ಹುನಗುಂದ: ಬರದ ಛಾಯೆ ನಡುವೆಯೂ ತಾಲೂಕಿನ ನಾನಾ ಗ್ರಾಮಗಳಲ್ಲಿ ರೈತರು ಗುರುವಾರ ಎಳ್ಳ ಅಮಾವಾಸ್ಯೆ ನಿಮಿತ್ತ ಸಂಪ್ರದಾಯದಂತೆ ಸರಳವಾಗಿ ಚರಗ ಚೆಲ್ಲುವ ಆಚರಣೆ ನಡೆಸಿದರು. ಬಿಳಿಜೋಳ, ಕಡಲೆ ಬೆಳೆಯನ್ನು ವ್ಯಾಪಕವಾಗಿ ಬೆಳೆಯುವ ತಾಲೂಕಿನಲ್ಲಿ ಎಳ್ಳ ಅಮಾವಾಸ್ಯೆ ಎಂದರೆ ಎಲ್ಲಿಲ್ಲದ ಸಡಗರ. ಬೆಳಗ್ಗೆ ಎತ್ತುಗಳ ಮೈತೊಳೆದು ಶೃಂಗರಿಸಿ, ಚಕ್ಕಡಿಯಲ್ಲಿ ಹೊಲಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದರು. ಮನೆಯಲ್ಲಿ ಮಹಿಳೆಯರು ಎಳ್ಳಹೋಳಿಗೆ, ಸಜ್ಜೆರೊಟ್ಟಿ, ಬಿಳಿಜೋಳ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಹೋಳಿಗೆ, ಕಡಬು, ಮೊಳಕೆಕಾಳು, ಶೇಂಗಾಚಟ್ನಿ, ಎಳ್ಳ ಚಟ್ನಿ, ಕೆನೆಮೊಸರು, ಬಾಣ, ಅನ್ನ, ಹೋಳಿಗೆ ಸಾರು, ಸಂಡಿಗೆ, ಹಪ್ಪಳ, ಹೀಗೆ ವೈವಿಧ್ಯಮಯ ಅಡುಗೆ ತಯಾರಿಸಿ ಬಿದರಿನ ಬುಟ್ಟಿಯಲ್ಲಿ ವ್ಯವಸ್ಥಿತವಾಗಿ ಕಟ್ಟಿಕೊಂಡು ಹೊಲಕ್ಕೆ ಹೋಗುವ ಸಂಭ್ರಮವಿರುತ್ತದೆ. ಆದರೆ ಬರದ ಪರಿಣಾಮ ಸಂಪ್ರದಾಯ ನಡೆಸಬೇಕು ಎಂಬುದಕ್ಕಷ್ಟೇ ಈ ಬಾರಿ ಹಬ್ಬ ಆಚರಿಸಿದ್ದು ಕಂಡುಬಂತು. ಈ ಭಾಗದಲ್ಲಿ ಜೋಳ, ಕಡಲೆ, ಕುಸುಬೆ, ಸೂರ್ಯಕಾಂತಿ, ಅಗಸೆ, ಗೋಧಿ ಸೇರಿದಂತೆ ಹಿಂಗಾರಿ ಬೆಳೆಗಳು ಸಂಪೂರ್ಣ ಒಣಗಿದ್ದು, ನದಿ, ಕಾಲುವೆ, ಹಳ್ಳಗಳ ಸಮೀಪದ ಶೇ.5ರಷ್ಟು ರೈತರು ಮಾತ್ರ ಅಲ್ಲಲ್ಲಿ ಉತ್ತಮ ಬೆಳೆಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಉಳಿದ ರೈತರು ಬೆಳೆ ಇಲ್ಲದಿದ್ದರೂ ಆಚರಣೆ ಬಿಡುವಂತಿಲ್ಲ ಎಂದು ಪೂಜೆ ಸಲ್ಲಿಸಿದ್ದಾರೆ. ರೈತ ರಾಜು ಬಡಿಗೇರ: * ಬರವಿದ್ದರೂ ಊಟಬಿಡುವದಿಲ್ಲ. ಹಾಗೆ ಮಳೆಯಿಲ್ಲದೇ ರೈತರು ತೊಂದರೆಯಲ್ಲಿದ್ದರೂ ಸಾಂಪ್ರದಾಯಿಕವಾದ ಮಹತ್ವದ ಈ ಹಬ್ಬದ ಆಚರಣೆಗೆ ಸಂಭ್ರಮವಿಲ್ಲದಿದ್ದರೂ ಸರಳತೆಯಿಂದ ಆಚರಿಸುವದು ಅನಿವಾರ್ಯ. ಮುಂದಿನ ವರ್ಷ ಭೂತಾಯಿ ಕೃಪೆ ತೋರುವ ನಿರೀಕ್ಷೆ ಇದೆ*
↧
ಸಡಗರವಲ್ಲ, ಇದು ಸರಳ ಆಚರಣೆ
↧