Quantcast
Channel: VijayKarnataka
Viewing all articles
Browse latest Browse all 6795

ತಿಥಿ ವಿಮರ್ಶೆ: ಇದೊಂದು ಮಿಸ್ ಮಾಡಲೇಬಾರದ ಚಿತ್ರ

$
0
0

ಕನ್ನಡ ಚಿತ್ರ


* ಶಶಿಧರ ಚಿತ್ರದುರ್ಗ
ಸಿನಿಮಾ ಏಕೆ ನೋಡ್ಬೇಕು? ಮನರಂಜನೆಗೆ, ಟೈಂ ಪಾಸ್‌ಗೆ, ಅರಿವಿನ ವಿಸ್ತಾರಕ್ಕೆ, ತಿಳಿವಳಿಕೆಗೆ... ಹೀಗೆ ನೋಡುಗರ ಅಭಿರುಚಿಗೆ ತಕ್ಕಂತೆ ಪ್ರತಿಕ್ರಿಯೆಗಳು ಸಿಗಬಹುದು. ಮನರಂಜನೆ ಜೊತೆಗೆ ಸಿನಿಮಾದ ಪಾತ್ರ, ಸಂದರ್ಭ, ಸನ್ನಿವೇಶಗಳೊಂದಿಗೆ ನಾವು ಗುರುತಿಸಿಕೊಳ್ಳುವಂತಾದರೆ? ಹೀಗೆ ಪಾತ್ರಗಳಲ್ಲಿ ನಮ್ಮನ್ನು ಕಂಡುಕೊಳ್ಳುವ, ಆ ಮೂಲಕ ಪಾತ್ರವೇ ನಾವಾಗುವ ಅನುಭವ ಕಟ್ಟಿಕೊಡುವ ಸಿನಿಮಾ 'ತಿಥಿ'. ಈ ನೆಲೆಯಲ್ಲಿ ಇದೊಂದು ಜಾಗತಿಕ ಸಿನಿಮಾ!

ವ್ಯಾಪಾರಿ, ಕಲಾತ್ಮಕ ಮಾದರಿ ಸಿನಿಮಾಗಳೆನ್ನುವ ವಿಂಗಡಣೆಗೆ ಸಿಗದೆ ತನ್ನದೇ ಹಾದಿಯಲ್ಲಿ ಸಾಗುತ್ತದೆ 'ತಿಥಿ'. ಸಿನಿಮಾ ಅಂದರೆ ಹೀಗಿರಬೇಕು ಎನ್ನುವ ಸಿದ್ಧಸೂತ್ರಗಳ ಚೌಕಟ್ಟು ಇಲ್ಲಿಲ್ಲ. ನಟಿಸಲೆಂದೇ ಕರೆತಂದ ಕಲಾವಿದರಿಲ್ಲ. ಮಂಡ್ಯ ಭಾಗದ ಗ್ರಾಮವೊಂದರ ಶ್ರೀಸಾಮಾನ್ಯರೇ ಚಿತ್ರದ ಕಲಾವಿದರು. ಅಲ್ಲಿನ ಜನ-ಜೀವನ, ಆಚರಣೆ, ಸಾಮಾಜಿಕ, ಮಾನವಿಕ ಸ್ಥಿತಿಗತಿಗಳು ಚಿತ್ರದಲ್ಲಿ ಯಥಾವತ್ತಾಗಿ ಅನಾವರಣಗೊಳ್ಳುತ್ತವೆ. ಹಳ್ಳಿಯ ಸಹಜ ಬದುಕಿಗೆ ಸಂಗಾತಿಯಾಗುವ ಮಕ್ಕಳ ಕಲರವ, ಹಕ್ಕಿಗಳ ಕೂಗು, ಎತ್ತಿನ ಗಾಡಿಯ ಸದ್ದು, ಜೋಳದ ತೆನೆಯ ಹೊಯ್ದಾಟ... ಇವೇ ಹಿನ್ನೆಲೆ ಸಂಗೀತ.

