* ಪದ್ಮಿನಿ ಜೈನ್ ಎಸ್.
ಗಂಡ-ಹೆಂಡತಿಯ ಜಗಳ ಉಂಡು ಮಲಗೋವರೆಗೆ ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹೊಸ ಚಿತ್ರದಲ್ಲಿ ಮತ್ತೆ ತೋರಿಸಿದ್ದಾರೆ. ಹಿತವಾದ ಕತೆ, ನವಿರಾದ ನಿರೂಪಣೆಯಲ್ಲಿ ಸಿದ್ಧಹಸ್ತರಾದ ಅವರು ಮತ್ತೊಮ್ಮೆ ತುಂಬು ಕುಟುಂಬಕ್ಕೆ ಇಷ್ಟವಾಗುವ ಚಿತ್ರವೊಂದನ್ನು ಕೊಟ್ಟಿದ್ದಾರೆನ್ನಬಹುದು.
ಪತಿಯಿಂದ ದೂರವಾಗುವ ಮುಂಗೋಪಿ ಪತ್ನಿ, ಹಾಗೆಯೇ ಪತ್ನಿ ತನ್ನಿಂದ ಶಾಶ್ವತವಾಗಿ ದೂರವಾಗುವಳು ಎಂಬ ತಪ್ಪು ಕಲ್ಪನೆಯ ಗಂಡ, ಈ ನಡುವೆ ತುಂಟ ಪತಿಯ ಮನಸ್ಸು ಗೆಲ್ಲುವ ಇನ್ನೊಬ್ಬ ಮುದ್ದು ಪೋರಿ, ಚಿತ್ರದ ಮೂರು ಮುಖ್ಯ ಪಾತ್ರಗಳು.
ಡಾ.ಆಕರ್ಷ್ ಹಾಗೂ ಆತನ ಪತ್ನಿ ಅದಿತಿ ಸಂಸಾರದಲ್ಲಿ ಬಿರುಕು ಮೂಡುತ್ತದೆ. ಸಣ್ಣ ವಿಷಯಕ್ಕೆ ಜಗಳವಾಡಿ ಅದಿತಿ ದೂರವಾಗುತ್ತಾಳೆ. ಮಂಕಾಗುವ ಆಕರ್ಷ್ ಬಾಳಿನಲ್ಲಿ ಮತ್ತೆ ಹುರುಪು ತುಂಬುವುದು ಮಲೆನಾಡಿನ ಬೆಡಗಿ ಅಚ್ಚರಿ. ಆದರೆ ಈ ಅಚ್ಚರಿಯನ್ನು ಆಕರ್ಷ್ನ ಜತೆ ಕಂಡ ಅದಿತಿಗೆ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚು. ಪೊಸೆಸಿವ್ನೆಸ್ನಿಂದ ಮತ್ತೆ ಆತನಿಗೆ ಹತ್ತಿರವಾಗುತ್ತಾಳೆ. ಆತನಿಗಾಗಿ ಸಂಪೂರ್ಣ ಬದಲಾಗುತ್ತಾಳೆ. ಹೀಗಾಗಿ ಇಲ್ಲಿ ಎರಡು ದೋಣಿಗಳಲ್ಲಿ ಒಟ್ಟಿಗೆ ಪಯಣಿಸಬೇಕಾದ ಆಕರ್ಷ್ಗೆ ಪೀಕಲಾಟ. ಯಾವ ದೋಣಿಯನ್ನು ಮುಳುಗಿಸಲಿ, ಯಾವುದನ್ನು ದಡಕ್ಕೆ ಸೇರಿಸಲಿ ಎಂಬ ಒದ್ದಾಟವೇ ಕತೆ. ಉಳಿದಂತೆ ಕ್ಲೈಮಾಕ್ಸ್ಲ್ಲಿ ನಾಯಕಿಯೊಬ್ಬಳ ಸಾವು ಪ್ರೇಕ್ಷಕರ ಕಣ್ಣ ಹನಿ ತರಿಸುತ್ತದೆ. ಕೊನೆಗೆ ಆಕರ್ಷ್ನ ಆಯ್ಕೆ ಯಾರು? ಸತ್ತ ನಾಯಕಿ ಯಾರು? ಎಂಬುದಕ್ಕೆ ಉತ್ತರ ಕೇಳುವ ಬದಲು 'ಇಷ್ಟಕಾಮ್ಯ' ನೋಡಬೇಕು.
ಮದುವೆ, ಡಿವೋರ್ಸ್, ಲಿವ್ ಇನ್ ರಿಲೇಷನ್ಗಳ ಬಗ್ಗೆ ಕೆಲ ಚಿತ್ರಗಳು ಈಗಾಗಲೇ ಬಂದಿವೆ. ಹಾಗಿದ್ದರೂ 'ಇಷ್ಟಕಾಮ್ಯ' ಬೋರ್ ಮಾಡಲ್ಲ. ಚಿತ್ರವನ್ನು ವೀಕ್ಷಿಸುವಾಗ ದೃಶ್ಯಕಾವ್ಯವನ್ನೇ ನೋಡಿದಷ್ಟು ಹಿತವೆನಿಸುತ್ತದೆ. ಮಲೆನಾಡ ಸೊಬಗು ಅಷ್ಟು ಸೊಗಸಾಗಿ ತೆರೆ ಮೇಲೆ ಮೂಡಿದೆ.
