* ಶರಣು ಹುಲ್ಲೂರು
ದಪ್ಪ ಗಾಜಿನ ಕನ್ನಡಕ ಹಾಕಿದವರಿಗೆ ಸಾಮಾನ್ಯವಾಗಿ ಸೋಡಾಬುಡ್ಡಿ ಎಂದು ಕರೆಯುವುದು ವಾಡಿಕೆ. ಹೀಗಾಗಿ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಸಿನಿಮಾದಲ್ಲಿ, ಇಂತಹ ಹುಡುಗ ಅಥವಾ ಹುಡುಗಿಯ ಕತೆ ಇದೆ ಎನ್ನಲಾಗಿತ್ತು. ಅದನ್ನು 'ಫಸ್ಟ್ ರ್ಯಾಂಕ್ ರಾಜು' ಸಿನಿಮಾದಂತೆ ಲೇವಡಿಯ ರೂಪದಲ್ಲಿ ತೋರಿಸಲಾಗಿದೆ ಅನ್ನುವ ಮಾತೂ ಇತ್ತು. ಆದರೆ, ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಬೇರೆಯದ್ದೇ ಕತೆ ಹೆಣೆದಿದ್ದಾರೆ. ಅದನ್ನು ವಿಭಿನ್ನ ರೀತಿಯಲ್ಲಿ ತೋರಿಸಲು ಹೋಗಿ ಸಖತ್ ಕನ್ಫ್ಯೂಶ್ ಮಾಡುತ್ತಾರೆ.
ಸಿನಿಮಾ ಶುರುವಿಗೇ ಮೂರ್ನಾಲ್ಕು ಹೆಣ ಬೀಳುತ್ತವೆ. ಅವರು ಯಾಕೆ ಸತ್ತರು, ಹೇಗೆ ಸತ್ತರು ಅನ್ನುವುದೇ ಇಡೀ ಸಿನಿಮಾ. ಈ ನಡುವೆ ಸೋಡಾಬುಡ್ಡಿಯ ಪ್ರೇಮಕತೆ ಬರುತ್ತದೆ. ಆ ಗ್ರೇಟ್ ಸ್ಟೋರಿಯು ಪ್ರೇಕ್ಷಕರ ತಾಳ್ಮೆಯೊಂದಿಗೆ ಜುಗಲ್ಬಂದಿ ಆಡುತ್ತದೆ.
ಸೋಡಾಬುಡ್ಡಿ (ಉತ್ಪಲ್) ಕುಡಿತಕ್ಕೆ ಫೇಮಸ್. ಆತನ ಲವರ್ (ಅನುಷಾ)ಗೆ ಚಿಕನ್ ಅಂದರೆ ಪ್ರಾಣ. ಹೀಗಾಗಿ ಎರಡೂ ಸರಿಯಾಗಿ ಹೊಂದಿಕೊಳ್ಳುತ್ತವೆ. ಹೊಂದಾಣಿಕೆ ಪ್ರೇಮವಾಗಿ ಬದಲಾಗುತ್ತದೆ. ಈ ಪ್ರೇಮ ಇವರ ಜೀವನದಲ್ಲಿ ಗಟ್ಟಿಯಾಗಿ ಉಳಿದುಕೊಳ್ಳತ್ತಾ ಅನ್ನುವುದೇ ಕ್ಲೈಮ್ಯಾಕ್ಸ್. ಸಿನಿಮಾ ಅಂತಿಮ ಘಟಕ್ಕೆ ತಲುಪಿಸಲು ನಿರ್ದೇಶಕರು ಹರಸಾಹಸ ಪಡುತ್ತಾರೆ. ಡಬಲ್ ಮೀನಿಂಗ್ ಡೈಲಾಗ್ಗೆ ಮೊರೆ ಹೋಗುತ್ತಾರೆ. ಉಲ್ಟಾಪಲ್ಟಾ ಕತೆ ಹೇಳಿ ತಾಳ್ಮೆ ಪರೀಕ್ಷೆ ಮಾಡುತ್ತಾರೆ. ಹೀಗಾಗಿ ಗ್ರೇಟ್ ಸ್ಟೋರಿಯು ಚಿಮಣಿ ಬುಡ್ಡಿಯಂತೆ ಮಂದ ಬೆಳಕನ್ನಷ್ಟೇ ಬೀರುತ್ತದೆ.
ನಾಯಕ ಉತ್ಪಲ್ಗೆ ಇದು ಚೊಚ್ಚಲು ಚಿತ್ರ. ಹೀಗಾಗಿ ಪಾತ್ರ ನಿರ್ವಹಣೆಯಲ್ಲಿ ಎಡವಿದ್ದಾರೆ. ಕುಡಿತಕ್ಕೇ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರುವುದರಿಂದ ಆ ಪಾತ್ರ ಕೂಡ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವುದಿಲ್ಲ. ಅನುಷಾ ಕ್ಯೂಟ್ ಆಗಿ ಕಂಡಿದ್ದಾರೆ. ರಂಗಾಯಣ ರಘು ಪಾತ್ರ ಅತಿರೇಕವಾಗಿ ಆಡುವುದರಿಂದ, ನಗೆಗಿಂತ ಕೋಪವೇ ಜಾಸ್ತಿ ಬರುತ್ತದೆ. ಒಂದೇ ಸಿನಿಮಾದಲ್ಲಿ ಎಲ್ಲವನ್ನೂ ಹೇಳುವುದಕ್ಕೆ ಹೋಗಿ, ಏನೂ ಹೇಳದಂತೆ ಉಳಿಯುತ್ತಾರೆ ನಿರ್ದೇಶಕರು. ಹೀಗಾಗಿ ಸೋಡಾಬುಡ್ಡಿ ದಿ ಗ್ರೇಟ್ ಅನಿಸಿಕೊಳ್ಳುವುದಿಲ್ಲ.
ಕನ್ನಡ ಚಿತ್ರ