-ಪದ್ಮಾ ಶಿವಮೊಗ್ಗ
ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಕತೆ ಬರೆದು ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ ಯು ಟರ್ನ್. ಸಸ್ಪೆನ್ಸ್ ಥ್ರಿಲ್ಲರ್ ಕತೆಗೆ ಹಾರರ್ ಲಿಂಕ್ ಕೊಟ್ಟಿರುವ ಈ ಸಿನಿಮಾ ಟ್ವಿಸ್ಟ್ಗಳಿಂದ ರೋಚಕವಾಗಿ ಸಾಗುತ್ತದೆ. ಆದರೆ, ಕೊನೆಗೆ ಅತಾರ್ಕಿಕವಾಗಿ ಕತೆಯನ್ನು ಕನ್ಕ್ಲೂಡ್ ಮಾಡಲಾಗಿದ್ದು, ಎಕ್ಸೈಟ್ಮೆಂಟ್ನ ಪೀಕ್ಗೆ ಹೋದ ಪ್ರೇಕ್ಷಕನನ್ನು ಮೇಲಿಂದ ಕೆಳಗೆ ರಪ್ಪನೆ ಎಸೆದಂತಾಗುತ್ತದೆ.
ರಚನಾ (ಶ್ರದ್ಧಾ ಶ್ರೀನಾಥ್) ಟ್ರೈನಿ ಜರ್ನಲಿಸ್ಟ್. ಎಕ್ಸ್ಕ್ಲೂಸಿವ್ ರಿಪೋರ್ಟ್ ಬರೆದು ಕೆಲಸ ಪರ್ಮನೆಂಟ್ ಮಾಡಿಕೊಳ್ಳಬೇಕೆಂಬ ಹವಣಿಕೆಯಲ್ಲಿರುತ್ತಾಳೆ. ಫ್ಲೈಓವರ್ ಮೇಲೆ ಕಾನೂನು ಬಾಹಿರವಾಗಿ ಡಿವೈಡರ್ ಕಲ್ಲುಗಳನ್ನು ಪಕ್ಕಕ್ಕೆ ಸರಿಸಿ ಯು ಟರ್ನ್ ತೆಗೆದುಕೊಳ್ಳುವವರ ಕುರಿತು ಸಾಮಾಜಿಕ ಕಳಕಳಿಯಿಂದ ಲೇಖನ ಬರೆದು ಜಾಗೃತಿ ಮೂಡಿಸುವ ಪ್ರಯತ್ನದಲ್ಲಿರುತ್ತಾಳೆ. ಇಂಥವರ ಬಗ್ಗೆ ಮಾಹಿತಿ ಕಲೆಹಾಕುವಾಗ ವಿಚಿತ್ರವಾದ ಸಾವಿನ ಕೇಸ್ನಲ್ಲಿ ಸಿಕ್ಕಿಕೊಳ್ಳುತ್ತಾಳೆ. ಫ್ಲೈ ಓವರ್ ಮೇಲೆ ಯು ಟರ್ನ್ ತೆಗೆದುಕೊಂಡವರೆಲ್ಲಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗುತ್ತದೆ. ಮುಂದೆಯೂ ಈ ರೀತಿ ಸಾಯುವವರನ್ನು ತಡೆಯಲು ಹೋಗಿ ತಾನೇ ಈ ಭಯಾನಕ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾಳೆ. ಪೊಲೀಸ್ ಇನ್ವೆಸ್ಟಿಗೇಷನ್ ಆಫೀಸರ್ ನಾಯಕ್ (ರೋಜರ್ ನಾರಾಯಣ್) ಅವರ ಸಹಾಯ ಪಡೆಯುತ್ತಾಳೆ. ಇದರ ನಡುವೆ ತಾನು ಇಷ್ಟಪಡುವ ಸಹೋದ್ಯೋಗಿ ಆದಿತ್ಯನನ್ನೂ ತನಗರಿವಿಲ್ಲದೆ ಸಿಕ್ಕಿಸುತ್ತಾಳೆ. ಕೊನೆಗೆ ಈ ಎಲ್ಲಾ ಸಾವಿಗೆ ಏನು ಕಾರಣ? ಅದು ಆತ್ಮಹತ್ಯೆಯಾ, ಕೊಲೆಯಾ? ಇನ್ನಷ್ಟು ಸಾವುಗಳು ಸಂಭವಿಸುವುದನ್ನು ರಚನಾ ತಪ್ಪಿಸುತ್ತಾಳಾ? ಎನ್ನುವುದನ್ನು ಸಿನಿಮಾದಲ್ಲಿ ನೋಡಿ.
