- ಮಹಾಂತೇಶ ಬಹಾದುಲೆ ಮನುಷ್ಯನಿಗೆ ಮಾನವೀಯತೆ ಮುಖ್ಯವೇ ವಿನಃ, ಜಾತಿ, ಧರ್ಮಗಳಲ್ಲ ಎಂಬುದು ಇಡೀ ಸಿನಿಮಾದಲ್ಲಿ ಮಿಡಿಯುವ ನಾಡಿ. ಅದಕ್ಕೆ ಕರ್ನಾಟಕದ ನಾನಾ ನಗರಗಳ ಇನ್ಸಿಡೆಂಟ್ಗಳನ್ನು ಆಯ್ದುಕೊಳ್ಳಲಾಗಿದೆ. ತಾವು ಮಾಡದ ತಪ್ಪಿಗೆ ಯುವಕರು ರೌಡಿಸಂ, ಭಯೋತ್ಪಾದನೆ, ಲವ್ ಜಿಹಾದ್, ಪಬ್ಬುಗಳ ಡಾನ್ಸ್, ಅತ್ಯಾಚಾರದ ಪ್ರಕರಣಗಳಲ್ಲಿ ಆರೋಪಿಗಳಾಗಿ ಜೈಲು ಸೇರುವ ಚಿತ್ರಕತೆಯಿದು. ತೆರೆಯ ಮೇಲೆ ಈ ನಾನಾ ಪ್ರಸಂಗಗಳಿಗೆ ಪಾತ್ರಗಳಾಗಿದ್ದು ನೆನಪಿರಲಿ ಪ್ರೇಮ್, ದಿಗಂತ್, ವಿಜಯ್ ರಾಘವೇಂದ್ರ ಹಾಗೂ ಪ್ರಜ್ವಲ್. ಪ್ರೇಮದ ಎಳೆಗಳಲ್ಲಿ ಇವರಿಗೆ ಜೋಡಿಯಾಗಿ ನಳನಳಿಸಿದ್ದು ಐಂದ್ರಿತಾ, ಪ್ರಿಯಾಮಣಿ, ಜಾಕಿ ಭಾವನಾ ಹಾಗೂ ದೀಪಾ ಸನ್ನಿಧಿ. ಇಷ್ಟಕ್ಕೂ ಇಲ್ಲಿ ಹೀರೋ ಯಾರು ಎಂದು ಹುಡುಕುತ್ತ ಹೋಗುವ ಕತೆ ಇದಲ್ಲ. ಬದಲಿಗೆ ಎಲ್ಲರೂ ಸೇರಿ ನೀಡುವ ದೇಶಭಕ್ತಿಯ ಸಂದೇಶವೇ ನಾಯಕನಾಗಿ ನಿಲ್ಲುತ್ತದೆ. ಕೊನೆಯಲ್ಲಿ ರಾಷ್ಟ್ರಗೀತೆ ಟ್ಯೂನ್ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನೂ ಎದ್ದುನಿಲ್ಲಿಸುತ್ತದೆ. ಪ್ರಥಮಾರ್ಧವು ದ್ವಿತೀಯಾರ್ಧಕ್ಕೆ ಮುನ್ನುಡಿಯಂತೆ ಮೂಡಿಬಂದಿದ್ದರಿಂದ, ಕತೆಯಲ್ಲಿನ ಕಸುವು ವಿರಾಮದ ನಂತರವೇ ತೆರೆದುಕೊಳ್ಳುತ್ತದೆ. ಬೆಂಗಳೂರು, ಮೈಸೂರು, ಮಂಗಳೂರು, ವಿಜಯಪುರದಲ್ಲಿ ನಡೆಯುವ ಘಟನೆಗಳ ನಂತರ ಮಧ್ಯಂತರದ ಹೊತ್ತಿಗೆ ಸಿನಿಮಾ ದೃಶ್ಯಗಳು ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಆಗುತ್ತವೆ. ನಂತರ ಕ್ಲೈಮ್ಯಾಕ್ಸ್ನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಕೊನೆಗೊಳ್ಳುತ್ತವೆ. ಪಾತ್ರಧಾರಿಗಳು ಒಬೊಬ್ಬರು ಒಂದೊಂದು ರೀತಿ ಕಾಂಟ್ರಿಬ್ಯೂಷನ್ ಮಾಡಿ ಅಬ್ಬಾ ಎನ್ನುವಂತೆ ಒಂದೇ ಚೌಕದಲ್ಲಿ ಬಂಧಿಯಾಗಿದ್ದಾರೆ. ಜೈಲಿಗೆ ಹೋಗುವಾಗ ಚಾಕ್ಲೆಟ್ ಹೀರೋಗಳಂತೆ ಇದ್ದವರು, ಅಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಪೊಗದಸ್ತಾದ ಮೀಸೆಯಲ್ಲಿ ವಿಭಿನ್ನವಾಗಿ ಗಮನ ಸೆಳೆಯುತ್ತಾರೆ. ಸಿನಿಮಾದ ಎರಡನೇ ಭಾಗದಲ್ಲಿ ಹಿರಿಯ ನಟ ಕಾಶೀನಾಥ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸುತ್ತ, ತಮಗೆ ಒಪ್ಪುವಂಥ ಪಾತ್ರಗಳು ಸಿಕ್ಕರೆ ಈಗಲೂ ತಾವು ನಟಿಸಲು ರೆಡಿ ಎಂಬ ಖದರ್ ತೋರಿದ್ದಾರೆ. ದರ್ಶನ್, ಅತಿಥಿ ಪಾತ್ರದಲ್ಲಿ ದರ್ಶನ ನೀಡಿ ಫೈಟೊಂದರಲ್ಲಿ ಅಬ್ಬರಿಸಿದ್ದೂ ಇದೆ. ಜತೆಗೆ ಒಂದಿಷ್ಟು ಚಿಕ್ಕಣ್ಣನ ಕಚಗುಳಿ. