Quantcast
Channel: VijayKarnataka
Viewing all articles
Browse latest Browse all 6795

ಪ್ರತಿಷ್ಠೆಗೆ ಬಲಿಯಾದ ಸಂಸತ್‌ ಕಲಾಪ

$
0
0

ತಮ್ಮ ಬದುಕನ್ನು ಸುಧಾರಿಸಲು ಸಂಸತ್‌ ಏನು ಮಾಡುತ್ತದೆ ಎಂದು ಜನಸಾಮಾನ್ಯರು ತುದಿಗಾಲ ಮೇಲೆ ನಿಂತಿರುತ್ತಾರೆ. ಚಿಂತನ, ಮಂಥನ, ವಾಗ್ವಾದಗಳ ಮೂಲಕ ಆಳವಾದ ತಿಳಿವು ಪಡೆಯುವುದು ಮತ್ತು ಅದನ್ನು ಕಾಯಿದೆಯಾಗಿ ರೂಪಿಸುವುದು ಸಂಸದರ ಕರ್ತವ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಂಸತ್‌ ಎಂಬುದು ಪಕ್ಷ, ಪಂಥ, ರಾಜಕಾರಣದ ವೇದಿಕೆಯಾಗಿದೆ. ಚರ್ಚೆಯ ಬೆಳಕಿಗಿಂತ ಕೂಗಾಟ, ಗದ್ದಲಗಳ ಬೆಂಕಿಯೇ ನಿಗಿನಿಗಿ ಎನ್ನುತ್ತಿದೆ. ಶುಕ್ರವಾರಕ್ಕೆ ಚಳಿಗಾಲದ ಅಧಿವೇಶನ ಸಮಾಪ್ತಿಗೊಳ್ಳುತ್ತದೆ. ಒಂದು ತಿಂಗಳ ಅಧಿವೇಶನದಲ್ಲಿ ಒಂದು ದಿನವೂ ಇಡಿಯಾಗಿ ಕಲಾಪ ನಡೆಯಲೇ ಇಲ್ಲ . ಇದು ನಮ್ಮ ಸಂಸದೀಯ ವ್ಯವಸ್ಥೆ ಎಷ್ಟು ಶಿಥಿಲವಾಗಿದೆ ಎಂಬುದನ್ನು ಸೂಚಿಸುತ್ತದೆ. 'ಕಲಾಪ ನಡೆಯದೇ ಇರುವುದು ತುಂಬ ವಿಷಾದಕರ' ಎನ್ನುವ ಪಲ್ಲವಿಯನ್ನು ಆಡಳಿತ ಮತ್ತು ಪ್ರತಿಪಕ್ಷಗಳು ಒಂದೇ ರಾಗದಲ್ಲಿ ಹಾಡುತ್ತಿರುವುದು ಮಾತ್ರ ಅಚ್ಚರಿಯ ಸಂಗತಿ. ನೋಟು ಅಮಾನ್ಯದಂಥ ಮಹಾ ನಿರ್ಣಯದಿಂದ ಇಡೀ ದೇಶದ

