Quantcast
Channel: VijayKarnataka
Viewing all articles
Browse latest Browse all 6795

ಸಂಪಾದಕೀಯ: ಭೂಗಳ್ಳರಿಗೆ ಪಾಠ ಕಲಿಸಿ

$
0
0

ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಮತ್ತು ಬಿಲ್ಡರ್‌ಗಳ ಕೂಟದಿಂದ ಸಾರ್ವಜನಿಕ ಸ್ವತ್ತುಗಳಾದ ಕೆರೆ, ಕುಂಟೆ, ಕಾಲುವೆ ಗೋಮಾಳ, ಮತ್ತು ಅರಣ್ಯ ಭೂಮಿ ಸ್ವಾಹಾ ಆಗುತ್ತಲೇ ಇದೆ. ಇದನ್ನು ತಪ್ಪಿಸಲು ಪದೇ ಪದೆ ನ್ಯಾಯಾಂಗ, ಶಾಸಕಾಂಗದ ಮೇಲೆ ಗದಾಪ್ರಹಾರ ಮಾಡಿ, ಸಾಮುದಾಯಿಕ ಸಂಪತ್ತಿನ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇದೀಗ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ಕೆರೆ ಕಟ್ಟೆಗಳ ರಕ್ಷಣೆಗೆ ಸಂಬಂಧಿಸಿದಂತೆ ಐತಿಹಾಸಿಕ ಎನ್ನುಬಹುದಾದ ತೀರ್ಪು ನೀಡಿದೆ.

ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ಉರುಳಿಸಿ, ಇನ್ನು ಮುಂದೆ ಇಂಥ ಎಡೆಗಳಲ್ಲಿ ಕಟ್ಟಡಗಳು ನಿರ್ಮಾಣವಾಗದಂತೆ ನೋಡಿಕೊಳ್ಳಿ ಎಂದು ಆದೇಶಿಸಿದೆ. ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಬೆಳ್ಳಂದೂರು ಮತ್ತು ಅಗರ ಕೆರೆಗಳ ಸುತ್ತ ಅಕ್ರಮವಾಗಿ ಕಾಮಗಾರಿ ನಡೆಸಿದ ಎರಡು ಕಂಪನಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಿರುವುದಷ್ಟೇ ಅಲ್ಲ; ಈ ತಾಣದಲ್ಲಿ ಬಿಲ್ಡರ್‌ಗಳಿಗೆ ನೀಡಿದ ಪರಿಸರ ಅನುಮೋದನೆಗಳನ್ನು ರದ್ದು ಮಾಡಿದೆ. ಮಂತ್ರಿ ಡವಲಪರ್ಸ್‌ ಹಾಗೂ ಕೋರ್‌ಮೈಂಡ್‌ಗೆ ವಿಧಿಸಿರುವ ದಂಡವನ್ನು ಯಾವುದೇ ಮುಲಾಜಿಲ್ಲದೆ ವಸೂಲಿ ಮಾಡಬೇಕು. ಕಾನೂನು ಇರುವುದೇ ಮುರಿಯುವುದಕ್ಕೆ ಹಾಗೂ ದುಡ್ಡಿ ಚೆಲ್ಲಿ ಏನನ್ನದರೂ ಗಿಟ್ಟಿಸಿಕೊಳ್ಳಬಹುದು ಎನ್ನುವ ಧೋರಣೆ ಕೆಲ ಬಿಲ್ಡರ್ಸ್‌ಗಳಲ್ಲಿ ಮನೆ ಮಾಡಿದೆ. ಆದ್ದರಿಂದಲೇ ಎಲ್ಲ ಊರುಗಳಲ್ಲೂ ಕಬಳಿಕೆ ಪಿಡುಗು ಬೃಹದಾಕಾರವಾಗಿ ಬೆಳೆಯುತ್ತಿದೆ. ಇದೊಂದು ದೊಡ್ಡ ಕರ್ಮಕಾಂಡ. ಭೂಮಿಗೆ ಚಿನ್ನದ ಬೆಲೆ ಇದೆ ಎಂದು ಗೊತ್ತಾದ ಕೂಡಲೇ ಎಲ್ಲರ ಕಣ್ಣು ಬೀಳುವುದು ಕರೆ ಕಟ್ಟೆಗಳ ಮೇಲೆ ಎಂಬುದನ್ನು ಮರೆಯಬಾರದು. ಇವುಗಳನ್ನು ಸ್ವಾಧೀನಕ್ಕೆ ಪಡೆಯಲು ದಲ್ಲಾಳಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಪುಡಾರಿಗಳು ಒಂದಾಗುವುದು ಹಾಗೂ ಸ್ಥಳೀಯ ಶ್ರಿಮಂತರು ಹಣಕಾಸು ಒದಗಿಸುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಈ ಜಾಲವನ್ನು ಬೇರು ಸಮೇತ ಕಿತ್ತೊಗೆಯಬೇಕು.

