ಸಿನಿಮಾ ಟೈಟಲ್ನಂತೆ ಸಿನಿಮಾ ಕೂಡಾ ಸೋಜಿಗ ಎನಿಸುತ್ತದೆ. ಇಷ್ಟು ನೀರಸವಾಗಿ ಒಂದು ಸಿನಿಮಾ ಮಾಡಬಹುದು ಎಂದು ನಿರ್ದೇಶಕರಿಗ ಅನಿಸಿದ್ದಾದರೂ ಏಕೆ ಎಂಬುದಕ್ಕೆ ಇದೊಂದು ಉದಾಹರಣೆ. ಚಿತ್ರದ ಪ್ರತಿ ದೃಶ್ಯ, ನಟ ನಟಿಯರ ಅಭಿನಯ, ಸಂಭಾಷಣೆ, ಹಿನ್ನೆಲೆ ಸಂಗೀತ, ಕತೆ, ಸಾಹಸ ಯಾವುದೊಂದು ಒಂದಕ್ಕೊಂದು ಮ್ಯಾಚ್ ಆಗುವುದೇ ಇಲ್ಲ.
ಸಿನಿಮಾ ಮಾಡಬೇಕಾದರೆ ಗಟ್ಟಿ ಕತೆ ಇರಬೇಕು, ಅದನ್ನು ಬ್ಯಾಟರಿ ಹಾಕಿಕೊಂಡು ಹುಡುಕಿದರೂ ಸಿಗುವುದಿಲ್ಲ. ಇದ್ದಕ್ಕಿದ್ದಂತೆ ಬರುವ ಸಾಹಸ ದೃಶ್ಯಗಳು, ಹಾಡುಗಳು ಸಿನಿಮಾವನ್ನು ಮತ್ತಷ್ಟು ಸಪ್ಪೆ ಮಾಡಿವೆ. ಉದ್ಯಮಿ ಜಗನ್ನಾಥ್ ರಾವ್ ಪುತ್ರ ವಿಕ್ರಾಂತ್ ವಿದೇಶದಿಂದ ವಾಪಸ್ ಬರುವುದರೊಂದಿಗೆ ಶುರುವಾಗುವ ಕತೆ, ಆಮೇಲೆ ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಂಡು ಬೋರ್ ಹೊಡಸುತ್ತಿದೆ. ಆ ಉದ್ಯಮಿಗೋ ಮಗ ಫಾರಿನ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದೇ ದೊಡ್ಡ ವಿಷಯ. ಆದರೆ ಮಗ ಮಾತ್ರ ವಿದೇಶದಲ್ಲಿ ದ್ದುಕೊಂಡು ಓದುವುದು ಬಿಟ್ಟು ಮಾರ್ಷಲ್ ಆರ್ಟ್ಸ್ ಕಲಿತು ಬಂದಿರುತ್ತಾನೆ. ಇದನ್ನು ಅರಿಯದ ಅಪ್ಪ ಅವನಿಗೆ ತನ್ನ ಉದ್ಯಮದ ಜವಬ್ದಾರಿ ಹೊರಿಸುತ್ತಾನೆ. ಆಗ ಸತ್ಯವನ್ನು ಹೇಳುವ ಮಗನನ್ನು ತಂದೆ ಮನೆಯಿಂದ ಹೊರಹಾಕುತ್ತಾನೆ. ಅಲ್ಲಿಂದ ನಾಯಕನ ಜೀವನದಲ್ಲಿ ಸಾಕಷ್ಟು ಏರುಪೇರುಗಳು ಉಂಟಾಗುತ್ತವೆ. ತನ್ನ ಸ್ನೇಹಿತನ ಪಾರ್ಟನರ್ ತಂಗಿಯೊಂದಿಗೆ ಪ್ರೇಮವೂ ಆರಂಭವಾಗುತ್ತದೆ. ಈ ಮಧ್ಯೆ ನಾಯಕಿಯ ಸಹೋದರನ ಕೊಲೆಯಾಗಿ ಅದು ನಾಯಕನ ಮೇಲೆ ಬರುತ್ತದೆ. ಅದರಿಂದ ಹೇಗೆ ಹೊರಬರುತ್ತಾನೆ ಮತ್ತು ನಾಯಕಿಯ ಸಹೋದರನ ಕೊಲೆ ಯಾರು ಮಾಡಿರುತ್ತಾರೆ ಎಂಬುದೇ ಕತೆ.
ಇಷ್ಟೆಲ್ಲದರ ನಡುವೆ ಎರಡು ಹಾಡುಗಳು ಬಂದು ಹೋಗುವುದು ಪ್ರೇಕ್ಷಕನಿಗೆ ತಿಳಿಯುವುದೇ ಇಲ್ಲ. ಸಿನಿಮಾಗೆ ಪೂರಕವಾ ಗಬೇಕಿದ್ದ ಹಿನ್ನೆಲೆ ಸಂಗೀತ ಸಿನಿಮಾಕ್ಕೆ ಪೂರಕವಾಗಿಲ್ಲ. ನಾಯಕ ನಟ ವಿಕ್ರಾಂತ್ ಹೊಡೆದಾಟ ದೃಶ್ಯಗಳಲ್ಲಿ ಜಾಕಿಚಾನ್ ಅವರನ್ನು ಅನುಕರಮೆ ಮಾಡಲು ಹೋಗಿ ಕೊಂಚ ಪರವಾಗಿಲ್ಲಎನಿಸುತ್ತಾರೆ. ನಾಯಕಿ ಅಖಿಲಾಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಷ್ಟೇ ಲಾಭ. ಕ್ಯಾಮೆರಾ ಪದೇ ಪದೇ ನಿಧಾನವಾಗಿ ಮೂವ್ ಆಗುವ ಕಾರಣ ಮತ್ತು ಡಲ್ ಲೈಟಿನಲ್ಲಿ ಪ್ರೇಕ್ಷಕರಿಗೆ ಸಾಕಷ್ಟು ಕಿರಿ ಕಿರಿ ಎನಿಸುತ್ತದೆ.
ಸ್ಮಶಾನದಲ್ಲಿ ಹೆಣ, ಬ್ಯಾಂಕ್ನಲ್ಲಿ ಹಣ, ಇನ್ಫಾರ್ಮೇಶನ್ ಇರುವಲ್ಲಿ ಈ ಇನ್ಸ್ಪೆಪೆಕ್ಟರ್ ರಾಣಾ... ಎಂದು ಸಾಯಿಕುಮಾರ್ ಪೊಲೀಸ್ ಪಾತ್ರದಲ್ಲಿ ಡೈಲಾಗ್ ಹೊಡೆಯಲು ಹೋಗಿರುವದು ತಮಾಷೆಯಾಗಿದೆ. ಎರಡು ಹಾಡುಗಳು ಕೇಳಲು ಇಂಪಾಗಿವೆ. ನಿರ್ದೇಶಕ ದಿನೇಶ್ ಕಂಪ್ಲಿ ಇನ್ನಷ್ಟು ಪಳಗಬೇಕು.
-ಹರೀಶ್ ಬಸವರಾಜ್