ನಿತ್ಯದ ವ್ಯವಹಾರ ಅಲ್ಲೋಲ ಕಲ್ಲೋಲವಾಯಿತು. ಆದರೆ ಈ ಕುರಿತು ವಸ್ತುನಿಷ್ಟ ಚರ್ಚೆ ನಡೆಯಲೇ ಇಲ್ಲ. ಇಂಥ ತೀವ್ರವಾದ ಕ್ರಮ ಕೈಗೊಳ್ಳುವುದಕ್ಕೆ ಇದ್ದ ಒತ್ತಡಗಳೇನು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಹೇಳಲಿಲ್ಲ. ಇದರ ಪರಿಣಾಮವೇನಾಯ್ತು ಎನ್ನುವ ಚಿತ್ರವನ್ನು ಪ್ರತಿಪಕ್ಷಗಳೂ ಬಿಚ್ಚಿಡಲಿಲ್ಲ. ಈ ವಿಷಯವನ್ನು ಯಾವ ನಿಯಮದ ಅಡಿಯಲ್ಲಿ ಚರ್ಚಿಸಬೇಕು ಎನ್ನುವ ತಾಂತ್ರಿಕ ಸಮಸ್ಯೆಯೇ ಭೂತಾಕಾರವಾಗಿ ಚಳಿಗಾಲದ ಅಧಿವೇಶವನ್ನು ಆಪೋಷನ ತೆಗೆದುಕೊಂಡಿದ್ದು ಪ್ರಜಾತಂತ್ರದ ದೌರ್ಭಾಗ್ಯ. ಲೋಕಸಭೆಯಲ್ಲಿ ಅಭೂತಪೂರ್ವ ಸಂಖ್ಯಾಬಲವಿರುವ ಆಡಳಿತ ಪಕ್ಷ ಈ ವಿಷಯದಲ್ಲಿ ಹಠಕ್ಕೆ ಬಿದ್ದಿದ್ದು ಸರಿಯಲ್ಲ. ಹಾಗೆ ನೋಡಿದರೆ ಗುರುವಾರ ಪ್ರತಿಪಕ್ಷಗಳು ತಮ್ಮ ಪಟ್ಟು ಸಡಿಲಿಸಿ, ಯಾವ ನಿಯಮದ ಹಂಗೂ ಇಲ್ಲದೆ, ಮತವಿಭಜನೆಯೂ ಇಲ್ಲದೆ ನೋಟು ರದ್ದತಿಯ ಬಗ್ಗೆ ಚರ್ಚೆ ಆರಂಭಿಸಲು ಸಿದ್ಧ ಎಂದು ಘೋಷಿಸಿದವು. ಇದನ್ನು ಅಂಗೀಕರಿಸಿದ ಸ್ಪೀಕರ್‌ ಸದಸ್ಯರಿಗೆ ಅವಕಾಶ ನೀಡಿದರು. ಆದರೆ ಸುಗಮ ಕಲಾಪಕ್ಕೆ ಒತ್ತಾಸೆ ನೀಡಬೇಕಾಗಿದ್ದ ಸಂಸದೀಯ ವ್ಯವಹಾರಗಳ ಖಾತೆ ಸಚಿವರು, ಅಗಸ್ಟಾವೆಸ್ಟ್‌ಲ್ಯಾಂಡ್‌ ಹಗರಣದಲ್ಲಿ ಗಾಂಧಿ ಕುಟುಂಬ ಕಮಿಷನ್‌ ಪಡೆದಿದೆ ಎಂದು ಗದ್ದಲವೆಬ್ಬಿಸಿದ್ದನ್ನು ಗಮನಿಸಿದರೆ ಆಡಳಿತ ಪಕ್ಷಕ್ಕೆ ನೋಟು ಅಮಾನ್ಯದ ಚರ್ಚೆ ಬೇಕಿಲ್ಲ ಎಂಬ ಶಂಕೆಯನ್ನು ಮೂಡಿಸುತ್ತದೆ. 'ಸ್ಪೀಕರ್‌ ಅನುಮತಿ ಮೇರೆಗೆ ನೋಟು ರದ್ದತಿ ಬಗ್ಗೆ ಚರ್ಚೆ ಆರಂಭವಾಗಿರುವಾಗ ಈ ಹೊಸ ವಿಚಾರವೇಕೆ?, ಸರಕಾರಕ್ಕೇ ಚರ್ಚೆ ಬೇಕಿಲ್ಲವೇ, ಸಚಿವರನ್ನು ದಯವಿಟ್ಟು ಸುಮ್ಮನೆ ಕೂರಿಸಿ' ಎನ್ನುವ ಪ್ರತಿಪಕ್ಷಗಳ ಮಾತಿಗೆ ಫಲ ಸಿಗಲಿಲ್ಲ. ಹಾಗೆಂದು ಸಂಸದೀಯ ಖಾತೆ ಸಚಿವರು ಆ ವಿಷಯವನ್ನು ಪ್ರಸ್ತಾಪಿಸಲೇ ಬಾರದು ಎಂದೇನೂ ಅಲ್ಲ; ಆದರೆ ಸ್ಪೀಕರ್‌ ಒಂದು ವಿಷಯದ ಕುರಿತು ಚರ್ಚೆಗೆ ಅನುಮತಿ ನೀಡಿರುವಾಗ ಮಧ್ಯೆ ಮತ್ತೊಂದು ವಿಷಯವನ್ನು ಪ್ರಸ್ತಾಪಿಸುವುದು ಒಳ್ಳೆಯ ಸಂಸದೀಯ ನಡವಳಿಕೆ ಎಂದೆನಿಸಿಕೊಳ್ಳುವುದಿಲ್ಲ. ಸಹಜವಾಗಿಯೇ ಇಂಥ ನಡಾವಳಿ, ಸಂಸತ್‌ನ ಹಿರಿಯ ಸದಸ್ಯ ಎಲ್‌.ಕೆ. ಆಡ್ವಾಣಿ ಅವರಲ್ಲಿ ಆಕ್ರೋಶ, ಮತ್ತು ಬೇಸರವನ್ನುಂಟು ಮಾಡಿತು. ''ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದು ಮುಖ್ಯವಲ್ಲ. ಸೋಲು-ಗೆಲುವಿನ ಈ ಅಸಹ್ಯ ಪೈಪೋಟಿಯಿಂದಾಗಿ ನಿಜಕ್ಕೂ ಸೋಲುತ್ತಿರುವುದು ನಮ್ಮ ಸಂಸತ್ತು, ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಹೌಸ್‌ ಆಫ್‌ ಕಾಮನ್ಸ್‌ನಲ್ಲೂ ಈ ರೀತಿ ನಡೆಯದು, ನನಗಂತೂ ರಾಜೀನಾಮೆ ಕೊಟ್ಟು ಹೋಗಬೇಕೆಂದು ಅನಿಸುತ್ತಿದೆ,'' ಎಂದು ಅವರು ತಮ್ಮ ಸಾತ್ವಿಕ ಸಿಟ್ಟನ್ನು ಹೊರ ಹಾಕಿದರು. ಬಿಜೆಪಿ ಪಕ್ಷವನ್ನು ಕಟ್ಟಿದ ಈ ಹಿರಿಯ ನಾಯಕರ ಆಶಯವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಸುಗಮ ಕಲಾಪಕ್ಕೆ ಸಹಕರಿಸಬೇಕಾಗಿದೆ.

