Quantcast
Channel: VijayKarnataka
Viewing all articles
Browse latest Browse all 6795

ಸಂಪಾದಕೀಯ: ಲೋಕಾ ನಿಷ್ಕ್ರಿಯ ತಂತ್ರ

$
0
0

ಭ್ರಷ್ಟಾಚಾರದಿಂದ ಆಡಳಿತದ ಫಲಗಳು ಜನಸಾಮಾನ್ಯರಿಗೆ ತಲುಪದೆ ಪ್ರಜಾಪ್ರಭುತ್ವದ ಆಶಯಗಳೇ ಮಣ್ಣುಪಾಲಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಪ್ರಾಮಾಣಿಕತೆ ಎಂಬುದು ಸಹಜ ಪ್ರವೃತ್ತಿಯಾಗದೇ ಇದ್ದಾಗ ಅದನ್ನು ಭಯ, ಒತ್ತಡ ಮತ್ತು ಶಿಕ್ಷೆಯಿಂದಲಾದರೂ ಒತ್ತಾಯಪೂರ್ವಕವಾಗಿ ಮೂಡಿಸಬೇಕು. ಇದಕ್ಕೆ ಲೋಕಾಯುಕ್ತ ಒಂದು ಪ್ರಬಲ ಅಸ್ತ್ರವಾಗಿತ್ತು. ಆದರೆ ಈ ಸಂಸ್ಥೆಗೆ ನ್ಯಾ.ಭಾಸ್ಕರ್‌ರಾವ್‌ ಅವರನ್ನು ನೇಮಕ ಮಾಡಿದ ನಂತರ ಈ ಅಸ್ತ್ರ ಮೊಂಡಾಯಿತು. ಬೇಲಿಯೇ ಹೊಲ ಮೇಯ್ದಂತಾಯಿತು.

ಅನೇಕ ಡೀಲುಗಳನ್ನು ಕುದುರಿಸಲು ಭಾಸ್ಕರ್‌ ಪುತ್ರ ಅಶ್ವಿನ್‌ ರಾವ್‌ ಅವರ ಲೋಕಾಯುಕ್ತ ಕಚೇರಿಯನ್ನು ಬಳಸಿಕೊಂಡು ಜೈಲು ಪಾಲಾದರು. ತಮ್ಮ ಬಂಧು ಬಳಗದ ಹಿತಾಸಕ್ತಿಗೆ ನೆರವಾದ ಆರೋಪದ ಮೇಲೆ ರಾವ್‌ ರಾಜೀನಾಮೆ ನೀಡಿದರು. ಜನಪರ ಆಡಳಿತದ ಸಂಕಲ್ಪವಿರುವ ಯಾವುದೇ ಸರಕಾರಕ್ಕೆ ಇದೊಂದು ಪಾಠವಾಗಬೇಕಿತ್ತು. ಅತ್ಯುನ್ನತ ನೈತಿಕ ಮೌಲ್ಯವಿರುವ ವ್ಯಕ್ತಿಯನ್ನು ಹುಡುಕಿ, ಶಿಥಿಲವಾಗಿದ್ದ ಲೋಕಾಯುಕ್ತಕ್ಕೆ ಕಾಯಕಲ್ಪ ನೀಡಬೇಕಿತ್ತು. ಆದರೆ ರಾಜ್ಯ ಸರಕಾರ ಹಲ ವಿಷಯಗಳಲ್ಲಿ ಪ್ರಶ್ನಾರ್ಥಕ ಹಿನ್ನೆಲೆ ಇರುವ ಎಸ್‌ ಆರ್‌ ನಾಯಕ್‌ ಅವರನ್ನೇ ಲೋಕಾಯುಕ್ತ ಕುರ್ಚಿಯಲ್ಲಿ ಪ್ರತಿಷ್ಠಾಪಿಸುವ ಜಿದ್ದಿಗೆ ಬಿದ್ದಿದೆ. ಹೀಗಾಗಿ ನಾಯಕ್‌ ಹೆಸರನ್ನು ರಾಜ್ಯಪಾಲರು ಮತ್ತೆ ಮತ್ತೆ ತಿರಸ್ಕರಿಸಿದರೂ ಮರಳಿ ಯತ್ನವ ಮಾಡುತ್ತಲೇ ಇದೆ. ಈ ಹುದ್ದೆಗೆ ಸಮರ್ಥರಾದವರು ಯಾರೂ ಇಲ್ಲವೇ? ನಾಯಕ್‌ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಏಕಿಷ್ಟು ವ್ಯಾಮೋಹ? ಕಾರಣ ಸ್ಪಷ್ಟ.

