* ಶರಣು ಹುಲ್ಲೂರು
ಮದುವೆ ಅನ್ನುವುದು ಮಧುರ ಸಂಬಂಧದ ಬೆಸುಗೆ ಅಂತಾರೆ. ಈ ಮದುವೆ ನಾನಾ ನಮೋನಿಯಲ್ಲಿ ನಡೆದರೂ, ಅದರ ಅಂತಿಮ ಉದ್ದೇಶ ಎರಡು ಹೃದಯಗಳನ್ನು ಬೆಸೆಯುವುದು. 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಮೂಲಕ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ನಿರ್ದೇಶಕ ಕವಿರಾಜ್. ಪ್ರೀತಿಸಿದ ಎರಡು ಹೃದಯಗಳನ್ನು ಒಂದಾಗಿಸಲು ಅನೇಕ ಚಮತ್ಕಾರಗಳಿಗೆ ಮೊರೆ ಹೋಗುತ್ತಾರೆ. ಅವುಗಳು ಸಿನಿಮಯ ರೀತಿಯಲ್ಲಿ ಇರದ ಕಾರಣ, ಚಿತ್ರವು ಕೊಂಚ ಆಮೆವೇಗದಲ್ಲಿ ಸಾಗಿದಂತೆ ಭಾಸವಾಗುತ್ತದೆ.
ಇದು ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಚಿತ್ರ. ಪಾಟೀಲ್ (ಅಚ್ಯುತ್ಕುಮಾರ್) ಮತ್ತು ಕೃಷ್ಣೇಗೌಡ (ಅನಂತ್ನಾಗ್)ಎರಡು ಕುಟುಂಬಗಳು. ಪಾಟೀಲ್ ಮಗ ಸೂರಜ್ (ಸೂರಜ್), ಕೃಷ್ಣೇಗೌಡರ ಮಗಳು ಖುಷಿ (ಅಮೂಲ್ಯ). ಇವರಿಬ್ಬರ ಲವ್ಸ್ಟೋರಿ. ನಂತರ ಕುಟುಂಬಗಳ ಮಧ್ಯೆ ಸಣ್ಣ ಮನಸ್ತಾಪ. ಅದು ಪ್ರೇಮಿಗಳ ಮೇಲೆ ಬೀರುವ ಪರಿಣಾಮ... ಹೀಗೆ ಕತೆ ಸಾಗುತ್ತದೆ. ಅಲ್ಲಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗುವುದರಿಂದ ಕುತೂಹಲ ಮೂಡಿಸುತ್ತದೆ. ಕಲರ್ಫುಲ್ ಹಾಡುಗಳು ಕಣ್ಣಿಗೆ ತಂಪನ್ನೆರದರೆ, ನವಿರಾದ ಹಾಸ್ಯದ ಮಾತುಗಳು ಮನಸಿಗೆ ಮುದ ನೀಡುತ್ತವೆ. ಹೀಗಾಗಿ ಮದುವೆಯ ಊಟದಲ್ಲಿ ವೆರೈಟಿ ಭೋಜನೆ ಇದೆ.
ಕಲರ್ಫುಲ್ ಮದುವೆಯಲ್ಲಿ ಕೊಂಚ ಡಲ್ಲು ಅಂದರೆ ನಾಯಕ ಸೂರಜ್. ಇದು ಇವರ ಚೊಚ್ಚಲು ಸಿನಿಮಾ. ನಾಯಕನ ಮುಂದೆ ಸಖತ್ ಸ್ಕೋರ್ ಮಾಡುವುದು ಅಮೂಲ್ಯ. ಬೋಲ್ಡ್ ಆಗಿ ಕಾಣಿಸುವುದರ ಜತೆಗೆ ಖಡಕ್ಕಾಗಿ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ, ಕತೆಯಲ್ಲಿ ಪೋಷಕ ಪಾತ್ರಗಳಿಗೂ ಮಹತ್ವ ಇರುವುದರಿಂದ ಅಚ್ಯುತ್ ಕುಮಾರ್ ಮತ್ತು ಅನಂತ್ನಾಗ್ ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿಕ್ಕಣ್ಣ, ಬುಲೆಟ್ ಪ್ರಕಾಶ್ ಮತ್ತು ಸಾಧು ಕೋಕಿಲಾರ ಕಿಲಕಿಲವು ಮದುವೆಗೆ ಇನ್ನಷ್ಟು ರಂಗು ತುಂಬುತ್ತದೆ.
ವಿ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡುಗಳಲ್ಲಿ 'ಹುಡುಗಿ ಕೈ ಏಟು' ಅನ್ನುವ ಹಾಡು ಕಚಗುಳಿ ಇಟ್ಟರೆ, 'ಮರಣ ದಂಡನೆ' ಭಾವುಕತೆಗೆ ದೂಡುತ್ತದೆ. 'ಮನೆಕಟ್ಟಿ ನೋಡು ಮದುವೆ ಮಾಡಿ ನೋಡು' ಅನ್ನುವುದು ವಾಡಿಕೆ. ಅದರ ಜತೆ ಸಿನಿಮಾವನ್ನೂ ಮಾಡಿ ನೋಡುವ ಪ್ರಯತ್ನ ಮಾಡಿದ್ದಾರೆ ಚಿತ್ರಸಾಹಿತಿ ಕಂ ನಿರ್ದೇಶಕ ಕವಿರಾಜ್. ಬಹುತೇಕ ನಿರ್ದೇಶಕರ ಚೊಚ್ಚಲು ಸಿನಿಮಾಗಳಂತೆ ಲವ್ಸ್ಟೋರಿಗೇ ಜೋತು ಬೀಳದೆ, ಅದಕ್ಕೆ ಫ್ಯಾಮಿಲಿ ಸ್ಪರ್ಶ ನೀಡಿದ್ದಾರೆ. ಹೀಗಾಗಿ ಸಿನಿಮಾ ವಿಭಿನ್ನವಾಗಿ ನಿಲ್ಲುತ್ತದೆ. ಫ್ಯಾಮಿಲಿ ಪ್ರೇಕ್ಷಕರ ಗಮನ ಸೆಳೆಯುತ್ತದೆ.
ಕನ್ನಡ ಚಿತ್ರ : ಮದುವೆಯ ಮಮತೆಯ ಕರೆಯೋಲೆ