ನೈಜ ಘಟನೆಯನ್ನಾಧರಿಸಿದ ಚಿತ್ರ ಎಂದು ಹೇಳಲಾಗಿದೆ. ಅದಕ್ಕೆ ತಕ್ಕಂತೆ ರಿಯಲಿಸ್ಟಿಕ್ ಆದ ದೃಶ್ಯಗಳು, ಸಂಭಾಷಣೆ, ಎಲ್ಲರ ಅಭಿನಯ, ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಹೋಗುವ ತಿರುವುಗಳು ಪ್ರೇಕ್ಷಕನನ್ನು ತನ್ನೊಳಗೆ ಒಳಗೊಳ್ಳುತ್ತಾ ಥ್ರಿಲ್ ಕೊಡುತ್ತದೆ. ಗಟ್ಟಿಯಾದ ಸ್ಕ್ರೀನ್ ಪ್ಲೇ ಮನಸ್ಸನ್ನು ಸೆಳೆಯುತ್ತದೆ. ಆದರೆ, ಕೊನೆಯ 20 ನಿಮಿಷ ಇಡೀ ಚಿತ್ರದ ಇಂಟೆನ್ಸಿಟಿಯನ್ನು ಹಾಳುಮಾಡಿದೆ. ಕತೆಯ ಆತ್ಮಕ್ಕೆ ಪವನ್ ನೀಡಿರುವ ರೂಪ ಟೊಳ್ಳೆನಿಸುತ್ತದೆ. ಮೆಸೇಜ್ ಕೊಡಲು ಹೋಗಿ ಮಕ್ಕಳಿಗೆ ಗುಮ್ಮನ ಕತೆ ಹೇಳಿದಂತಾಗಿದೆ.
ಪ್ರಾರಂಭದಿಂದಲೂ ಸೈಂಟಿಫಿಕ್ ಫಿಕ್ಷನ್ ಇರಬಹುದಾ ಎಂಬ ಭಾವನೆಯಲ್ಲಿ ಫ್ಲೈ ಓವರ್ ಹತ್ತುವ ಪ್ರೇಕ್ಷಕನಿಗೆ ಯು ಟರ್ನ್ ಹೊಡೆದು ಟೈರ್ ಪಂಕ್ಚರ್ ಆದ ಅನುಭವ ನೀಡುತ್ತದೆ. ಕತೆಗೆ ಗಟ್ಟಿಯಾದ, ತರ್ಕಬದ್ಧವಾದ ಅಂತ್ಯ ಕೊಡಲು ಸಾಧ್ಯವಾಗದೆ ನಿರ್ದೇಶಕ ಸೋತಿದ್ದಾನೆ. ಪ್ರತಿಯೊಂದು ದೃಶ್ಯವನ್ನೂ ಬಹಳ ಬುದ್ಧಿವಂತಿಕೆಯಿಂದ ಕಟ್ಟಿಕೊಟ್ಟವರು ಕತೆಯಲ್ಲಿ ಸೋತಿದ್ದು ನಿರಾಶೆಯನ್ನುಂಟು ಮಾಡುತ್ತದೆ. ಅಲೌಕಿಕ ಶಕ್ತಿಯೇ ರೋಚಕವಾದದ್ದು ಎಂದುಕೊಂಡರೋ ಏನೋ..! ಕೊನೆಯಲ್ಲಿ ಒಂದೇ ಒಂದು ಹಾಸ್ಯಾಸ್ಪದ ದೃಶ್ಯ ಇಡೀ ಚಿತ್ರವನ್ನು ದುರ್ಬಲಗೊಳಿಸಿದಂತಾಗಿದೆ. ಇದು ಬಿಟ್ಟು ಬೇರೆ ಆಯಾಮ ಕೊಟ್ಟಿದ್ದರೆ ವಿಶೇಷ ಚಿತ್ರವಾಗುತ್ತಿತ್ತು.
ಶ್ರದ್ಧಾ ಮೊದಲ ಚಿತ್ರದಲ್ಲೇ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಗೆಳೆಯನಾಗಿ ದಿಲೀಪ್ ರಾಜ್, ಪೊಲೀಸ್ ಆಫೀಸರ್ ಆಗಿ ರೋಜರ್ ನಾರಾಯಣ್, ರಾಧಿಕಾ ಚೇತನ್ ಸೇರಿದಂತೆ ಉಳಿದ ನಟರೆಲ್ಲರೂ ಅತ್ಯುತ್ತಮ, ಸಹಜ ಅಭಿನಯ ನೀಡಿದ್ದಾರೆ. ಛಾಯಾಗ್ರಹಣವೂ ಹೊಸ ಅನುಭವ ನೀಡುತ್ತದೆ. ತಾಂತ್ರಿಕ ಅಂಶಗಳೂ ಪ್ಲಸ್ ಪಾಯಿಂಟ್. ಕತೆ ಏನಾದರೂ ಆಗಿರಲಿ, ಸ್ವಲ್ಪ ಹೊತ್ತು ಥ್ರಿಲ್ ಅನುಭವಿಸೋಣ, ಮೇಕಿಂಗ್ ಎಂಜಾಯ್ ಮಾಡೋಣ ಎನ್ನುವವರು ಒಮ್ಮೆ ಚಿತ್ರ ನೋಡಬಹುದು.
ಚಿತ್ರ: ಯು ಟರ್ನ್ (ಕನ್ನಡ)