ಸರಕಾರಕ್ಕೆ ತಾವು ಹೇಳಿದಂತೆ ಕೇಳುವವರು ಬೇಕಾಗಿದ್ದಾರೆ. ಸ್ವತಂತ್ರ ಮನೋಸ್ಥಿತಿಯ, ಕಾಯಿದೆ ಕಟ್ಟಳೆಗಳಿಗೆ ಬದ್ಧವಾಗಿ ಕೆಲಸ ಮಾಡುವವರು ಬೇಕಾಗಿಲ್ಲ. ಹೀಗಾಗಿ ಲೋಕಾಯಕ್ತ ನೇಮಕಕ್ಕೆ ಇರುವ ವಿಧಿ ವಿಧಾನಗಳನ್ನೆಲ್ಲ ಗಾಳಿಗೆ ತೂರಲಾಗಿದೆ. ಆಯ್ಕೆ ವೇಳೆ ಸಲಹಾಸಮಿತಿಯಲ್ಲಿದ್ದವರ ಮಾತುಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಹೈಕೋರ್ಟ್‌ ಮುಖ್ಯ ನ್ಯಾಯಮುರ್ತಿಗಳ ಅಭಿಮತ ಕೂಡ ಗಣನೆಗೆ ತೆಗೆದುಕೊಂಡಿಲ್ಲ. 'ಎಲ್ಲರ ಮೇಲೂ ಆರೋಪ ಇರುತ್ತೆ ಬಿಡ್ರಿ' ಎನ್ನುವ ಹುಂಬು ಸಮರ್ಥನೆ ಮೂಲಕ ಭಿನ್ನಾಭಿಪ್ರಾಯಗಳನ್ನು ಗುಡಿಸಿ ಹಾಕಲಾಗಿದೆ. ಇದೊಂದು ಅನಾರೋಗ್ಯಕರ ಲಕ್ಷಣ. ಇಂಥ ಮಾತುಗಳನ್ನು ಯಾವುದಕ್ಕೆ ಬೇಕಾದರೂ ವಿಸ್ತರಿಸಿಕೊಳ್ಳಬಹುದು. ಈ ದೇಶದಲ್ಲಿ ಪ್ರತಿಯೊಂದಕ್ಕೂ ಕಾಯಿದೆ ಕಾನೂನು ಇರುತ್ತೆ ಬಿಡ್ರಿ ಎನ್ನುವುದರ ಮೂಲಕ ಅದಕ್ಕೂ ಬೆಲೆ ಕೊಡದಂತೆ ಇರಬಹುದು. ಇದು ಜನರಿಂದ ಆಯ್ಕೆಯಾಗುವ ಯಾರೂ ಕೂಡ ಹೀಗೆ ಮಾತನಾಡಬಾರದು. ಲೋಕಾಯುಕ್ತವನ್ನು ನಿಶ್ಯಕ್ತಗೊಳಿಸಲು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚಿಸಿದ ಸರಕಾರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಹೈಕೋರ್ಟ್‌, ಸರಕಾರಿ ಅಧಿಕಾರಿಗಳ ವಿರುದ್ಧ ಇರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಎಸಿಬಿಗೆ ವರ್ಗಾಯಿಸುವುದನ್ನು ತಡೆ ಹಿಡಿದಿದೆ. ಲೋಕಾಯಕ್ತ ಪೊಲೀಸರೇ ತನಿಖೆ ನಡೆಸಬೇಕು ಎಂದು ಆದೇಶಿಸಿದೆ. ಹೀಗೆ ತನಗೆ ಸಾಧ್ಯವಿರುವ ಎಲ್ಲ ದಾರಿಗಳ ಮೂಲಕ ಈ ಸಂಸ್ಥೆಗೆ ಚರಮಗೀತೆ ಹಾಡಲು ಸರಕಾರ ಸಜ್ಜಾಗಿದೆ. ಲೋಕಾಯುಕ್ತ ನೇಮಕದ ವಿವಾದವನ್ನು ಲಂಬಿಸುತ್ತ, ಅದನ್ನು ಪರೋಕ್ಷವಾಗಿ ನಿಷ್ಕ್ರಿಯಗೊಳಿಸುವ ಹುನ್ನಾರ ನಡೆಸುತ್ತದೆ. ಐದು ವರ್ಷಗಳಿಗೆ ಜನಾದೇಶ ಪಡೆಯುವ ಮಂದಿ, ಓಟು ಹಾಕುವಾಗ ಮಾತ್ರ ಜನರನ್ನು ಬಂಧುಗಳು, ದೇವರು ಎಂದು ಹೊಗಳಿ ಆನಂತರ ಅವರ ಅಭಿಪ್ರಾಯಗಳಿಗೆ ಕಿಂಚತ್ತೂ ಬೆಲೆ ಕೊಡದೇ ಸರ್ವಾಧಿಕಾರಿ ಧೋರಣೆ ತೋರಿಸುವುದು ಎಷ್ಟು ಸರಿ. ಲೋಕ ನೇಮಕದ ಕುರಿತು ಸರಕಾರದ ನಿಲುವಿಗೆ ಸಾರ್ವಜನಿಕ ಬೆಂಬಲವಿಲ್ಲ. ಜನರ ನಾಡಿಮಿಡಿತವನ್ನು ತಿಳಿದುಕೊಳ್ಳದಷ್ಟು ಅಸೂಕ್ಷ್ಮವಾಗಿರುವ ಸರಕಾರ, ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿದೆ. ರಾಜ್ಯ ಸರಕಾರ ತನ್ನ ಹಠವನ್ನು ಬಿಟ್ಟು ಅಕಳಂಕಿತರನ್ನು ಲೋಕಾಯುಕ್ತರನ್ನಾಗಿ ನೇಮಿಸಬೇಕು. ಜನತೆಯ ಹಂಬಲ ಕೂಡ ಇದೇ ಆಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್