ಇಲ್ಲಿಯ ಹುಬ್ಬಳ್ಳಿ ಸೊಲ್ಲಾಪೂರ ರಸ್ತೆ ಪಕ್ಕದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದೌಡಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು. ಔಷಧ ವಿತರಕ ಎನ್.ಆರ್.ಬೋನಗೇರಿ ಅಸ್ಪತ್ರೆಗೆ ಬರುವ ರೋಗಿಗಳ ಜೊತೆ ಸರಿಯಾಗಿ ವರ್ತಿಸುವುದಿಲ್ಲ. ಸರಕಾರದ ಔಷಧಿ, ಮಾತ್ರೆಗಳನ್ನು ಸರಿಯಾಗಿ ಪೂರೈಸದೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಈ ವಿಷಯವನ್ನು ಮೇಲಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಎರಡು ದಿನಗಳೊಳಗೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಕವಿತಾ ಶಿವನಾಯಕ ಸ್ಥಳಕ್ಕೆ ಆಗಮಿಸಿ ಇಲ್ಲಿ ನಡೆಯುತ್ತಿರುವ ಆಸ್ಪತ್ರೆ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಔಷಧ ವಿತರಕ ಬೋನಗೇರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಣಕೇಳುತ್ತಿದ್ದು ಈಗ ನಮ್ಮ ಗಮನಕ್ಕೆ ಬಂದಿದೆ. ಶೀಘ್ರ ಅದನ್ನು ಸರಿಪಡಿಸುವೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರುವೆ ಎಂದು ತಿಳಿಸಿದರು.
ಅವ್ಯವಸ್ಥೆ ಹಾಗೂ ಸಿಬ್ಬಂದಿ ವರ್ತನೆ ಬಗ್ಗೆ 15 ದಿನಗಳಲ್ಲಿ ತುರ್ತುಕ್ರಮ ಕೈಗೊಳ್ಳಲಾಗುವುದು. ಔಷಧಿ ವಿತರಕ ಬೋನಗೇರಿ ವಿರುದ್ಧ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕರವೇ ಕಾರ್ಯಕರ್ತರಿಗೆ ಭರವಸೆ ನೀಡಿದರು.
ಸಿಬ್ಬಂದಿ ಡಾ.ಎಂ.ಎಂ.ಹೂಲಿ, ಡಾ.ಎ.ಐ.ಶಿರಸಂಗಿ. ಡಾ.ಶಿವಪ್ಪನಾಯ್ಕ, ಕರವೇ ಅಧ್ಯಕ್ಷ ಪರಶುರಾಮ ಸೊನ್ನದ, ಪರಶುರಾಮ ನೀಲಗುಂದ, ವಿಷ್ಣು ಬದಾಮಿ, ಅರುಣ ಕಟ್ಟಿಮನಿ, ಪುನೀತ ಹಿರೇಮಠ, ರುದ್ರಪ್ಪ ಕಾಗದಾಳ, ಹಣಮಂತ ಗ್ಯಾಟಿನ, ಪ್ರಮೋದ ಪೂಜಾರ, ಸಿದ್ದನ್ನ ಕೊನ್ನೂರ, ಗುಂಡು ಬೋರಣ್ಣವರ, ಮಾರುತಿ ಗುಲಗಂಜಿ, ಭರತ ದಡಿ, ಗಣೇಶ ಗಂಜಿ, ವಿನೋದ ಕಲಾಲ, ರಾಜೇಶ್ವರಿ ದಾಸ್ಮನಿ, ಸುಮಂಗಲಾ ಗುತ್ತನ್ನವರ, ಜಯಶ್ರೀ ಬಡಿಗೇರ, ಸವಿತಾ ಕುದರಿ ಭಾಗವಹಿಸಿದ್ದರು.
ಕೆರೂರ: ಸರಕಾರಿ ಆಸ್ಪತ್ರೆ ಅವ್ಯವಸ್ಥೆ, ಸಿಬ್ಬಂದಿ ವರ್ತನೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.