Quantcast
Channel: VijayKarnataka
Viewing all articles
Browse latest Browse all 6795

ಅಲ್ಪ ಪ್ರೀಮಿಯಂನಲ್ಲಿ ನೂತನ ಬೆಳೆ ವಿಮೆ

$
0
0

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು

* ಮುಂಬರುವ ಜೂನ್‌ನಿಂದ ಯೋಜನೆ ಜಾರಿ

* ಆಹಾರ ಧಾನ್ಯ ಬೆಳೆಗೆ ಶೇ.2, ತೋಟಗಾರಿಕೆ ಬೆಳೆಗೆ ಶೇ.5 ಪ್ರೀಮಿಯಂ ವೆಚ್ಚ

* ಸರಕಾರದ ಬೊಕ್ಕಸಕ್ಕೆ ವಾರ್ಷಿಕ 8,800 ಕೋಟಿ ರೂ. ವೆಚ್ಚ

* ಬೆಳೆ ವಿಮೆಯ ಕವರೇಜ್ 50 ಪರ್ಸೆಂಟ್‌ಗೆ ಹೆಚ್ಚಳ

* ಖಾಸಗಿ ವಿಮೆ ಕಂಪನಿಗಳು ಮತ್ತು ಅಗ್ರಿಕಲ್ಚರ್ ಇನ್ಷೂರೆನ್ಸ್ ಕಂಪನಿ ಆಫ್ ಇಂಡಿಯಾದಿಂದ ಯೋಜನೆ ಅನುಷ್ಠಾನ

ಹೊಸದಿಲ್ಲಿ: ಕಳೆದೆರಡು ವರ್ಷಗಳಿಂದ ಬರದ ಬವಣೆಯಲ್ಲಿ ನಲುಗಿರುವ ರೈತರಿಗೆ ನೆರವು ನೀಡುವ ನಿಟ್ಟಿನಲ್ಲಿ, ಅತ್ಯಲ್ಪ ಪ್ರೀಮಿಯಂ ವೆಚ್ಚದಲ್ಲಿ ಬೆಳೆ ವಿಮೆಯನ್ನು ಒದಗಿಸುವ, ವಾರ್ಷಿಕ 8,800 ಕೋಟಿ ರೂ. ವೆಚ್ಚದ ನೂತನ ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರಕಾರ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಯನ್ನು ಬುಧವಾರ ಅನುಮೋದಿಸಲಾಗಿದ್ದು, ಮುಂಬರುವ ಜೂನ್ ತಿಂಗಳಿನಿಂದ ಯೋಜನೆ ಜಾರಿಯಾಗಲಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ)ಎಂಬ ಹೆಸರಿನ ಈ ಬೆಳೆ ವಿಮೆಯಿಂದ ರೈತರಿಗೆ ಪ್ರಾಕೃತಿಕ ವಿಕೋಪಗಳಿಂದ ಬೆಳೆ ಹಾನಿ ಸಂಭವಿಸಿದಾಗ ಪರಿಹಾರ ದೊರೆಯಲಿದೆ.

ಆಹಾರ ಧಾನ್ಯಗಳು ಮತ್ತು ತೈಲ ಬೀಜಗಳ ಬೆಳೆಗೆ ಕೇವಲ 2 ಪರ್ಸೆಂಟ್ ಮತ್ತು ತೋಟಗಾರಿಕೆ, ಹತ್ತಿಯ ಬೆಳೆಗೆ 5 ಪರ್ಸೆಂಟ್ ಪ್ರೀಮಿಯಂ ಮೊತ್ತವನ್ನು ರೈತರು ಭರಿಸಬೇಕಾಗುತ್ತದೆ. ಪ್ರೀಮಿಯಂನ ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಾನವಾಗಿ ಭರಿಸಲಿವೆ.ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 8,800 ಕೋಟಿ ರೂ. ವೆಚ್ಚವಾಗಲಿದೆ.

ನೂತನ ಪಿಎಂಎಫ್‌ಬಿವೈ ಈಗಿರುವ ರಾಷ್ಟ್ರೀಯ ಕೃಷಿ ವಿಮೆ ಯೋಜನೆ ಮತ್ತು ಸುಧಾರಿತ ಎನ್‌ಎಐಎಸ್ ಬೆಳೆ ವಿಮೆ ಯೋಜನೆಗಳನ್ನು ತೆರವುಗೊಳಿಸಲಿದೆ. ಈ ಎರಡೂ ಯೋಜನೆಗಳಲ್ಲಿ ಕೆಲವು ನ್ಯೂನತೆಗಳಿರುವುದರಿಂದ ಹೊಸ ಯೋಜನೆ ಜಾರಿಯಾಗಿದೆ. ಅಕ್ಟೋಬರ್-ಮಾರ್ಚ್‌ನಲ್ಲಿನ ರಾಬಿ ಅವಧಿಯ ಆಹಾರ ಧಾನ್ಯಗಳಿಗೆ ಪ್ರೀಮಿಯಂ ಶೇ.1.5ರಷ್ಟಿ ಇರಲಿದೆ. ಮುಂಗಾರು ಅವಧಿಯ (ಖಾರಿಫ್) ಆಹಾರ ಧಾನ್ಯ, ತೈಲ ಬೀಜ ಬೆಳೆಗೆ 2 ಪರ್ಸೆಂಟ್ ಪ್ರೀಮಿಯಂ ಇರಲಿದೆ. ತೋಟಗಾರಿಕೆ ಮತ್ತು ಹತ್ತಿ ಬೆಳೆಗೆ ಎರಡೂ ಅವಧಿಗಳಲ್ಲಿ 5 ಪರ್ಸೆಂಟ್ ಪ್ರೀಮಿಯಂ ಇರುತ್ತದೆ.

