ಹೊಸದಿಲ್ಲಿ: ವಸೂಲಾಗದ ಸಾಲಗಳ ಭಾರದಿಂದ ಸಾರ್ವಜನಿಕ ವಲಯದ ಬ್ಯಾಂಕ್ಗಳು ನಲುಗಿದ್ದು, ಮೋದಿ ಸರಕಾರವು ಸಮಸ್ಯೆ ತಿಳಿಗೊಳಿಸಲು ಬ್ಯಾಂಕ್ಗಳನ್ನು ವಿಲೀನಗೊಳಿಸುವ ಕುರಿತಾಗಿ ಚಿಂತನೆ ನಡೆಸಿದೆ. ''ಪ್ರಸ್ತುತ ಇರುವ 27 ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ವಿಲೀನದ ಮೂಲಕ 6ಕ್ಕೆ ತಗ್ಗಿಸಿದರೆ ಬ್ಯಾಂಕ್ಗಳ ಪ್ರಗತಿಗೆ ಅನುಕೂಲವಾಗಲಿದೆ,'' ಎಂದು ಬ್ಯಾಂಕಿಂಗ್ ವಲಯದ ಮೇಲ್ವೀಚಾರಣೆ ನಡೆಸುತ್ತಿರುವ ಅಧಿಕಾರಿಗಳು ಹೇಳಿದ್ದಾರೆ. ನೂತನವಾಗಿ ರೂಪುಗೊಂಡಿರುವ ಬ್ಯಾಂಕ್ಸ್ ಬೋರ್ಡ್ ಬ್ಯುರೊದ ಅಧ್ಯಕ್ಷ ವಿನೋದ್ ರಾಯ್ ಅವರು, ''ಬ್ಯಾಂಕ್ಗಳ ವಿಲೀನಕ್ಕೆ ಇದು ಸರಿಯಾದ ಸಮಯ. 2016-17ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದ 25,000 ಕೋಟಿ ರೂ.ಗಳಿಗೂ(3.7 ಶತಕೋಟಿ ಡಾಲರ್) ಹೆಚ್ಚಿನ ಹಣವನ್ನು ಬ್ಯಾಂಕ್ಗಳಿಗೆ ನೀಡಲು ಸರಕಾರ ಸಿದ್ಧವಿದೆ,'' ಎಂದು ಅಭಿಪ್ರಾಯಪಟ್ಟಿದ್ದಾರೆ. ವಸೂಲಾಗದ ಸಾಲಗಳನ್ನು ಬ್ಯಾಲೆನ್ಸ್ ಶೀಟ್ಗೆ ಸೇರಿಸದೇ ಪ್ರತ್ಯೇಕವಾಗಿ ಇಡುವಂತೆ ಬ್ಯಾಂಕ್ಗಳಿಗೆ ರಿಸರ್ವ್ ಬ್ಯಾಂಕ್ ಆದೇಶ ನೀಡಿದೆ. ಆರ್ಥಿಕವಾಗಿ ಸಮರ್ಥವಾಗಿರುವ ಬ್ಯಾಂಕ್ಗಳು ವಸೂಲಾಗದ ಸಾಲಗಳಿಗೆ ತನ್ನ ಹಣವನ್ನು ತೆಗೆದಿಡುತ್ತವೆ. ಸಣ್ಣ ಬ್ಯಾಂಕ್ಗಳಿಗೆ ತೊಡಕು ಎದುರಾಗಲಿದೆ. ಹೀಗಾಗಿ ಬ್ಯಾಂಕ್ಗಳಿಗೆ ನೆರವಾಗಲು ಸರಕಾರ ಸಿದ್ಧವಿದೆ. ಬ್ಯಾಂಕ್ಗಳ ವಿಲೀನದಿಂದ ಪರಿಸ್ಥಿತಿ ನಿಭಾಯಿಸಲು ಅನುಕೂಲವಾಗಲಿದೆ ಎಂದು ಸಂದರ್ಶನದಲ್ಲಿ ರಾಯ್ ಹೇಳಿದ್ದಾರೆ. ಪ್ರತಿ ತಿಂಗಳೂ ಕಾರ್ಮಿಕ ಮಾರುಕಟ್ಟೆಗೆ ಲಕ್ಷಾಂತರ ಯುವಕರು ಸೇರ್ಪಡೆಯಾಗುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಲು ಬ್ಯಾಂಕ್ಗಳ ಹೂಡಿಕೆ, ಸಾಲ ನೀಡಿಕೆಗೆ ಪುನಶ್ಚೇತನ ನೀಡಲು ಸರಕಾರ ಉತ್ಸುಕವಾಗಿದೆ. ಆದರೆ, ವಸೂಲಾಗದ ಸಾಲದ ಹೊರೆಯನ್ನು ಇಳಿಸಿಕೊಳ್ಳುವ ಪರ್ಯಾಯ ಮಾರ್ಗಗಳ ಬಗ್ಗೆಯೂ ಅವಲೋಕನ ನಡೆಸಿದೆ. ಶುರುವಾಗಿದೆ ವಿಲೀನ ಪ್ರಕ್ರಿಯೆ ''ಬ್ಯಾಂಕ್ಗಳ ಬಲವರ್ಧಿಸುವ ನಿಟ್ಟನಲ್ಲಿ ವಿಲೀನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧೀನದಲ್ಲಿನ 5 ಬ್ಯಾಂಕ್ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ವಿಲೀನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ,'' ಎಂದು ವಿನೋದ್ ರಾಯ್ ಹೇಳಿದ್ದಾರೆ. ''ಮುಂದಿನ ದಿನಗಳಲ್ಲಿ ಮತ್ತಷ್ಟು ಬ್ಯಾಂಕ್ಗಳ ವಿಲೀನ ಸಾಧ್ಯವಾಗಲಿದ್ದು, ಇದಕ್ಕೆ ಕಾಲಮಿತಿಯನ್ನು ಘೋಷಿಸಲಾಗದು,'' ಎಂದೂ ತಿಳಿಸಿದ್ದಾರೆ.
↧
ಸಾರ್ವಜನಿಕ ವಲಯದ ಬ್ಯಾಂಕ್ಗಳ ಸಂಖ್ಯೆ 27ರಿಂದ 6ಕ್ಕೆ ಇಳಿಕೆ?
↧