ಬಾಯಿಬಿಟ್ಟ ಶಂಕಿತ ಉಗ್ರರು | ಮುಂದುವರಿದ ತೀವ್ರ ವಿಚಾರಣೆ ಹೊಸದಿಲ್ಲಿ: ದಿಲ್ಲಿ ಪೊಲೀಸರು ಬುಧವಾರ ಸೆರೆಹಿಡಿದ ಜೈಷೆ ಉಗ್ರರು, ರಾಜಧಾನಿ ದಿಲ್ಲಿಯಲ್ಲೂ ಪಠಾಣ್ಕೋಟ್ ವಾಯುನೆಲೆ ಮೇಲೆ ನಡೆಸಿದ ರೀತಿಯ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಬಂಧಿತ ಉಗ್ರರು ಬಾಯಿಬಿಟ್ಟಿರುವ ವಿಷಯಗಳ ದೇಶವೇ ಬೆಚ್ಚಿಬೀಳುವಂತಿವೆ. ದಿಲ್ಲಿಯ ಹಿಂಡನ್ ವಾಯುನೆಲೆ ಮೇಲೆ ಪಠಾಣ್ಕೋಟ್ ದಾಳಿಯ ರೀತಿಯಲ್ಲೇ ಅಟ್ಯಾಕ್ ಮಾಡಲು ಸ್ಕೆಚ್ ರೂಪಿಸಲಾಗಿತ್ತು. ಅಲ್ಲದೆ ದಿಲ್ಲಿ-ಗಾಜಿಯಾಬಾದ್ ಗಡಿಯಲ್ಲಿರುವ ಮಾಲ್ ಮೇಲೆ ದಾಳಿ ನಡೆಸಲೂ ಪ್ಲಾನ್ ತಯಾರಾಗಿತ್ತು. ಬಂಧಿತರಲ್ಲಿ ಒಬ್ಬನಾದ ಸಾಜಿದ್ ಈ ದಾಳಿಗಳ ಮಾಸ್ಟರ್ಪ್ಲಾನ್ ಸಿದ್ಧಪಡಿಸಿದ್ದ. ಸೆರೆಯಾದ ಮೂವರಲ್ಲಿ ಇಬ್ಬರು ಜೈಷೆ ಮುಖ್ಯಸ್ಥ ಮಸೂದ್ ಅಜರ್ ಸಹೋದರ ತಲ್ಹಾನೊಂದಿಗೆ ವಾಟ್ಸ್ಆ್ಯಪ್ ಮೂಲಕ ಸಂಪರ್ಕದಲ್ಲಿದ್ದು, ಆತನಿಂದ ಸೂಚನೆ ಪಡೆಯುತ್ತಿದ್ದರು. ಸಾಜಿದ್ನನ್ನು ದಿಲ್ಲಿಯ ಈಶಾನ್ಯ ಭಾಗದ ಚಾಂದ್ಭಾಗ್ನಲ್ಲಿ ಬುಧವಾರ ಪೊಲೀಸರು ಅರೆಸ್ಟ್ ಮಾಡಿದ್ದರು. ಶಕೀರ್ ಮತ್ತು ಸಮೀರ್ ಎಂಬ ಇನ್ನಿಬ್ಬರು ಶಂಕಿತ ಉಗ್ರರನ್ನು ದೇವ್ಬಂದ್ ಮತ್ತು ಗಾಜಿಯಾಬಾದ್ನ ಲೋನಿ ಎಂಬಲ್ಲಿಂದ ವಶಕ್ಕೆ ಪಡೆಯಲಾಗಿತ್ತು. ಬಂಧಿತರಿಂದ ಸುಧಾರಿತ ಸ್ಫೋಟಕಗಳು, ಎರಡು ಟೈಮರ್ಗಳು, ಪೈಪ್, ಟೇಪ್, ಅಂಟು ಮತ್ತು 11 ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರಲ್ಲದೆ ಇನ್ನೂ 10 ಮಂದಿ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಲೋದಿ ಕಾಲೋನಿಯ ಪೊಲೀಸ್ ಮುಖ್ಯಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನಷ್ಟು ಮಂದಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಶೇಷ ಆಯುಕ್ತ ಅರವಿಂದ್ ದೀಪ್ ಹೇಳಿದ್ದಾರೆ. ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡರು ಪೊಲೀಸರ ಬಲೆಗೆ ಬೀಳುವುದಕ್ಕೆ ಕಾರಣ ಸಾಜಿದ್. ಆತ ದಿಲ್ಲಿಯ ತನ್ನ ಮನೆಯಲ್ಲಿ ಸೋಮವಾರ ರಾತ್ರಿ ಬಾಂಬ್ ತಯಾರಿಸುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋಟಿಸಿ ಅವನ ಕೈಗೆ ಗಾಯವಾಗಿತ್ತು. ಕಳೆದ ಆರು ತಿಂಗಳಿಂದ ಸಾಜಿದ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಸ್ಫೋಟದ ಸದ್ದು ಕೇಳಿದ ಕೂಡಲೇ ಅಲರ್ಟ್ ಆದರು. ಮಂಗಳವಾರ ಸಂಜೆ ದಾಳಿಯ ಪ್ಲಾನ್ ಸಿದ್ಧವಾಯಿತು. ವಿಶೇಷ ನಿಯಂತ್ರಣ ಕೊಠಡಿ ಸ್ಥಾಪಿಸಲಾಯಿತು. 12 ತಂಡಗಳು ದಿಲ್ಲಿ ಮತ್ತು ಉತ್ತರಪ್ರದೇಶದ 13 ಕಡೆ ದಾಳಿ ನಡೆಸಿ ಒಟ್ಟು 12 ಶಂಕಿತರನ್ನು ವಶಕ್ಕೆ ಪಡೆದವು. ರಿಯಾಲಿಟಿ ಶೋಗೆ ಸೆಲೆಕ್ಟ್ ಆಗಿದ್ದ ಸಾಜಿದ್ ಸಾಜಿದ್ ಒಬ್ಬ ಭರವಸೆಯ ಡ್ಯಾನ್ಸರ್ ಆಗಿದ್ದವನು. ಅಷ್ಟು ಮಾತ್ರವಲ್ಲದೆ ಟಿವಿ ರಿಯಾಲಿಟಿ ಶೋ ಒಂದಕ್ಕೂ ಆಯ್ಕೆಯಾಗಿದ್ದ ಎನ್ನಲಾಗಿದೆ. ಆದರೆ ಕೆಲವು ವರ್ಷಗಳ ಹಿಂದೆ ಮಸೂದ್ ಅಜರ್ ಬೋಧನೆಗಳನ್ನು ಇಂಟರ್ನೆಟ್ನಲ್ಲಿ ಕೇಳುತ್ತಿದ್ದಂತೆ ಮೂಲಭೂತವಾಗಿ ಬದಲಾದ. ಅಲ್ಲಿಂದ ಜೈಷೆ ಸಂಘಟನೆಯೊಂದಿಗೆ ಆತನ ನಂಟು ಬೆಳೆಯಿತು. ದಿಲ್ಲಿಯಲ್ಲಿ ಹುಡುಗರ ಗುಂಪು ಕಟ್ಟಿಕೊಂಡು ಮಸೂದ್ ಅಜರ್ ಸಹೋದರನಿಂದ ಸೂಚನೆ ಪಡೆಯುತ್ತಿದ್ದ. ದಿಲ್ಲಿಯಲ್ಲಿ 40 ಜನರ ಗುಂಪು ಕಟ್ಟಿ ನಗರದ ಹಲವೆಡೆ ದಾಳಿ ನಡೆಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
↧
ದಿಲ್ಲಿಯಲ್ಲಿ ಪಠಾಣ್ಕೋಟ್ ರೀತಿಯ ದಾಳಿಗೆ ಸ್ಕೆಚ್
↧