ಕ್ರಿಸ್ತಶಕ ಸುಮಾರು ಇಪ್ಪತ್ತೆಂಟನೇ ಇಸವಿಯಲ್ಲಿ ಇಸ್ರಾಯಲ್ ನಾಡಿನ ನಜರೇತ ಹಳ್ಳಿಯಲ್ಲಿ ಬಡಗಿಯಾಗಿದ್ದ ಮೂವತ್ತು ವಯಸ್ಸಿನ ಯುವಕನೊಬ್ಬ, ತನ್ನ ಬಡಗಿ ಅಂಗಡಿಯ ಬಾಗಿಲನ್ನು ಮುಚ್ಚಿ ಚರಿತ್ರೆಯನ್ನು ಪ್ರವೇಶಿಸಿದ. ಅತ್ಯಂತ ಸಂಪ್ರದಾಯಬದ್ಧ ನಾಡೊಂದರಲ್ಲಿ ಹುಟ್ಟಿ, ಎಲ್ಲಾ ಸಂಪ್ರದಾಯಗಳಲ್ಲೂ ಸುಪ್ತವಾಗಿದ್ದು ಬದುಕನ್ನು ಹಾಳುಗೆಡಹುವ ಹುಳುಕುಗಳನ್ನು ತೆರೆದು ತೋರಿಸಿದ ಕಾರಣ ಕ್ರಾಂತಿಕಾರಿಯಾದ. ಮಾನವಚರಿತ್ರೆಯ ಕೇಂದ್ರ ಬಿಂದುವಾದ ಇವನ ಜನನ ಕಾಲವನ್ನೇ ಕಾಲ ಮಾಪನವಾಗಿಟ್ಟುಕೊಂಡು ಕ್ರಿಸ್ತ ಪೂರ್ವ- ಕ್ರಿಸ್ತ ಶಕ ಎಂಬ ಕಾಲ ವಿಭಜನಾ ಕ್ರಮ ಪ್ರಾರಂಭವಾಯಿತು. ಮಾನವ ಕಾಲಕ್ಕೆ ಒಂದು ಚೌಕಟ್ಟು ದೊರೆತಂತಾಯಿತು. ಅವನ ಬದುಕು ಬೋಧನೆಗಳನ್ನು ಕಂಡು ಕೇಳಿದ ಜನ, ಇವನಂತೂ ಸಾಮಾನ್ಯ ವ್ಯಕ್ತಿಯಲ್ಲ ಎಂದು ಕೊಂಡರು.ಇವನು ಮರಣ ಹೊಂದಿದ ನೂರು ವರ್ಷಗೊಳಗೆ, ಇವನು ಬರೀ ವ್ಯಕ್ತಿಯಲ್ಲ, ಒಂದು ಮಾನವಾತೀತ ಶಕ್ತಿ, ದೇವಸುತ ಎಂಬ ದೃಢನಂಬಿಕೆ ಬೆಳೆದು ಹರಡಿತು.
↧