Quantcast
Channel: VijayKarnataka
Viewing all articles
Browse latest Browse all 6795

'ಅಲ್ಲಮ'ನ ಅನುಭಾವಕ್ಕೆ ದೃಶ್ಯಕಾವ್ಯದ ಚೌಕಟ್ಟು

$
0
0

ತರ್ಕ - ವಿತರ್ಕಗಳ ಚೌಕಟ್ಟಿಗೆ ಸಿಲುಕದ ಅನುಭಾವಿಯೊಬ್ಬನ ಅಂತರಂಗವನ್ನು ದೃಶ್ಯರೂಪಕ್ಕಿಳಿಸಿ ಸಿನಿಮಾ ಮಾಡುವುದೆಂದರೆ, ಆಕಾಶಕ್ಕೆ ಏಣಿ ಇಟ್ಟು ಕಾಮನಬಿಲ್ಲನ್ನು ಮುಟ್ಟಿದಂತೆ. ಆದರೆ ಕೈಯಲ್ಲೊಂದು ಕನ್ನಡಿ ಹಿಡಿದು ಆ ಇಂದ್ರಚಾಪವನ್ನು ದಕ್ಕಿಸಿಕೊಳ್ಳುವ ರೀತಿಯಲ್ಲಿ, ದಾರ್ಶನಿಕ ಅಲ್ಲಮನ ಸಿನಿಮಾ ನಿರ್ದೇಶಿಸುವ ಸಾಹಸ ಮಾಡಿದ್ದಾರೆ ಟಿ.ಎಸ್‌. ನಾಗಾಭರಣ.

12ನೇ ಶತಮಾನದ ಶರಣ ಅಲ್ಲಮಪ್ರಭುವಿನ ಚರಿತ್ರೆಯನ್ನು ಅನೇಕರು ನಾನಾ ರೀತಿ ಚಿತ್ರಿಸಿದ್ದಾರೆ. ಬೇರೆ ಬೇರೆಯವರಿಗೆ ಈ ಅಲ್ಲಮ ದಕ್ಕಿದ್ದು

ಅವರವರ ರೀತಿಯಲ್ಲೇ. ಅದಕ್ಕೆ ಇಲ್ಲಿ ನಿರ್ದೇಶಕರು ಅಲ್ಲಮನ ವಚನಗಳನ್ನೇ ಇಟ್ಟುಕೊಂಡು ಆತನ ಬದುಕಿನ ಹೆಜ್ಜೆಗಳನ್ನು ಗುರುತಿಸುತ್ತ ಹೋಗಿದ್ದಾರೆ. ಶಬ್ದಗಳ ಜಾಲಕ್ಕೆ ಸಿಗದ ಸಾಕ್ಷಾತ್ಕಾರವನ್ನು ತೋರಿಸುವಲ್ಲಿ ಇದು ನಿರ್ದೇಶಕರು ತೋರಿದ ಜಾಣ್ಮೆಯೆ. ಹೀಗಾಗಿ ಅಲ್ಲಲ್ಲಿ ವಚನ ವೈಭವ ಕಾಣುತ್ತದೆ. ಅವುಗಳಲ್ಲಿ ಈ ಬೈರಾಗಿಯ ವೈಚಾರಿಕತೆಯಲ್ಲಿನ ದಿಟ್ಟ ನಿಲುವು, ವಜ್ರ ವೈರಾಗ್ಯದೆಡೆಗಿನ ಒಲವು ಅನಾವರಣಗೊಂಡಿವೆ.

ಅಲ್ಲಮನ ಬಾಲ್ಯ, ಗುರುಕುಲ ಪ್ರವೇಶ, ಯೌವನ, ಮಾಯೆಯ ಭೇಟಿ, ಎಲ್ಲವನ್ನೂ ಧಿಕ್ಕರಿಸಿ ಶೂನ್ಯ ಸಂಪಾದನೆಯತ್ತ ಹೊರಟಿದ್ದು, ಕೊನೆಯಲ್ಲಿ ಬಯಲೆಂಬ ಬೆರಗಿನಲ್ಲಿ ಒಂದಾಗಿದ್ದು...ಎಲ್ಲವೂ ಚಂದಮಾನ ಕತೆಯಂತೆ ಸುಳಿದಾಡಿವೆ. ಕತೆಗೆ ಎಷ್ಟು ಬೇಕೋ ಅಷ್ಟೇ ರಂಗು ತುಂಬಲಾಗಿದೆ. ವಾಸ್ತವ ಹಾಗೂ ವೈಭವದ ಹದವಾದ ಪಾಕವಿದು. ಇದೊಂದು ರೀತಿ ಬೆಟ್ಟದಿಂದ ಇಳಿದುಬಂದ ನೆಲ್ಲಿಕಾಯಿ, ಸಮುದ್ರದ ಉಪ್ಪಿನೊಂದಿಗೆ ಬೆರತಂತೆ. ಕಮರ್ಷಿಯಲ್‌ ಅಂಶಗಳನ್ನು ಸೇರಿಸಿದ್ದರೂ ಅವುಗಳ ನಡುವೆ ಅಧ್ಯಾತ್ಮದ ಗಾಂಭೀರ್ಯ ಗೌಣವಾಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ನಾಗಾಭರಣರ ಸಿನಿಮಾ ಅಭಿರುಚಿಯಲ್ಲಿ ಅಲ್ಲಮ ರುಚಿರುಚಿ ಎನಿಸುತ್ತಾನೆ.

