ಹೊಸದಿಲ್ಲಿ: ಕೃಷ್ಣಾ ಕೊಳ್ಳದ ವ್ಯಾಪ್ತಿಯಲ್ಲಿನ ಶೇ.25ರಷ್ಟು ಜನಸಂಖ್ಯೆ ತೆಲಂಗಾಣದಲ್ಲಿದ್ದರೂ ರಾಜ್ಯಕ್ಕೆ ಶೇ.12ರಷ್ಟು ನೀರು ಮಾತ್ರ ಹಂಚಿಕೆಯಾಗಿದೆ. ಹೀಗಾಗಿ ಕೃಷ್ಣಾ ನದಿ ನೀರನ್ನು ಪಾಲುದಾರ ರಾಜ್ಯಗಳಲ್ಲಿ ನಡುವೆ ಮರು ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸುಪ್ರೀ ಕೋರ್ಟ್ ಎದುರು ಬೇಡಿಕೆ ಮಂಡಿಸಿದೆ. ಆಂಧ್ರ ಪ್ರದೇಶ ವಿಭಜನೆಯಾಗಿ ಪ್ರತ್ಯೇಕ ತೆಲಂಗಾಣ ರಚನೆಯಾದ ನಂತರ ಆಂಧ್ರಪ್ರದೇಶ ಪುನರ್ವಿಂಗಡಣೆ ಕಾಯಿದೆ 89ರ ಪ್ರಕಾರ ಕೃಷ್ಣಾ ನೀರಿನ ಮರು ಹಂಚಿಕೆ ಕೋರಿ ತೆಲಂಗಾಣ ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ್ ರಾವ್ ಅವರನ್ನೊಳಗೊಂಡ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ತೆಲಂಗಾಣದ ಈ ಅರ್ಜಿಯನ್ನು ಕೃಷ್ಣಾ ನ್ಯಾಯಾಧಿಕರಣ ಈಗಾಗಲೇ ತಿರಸ್ಕರಿಸಿದ್ದು, ಕೃಷ್ಣಾ ನದಿ ನೀರಿನ ಮರು ಹಂಚಿಕೆ ಸಾಧ್ಯವೇ ಇಲ್ಲ. ಈಗಾಗಲೇ ಆಂಧ್ರಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನಲ್ಲೇ ಎರಡೂ ರಾಜ್ಯಗಳು ಹಂಚಿಕೆ ಮಾಡಿಕೊಳ್ಳಬೇಕೇ ಹೊರತು ಮರು ಹಂಚಿಕೆ ಅಸಾಧ್ಯ ಎಂದು ಅದು ಹೇಳಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ಅವರು, ಎರಡೂ ರಾಜ್ಯಗಳ ಅರ್ಜಿಯ ಮೇಲೆ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದೆ. ಈ ಎರಡು ರಾಜ್ಯಗಳ ನಡುವಿನ ವಿವಾದದ ಕರ್ನಾಟಕಕ್ಕೆ ಸಂಬಂಧಿಸಿಲ್ಲ. ಹೀಗಾಗಿ ತೆಲಂಗಾಣದ ಬೇಡಿಕೆಯಲ್ಲಿ ಮಾನ್ಯ ಮಾಡಬಾರದು ಎಂದರು. ತೆಲಂಗಾಣದ ಪರ ನ್ಯಾಯವಾದಿ ವೈದ್ಯನಾಥನ್, ಆಂಧ್ರ ಪ್ರದೇಶದ ಪರವಾಗಿ ನ್ಯಾಯವಾದಿ ಗಂಗೂಲಿ ವಾದ ಮಂಡನೆ ಮಾಡಿದರು. ವಿಚಾರಣೆಯನ್ನು ಜ.18ಕ್ಕೆ ಮುಂದೂಡಲಾಗಿದೆ.
↧
ಕೃಷ್ಣಾ ನೀರು ಮರು ಹಂಚಿಕೆ: ಸುಪ್ರೀಂ ಮೊರೆ ಹೋದ ತೆಲಂಗಾಣ
↧