ಈ ಎಲ್ಲಾ ಸೀರಿಯಲ್ಗಳ ಪೈಕಿ ರಾಮನ ಪಾತ್ರ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಅಷ್ಟೇ ಅಲ್ಲ, ಕಾಕತಾಳೀಯ ಎನ್ನುವಂತೆ 'ರಾಮಾಯಣ'ದಲ್ಲಿ ಸೀತೆಯಾಗಿದ್ದ ದೆಬಿನಾ ಬ್ಯಾನರ್ಜಿ ಅವರೇ ಮುಂದೆ ಗುರ್ಮೀತ್ ಪತ್ನಿಯೂ ಆದರು! ಸ್ನೇಹ, ಪ್ರೀತಿಯ ನಂತರ ಇವರಿಬ್ಬರ ಸಂಬಂಧ ಮದುವೆಯಲ್ಲಿ ಸುಖಾಂತ್ಯಗೊಂಡಿತು.
ಹಾಗೆ ನೋಡಿದರೆ ಗುರ್ಮೀತ್ ಚೌಧರಿ ಅವರ ಗುರಿ ಇದ್ದುದೇ ಸಿನಿಮಾ ಸೇರಬೇಕೆನ್ನುವುದು. ಬಾಲ್ಯದಲ್ಲಿ ಅವರು ನಟ ಶಶಿಕಪೂರ್ ಅವರ ದೊಡ್ಡ ಅಭಿಮಾನಿಯಂತೆ. ಮನೆಯಲ್ಲಿ ಎಲ್ಲರೂ ಅವರನ್ನು ಶಶಿಕಪೂರ್ ಎಂದೇ ಕರೆಯುತ್ತಿದ್ದರು. ಮುಂದೆ ಶಾರುಖ್ರನ್ನು ಇಷ್ಟಪಟ್ಟರು. ಹಲವಾರು ಬಾರಿ ಮುಂಬಯಿ ಬಾಂದ್ರಾದ ಶಾರುಖ್ ಬಂಗಲೆಯ ಎದುರು ಹೋಗಿ ನಿಲ್ಲುತ್ತಿದ್ದರಂತೆ! 'ಖಾಮೋಶಿಯಾನ್' ಚಿತ್ರದೊಂದಿಗೆ ಸಿನಿಮಾ ನಟನಾಗುವ ಅವರ ಆಸೆ ಈಡೇರಿತು.
ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಇರಾದೆ ಅವರದು. ಈಗಾಗಲೇ ಕೆಲವು ಪ್ರಮುಖ ಬ್ಯಾನರ್ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಸದ್ಯದಲ್ಲೇ ಅಧಿಕೃತವಾಗಿ ಚಿತ್ರಗಳ ಹೆಸರು ಘೋಷಿಸುವುದಾಗಿ ಹೇಳುತ್ತಾರವರು. 'ಖತ್ರೋನ್ ಕೆ ಖಿಲಾಡಿ', 'ನಾಚ್ ಬಲಿಯೇ' ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಅವರು ಮತ್ತೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಲೂ ಯೋಚಿಸುತ್ತಿದ್ದಾರೆ.
ಹಿಂದಿ ಕಿರುತೆರೆಯ ಜನಪ್ರಿಯ ನಟ ಗುರ್ಮೀತ್ ಚೌಧರಿ ಅವರಿಗೆ 'ಖಾಮೋಷಿಯನ್' ಸಿನಿಮಾ ಪಾತ್ರ ಒಂದೊಳ್ಳೆಯ ತಿರುವು ನೀಡಿದೆ. ಕಳೆದ ವರ್ಷ ತೆರೆಕಂಡ 'ಖಾಮೋಷಿಯಾನ್' ಚಿತ್ರದಲ್ಲಿ ಅವರು ಖಳನಾಗಿ ನಟಿಸಿದ್ದರು. ಈ ಪಾತ್ರ ಅವರ ನಟನಾ ಬದುಕಿಗೆ ಬಹುದೊಡ್ಡ ತಿರುವು ನೀಡಿತು. ಎಂಟು ವರ್ಷಗಳ ಹಿಂದೆ ಮೂಡಿಬಂದ 'ರಾಮಾಯಣ'ದಲ್ಲಿ ರಾಮನಾಗಿ ಮಿಂಚಿದ್ದ ಗುರ್ಮೀತ್ ಆನಂತರ ಹಲವು ಹಿಂದಿ ಸರಣಿಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.