ಯಂಭತ್ನಾಳ ಗ್ರಾಮದಲ್ಲಿ ಬುಧವಾರ ವಿದ್ಯುತ್ ಪರಿವರ್ತಕದ ತಂತಿ ಕಡಿತಗೊಂಡು ಬೆಂಕಿ ಹೊತ್ತಿದೆ. ಆದರೆ, ಪರಿವರ್ತಕಕ್ಕೆ ಏನೂ ಆಗಿಲ್ಲ. ಗುರುವಾರ ಬೆಳಗ್ಗೆ ಅದೇ ವಿದ್ಯುತ್ ಪರಿವರ್ತಕ ದುರಸ್ತಿಗೊಳಿಸಿ ವಿದ್ಯುತ್ ಸರಬರಾಜು ಮಾಡಲಾಗಿದೆ. - ಜಹಗೀರದಾರ, ಹೆಸ್ಕಾಂ ಅಧಿಕಾರಿ, ಬಸವನ ಬಾಗೇವಾಡಿ.
ಬಸವನ ಬಾಗೇವಾಡಿ: ಕೆಲ ಅಧಿಕಾರಿಗಳು ತೋರುವ ಉದಾಸೀನ, ಉದ್ಧಟತನ ಏನೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ವಿದ್ಯುತ್ ಪರಿವರ್ತಕ (ಟಿಸಿ)ದ ವಿದ್ಯುತ್ ತಂತಿಗಳು ಜೋತು ಬಿದ್ದಿರುವ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿ ಉರಿದಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಪಕ್ಕದಲ್ಲೇ ಇರುವ ಕಣಕಿ ಬಣವೆಗಳು, ಏಳೆಂಟು ಅದೃಷ್ಟವಶಾತ್ ಬಚಾವಾಗಿವೆ. ಆಗಿದ್ದಿಷ್ಟು: ತಾಲೂಕಿನ ಯಂಭತ್ನಾಳ ಗ್ರಾಮದಲ್ಲಿ ಕಳೆದ 40 ವರ್ಷಗಳ ಹಿಂದೆ ಟಿಸಿ ಅಳವಡಿಸಲಾಗಿದೆ. ಇದರ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಗಾಳಿಗೆ ಒಂದಕ್ಕೊಂದು ತಾಗಿ ಸರಸರನೆ ಬೆಂಕಿ ಹೊತ್ತಿಕೊಂಡು ವಿದ್ಯುತ್ ಪರಿವರ್ತಕಕ್ಕೂ ತಾಗಿದೆ. ಜನರು ನೋಡ ನೋಡುತ್ತಿದ್ದಂತೆ ಟಿಸಿ ಕೆಳಗಿರುವ ಹುಲ್ಲಿಗೂ ಹೊತ್ತಿದಾಗ ಭಯಭೀತರಾಗಿ ಮಣ್ಣು ಉಗ್ಗಿ ನಂದಿಸಿದ್ದಾರೆ. ಒಂದು ವೇಳೆ ಜನರು ಇದನ್ನು ನೋಡದೇ ಇದ್ದರೆ ಪಕ್ಕವೇ ಇರುವ ಕಣಿಕೆಗೆ, ಏಳೆಂಟು ಮನೆಗಳಿಗೆ ಬೆಂಕಿ ತಗುಲಿ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಗ್ರಾಮಸ್ಥರು 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು. ಉದ್ಧಟತನ: ನಾಲ್ಕು ದಶಕಗಳ ಹಿಂದೆಯೇ ಅಳವಡಿಸಿದ ಟಿಸಿಯ ಕಂಬಗಳು ವಾಲಿದ್ದು, ಹಿಂಭಾಗದ ತಂತಿಗಳು ಜೋತು ಬಿದ್ದಿವೆ. ಬಾಗಿದ ಕಂಬಗಳನ್ನು ಸರಿಪಡಿಸಿ ಮತ್ತು ಹೊಸ ತಂತಿಗಳನ್ನು ಜೋಡಿಸಲು ಹೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ತಂತಿ ಸ್ಪರ್ಶದಿಂದ ಹೊತ್ತಿದ ಬೆಂಕಿಯಿಂದ ತಂತಿ ಕತ್ತರಿಸಿದ ನಂತರ ವಿದ್ಯುತ್ ಕಡಿತಗೊಂಡು ಅನುಕೂಲ ಮಾಡಿಕೊಟ್ಟಿತು. ಇಲ್ಲದಿದ್ದರೆ ಪರಿವರ್ತಕ ಸುಡುತ್ತಿತ್ತು. ಇಷ್ಟೆಲ್ಲಾ ನಡೆದು ಟಿಸಿಗೆ ಅಳವಡಿಸಿದ ಹಳೆಯ ತಂತಿ ತೆಗೆದು ಹೊಸ ತಂತಿ ಹಾಕಬೇಕು. ವಾಲಿದ ಕಂಬಗಳನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರೂ ಅಧಿಕಾರಿಗಳು ಮಾತ್ರ ಸೊಪ್ಪು ಹಾಕದೆ ಮತ್ತದೇ ಹಳೆಯ ವಿದ್ಯುತ್ ತಂತಿ ಸರಿಪಡಿಸಿ ಸರಬರಾಜು ಮಾಡಿದ್ದು, ತಮ್ಮ ಮಾತು, ಮನವಿಗೆ ಕ್ಯಾರೇ ಎನ್ನುತ್ತಿಲ್ಲ. ಮತ್ತೆ ಯಾವಾಗ ಅನಾಹುತ ಕಾದಿದೆಯೋ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.