ಅಲ್ಲಮನಾಗಿ ಧನಂಜಯ ಪರಕಾಯ ಪ್ರವೇಶ ಮಾಡಿದ್ದು, ಸಿಕ್ಸ್‌ ಪ್ಯಾಕ್‌ ಬದಲಿಗೆ ನೀಳಕಾಯದಲ್ಲೇ ನಿಗಿನಿಗಿ ಕೆಂಡದಂಥ ದೇಹಸಿರಿ ತೋರಿಸಿದ್ದಾರೆ. ಅಭಿನಯದಲ್ಲಿ ಇವರದ್ದು ಗಮನಾರ್ಹ ಸಾಧನೆಯೆ. ಮಾಯೆಯಾಗಿ ರೂಪಸಿಯಂತೆ ಕಂಡಿದ್ದು ಮೇಘನಾ ರಾಜ್‌. ಸಿಕ್ಕ ಅವಕಾಶ ಬಳಸಿಕೊಂಡಿದ್ದಲ್ಲದೆ, ನೃತ್ಯದ ದೃಶ್ಯಗಳಲ್ಲಿ ಮೋಹಕ ಎನಿಸುತ್ತಾರೆ. ಇನ್ನು ಲಕ್ಷ್ಮಿ ಗೋಪಾಲಸ್ವಾಮಿ, ರಾಮಕೃಷ್ಣ ಸೇರಿದಂತೆ ಉಳಿದವರು ತಮ್ಮ ಪಾತ್ರಗಳಿಗೆ ಪೋಷಕಾಂಶ ತುಂಬಿದ್ದಾರೆ.

ಕಲಾ ನಿರ್ದೇಶಕ ಶಶಿಧರ್‌ ಅಡಪ ಈ ಚಿತ್ರದ ಮತ್ತೊಬ್ಬ ಹೀರೋ. ಬಣ್ಣದಲ್ಲಿ ಅದ್ದಿ ತೆಗೆದಂಥ ಇವರ ದೃಶ್ಯಗಳನ್ನು ಆಸ್ವಾದಿಸುವುದೇ ವಿಶೇಷ ಅನುಭವ. ಆ ಕಾಲದ ಕಲಾತ್ಮಕ ಉಡುಗೆ, ತೊಡುಗೆ, ಆಭರಣಗಳು, ಬದುಕಿನ ಶೈಲಿ ದೃಶ್ಯಕಾವ್ಯದಂತೆ ಮನಮೋಹಕ. ಬನವಾಸಿ ಮಧುಕೇಶ್ವರ ದೇವಾಲಯದ ಸನ್ನಿವೇಶಗಳು, ಮಾಯೆಯ ಪರಿಚಯ, ನಿಸರ್ಗ ಸೌಂದರ್ಯವನ್ನು ಸೆರೆಹಿಡಿದಿದ್ದರಲ್ಲಿ ಸೌಂದರ್ಯ ಲಹರಿಯ ಪುಳಕವಿದೆ.

