ಬಾಗಲಕೋಟ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.85.71ರಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆ 7 ನೇ ಸ್ಥಾನ ಪಡೆದುಕೊಂಡಿರುವುದು ಹರ್ಷದಾಯಕ ಸಂಗತಿ ಎಂದು ಜಿಪಂ ಸಿಇಒ ಮಹೇಶ ಹಿರೇಮಠ ಬಣ್ಣಿಸಿದರು. ಜಿಪಂ ಸಭಾಭವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 26,210 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 22,548 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ 13,853 ಬಾಲಕರ ಪೈಕಿ 11,629 ತೇರ್ಗಡೆ ಹೊಂದಿದ್ದಾರೆ. 12,357 ಬಾಲಕಿಯರ ಪೈಕಿ 10,919 ತೇರ್ಗಡೆ ಹೊಂದಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ. ಬಾಲಕರ ವಿಭಾಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.84.67 ರಷ್ಟು ಫಲಿತಾಂಶವಾಗಿದ್ದು, ನಗರ ಪ್ರದೇಶದಲ್ಲಿ ಶೇ.82.7 ರಷ್ಟಾಗಿದೆ. ಬಾಲಕಿಯರ ವಿಭಾಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.88.67 ರಷ್ಟು ಫಲಿತಾಂಶವಾಗಿದ್ದು, ನಗರ ಪ್ರದೇಶದಲ್ಲಿ ಶೇ.87.92 ರಷ್ಟಾಗಿದೆ. ಗ್ರಾಮೀಣ ಪ್ರದೇಶದ ಒಟ್ಟು ಫಲಿತಾಂಶ ಶೇ.86.49, ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ.85.29 ರಷ್ಟಾಗಿದೆ ಎಂದರು. ಜಿಲ್ಲೆಯ 73 ಶಾಲೆಗಳಲ್ಲಿ 37 ಸರಕಾರಿ, 4 ಅನುದಾನಿತ ಹಾಗೂ 32 ಅನುದಾನ ರಹಿತ ಶಾಲೆಗಳಿದ್ದು,100ಕ್ಕೆ 100ರಷ್ಟು ಫಲಿತಾಂಶವಾಗಿದೆ. ಸರಕಾರಿ ಶಾಲೆಗಳಲ್ಲಿ 12,394 ವಿದ್ಯಾರ್ಥಿಗಳ ಪೈಕಿ 10,471 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು, ಶೇ.84.48 ರಷ್ಟು ಫಲಿತಾಂಶವಾಗಿದೆ. ಅನುದಾನಿತ ಶಾಲೆಗಳಲ್ಲಿ 7,545 ವಿದ್ಯಾರ್ಥಿಗಳ ಪೈಕಿ 6,323 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು ,ಶೇ.83.80 ರಷ್ಟು ಫಲಿತಾಂಶವಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ 6,271 ವಿದ್ಯಾರ್ಥಿಗಳ ಪೈಕಿ 5,754 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.91.76 ರಷ್ಟು ಫಲಿತಾಂಶವಾಗಿದೆ ಎಂದರು. 2014-15 ನೇ ಸಾಲಿನಲ್ಲಿ 30ನೇ ಸ್ಥಾನದಲ್ಲಿದ್ದ ಜಿಲ್ಲೆ 2015-16ನೇ ಸಾಲಿನಲ್ಲಿ 7ನೇ ಸ್ಥಾನ ಪಡೆದುಕೊಳ್ಳುವ ಮೂಲಕ 'ಬೆಸ್ಟ್ ಟೆನ್'ಗೆ ಬಂದು ತಲುಪಿದ್ದು ಸಂತಸದ ಸಂಗತಿಯಾಗಿದೆ. ಈ ಬಾರಿ ಫಲಿತಾಂಶ ಸುಧಾರಣೆಗೆ ಸರಣಿ ಪರೀಕ್ಷೆ, ಮುಖ್ಯಗುರುಗಳು ಹಾಗೂ ವಿಷಯ ಶಿಕ್ಷ ಕರಿಗೆ ಪರಿಣಿತರಿಂದ ನಾಯಕತ್ವ ಹಾಗೂ ವಿಷಯ ಬೋಧನೆ ಕುರಿತು ತರಬೇತಿ ನೀಡಿರುವುದು, ಅನೇಕ ಬಾರಿ ಪ್ರೌಢಶಾಲಾ ಮುಖ್ಯ ಗುರುಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಸುಧಾರಣೆ ಕುರಿತು ಕಾರ್ಯಾಗಾರ, ಓದುವ ಮನೆ, ನಿರಂತರ ಬೋಧನೆ, ಫೋನ್ ಇನ್ ನೇರ ಕಾರ್ಯಕ್ರಮ, ಗಂಡು ಮಕ್ಕಳ ರಾತ್ರಿ ಶಾಲೆ, ಮಿನಿಮಮ್ ಪಾಸಿಂಗ್ ಪ್ಯಾಕೇಜ್, ಪಾಲಕರ ಮನೆ ಭೇಟಿ ಮಾಡಿ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಉತ್ತೇಜನ ಸೇರಿದಂತೆ ಅನೇಕ ಪ್ರಯತ್ನಗಳು ಕಾರಣವಾಗಿವೆ ಎಂದು ಹೇಳಿದರು. ಶಿಕ್ಷಣ ಇಲಾಖೆಯ ಬಿ.ಕೆ.ನಂದನೂರ,ವೀರೇಶ ಜೇವರಗಿ,ನಾಗೂರ ಇತರರು ಇದ್ದರು.
↧
ಎಸ್ಸೆಸ್ಸೆಲ್ಸಿ ಜಿಲ್ಲೆಯ ಸಾಧನೆಗೆ ಸಿಇಒ ಹರ್ಷ
↧