ಪ್ರಜಾಪ್ರಭುತ್ವದ ಜೀವಾಳವಿರುವುದೇ ಚರ್ಚೆ, ಸಂವಾದದಲ್ಲಿ. ನಮ್ಮ ಸಂವಿಧಾನ ರೂಪುಗೊಂಡಿರುವುದು ಕೂಡ ಇಂಥ ಅರ್ಥಪೂರ್ಣ ವಾಗ್ವಾದಗಳಿಂದ ಎಂಬುದನ್ನು ಮರೆಯಬಾರದು. ಭಿನ್ನಮತ ಎಂಬುದು ದ್ವೇಷವಾಗಬೇಕಾಗಿಲ್ಲ. ಭಿನ್ನವಿದ್ದೂ ಬೆರೆಯಬಹುದು ಎಂಬುದು ಎಲ್ಲ ಪಕ್ಷಗಳಿಗೂ ಆದರ್ಶವಾಗಬೇಕು. ಪ್ರತಿಷ್ಠೆಗಿಂತ ಜನಹಿತವೇ ಪರಮ ಆದರ್ಶವಾಗಬೇಕು. ಆರೋಪ- ಪ್ರತ್ಯಾರೋಪವೆಂಬ ಸುಲಭ ಅಸ್ತ್ರಗಳನ್ನು ಬದಿಗಿಟ್ಟು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>