ಒಟ್ಟು 19.44 ಕೋಟಿ ಹೆಕ್ಟೇರ್ ಬೆಳೆಯ ಪ್ರದೇಶದಲ್ಲಿ ಶೇ.50ರಷ್ಟು ವ್ಯಾಪ್ತಿಗೆ ವಿಮೆಯ ಕವರೇಜ್ ವಿಸ್ತರಿಸಲಿದೆ. ಈಗ ಶೇ.25-27ರಷ್ಟು ಪ್ರದೇಶಕ್ಕೆ ಮಾತ್ರ ಕವರೇಜ್ ಸಿಗುತ್ತಿದೆ.

ಪಿಎಂಎಫ್‌ಬಿವೈನಲ್ಲಿ ಪ್ರೀಮಿಯಂ ಮತ್ತು ವಿಮೆ ಪರಿಹಾರಕ್ಕೆ ಗರಿಷ್ಠ ಮಿತಿ ಇರುವುದಿಲ್ಲ. ಹೀಗಾಗಿ ರೈತರಿಗೆ ವಿಮೆ ಪರಿಹಾರದಲ್ಲಿ ಇಡೀ ಮೊತ್ತ ಸಿಗಲಿದೆ. ಕ್ಲೇಮ್‌ನ 25 ಪರ್ಸೆಂಟ್ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು.

ಖಾಸಗಿ ವಿಮೆ ಕಂಪನಿಗಳು ಮತ್ತು ಅಗ್ರಿಕಲ್ಚರ್ ಇನ್ಷೂರೆನ್ಸ್ ಕಂಪನಿ ಆಫ್ ಇಂಡಿಯಾ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿವೆ. ಕ್ಲೇಮ್‌ಗಳ ಎಲ್ಲ ಉತ್ತರದಾಯಿತ್ವ ವಿಮೆದಾರರಿಗೆ ಸೇರಲಿದೆ. ಸರಕಾರ ಕೊಡುವ ಪ್ರೀಮಿಯಂ ಸಬ್ಸಿಡಿಗೆ ಯಾವುದೇ ಗರಿಷ್ಠ ಮಿತಿ ಇಲ್ಲಿಲ್ಲ. ಒಂದು ವೇಳೆ ಪ್ರೀಮಿಯಂ ಬ್ಯಾಲೆನ್ಸ್ 90 ಪರ್ಸೆಂಟ್ ಇದ್ದರೂ ಸರಕಾರ ಭರಿಸಲಿದೆ.

ಸ್ಮಾರ್ಟ್‌ಫೋನ್ ಹಾಗೂ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿಕೊಂಡು ಬೆಳೆ ಹಾನಿ ಕುರಿತ ಮಾಹಿತಿಗಳನ್ನು ಪಡೆದುಕೊಳ್ಳಲಾಗುವುದು. ಇದರಿಂದ ಬೆಳೆಗಾರರಿಗೆ ವಿಮೆ ಪರಿಹಾರ ವಿತರಣೆ ತ್ವರಿತವಾಗಲಿದೆ.

ದುರ್ಬಲ ಮುಂಗಾರಿನ ಪರಿಣಾಮ ಸತತ ಎರಡು ವರ್ಷಗಳಿಂದ ದೇಶದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಈ ಬೆಳೆ ವಿಮೆ ಯೋಜನೆ ಮಹತ್ತ್ವ ಪಡೆದುಕೊಂಡಿದೆ.

''ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಇದು ಅತ್ಯಲ್ಪ ಪ್ರೀಮಿಯಂನ ಬೆಳೆ ವಿಮೆಯಾಗಿದ್ದು, ರೈತರಿಗೆ ಪ್ರಯೋಜನಕಾರಿಯಾಗಿದೆ. ಈ ಹೊಸ ಯೋಜನೆಯನ್ನು ರೈತರು ಹಾರ್ದಿಕವಾಗಿ ಸ್ವಾಗತಿಸುವ ವಿಶ್ವಾಸ ತಮಗಿದೆ'' ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ಹೇಳಿದ್ದರು.

ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕೃಷಿಕರಿಗೆ ಬೆಳೆ ವಿಮೆಯ ಪ್ರೀಮಿಯಂ ಹೊರೆಯನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದರು ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

''ಬೆಳೆ ಕೊಯ್ಲಿನ ನಂತರದ ಅವಧಿಯಲ್ಲಿ ಉಂಟಾಗುವ ಹಾನಿಗೂ ವಿಮೆ ಪರಿಹಾರ ಸಿಗಲಿದೆ'' ಎಂದು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>