ಹಸಿರು ನ್ಯಾಯಾಧಿಕರಣದ ತೀರ್ಪಿನ ವ್ಯಾಪ್ತಿ ಕೇವಲ ರಾಜಧಾನಿಗೆ ಮಾತ್ರ ಸಂಬಂಧಿಸಿದ್ದು ಎಂದು ತಿಳಿಯಬಾರದು. ಕೆರೆಗಳ ಹೊರ ಅಂಚಿನಿಂದ 75 ಮೀಟರ್‌, ಮತ್ತು ರಾಜಕಾಲುವೆ ಅಂಚಿನಿಂದ 50 ಮೀಟರ್‌ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಬಾರದು ಎಂದು ತಾಕೀತು ಮಾಡಿದೆ. ಇಂತಹ ಅಂತರವನ್ನು ಉಲ್ಲಂಘಿಸಿ ನಿರ್ಮಿಸಲಾಗಿರುವ ಎಲ್ಲ ಕಟ್ಟಡಗಳನ್ನೂ ಉರುಳಿಸಬೇಕು ಮತ್ತು ಭವಿಷ್ಯದಲ್ಲಿ ಈ ಅಂತರದ ಒಳಗೆ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಕೂಡದು ಎಂದು ಸರಕಾರಕ್ಕೆ ತಾಕೀತು ಮಾಡಿದೆ. ಕಳೆದ ವರ್ಷ ಸಾರಕ್ಕಿ ಕರೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ನೂರಾರು ಕಟ್ಟಡಗಳನ್ನು ನೆಲಸಮಗೊಳಿಸಿ, 2 ಸಾವಿರ ಕೋಟಿ ರೂ ಮೌಲ್ಯದ ಆಸ್ತಿಯನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಈ ಕಾರ್ಯಾಚರಣೆ ಚುರುಕು ಮತ್ತು ವ್ಯಾಪ್ತಿಯನ್ನು ಪಡೆದುಕೊಳ್ಳಲಿಲ್ಲ. ಬೆಂಗಳೂರಿನಲ್ಲಿ ಬಿಡಿಎ, ಬಿಬಿಎಂಪಿ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಒಟ್ಟು 23718 ಎಕರೆ ವಿಸ್ತೀರ್ಣದ 877 ಕೆರೆಗಳಿವೆ. ಅವುಗಳಲ್ಲಿ 1894 ಎಕರೆ ಜಾಗ ಅತಿಕ್ರಮಣಕ್ಕೊಳಗಾಗಿದೆ. 657ಎಕರೆಯಷ್ಟನ್ನು ಮಾತ್ರ ತೆರವುಗೊಳಿಸಲಾಗಿದೆ. ಇನ್ನೂ 1192 ಎಕರೆ ಕೆರೆಯ ಜಾಗ ಖಾಸಗಿ ವ್ಯಕ್ತಿಗಳ ಹಿಡಿತದಲ್ಲೇ ಇದೆ. 2006ರಫೇ ಕೆರೆಗಳ ಸರ್ವೆ ನಡೆಸಿ ಒತ್ತುವರಿಯ ಪಟ್ಟಿ ತಯಾರಿಸಲಾಗಿತ್ತು. ಆ ಬಳಿಕ, ಅತಿಕ್ರಮಣಕ್ಕೊಳಗಾದ ಜಾಗ ಪತ್ತೆ ಹಚ್ಚಲು ಎ.ಟಿ.ರಾಮಸ್ವಾಮಿ ಸಮಿತಿಯನ್ನು ನೇಮಿಸಲಾಗಿತ್ತು. ಲಕ್ಷಾಂತರ ಕೋಟಿ ರೂ. ಬೆಲೆ ಬಾಳುವ ಸಾವಿರಾರು ಎಕರೆ ಸರಕಾರಿ ಜಮೀನು ಪರಭಾರೆಯಾಗಿರುವ ಬಗ್ಗೆ ಈ ಸಮಿತಿ ವರದಿ ನೀಡಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಇದೀಗ ರಾಜ್ಯದ ಎಲ್ಲೆಡೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಜತನದಿಂದ ಮಾಡಬೇಕು. ಈ ಕುರಿತು ತಲೆದೋರುವ ವ್ಯಾಜ್ಯಗಳ ನಿರ್ವಹಣೆಗೆ ಪ್ರತ್ಯೇಕ ಕೋರ್ಟ್‌ ಸ್ಥಾಪನೆ ಮಾಡಬೇಕು. ಪ್ರಭಾವಿಗಳ ಮರ್ಜಿಗೆ ಮಣಿದು ಈ ಕಾರ್ಯಾಚರಣೆಗೆ ಹಿಂದೇಟು ಹಾಕುವ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>