ಬಾಗಿಲ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ನಡೆದ ಘಟನೆ ಬೆಂಗಳೂರು : ಚಲಿಸುತ್ತಿದ್ದ ರೈಲಿನ ಬಾಗಿಲಲ್ಲಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗಲೇ ಕೆಳಗೆ ಬಿದ್ದು ಮುಖ್ಯ ಪೇದೆಯೊಬ್ಬರು ಸಾವಿಗೀಡಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಯಶವಂತಪುರದಿಂದ ತುಮಕೂರಿಗೆ ಹೊರಟಿದ್ದ ಗೋವಿಂದರಾಜು ಮೃತ ಪೇದೆ. ಯಶವಂತಪುರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಮಂಗಳವಾರ ಕೆಲಸ ಮುಗಿಸಿ ರೈಲಿನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗೋಲಗುಂಬಜ್ ರೈಲಿನ ಬಾಗಿಲಿನಲ್ಲಿ ನಿಂತಿದ್ದ ಗೋವಿಂದರಾಜು ಮುತ್ಯಾಲನಗರ ರೈಲ್ವೇ ಟ್ರ್ಯಾಕ್ ಬಳಿ ಆಯತಪ್ಪಿ ಕೆಳಗೆ ಬಿದ್ದರು. ಬಿದ್ದ ರಭಸಕ್ಕೆ ತಲೆ ಮತ್ತು ಎದೆ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ಆಸ್ಪತ್ರೆಗೆ ದಾಖಲಿಸುವ ಮೊದಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 20 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗೋವಿಂದರಾಜು ಕೋರ್ಟ್ ವಾರಂಟ್ ವಿತರಿಸುವ ಜವಾಬ್ದಾರಿ ನಿಭಾಯಿಸುತ್ತಿದ್ದರು. ನಿತ್ಯ ದಾಬಸ್ಪೇಟೆಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇವರಿಗೆ ಮೂವರು ಪುತ್ರರಿದ್ದಾರೆ. ಹಿರಿಯ ಮಗ ದಿಲ್ಲಿಯಲ್ಲಿ ಐಎಎಸ್ ಓದುತ್ತಿದ್ದು ಉಳಿದವರಿಬ್ಬರು ತುಮಕೂರಿನಲ್ಲೇ ಓದುತ್ತಿದ್ದಾರೆ ಎಂದು ಹತ್ತಿರದ ಸಂಬಂಧಿ ರಾಜು ಮಾಧ್ಯಮಗಳಿಗೆ ತಿಳಿಸಿದರು. ಯಶವಂತಪುರ ರೈಲ್ವೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಶವಪರೀಕ್ಷೆಗೆ ಒಳಪಡಿಸಿದ ನಂತರ ಕುಟುಂಬಸ್ಥರಿಗೆ ವರ್ಗಾಯಿಸಲಾಗಿದೆ. ಜೀವ ತೆಗೆದ ಫೋನ್ ಕರೆ ಗೋಲಗುಂಬಜ್ ರೈಲಿನಲ್ಲಿ ಕುಳಿತಿದ್ದ ಗೋವಿಂದರಾಜು ಅವರಿಗೆ ಮುತ್ಯಾಲನಗರ ಬಳಿ ಬಂದಾಗ ಫೋನ್ ಕರೆ ಬಂದಿತು. ಕರೆ ಸ್ವೀಕರಿಸಿದ ಅವರು ಮಾತನಾಡಲು ಯತ್ನಿಸಿದರಾದರೂ ಸಿಗ್ನಲ್ ಕಡಿಮೆ ಇದ್ದ ಕಾರಣ ಮೊಬೈಲ್ ಅನ್ನು ಕಿವಿಯಲ್ಲೇ ಇಟ್ಟುಕೊಂಡು ಬಾಗಿಲಿಗೆ ಬಂದಿದ್ದಾರೆ. ಬಾಗಿಲಲ್ಲೇ ನಿಂತು ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದರು ಎಂದು ರೈಲ್ವೆಅಧಿಕಾರಿಗಳು ತಿಳಿಸಿದರು.
↧
ರೈಲಿನಿಂದ ಬಿದ್ದು ಪೇದೆ ಸಾವು
↧