇದೆ.

ನೆಗೆಟಿವ್‌ ಕ್ಯಾರೆಕ್ಟರ್‌ಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅನ್ನಿಸೋಲ್ವಾ?

ಇಲ್ಲ.. ಹಾಗಿಲ್ಲ. ಜಿಗರ್‌ ಥಂಡಾ ಚಿತ್ರದಲ್ಲಿ ಬಹಳ ಟ್ವಿಸ್ಟ್‌ಗಳಿವೆ. ಆ ಚಿತ್ರ ನೋಡಿದ ಮೇಲೆ ನಿಮಗೆ ಗೊತ್ತಾಗುತ್ತೆ. ಕೆಲವು ವಿಲನ್‌ ಪಾತ್ರಗಳು, ಇನ್ನು ಕೆಲವು ಪಾತ್ರಗಳು ಸಿಚ್ಯುಯೇಷನ್‌ಗೆ ವಿಲನ್‌ ಆಗುತ್ತವೆ. ಇಂಥ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ.

ಇದುವರೆಗೆ ನಿಮಗೆ ಬಹಳ ಇಷ್ಟವಾದ ಪಾತ್ರ ಯಾವುದು?

ನನ್ನ ಲೈಫ್‌ ಟೈಮ್‌ ಕ್ಯಾರೆಕ್ಟರ್‌ ಕೆಂಪೇಗೌಡ ಚಿತ್ರದ ಆರ್ಮುಗಂ. ಹಾರ್ಟ್‌ಗೆ ತುಂಬಾ ಹತ್ತಿರ ಇರೋ ಪಾತ್ರ. ಎಂದೂ ಮರೆಯೋಲ್ಲ. ಅಲ್ಲಿಂದಲೇ ನನ್ನ ಕರಿಯರ್‌ ತಿರುವು ಪಡೆದುಕೊಂಡಿದ್ದು. ಈಗಲೂ ಎಲ್ಲರೂ ನನ್ನನ್ನು ಅದೇ ಹೆಸರಿನಿಂದ ಗುರುತಿಸುತ್ತಾರೆ. ಎಂದೆಂದಿಗೂ ನನ್ನ ಮೆಚ್ಚಿನ ಪಾತ್ರ ಅದೇ. ಇನ್ನೊಂದು 'ಅಧ್ಯಕ್ಷ' ಚಿತ್ರದ ಪಾತ್ರ. ನಾನು ವಿಲನ್‌ ಆಗಿಯೂ ಕಾಮಿಡಿ ಮಾಡಬಲ್ಲೆ ಎಂದು ಮೊದಲ ಬಾರಿಗೆ ತೋರಿಸಿದ್ದು. ಇದು ಬಂದ ಮೇಲೆ ಬೇರೆ ಥರದ ಪಾತ್ರ ಸಿಗತೊಡಗಿತು. ಇಂಥ ಪಾತ್ರಗಳು ಸಿಗುತ್ತೆ ಅಂತ ಮೊದಲೇ ಗೊತ್ತಿದ್ದರೆ 20 ವರ್ಷ ಮೊದಲೇ ಕನ್ನಡ ನಾಡಿಗೆ ಬಂದುಬಿಡುತ್ತಿದ್ದೆ. ಎಲ್ಲಾ ಕಡೆ ಅಲೆದಾಡಿ ಕೊನೆಗೆ ಇಲ್ಲಿ ಬಂದೆ. ನೆಲೆ ನಿಂತೆ.

ಯಾವ ರೀತಿಯ ಚಿತ್ರಗಳಲ್ಲಿ ಮುಂದೆ ನಟಿಸುವಾಸೆ?

ಹೊಸ ಜಾನರ್‌ ಚಿತ್ರಗಳು ಹೆಚ್ಚು ಬರಬೇಕು. ಹಿಂದಿಯ 'ವೆಡ್ನೆಸ್ಡೇ' ಚಿತ್ರದಲ್ಲಿ ಅಷ್ಟು ವಯಸ್ಸಾಗಿರೋ ನಾಸಿರುದ್ದೀನ್‌ ಶಾ, ಅನುಪಮ್‌ ಖೇರ್‌ ನಟಿಸಿರೋ ಪಾತ್ರಗಳೇ ಹೀರೊ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ರಕ್ಷಿತ್‌ ಹೀರೊ ಆದರೂ ಅನಂತ್‌ ನಾಗ್‌ ಕೂಡಾ ಹೀರೊ. ಇಂಥ ಚಿತ್ರಗಳು ಬರಬೇಕು.

ಈಗ ಯಾವ ಚಿತ್ರಗಳು ನಿಮ್ಮ ಕೈಯಲ್ಲಿದೆ?

ಕೋಟಿಗೊಬ್ಬ 2, ಮುಂಗಾರು ಮಳೆ 2, ದೊಡ್ಮನೆ ಹುಡುಗ, ನಟರಾಜ ಸರ್ವಿಸ್‌, ಕ್ರೇಜಿ ಸ್ಟಾರ್‌, ಉಪೇಂದ್ರ ಮತ್ತು ಸುದೀಪ್‌ ಅಭಿನಯದ ಮುಕುಂದ ಮುರಾರಿ, ಹೆಬ್ಬುಲಿ ಚಿತ್ರಗಳು ಕೈಯಲ್ಲಿವೆ. ಇನ್ನೂ ಕೆಲವು ಚಿತ್ರಗಳ ಮಾತುಕತೆ ನಡೆದಿದೆ.

ನೀವು ಕಾಯುತ್ತಿರುವ ಕನಸಿನ ಪಾತ್ರ ಯಾವುದು?

ಪೌರಾಣಿಕ ಚಿತ್ರಗಳು ನನಗೆ ಬಹಳ ಇಷ್ಟ. ಸಿಗೋದು ಕಷ್ಟ. ಯಾರಾದ್ರೂ ಇಂಥ ಸಿನಿಮಾ ಮಾಡಲಿ ಅಂತ ಆಸೆ ಇದೆ.

ನೀವು ಮೊದಲು ಇಂಥ ಪಾತ್ರ ಮಾಡಿದ್ದೀರಾ?

ತೆಲುಗಿನಲ್ಲಿ 'ಡಮರುಗಂ' ಚಿತ್ರದಲ್ಲಿ ರಾಕ್ಷಸನೊಬ್ಬ ಭೂಲೋಕಕ್ಕೆ ಬರೋ ಪಾತ್ರ ಮಾಡಿದ್ದೇನೆ. ನಾಟಕಗಳಲ್ಲಿ ತುಂಬಾ ನಟಿಸಿದ್ದೇನೆ. ನೋಡೋಣ. ಮುಂದೆ ಅವಕಾಶ ಬರಬಹುದು.

---

ಪೌರಾಣಿಕ ಚಿತ್ರಗಳಲ್ಲಿ ದುರ್ಯೋದನ, ಕಂಸ, ಹಿರಣ್ಯಕಶಿಪು ಪಾತ್ರಗಳಲ್ಲಿ ನಟಿಸಬೇಕು ಅಂತ ತುಂಬಾ ಆಸೆ. ಡೈಲಾಗ್‌ಗಳು, ಭಂಗಿ ಎಲ್ಲಾ ಅದ್ಭುತ. ಅದು ಜೀವನದಲ್ಲಿ ಒನ್‌ ಟೈಮ್‌ ಅವಕಾಶ ಆಗಿರುತ್ತೆ.

-ರವಿಶಂಕರ್‌, ನಟ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>