ಇನ್ನು ವಚನಗಳು ಹಾಗೂ ಸಂಗೀತದ ಮಿಶ್ರಣವು ಮಾಮರ, ಕೋಗಿಲೆಯ ಸಂಬಂಧದಷ್ಟು ಮಧುರ. ಸಂಭಾಷಣೆಗಳ ನಡುವೆಯೇ ವಚನಗಳು ಅಲೆಯಂತೆ ಬಂದು ಸನ್ನಿವೇಶಗಳ ಅರ್ಥವನ್ನು ಮತ್ತಷ್ಟು ಹೆಚ್ಚಿಸಿವೆ. ಅಲ್ಲಮನ ಮದ್ದಳೆಯ ಸದ್ದಂತೂ ಇಲ್ಲಿ ಇದೆ. ಇದರ ಜತೆ ಸಾಂಪ್ರದಾಯಿಕ ವಾದ್ಯಗಳನ್ನೂ ಬಳಸಿ ಕಿವಿಗೆ ಇಂಪಾಗಿಸಿದ್ದಾರೆ ಸಂಗೀತ ನಿರ್ದೇಶಕ.

ದೀಪದ ಮುಂದೆ ಮತ್ತೊಂದು ದೀಪ, ಅವರೆಡರ ಬೆಳಕನ್ನು ಬೇರ್ಪಡಿಸಲಾದೀತೆ... ಹುರಿದ ಕಾಳನು ಬಿತ್ತಿದರೆ ಮೊಳಕೆ ಒಡೆಯುವುದೇ... ದೇಹವೇ ದೇವಾಲಯ ಆಗಿರುವಾಗ ಇನ್ನೊಂದು ದೇವಾಲಯದ ನಿರ್ಮಾಣವೇಕೆ... ಭಾವ ಬೆತ್ತಲೆ ಇದ್ದು, ಮನವು ಗಂಭೀರವಾದರೆ, ಅದು ಸಹಜ ನಿರ್ವಾಣ... ಎಂಬಂಥ ಸಂಭಾಷಣೆಗಳ ಸೊಗಸೂ ಇದೆ.

ಶೃಂಗಾರ ದೃಶ್ಯಗಳಲ್ಲಿ ಅಲ್ಲಮ ಕಾಣಿಸಿಕೊಂಡ ರೀತಿಯ ಕುರಿತು ಒಂದಿಷ್ಟು ವಿವಾದ ಉಂಟಾಗಿತ್ತು. ಆದರೆ ಅಲ್ಲಿ ಇರುವವನು ಅಲ್ಲಮನಲ್ಲ, ಬದಲಿಗೆ ಆತನ ರೂಪದಲ್ಲಿ ಬಂದ ಮತ್ತೊಬ್ಬ ವ್ಯಕ್ತಿ ಎಂದು ತೋರಿಸುವ ಮೂಲಕ ಪ್ರಶ್ನೆಗಳಿಗೆ ಪರೋಕ್ಷವಾಗಿ ಉತ್ತರಿಸಿದ್ದಾರೆ ನಿರ್ದೇಶಕ.

ಹಾಗಂತ ಇಲ್ಲಿ ನ್ಯೂನತೆಗಳೇ ಇಲ್ಲ ಅಂತಲ್ಲ. ನೋಟಕ್ಕೆ ನಿಲುಕದ ಸತ್ಯದರ್ಶನವನ್ನು ಮನವರಿಕೆ ಮಾಡಿಕೊಡುವುದು ಕಷ್ಟಸಾಧ್ಯವೆ. ಹೀಗಾಗಿ ಅಲ್ಲಲ್ಲಿ ಒಂದಿಷ್ಟು ಲೋಪಗಳು ಸಹಜ. ಅವೆಲ್ಲವನ್ನೂ ಮೀರಿ ಒಂದು ಹಂತದ ಪ್ರಯತ್ನವಂತೂ ಇಲ್ಲಿದೆ ಆಗಿದೆ.

ಐತಿಹಾಸಿಕ ಸಿನಿಮಾ ಮಾಡುವುದೆಂದರೆ, ಅದೊಂದು ಸಾಮಾಜಿಕ ಜವಾಬ್ದಾರಿ. ಅದನ್ನು ನಿಭಾಯಿಸಲು ಆಳವಾದ ಅಧ್ಯಯನ, ಸತತ ಪರಿಶ್ರಮ, ಅದಮ್ಯ ಇಚ್ಛಾಶಕ್ತಿ ಬೇಕೇ ಬೇಕು. ಸಂಶೋಧನೆಯಷ್ಟೇ ರೋಮಾಂಚನ, ಈ ಅಲ್ಲಮನ ನಿರ್ದೇಶನ ಎಂದಿದ್ದರು ನಾಗಾಭರಣ. ಅದಕ್ಕೊಂದು ಮೂರ್ತರೂಪವನ್ನಂತೂ ಕೊಟ್ಟಿದ್ದಾರೆ.

- ಮಹಾಂತೇಶ ಬಹಾದುಲೆ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್