- ಎಚ್. ಮಹೇಶ್
ಮಾಸ್ಟರ್ ಪೀಸ್ ಚಿತ್ರ ರಿಲೀಸ್ಗೂ ಮುನ್ನವೇ ಹಲವು ದಾಖಲೆಗಳನ್ನು ಮಾಡಿದೆ. ಯಶ್ ನಟನೆಯ ಈ ಚಿತ್ರ ಇಂದು (ಡಿ.24) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದ್ದು, ಮುಂಜಾನೆ ಐದು ಗಂಟೆಗೇ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಯಶ್ರನ್ನು ಟಾರ್ಗೆಟ್ ಮಾಡುತ್ತಿರುವ ಬರಹಗಳು ಸೋಶಿಯಲ್ ನೆಟ್ವರ್ಕ್ ಸೈಟ್ಗಳಲ್ಲಿ ಕಳೆದ ಎರಡು ದಿನಗಳಿಂದ ಚರ್ಚೆಗಳನ್ನು ಹುಟ್ಟುಹಾಕಿವೆ.
ಯಶ್ ಪದೇ ಪದೇ ಟಾರ್ಗೆಟ್ ಆಗಲು ಕಾರಣ ಏನು ಎಂದು ಯಶ್ ಜತೆ ಕೆಲಸ ಮಾಡಿರುವ ಲಕ್ಕಿ ಚಿತ್ರದ ನಿರ್ದೇಶಕ ಸೂರಿ ಅವರನ್ನು ಕೇಳಿದಾಗ, 'ಯಶ್ ಟಾರ್ಗೆಟ್ ಆಗಲು ಮುಖ್ಯ ಕಾರಣ ಅವರು ಹೊಸ ಹುಡುಗರ ಸಿನಿಮಾಗಳನ್ನು ಹಾಗೂ ತಂಡವನ್ನು ಪ್ರೋತ್ಸಾಹಿಸುವುದೇ ಆಗಿದೆ. 'ನಮ್ಮ ಸಿನಿಮಾ ಬಗ್ಗೆ ಮಾತನಾಡಿ , ನಮ್ಮ ಸಿನಿಮಾದಲ್ಲಿ ನಟಿಸಿ' ಎಂದು ಕೇಳಿಕೊಂಡು ಅವರ ಮನೆಗೆ ಹೋಗುವ ಹೊಸಬರ ಸಂಖ್ಯೆ ಹೆಚ್ಚಾಗಿದೆ. ಯಶ್ ಪ್ರತಿಭಾವಂತರನ್ನು ಮಾತ್ರ ಪ್ರೋತ್ಸಾಹಿಸುತ್ತಾರೆ. ಚಿತ್ರಗಳು ಸರಿ ಎಲ್ಲ ಎಂದರೆ ಅಂಥಹ ಚಿತ್ರಗಳನ್ನು ಪ್ರಮೋಟ್ ಮಾಡುವುದಿಲ್ಲ. ಮಂಡ್ಯ ಸ್ಟಾರ್ ಚಿತ್ರತಂಡದವರು ತಮ್ಮ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ರನ್ನು ಕೇಳಿದ್ದರು. ಇದಕ್ಕೆ ಯಶ್ ನಟ 'ಕತೆ ನೋಡಬೇಕು, ಅದೂ ಅಲ್ಲದೇ ನನಗೆ ಈಗ ಸಮಯ ಇಲ್ಲ' ಎಂದು ಹೇಳಿ ಕಳುಹಿಸಿದ್ದರು. ಅದನ್ನೇ ನೆಪವಾಗಿಟ್ಟುಕೊಂಡು ಮಂಡ್ಯ ಸ್ಟಾರ್ ಚಿತ್ರತಂಡ 'ಯಶ್, ರೈತರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಅವರು ಕ್ಷಮೆ ಕೋರಬೇಕು' ಎಂದು ಸೋಶಿಯಲ್ ನೆಟ್ವರ್ಕ್ ಸೈಟ್ಗಳಲ್ಲಿ ಅಭಿಯಾನ ಪ್ರಾರಂಭಿಸಿದೆ' ಎನ್ನುತ್ತಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದವರು ಕೂಡ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ, 'ಯಶ್ ರೈತ ಕುಟುಂಬದಿಂದಲೇ ಬಂದವರು. ಅವರಿಗೆ ಯಾರ ಬಗ್ಗೆ ಮಾತನಾಡಬೇಕು, ಮಾತನಾಡಬಾರದು ಎಂಬ ಸೆನ್ಸ್ ಇದೆ. ರೈತರ ಕಷ್ಟಗಳಿಗೆ ಅವರು ಪರೋಕ್ಷ ಸಹಾಯ ಮಾಡಿದ್ದಾರೆ. ಯಶ್ , ಕಾಲ್ಶೀಟ್ ಕೊಡಲಿಲ್ಲ ಎಂದು ಈ ರೀತಿ ಅವರ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ. ಕಲಾವಿದರು ಇದನ್ನು ಒಗ್ಗಟಾಗಿ ಪ್ರತಿಭಟಿಸಬೇಕು' ಎಂದಿದ್ದಾರೆ.