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯೊಬ್ಬ ಕಾಗುಣಿತ ಲೋಪ- ದೋಷಗಳ ನಡುವೆಯೂ ಫರ್ಸ್ಟ್ ಕ್ಲಾಸಿನಲ್ಲಿ ಪಾಸ್ ಆಗುವಂತೆ, ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮುರುಕು ಮುಕ್ಕುಗಳ ನಡುವೆಯೂ ನಿರ್ದೇಶಕ, ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಾರೆ. ಹಾಡಿನಲ್ಲಿ ಕುಣಿಯುವ ಹುಡುಗಿಯರು, ಎದುರಾಳಿಯನ್ನು ಹಣಿಯುವ ಹುಡುಗರು, ಕಮರ್ಷಿಯಲ್ ಅಂಶಗಳಿಗೆ ಮಸಾಲೆ ಬೆರೆಸಿದ್ದರೆ, ಪಾರಿವಾಳ ಹಾರಾಟದ ಸ್ಪರ್ಧೆ ರೋಚಕವಾಗಿ ಮೂಡಿಬಂದಿದೆ. ಪಡ್ಡೆಗಳಿಗೆ ಪ್ರಿಯವಾಗುವ ರೀತಿಯಲ್ಲಿ, ಜೈಲು ಹಕ್ಕಿಗಳು ಹಾಡುತ್ತ, ಹೆಜ್ಜೆ ಹಾಕುತ್ತ ಬದುಕಿನ ಅರ್ಥವನ್ನು ಅಲ್ಲಾಡಿಸಿವೆ. ಒಂದೇ ಹಾಡಿನಲ್ಲಿ ನಾಲ್ಕು ಜೋಡಿಗಳ ಡ್ಯುಯೆಟ್ ಸಾಂಗ್ ಸೊಗಸಾಗಿ ಮೂಡಿಬಂದಿದ್ದು, ಕ್ಯಾಮೆರಾ ವರ್ಕ್ ಅದಕ್ಕೆ ಸಾಥ್ ನೀಡಿದೆ. ಸುವರ್ಣ ಸೌಧದಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಬಂದ ಯುವಕರು ತೀಕ್ಷ್ಣ ಮಾತುಗಳಲ್ಲಿ ರಾಜಕಾರಣಿಗಳನ್ನು ಕುಕ್ಕುತ್ತಾರೆ, ಸಾಮಾನ್ಯ ಜನರ ಕರ್ತವ್ಯವನ್ನು ನೆನಪಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗುವ ಯುವಕರನ್ನು ಎಚ್ಚರಿಸುತ್ತಾರೆ. ಅಲ್ಲಿಗೆ ಅದೊಂದು ಭಾವೈಕ್ಯದ ಸಂದೇಶ ನೀಡುವ ಚಿತ್ರವಾಗಿ ಭಾವುಕತೆಯ ಚಿತ್ರಣ ಸೃಷ್ಟಿಸಿಬಿಡುತ್ತದೆ.
ಈ ಚೌಕ ಸಿನಿಮಾದಲ್ಲಿ ಏನೇನಿದೆ ಅಂತ ಚೌಕಾಶಿ ಮಾಡಲು ಹೋದರೆ ಚಕಚಕನೇ ತಂತ್ರಜ್ಞರ ಹಾಗೂ ಕಲಾವಿದರ ದೊಡ್ಡ ಪಟ್ಟಿಯೇ ಪ್ರತ್ಯಕ್ಷವಾಗುತ್ತದೆ. ಐವರು ಸಂಗೀತ ನಿರ್ದೇಶಕರು, ಐವರು ಛಾಯಾಗ್ರಾಹಕರು, ಐವರು ಸಂಭಾಷಣೆಕಾರರು, ನಾಲ್ವರು ಹೀರೋಗಳು, ಅಷ್ಟೇ ಸಂಖ್ಯೆಯ ಹಿರೋಯಿನ್ಗಳು, ಮತ್ತೊಂದಿಷ್ಟು ಪೋಷಕ ಕಲಾವಿದರು... ಹೇಳಿದಷ್ಟೂ ಅದು ಹನುಮಂತನ ಬಾಲವೇ. ಹೀಗಾಗಿ ಇವರ ಸಂಖ್ಯೆಯೇ ಇಂಡಿಯನ್ ಆರ್ಮಿ ತುಕಡಿಯಂತಿದೆ. ಇಂಥದೊಂದು ಸೈನ್ಯ ಕಟ್ಟಿಕೊಂಡು, ಅಪರಾಧಿ ಹಾಗೂ ನಿರಪರಾಧಿಗಳ ನಡುವಿನ ಯುದ್ಧಕ್ಕೆ ಹೊರಟಂಥ ಜೋಷ್ ತೋರಿದ್ದಾರೆ ನಿರ್ದೇಶಕ.
ಚೌಕ ಚಿತ್ರದ ಸ್ಟಿಲ್ಗಳಿಗೆ
↧
ಒಂದಿಷ್ಟು ಕೌತುಕ, ಮತ್ತೊಂದಿಷ್ಟು ಭಾವುಕ
↧