ಹೊಸದಿಲ್ಲಿ: ಸರೀಸೃಪಗಳ ಮಾದರಿ ಹಾಗೂ ಪ್ರಾಣಿಗಳ ಚರ್ಮ ಮಾದರಿಗಳನ್ನೊಳಗೊಂಡ ಪ್ರಾಕೃತಿಕ ಇತಿಹಾಸದ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಅತ್ಯಮೂಲ್ಯವಾದ ಅನೇಕ ಮಾದರಿಗಳು ನಾಶವಾಗಿವೆ. ದಿಲ್ಲಿಯ ಮಂಡಿಹೌಸ್ನ ವಾಣಿಜ್ಯ ಮತ್ತು ಉದ್ದಿಮೆಗಳ ಭಾರತೀಯ ಒಕ್ಕೂಟ (ಎಫ್ಐಸಿಸಿಐ) ಕಟ್ಟಡದ ಕೊನೆಯ ಅಂತಸ್ತಿನಲ್ಲಿದ್ದ ಮ್ಯೂಸಿಯಂನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸುವಾಗ ಅತಿಯಾದ ಹೊಗೆ ಸೇವಿಸಿ ಅಸ್ವಸ್ಥಗೊಂಡ 6 ಮಂದಿ ಅಗ್ನಿಶಾಮಕ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಸರ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲ 34 ವಸ್ತು ಸಂಗ್ರಹಾಲಯಗಳ ಸುರಕ್ಷ ತೆ ಪರಿಶೀಲನೆಗೆ ಆದೇಶ ನೀಡಿದ್ದಾರೆ. ''ವಸ್ತು ಸಂಗ್ರಹಾಲಯವು ರಾಷ್ಟ್ರೀಯ ಆಸ್ತಿಯಾಗಿದ್ದು, ಸಾವಿರಾರು ಪ್ರದರ್ಶನ ಮಾದರಿಗಳು ಅಲ್ಲಿದ್ದವು. ನಿಜಕ್ಕೂ ಇದು ದೊಡ್ಡ ನಷ್ಟ,'' ಎಂದಿರುವ ಜಾವಡೇಕರ್, ನಷ್ಟದ ಪ್ರಮಾಣ ಹಾಗೂ ಅದನ್ನು ಸರಿಪಡಿಸುವ ವಿಧಾನಗಳನ್ನು ಕಲೆ ಹಾಕಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಎಫ್ಐಸಿಸಿಐ ಕಟ್ಟಡದಲ್ಲಿ ದುರಸ್ತಿ ಕೆಲಸ ನಡೆಯುತ್ತಿದ್ದು, ಕಟ್ಟಡದ ಇತರೆ ಅಂತಸ್ತುಗಳಿಗೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತು. ಅಗ್ನಿಶಾಮಕ ದಳದ ಸುಮಾರು 35 ಸಿಬ್ಬಂದಿ, ನಾಲ್ಕು ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸ ನಡೆಸಿದರು. ಘಟನೆ ಸಂದರ್ಭದಲ್ಲಿ ಕಟ್ಟಡದಲ್ಲಿ ಹೆಚ್ಚು ಜನರಿರದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 44 ವರ್ಷ ಹಳೆಯ ಮ್ಯೂಸಿಯಂ 1972ರಲ್ಲಿ ಸ್ಥಾಪನೆಯಾದ ಪ್ರಾಕೃತಿಕ ಇತಿಹಾಸದ ರಾಷ್ಟ್ರೀಯ ವಸ್ತು ಸಂಗ್ರಹಾಲಯವು ದೇಶದಲ್ಲಿ ಪರಿಸರದ ಕುರಿತು ಗಮನ ಹರಿಸುವ ಎರಡೇ ಎರಡು ಮ್ಯೂಸಿಯಂಗಳಲ್ಲಿ ಒಂದಾಗಿತ್ತು. ಇದು ಪರಿಸರ ಹಾಗೂ ಅರಣ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ----- ಎಫ್ಐಸಿಸಿಐ ಕಟ್ಟಡದಲ್ಲಿರುವ ಮ್ಯೂಸಿಯಂನ್ನು ಬಾಡಿಗೆಗೆ ಪಡೆಯಲಾಗಿತ್ತು. ಕಟ್ಟಡವನ್ನು ನಮ್ಮ ಸುಪರ್ದಿಗೆ ನೀಡಿದ ನಂತರ ಹಾನಿ ಪ್ರಮಾಣ ವಿಮರ್ಶಿಸಬಹುದು. ಇದನ್ನು ಹೇಗೆ ಪುನರ್ನಿರ್ಮಾಣ ಹೇಗೆ ಎನ್ನುವ ಬಗ್ಗೆ ಯೋಜನೆ ರೂಪಿಸುತ್ತೇವೆ. - ಪ್ರಕಾಶ್ ಜಾವಡೇಕರ್, ಪರಿಸರ ಸಚಿವ
↧
ಮ್ಯೂಸಿಯಂನಲ್ಲಿ ಬೆಂಕಿ: ಅಮೂಲ್ಯ ದಾಖಲೆ ನಾಶ
↧