ರಾಜ್ಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಅಬಕಾರಿ ಸಚಿವ ಎಚ್.ವೈ.ಮೇಟಿ ವಿರುದ್ಧದ ರಾಸಲೀಲೆ ಆರೋಪ ಪ್ರಕರಣ ಚರ್ಚೆಗೆ ಗ್ರಾಸವಾಗಿತ್ತು. ಆರೋಪ ಎದುರಿಸುತ್ತಿರುವ ಸಂತ್ರಸ್ತ ಮಹಿಳೆಯ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದು, ಇಡೀ ಪ್ರಕರಣ ಗೊಂದಲದ ಗೂಡಾಗಿತ್ತು. ಈ ಪ್ರಕರಣದಲ್ಲಿ ತಮಗೆ ಏನಾದರೂ ಆದಲ್ಲಿ ಅದಕ್ಕೆ ಪೊಲೀಸ್ ಪೇದೆ ಸುಭಾಷ ಮುಗಳಖೋಡ ಕೂಡ ಕಾರಣರಾಗುತ್ತಾರೆ ಎಂದು ಮಹಿಳೆ ಹೇಳಿದ್ದರು.
ಸರಕಾರಿ ಕಚೇರಿಯಲ್ಲಿ ರಾಸಲೀಲೆ ನಡೆಸಿರುವ ಸಿಡಿಯೇ ಇಲ್ಲ, ಇದ್ದರೆ ರಾಜೀನಾಮೆ ನೀಡುವೆ ಎಂದು ಹೇಳುವ ಮೂಲಕ ಮೇಟಿ ಮೇಟಿ ಅವರು ಈ ಆರೋಪವನ್ನು ಅಲ್ಲಗಳೆಯುತ್ತ ಬಂದಿದ್ದರು. ಪ್ರತಿಪಕ್ಷ ಕೂಡ ಈ ಪ್ರಕರಣವನ್ನು ಮುಂದಿಟ್ಟು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.
ಕಳೆದ ಎರಡು ದಶಕಗಳ ಹಿಂದೆ ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಎಚ್.ವೈ.ಮೇಟಿ ಬಳಿಕ ಸಚಿವರಾಗಿದ್ದೇ ಕಳೆದ ಜೂನ್ನಲ್ಲಿ. ಕೇವಲ ಐದು ತಿಂಗಳ ಸಚಿವ ಸ್ಥಾನದ ಅವಧಿಯಲ್ಲಿ ಇಂಥದ್ದೊಂದು ಗಂಭೀರ ಆರೋಪದಡಿ ಸಚಿವ ಸ್ಥಾನ ಕಳೆದುಕೊಳ್ಳುವ ಸನ್ನಿವೇಶ ಎದುರಾಗಿದೆ.
ಬೆಂಗಳೂರು: 'ಸಚಿವ ಎಚ್.ವೈ ಮೇಟಿ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ಅಂಗೀಕರಿಸಲು ಮಾನ್ಯ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೇನೆ. ತನಿಖೆಗೆ ಆದೇಶ ಕೂಡ ಕೊಟ್ಟಿದ್ದೇನೆ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.