Quantcast
Channel: VijayKarnataka
Viewing all articles
Browse latest Browse all 6795

ನೋಟು ರದ್ದು ಬಿಸಿಗೆ ಕರಗಿದ ಕಲಾಪ

$
0
0

ಪಟ್ಟು ಸಡಿಲಿಸದ ಪ್ರತಿಪಕ್ಷಗಳು | ಮತಕ್ಕೆ ಹಾಕುವ ನಿಯಮದಡಿ ಚರ್ಚೆಗೆ ಆಗ್ರಹ | ಆಜಾದ್‌ ಕ್ಷಮೆಗೆ ಬಿಜೆಪಿ, ಪ್ರಧಾನಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಪಟ್ಟು

ಹೊಸದಿಲ್ಲಿ: ಚಳಿಗಾಲದ ಅಧಿವೇಶನದ ಮೂರನೇ ದಿನ ಸಂಸತ್‌ ಕಲಾಪವೂ ನೋಟು ರದ್ದು ಬಿಸಿಗೆ ಕರಗಿಹೋಯಿತು. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಉಗ್ರ ಪ್ರತಿಭಟನೆ ಮುಂದುವರಿಸಿದ ಪರಿಣಾಮ ಸುಗಮ ಕಲಾಪ ಸಾಧ್ಯವಾಗಲಿಲ್ಲ.

ನೋಟು ರದ್ದು ನಿರ್ಧಾರದ ಕುರಿತು ಮತಕ್ಕೆ ಹಾಕುವ ನಿಯಮದಡಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಇದಕ್ಕೆ ಎದಿರೇಟು ನೀಡಿದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸದಸ್ಯರು, ಜನರಿಗಾಗುತ್ತಿರುವ ಬವಣೆಯನ್ನು ಉಗ್ರರು ನಡೆಸಿದ ದಾಳಿಗೆ ಹೋಲಿಸಿದ್ದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಕ್ಷಮೆಗೆ ಪಟ್ಟು ಹಿಡಿದರು. ಈ ವಿಷಯವಾಗಿ ಎರಡೂ ಬಣಗಳ ಸದಸ್ಯರ ಮಧ್ಯೆ ದೊಡ್ಡ ಕೋಲಾಹಲವೇ ನಡೆಯಿತು.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 500/1000 ರೂ. ನೋಟುಗಳ ಚಲಾವಣೆ ರದ್ದು ವಿಚಾರವನ್ನು ನಿಲುವಳಿ ಸೂಚನೆ ಮಂಡಿಸುವ ಮೂಲಕ ಚರ್ಚಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಅವರ ಮಾತಿಗೆ ಟಿಎಂಸಿ, ಎಸ್ಪಿ, ಬಿಎಸ್ಪಿ ಸೇರಿದಂತೆ ಪ್ರತಿಪಕ್ಷಗಳು ಸಾಥ್‌ ನೀಡಿದರು. ಆದರೆ ಪ್ರತಿಪಕ್ಷಗಳ ಆಗ್ರಹವನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸಾರಾಗಟಾಗಿ ತಿರಸ್ಕರಿಸಿದರು. ಆಗ ಪ್ರತಿಪಕ್ಷಗಳ ಸದಸ್ಯರು ಆಕ್ರೋಶಗೊಂಡು ಗದ್ದಲ ನಡೆಸಿದರು. ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌, ಮತಕ್ಕೆ ಹಾಕದ ನಿಯಮದಡಿ ಚರ್ಚೆಗೆ ಸರಕಾರ ಸಿದ್ಧವಿರುವುದರಿಂದ ನಿಲುವಳಿ ಸೂಚನೆ ಮಂಡಿಸುವ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಪಕ್ಷಗಳ ಸದಸ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಶೂನ್ಯ ವೇಳೆಯಲ್ಲಿ ಬಿಜೆಪಿಯ ಮೀನಾಕ್ಷಿ ಲೇಖಿ, ಗಜೇಂದ್ರ ಸಿಂಗ್‌ ಚೌಹಾಣ್‌, ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್‌ ಹೇಳಿಕೆಯನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದರು. ಅವರು ದೇಶದ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಆಗ ಕಾಂಗ್ರೆಸಿಗರು 'ಪ್ರಧಾನ ಮಂತಿಯವರೇ ಸದನಕ್ಕೆ ಬನ್ನಿ, 'ಸಾಲದ ದೊರೆ ವಿಜಯ್‌ ಮಲ್ಯ ಎಲ್ಲಿ ಹೋಗಿದ್ದಾರೆ,' ಎಂಬ ಘೋಷಣೆಗಳನ್ನು ಕೂಗಿ ಕುಟುಕಿದರು. ಇದೇ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಬಹುಹೊತ್ತು ವಾಕ್ಸಮರ ನಡೆಯಿತು.

ರಾಜ್ಯಸಭೆಯಲ್ಲಿ ಮಾತಿನ ಸಮರ:

ಇತ್ತ ರಾಜ್ಯಸಭೆಯಲ್ಲಿ ಆಜಾದ್‌ ಅವರ ಹೇಳಿಕೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಮಾತಿನ ಸಮರ ನಡೆಯಿತು. ಆಜಾದ್‌ ದೇಶದ ಜನತೆಯನ್ನು ಅವಮಾನಿಸಿದ್ದು, ಅವರು ಕ್ಷಮೆಯಾಚಿಸಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ನೋಟು ಚಲಾವಣೆ ರದ್ದತಿಯಿಂದ ಶ್ರೀಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದ್ದಕ್ಕೆ ಪ್ರಧಾನಿ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಎಷ್ಟು ಹೊತ್ತು ಕಾದರೂ ಪರಿಸ್ಥಿತಿ ತಿಳಿಯಾಗದ ಕಾರಣ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>