ಇನ್ನು ಹಾಡುಗಳು ಮಧುರವಾಗಿವೆ. ಚಿತ್ರ ಮಂದಿರದಿಂದ ಹೊರ ಬರುವ ಪ್ರೇಕ್ಷಕನನ್ನು 'ಧಂ ಧಂ ಧಂದರಂ' ಎಂದು ಗುನುಗಿಸುವಲ್ಲಿ ಅಜನೀಶ್ ಲೋಕನಾಥ್ ಗೆಲ್ಲುತ್ತಾರೆ. ಇಬ್ಬರು ನಾಯಕಿಯರ ಜತೆ ಆಕರ್ಷ್ನ ಸರಸ ಎಲ್ಲೂ ಲಕ್ಷ್ಣಣ ರೇಖೆ ದಾಟಿಲ್ಲ. ನವಿರಾದ ಶೃಂಗಾರ, ಹಾಸ್ಯ ಫ್ಯಾಮಿಲಿ ಆಡಿಯನ್ಸ್ಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ನಾಗತಿಹಳ್ಳಿ ಮೇಷ್ಟ್ರು ಬೋರ್ ಮಾಡದೇ ಪ್ರೇಮ ಮತ್ತು ದಾಂಪತ್ಯ ಪಾಠ ಮಾಡಿದ್ದಾರೆನ್ನಬಹುದು.
ಸಂಗೀತ ಹಾಗೂ ಸಾಹಿತ್ಯದಂತೆ ಕೊರಿಯೋಗ್ರಫಿ ಚೆನ್ನಾಗಿರಬೇಕಿತ್ತು. ವಿಜಯ್ ನಟನೆ ಇನ್ನಷ್ಚು ತೀವ್ರವಾಗಿದ್ದಿದ್ದರೆ ಚಿತ್ರದ ಶಕ್ತಿ ಹೆಚ್ಚುತ್ತಿತ್ತು. ಮೊದಲಾರ್ಧದಲ್ಲಿ ಆಕರ್ಷ್ ಲೇಡಿ ಫ್ಯಾನ್ಸ್ಗೆ ಇಷ್ಟವಾಗುತ್ತಾರೆ. ಮಯೂರಿ, ಕಾವ್ಯಾ ಇಷ್ಟವಾಗುತ್ತಾರೆ.
ಚಿತ್ರದೊಳಗೆ ಉಪಕತೆಯಾಗಿ ಬರುವ ಬಿ.ಜಯಶ್ರೀ ಚಿತ್ರದ ಮುಖ್ಯ ಕತೆಗೆ ಹೇಗೆ ಲಿಂಕ್ ಆಗುತ್ತಾರೆ ಎಂಬುದೇ ಪ್ರಶ್ನೆ. ಹಾಗೆಯೇ ಚಿಕ್ಕಣ್ಣ ಕಚಗುಳಿ ಇಡುತ್ತಾರೆ. ಮೂಲ ಕತೆಯ ಜತೆ ಯಾವ ಲಿಂಕೂ ಇಲ್ಲದ ಮಂಡ್ಯ ರಮೇಶ್ ಮಿಂಚಿ ಮರೆಯಾಗುತ್ತಾರೆ. ರಂಗಾಯಣ ರಘು ಕಾಮಿಡಿ ಚೆನ್ನಾಗಿದೆಯಾದರೂ ಕೊಂಚ ಏಕತಾನತೆ ಕಾಣುತ್ತೆ. ಇತ್ತೀಚಿನ ಅಬ್ಬರದ ಚಿತ್ರಗಳ ನಡುವೆ ಮೇಷ್ಟ್ರು ತಣ್ಣನೆಯ ಚಿತ್ರ ಕೊಟ್ಟಿದ್ದಾರೆ. ಒಟ್ಟಾರೆಗೆ ಬಿಲ್ಡ್ ಅಪ್, ಸ್ಟಂಟ್, ಬ್ಲಡ್, ಭಾರೀ ಸೌಂಡಿನ ಡೈಲಾಗ್ಗಳ ಹಾವಳಿ ಇಲ್ಲದೆ ನೆಮ್ಮದಿಯಾಗಿ ಚಿತ್ರ ನೋಡಬೇಕು ಎನ್ನುವವರಿಗೆ ಈ ವಾರಾತ್ಯದ ಆಯ್ಕೆ 'ಇಷ್ಟಕಾಮ್ಯ' ಆಗಿರಲಿ.
ಕನ್ನಡ ಚಿತ್ರ