* ಶಶಿಧರ ಚಿತ್ರದುರ್ಗ
ಹಳ್ಳಿ ಜಾತ್ರೆಗಳ ಸಂಭ್ರಮವನ್ನೊಮ್ಮೆ ನೆನಪು ಮಾಡಿಕೊಳ್ಳಿ. ಬಣ್ಣದ ಪೇಪರಿನಿಂದ ಸಿಂಗರಿಸಿದ ಎತ್ತಿನ ಗಾಡಿ, ಕೊಂಬುಗಳಿಗೆ ಬಣ್ಣ ಹಚ್ಚಿಸಿಕೊಂಡ ಎತ್ತುಗಳು, ಹೊಸ ಬಟ್ಟೆ ತೊಟ್ಟ ಪುಟಾಣಿ ಮಕ್ಕಳು, ಜಾತ್ರೆಯಲ್ಲಿ ಬೆಂಡು - ಬತಾಸು, ಹೆಣ್ಮಕ್ಕಳ ಮನಸನ್ನು ಕದಿಯುವ ಅಲಂಕಾರಿಕ- ಶೃಂಗಾರ ಸಾಮಗ್ರಿಗಳು... ಒಟ್ಟಿನಲ್ಲಿ ಕಣ್ಮುಚ್ಚಿ ಒಮ್ಮೆ ಧ್ಯಾನಿಸಿದರೆ ಬಣ್ಣದ ಕ್ಯಾನ್ವಾಸ್! ಇಂಥದ್ದೊಂದು ಚಿತ್ರಣವನ್ನು ಆಧುನಿಕ ಮಾದರಿಯಲ್ಲಿ ತೆರೆ ಮೇಲೆ ತರಲು ಯತ್ನಿಸಿದ್ದಾರೆ 'ಜಾತ್ರೆ' ನಿರ್ದೇಶಕ ರವಿತೇಜ. ಇದಕ್ಕೆ ಛಾಯಾಗ್ರಾಹಕ ಜಗದೀಶ್ ವಾಲಿ ಅವರು ಸೂಕ್ತ ರೀತಿಯಲ್ಲಿ ನೆರವಾಗಿದ್ದಾರೆ.
ಇನ್ನು ಚಿತ್ರದ ಕಥೆಯ ವಿಚಾರಕ್ಕೆ ಬರುವುದಾದರೆ... ಅಲ್ಲಿಯೂ ಬಣ್ಣದ ಕನಸುಗಳಿದ್ದು, ಅವು ಚದುರಿವೆ! ಬಣ್ಣದ ಸನ್ನಿವೇಶಗಳು ಕನಸಿನಲ್ಲಿ ಪ್ರಿಯವಾದರೂ ವಾಸ್ತವದಲ್ಲಿ ಅವು ಚೌಕಟ್ಟಿನಲ್ಲಿದ್ದರಷ್ಟೇ ಚೆಂದ. ಅಪಾರ ಜೀವನಪ್ರೀತಿಯೊಂದಿಗೆ ಅಂಥದ್ದೇ ಮಾದರಿಯ ಸನ್ನಿವೇಶಗಳನ್ನು ಪೋಣಿಸುತ್ತಾ ಹೋಗುವ ನಿರ್ದೇಶಕರು ಕನಸುಗಳ ಹೆಣಿಗೆಯಲ್ಲಿ ಕೊಂಚ ಎಡವುತ್ತಾರೆ. ಈ ಚಿತ್ರದ ಸರಣಿ ತಯಾರಾಗಲಿದೆ ಎನ್ನುವ ಸೂಚನೆಯೊಂದಿಗೆ 'ಜಾತ್ರೆ' ಚಿತ್ರ ಕೊನೆಯಾಗುತ್ತದೆ. ಬಹುಶಃ ಎರಡನೇ ಭಾಗದ ಮುನ್ಸೂಚನೆಯೊಂದಿಗೇ ರವಿತೇಜ ಮೊದಲ ಸರಣಿಗೆ ಕಥೆ ಬರೆದಿರಬಹುದು. ಇದರಿಂದಾಗಿ ಚಿತ್ರಕಥೆಯ ಹೆಣಿಗೆ ಸಡಿಲವಾಗುತ್ತಾ ಹೋಗಿದೆ.
ಮಧ್ಯಂತರದವರೆಗೂ ಕಾಣಿಸುವ ಬಿಡಿಬಿಡಿ ದೃಶ್ಯಗಳು, ಆಕರ್ಷಕ ಛಾಯಾಗ್ರಹಣ ಮತ್ತು ಕಲಾವಿದರ ಉತ್ತಮ ಪಾತ್ರಪೋಷಣೆಯಿಂದಾಗಿ ಗೆಲ್ಲುತ್ತವೆ. ಈ ಹಂತದಲ್ಲಿ ರಕ್ಷಿತ್ ಶೆಟ್ಟಿ, ಶ್ರವಂತ್, ಅಕ್ಷಯ್ ವಿಶೇಷ ಪಾತ್ರಗಳು ಚಿತ್ರ ಹಳಿ ತಪ್ಪದಂತೆ ಕಾಪಾಡುವುದು ಹೌದು. ಇಂಟರ್ವೆಲ್ ನಂತರ ಕಥೆ ಹೇಳತೊಡಗುವ ನಿರ್ದೇಶಕರಿಗೆ ಚಿತ್ರದ ಮುಂದಿನ ಸರಣಿಯಲ್ಲಿ ಕಥೆಗೆ ಅಂತ್ಯ ಕೊಡುವ ಉದ್ದೇಶವಿದ್ದಂತೆ ಕಾಣುತ್ತದೆ. ಆ ಮಟ್ಟಿಗೆ ಚಿತ್ರಕಥೆಯಲ್ಲಿನ ವಿಶಿಷ್ಟ ಪ್ರಯೋಗಗಳ ಪಟ್ಟಿಗೆ 'ಜಾತ್ರೆ' ಕೂಡ ಸೇರ್ಪಡೆಯಾದಂತಾಗಿದೆ. ಮೈಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ಮೂಡಿಸಿಕೊಂಡಿರುವ ಹೀರೋ ಚೇತನ್ ಚಂದ್ರ ಮತ್ತು ಮುದ್ದು ಮುಖದ ಐಶ್ವರ್ಯಾ ನಾಗ್ ತಮ್ಮ ಪಾತ್ರಗಳ ಹದವರಿತು ಅಚ್ಚುಕಟ್ಟಾಗಿ ನಟಿಸಿದ್ದಾರೆ. ಚುರುಕಾದ ಸಂಭಾಷಣೆ, ಅಬ್ಬರವಿಲ್ಲದ ಗೀತಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಕೈಹಿಡಿದಿದೆ. ಇತ್ತೀಚೆಗೆ ಯುವ ಪ್ರೇಕ್ಷಕರನ್ನು ಮೆಚ್ಚಿಸಲೆಂದೇ ಬರೆಯುವ ದ್ವಂದ್ವಾರ್ಥದ ಡೈಲಾಗ್ಗಳಿಲ್ಲ ಚಿತ್ರದಲ್ಲಿಲ್ಲ ಎನ್ನುವುದು ಸಮಾಧಾನಕಾರ ಸಂಗತಿ. ಫ್ರೆಶ್ನೆಸ್ ಅಪೇಕ್ಷಿಸುವವರು 'ಜಾತ್ರೆ'ಯಲ್ಲೊಮ್ಮೆ ಅಡ್ಡಾಡಿ ಬರಬಹುದು.
ಕನ್ನಡ ಚಿತ್ರ