ಟಿಕೆಟ್ ಇಲ್ಲದೇ ಭಾನುವಾರ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮಂತ ಕುಟುಂಬದ 44 ವರ್ಷದ ಮಹಿಳೆಯೊಬ್ಬರು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಾಗ 260 ರೂ. ದಂಡ ಕಟ್ಟಲು ಒಪ್ಪದೇ, ಜೈಲಿಗೆ ತೆರಳುವುದಾಗಿ ಹೇಳಿದ್ದಾರೆ.
ಇದೇ ವಿಚಾರವಾಗಿ ಅಧಿಕಾರಿಗಳೊಂದಿಗೆ 12 ತಾಸು ವಾಗ್ವಾದ ನಡೆಸಿದ ಮಹಿಳೆ, 'ಮಲ್ಯ ಅವರ ಬಗ್ಗೆ ಮೃದು ಧೋರಣೆ ಹೊಂದಿರುವ ಅಧಿಕಾರಿಗಳು ಸಾಮಾನ್ಯರಿಗೆ ಏಕೆ ಕಿರುಕುಳ ನೀಡುತ್ತಾರೆ, ಎಂದು ಪ್ರಶ್ನಿಸಿದ್ದಾರೆ.
ಮಲ್ಯ ಅವರಿಂದ ಬಾಕಿ ಇರುವ 9,000 ಕೋಟಿ ರೂ. ಸಾಲವನ್ನು ಮೊದಲು ವಸೂಲಿ ಮಾಡಿ, ಅವರನ್ನು ಬಂಧಿಸಿ ಎಂದಿದ್ದಾರೆ.
7 ದಿನ ಜೈಲಿಗೆ ಹೋಗುವೆ:
ದಕ್ಷಿಣ ಮುಂಬಯಿನ ಬಹುಳೇಶ್ವರ್ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ವಾಸಿಸುವ ಇಬ್ಬರು ಮಕ್ಕಳ ತಾಯಿ, ಮಹಾಲಕ್ಷ್ಮಿ ಸ್ಟೇಷನ್ನಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದರು. ದಂಡ ಕಟ್ಟುವಂತೆ ಸೂಚಿಸಿದಾಗ, ಮೊದಲು ಮಲ್ಯ ಅವರನ್ನು ಬಂಧಿಸುವಂತೆ ಆಗ್ರಹಿಸಿದರು. ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಮಂಗಳವಾರ ಹಾಜರು ಪಡಿಸಿದಾಗಲೂ ದಂಡ ಪಾವತಿಸಲು ನಿರಾಕರಿಸಿದ ಮಹಿಳೆ 7 ದಿನಗಳ ಕಾಲ ಜೈಲಿನಲ್ಲಿ ಇರಲು ಸಿದ್ಧ ಎಂದು ಹೇಳಿದ್ದಾರೆ.
ದಂಡ ಪಾವತಿಸುವಂತೆ ಆಕೆಯ ಮನವೊಲಿಸಲು ರೈಲ್ವೆ ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಗಿ ಕೊನೆಗೆ ವಿಷಯ ಕೈಬಿಟ್ಟಿದ್ದಾರೆ.
ಮುಂಬಯಿ: ಟೆಕೆಟ್ ರಹಿತ ಪ್ರಯಾಣಕ್ಕೂ ಮದ್ಯ ದೊರೆ ವಿಜಯ್ ಮಲ್ಯಗೂ ಎಲ್ಲಿಯ ಸಂಬಂಧ ? ಮುಂಬಯಿ ಮಹಿಳೆಯೊಬ್ಬರು ಇದಕ್ಕೊಂದು ಸಂಬಂಧ ಕಲ್ಪಿಸಿದ್ದಾರೆ.