ಇದರ ಸತ್ಯಾಸತ್ಯತೆ ತಿಳಿಯಲು ಯಶ್ರನ್ನು ಸಂಪರ್ಕಿಸಿದಾಗ, 'ಈ ವಿಷಯದ ಬಗ್ಗೆ ಅಭಿಪ್ರಾಯ ಕೊಡಲು ಇಷ್ಟ ಇಲ್ಲ. ಇಂದು ಮಂಡ್ಯ ಜನ ಮಾತನಾಡುವ ಅಣ್ಣ-ತಮ್ಮ ಪದ ಇಂಟರ್ನ್ಯಾಷನಲ್ ಲೆವಲ್ನಲ್ಲಿ ಗುರುತಿಸಿಕೊಂಡಿದೆ. ನನ್ನ ಕಿರಾತಕ, ರಾಜಾಹುಲಿ, ಡ್ರಾಮಾ ಚಿತ್ರಗಳು ಮಂಡ್ಯ ಜಿಲ್ಲೆಯ ಜನರ ಕುರಿತಾದ ಕತೆಗಳೇ ಆಗಿದ್ದವು. ಈಗ ಅವರ ಬಗ್ಗೆ ನಾನು ಯಾಕೆ ಕೆಟ್ಟದಾಗಿ ಮಾತನಾಡಬೇಕು? ಒಬ್ಬ ಸಿಲೆಬ್ರಿಟಿಯಾಗಿ ರೈತರ ವಿರುದ್ಧ ಮಾತನಾಡುವುದಕ್ಕೆ ಆಗುತ್ತದಾ..? ಮಂಡ್ಯ ಜನರೇ ನನಗೆ ಕರೆ ಮಾಡಿ ಇದಕ್ಕೆಲ್ಲ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ. ನಾನು ತಪ್ಪು ಮಾಡಿದ್ದರೆ ಅವರ ಕ್ಷಮೆ ಕೇಳುವುದು ನನಗೆ ಕಷ್ಟವೇನೂ ಅಲ್ಲ. ಆದರೆ ಕೆಲವರು ನಾನು ಕಾಲ್ಶೀಟ್ ಕೊಡದೇ ಇದ್ದ ಕಾರಣ ಅಪಪ್ರಚಾರ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ನನ್ನ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಲಿ, ಆದರೆ ನಮ್ಮ ರೈತರನ್ನು ಈ ವಿವಾದಕ್ಕೆ ಎಳೆದುಕೊಂಡು ಬಂದಿರುವುದು ಅವರಿಗೆ ಮಾಡುತ್ತಿರುವ ಅವಮಾನ. ಇದಕ್ಕೆ ಮಂಡ್ಯದ ರೈತರೇ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ' ಎಂದರು.
ಸೋಶಿಯಲ್ ನೆಟ್ವರ್ಕ್ ಸೈಟ್ನಲ್ಲಿ ಮಂಡ್ಯ ಸ್ಟಾರ್ ಚಿತ್ರತಂಡ ಮಾಡಿದ ಅಪಪ್ರಚಾರಕ್ಕೆ ವ್ಯಾಪಕ ಟೀಕೆಗಳು ಕೇಳಿ ಬಂದ ನಂತರ ಅವರ ಕಡೆಯ ಎಲ್ಲರ ನಂಬರ್ ಸ್ವಿಚ್ ಆಫ್ ಆಗಿವೆ. ಮಂಡ್ಯ ಸ್ಟಾರ್ ಚಿತ್ರದ ನಿರ್ದೇಶಕ ಅವರ ನಂಬರ್ಗೆ ಹಲವು ಬಾರಿ ಕರೆ ಮಾಡಿದರೂ ನಾಟ್ ರೀಚಬಲ್ ಎಂಬ ಉತ್ತರ ಬಂತು.
ಅಂದಹಾಗೆ ಮಾಸ್ಟರ್ಪೀಸ್ ಚಿತ್ರವನ್ನು ಮಂಜು ಮಾಂಡವ್ಯ ನಿರ್ದೇಶನ ಮಾಡಿದ್ದು ಸಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿದ್ದಾರೆ.
ಇಂದು ಮಂಡ್ಯ ಜನ ಮಾತನಾಡುವ ಅಣ್ಣ-ತಮ್ಮ ಪದ ಇಂಟರ್ನ್ಯಾಷನಲ್ ಲೆವಲ್ನಲ್ಲಿ ಗುರುತಿಸಿಕೊಂಡಿದೆ. ನನ್ನ ಕಿರಾತಕ, ರಾಜಾಹುಲಿ, ಡ್ರಾಮಾ ಚಿತ್ರಗಳು ಮಂಡ್ಯ ಜಿಲ್ಲೆಯ ಜನರ ಕುರಿತಾದ ಕತೆಗಳೇ ಆಗಿದ್ದವು. ಈಗ ಅವರ ಬಗ್ಗೆ ನಾನು ಯಾಕೆ ಕೆಟ್ಟದಾಗಿ ಮಾತನಾಡಬೇಕು? ಒಬ್ಬ ಸಿಲೆಬ್ರಿಟಿಯಾಗಿ ರೈತರ ವಿರುದ್ಧ ಮಾತನಾಡುವುದಕ್ಕೆ ಆಗುತ್ತದಾ..?
- ಯಶ್, ನಟ
ಯಶ್ ಅಭಿನಯದ ಮಾಸ್ಟರ್ ಪೀಸ್ ಇಂದು ತೆರೆಗೆ ಬರುತ್ತಿದೆ. ಗಾಡ್ ಫಾದರ್ ಇಲ್ಲದೇ ಚಿತ್ರರಂಗದ ರಾಕಿಂಗ್ ಸ್ಟಾರ್ ಆಗಿರುವ ಇವರ ವಿರುದ್ಧ ಸೋಶಿಯಲ್ ನೆಟ್ವರ್ಕ್ ಸೈಟ್ಗಳಲ್ಲಿ ಅಪಪ್ರಚಾರ ನಡೆಯುತ್ತಿದೆ. ಈ ನಟ ಪದೇ ಪದೇ ಟಾರ್ಗೆಟ್ ಆಗುತ್ತಿರುವುದು ಏಕೆ?