ನೂರು ವರ್ಷ ಬದುಕು ಸಾಗಿಸಿ ಇಹಲೋಕ ತ್ಯಜಿಸಿದ ಸೆಂಚೂರಿ ಗೌಡರ ಸಾವಿನೊಂದಿಗೆ ಚಿತ್ರ ಆರಂಭವಾಗುತ್ತದೆ. ಸೆಂಚೂರಿ ಗೌಡರ ಸಾವಿಗೆ ಅವರ ಮಗ, ಮೊಮ್ಮಗ, ಮರಿಮೊಮ್ಮಗನ ಸ್ಪಂದನೆಯನ್ನು ನಿರ್ದೇಶಕರು ತಿಳಿಹಾಸ್ಯದೊಂದಿಗೆ ನಿರೂಪಿಸುತ್ತಾ ಹೋಗುತ್ತಾರೆ. ಇಲ್ಲಿ ಸೆಂಚೂರಿ ಗೌಡರು ಲೌಕಕ ಜಗದ ಅಪ್ಪಟ ಜೀವನೋತ್ಸಾಹಿಯಂತೆ ಕಾಣಿಸುತ್ತಾರೆ. ಅವರ ಮಗ ಗಡ್ಡಪ್ಪ ಅನುಭಾವಿಯಂತೆ ಓಡಾಡಿಕೊಂಡಿದ್ದರೆ, ಮೊಮ್ಮಗ ತಮ್ಮಣ್ಣನಿಗೆ ಬದುಕು ಸಾಕೆನಿಸಿದೆ. ಇನ್ನು ಸೆಂಚೂರಿ ಗೌಡರ ಮರಿಮೊಮ್ಮಗ ಮೊಬೈಲ್ ಯುಗದ ಹೈದ. ಇವರ ಜತೆಗೆ ಕುರಿ ಮಂದೆಯ ಉತ್ತರ ಕರ್ನಾಟಕದ ಮಂದಿ ಸೇರಿದಂತೆ ಹತ್ತಾರು ಪಾತ್ರಧಾರಿಗಳು, ತಾವು ಇರುವಹಾಗೆಯೇ ಸಹಜವಾಗಿ ಬಂದುಹೋಗುತ್ತಾರೆ. ತಾನು ಕಂಡೂ, ಕಾಣದಂತಿರುವ ಬದುಕನ್ನು ಪ್ರೇಕ್ಷಕ ತೆರೆಯ ಮೇಲೆ ನೋಡುತ್ತಾನೆ.

ಚಿತ್ರ ನೋಡುವ ಪ್ರೇಕ್ಷಕನ ಮನಸ್ಸಿನಲ್ಲಿ ಪಾತ್ರಗಳು ಕೆಲವು ಬಾರಿ ಗೊಂದಲ ಸೃಷ್ಟಿಸುವುದೂ ಇದೆ. ಗ್ರಾಮೀಣ ಬದುಕಿನ ಸೊಬಗು ಇರುವುದೇ ನಂಬಿಕೆ, ವಿಶ್ವಾಸದ ನೆಲೆಗಟ್ಟಿನ ಮೇಲೆ. ಎರಡು ಗಂಟೆ ಅವಧಿಯ ಚಿತ್ರದಲ್ಲಿ ತೋರಿಸಿದ್ದೇ ಆ ಪ್ರದೇಶದ ಬದುಕು ಎಂದು ಪರಿಭಾವಿಸುವ ಅಪಾಯವೂ ಇಲ್ಲದಿಲ್ಲ ! ಅದು ರಿಯಲಿಸ್ಟಿಕ್ ಸಿನಿಮಾವೊಂದರ ಮಿತಿಯೂ ಹೌದು. ಇದರ ಸುಳಿವರಿತ ನಿರ್ದೇಶಕರು ಸಹಜ ಬದುಕನ್ನು ತೋರಿಸುತ್ತಲೇ ಚಿತ್ರದ ಪಾತ್ರಗಳನ್ನು ನೀವೇ ವಿಶ್ಲೇಷಿಸಿಕೊಳ್ಳಿ ಎಂದು ಪ್ರೇಕ್ಷಕರಿಗೆ ಬಿಟ್ಟುಬಿಡುತ್ತಾರೆ. ಛಾಯಾಗ್ರಾಹಕ ಡೊರೊನ್ ಟೆಂಪರ್ಟ್ ಸಹಜ ಬದುಕನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ. ಪ್ರಮುಖ ಪಾತ್ರಧಾರಿಗಳಾದ ತಮ್ಮೇಗೌಡ, ಚನ್ನೇಗೌಡ, ಸಿಂಗ್ರಿಗೌಡ, ಅಭಿಷೇಕ್ ಎಚ್.ಎನ್., ಪೂಜಾ ಮತ್ತಿತರರು ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗುತ್ತಾರೆ.

ಇಲ್ಲಿಯವರೆಗಿನ ಕನ್ನಡದ ಕಲಾತ್ಮಕ, ರಿಯಲಿಸ್ಟಿಕ್ ಸಿನಿಮಾ ಮಾದರಿಯಲ್ಲಿ 'ತಿಥಿ' ಪ್ರತ್ಯೇಕವಾಗಿ ನಿಲ್ಲುತ್ತದೆ. ಇಂಥದ್ದೊಂದು ವಿಶಿಷ್ಟ ಪ್ರಯತ್ನದೊಂದಿಗೆ ಜಾಗತಿಕ ಸಿನಿಮಾ ವಲಯದಲ್ಲಿ ಸದ್ದು ಮಾಡಿರುವ ನಿರ್ದೇಶಕ ರಾಮ್‌ರೆಡ್ಡಿ ಮತ್ತು ಚಿತ್ರಕಥಾ ಲೇಖಕ ಈರೇಗೌಡ ಅಭಿನಂದನಾರ್ಹರು. ಸಿನಿಮಾ ಮಾದ್ಯಮದ ಇತರೆ ಸಾಧ್ಯತೆಗಳನ್ನು ಇವರು ದಿಟ್ಟತನದಿಂದ ತೆರೆದಿಟ್ಟಿದ್ದಾರೆ. ನೀವು ಈ ಚಿತ್ರವನ್ನು ನೋಡದಿದ್ದರೆ ಒಂದೊಳ್ಳೆಯ ಅನುಭವ ಮಿಸ್ ಮಾಡ್ಕೋತೀರಿ!


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>